Thursday 27 June 2013

ಸೋಲುವುದೂ ಕೂಡಾ ಗೆಲುವೇ..??

ಒಂದು ಸ್ಪರ್ಧೆ..

ಹತ್ತು ಜನ ಓಟಗಾರರು ಒಟ್ಟಿಗೆ ಓಡಬೇಕು..

ಆ ಹತ್ತು ಜನ ಓಟಗಾರರೇನು ಕಮ್ಮಿ ಓಟಗಾರರಲ್ಲ ವೃತ್ತಿಪರ ಓಟಗಾರರು. ಓಟದ ಆಟಕ್ಕಾಗಿಯೇ ತಮ್ಮ ಬದುಕನ್ನ ಮುಡಿಪಾಗಿರಿಸಿಕೊಂಡವರು. ಅಲ್ಲಿರುವವರೆಲ್ಲ ಸಾಮಾನ್ಯರಲ್ಲ.. ಇಂಥವನೇ ಗೆಲ್ಲಬಲ್ಲ ಅನ್ನೋದು ಯಾರಿಗೂ ಖಾತ್ರಿಯಿಲ್ಲ. ಯಾರೂ ಕೂಡಾ ಗೆಲ್ಲಬಹುದು. ಯಾರನ್ನೂ ನೆಚ್ಚಿಕೊಳ್ಳುವ ಹಾಗಿಲ್ಲ. ಓಡುವವರು ಕರ್ಣ ಅರ್ಜುನರಾದರೆ ಒಬ್ಬರನ್ನ ಪಕ್ಷವಾಗಿರಿಸಿಕೊಂಡು ಗೆಲ್ಲುವವನ ಕುರಿತು ನಿರೀಕ್ಷೆ ಇಟ್ಟು ಕೊಳ್ಳಬಹುದಿತ್ತು. ಹತ್ತು ಜನ ಅರ್ಜುನರೇ ಓಡುವುದಾದರೆ..??

ಆ ಸ್ಪರ್ಧೆಯನ್ನ ನೋಡಲು ಸಾವಿರಾರು ಜನ ಬಂದಿರುತ್ತಾರೆ. ಅಸಲು ಆ ಸ್ಪರ್ಧಾಳುಗಳು ಯಾರಿಗೂ ಪರಿಚಿತರೇ ಅಲ್ಲ. ಆದರು ಸ್ಪರ್ಧೆ ನೋಡಲೆಂದು ಬಂದ ಮೇಲೆ ಯಾರಿಗಾದರೂ ಸರಿ ಒಬ್ಬನ್ನನ್ನ ಬೆಂಬಲಿಸ ಬೇಕು ಅನ್ನಿಸತ್ತೆ. ಹತ್ತು ಜನರನ್ನ ನೋಡುತ್ತಾರೆ. ಒಂದೇ ಎತ್ತರ.. ಒಂದೇ ಬಣ್ಣ.. ಒಂದೇ ದೆಹಾರ್ಧಾಡ್ಯತೆ. ರೂಪ ಮಾತ್ರ ಬೇರೆ ಬೇರೆ. ಒಬ್ಬರೂ ಒಬ್ಬಬ್ಬರನ್ನ ಮೀರಿಸುವಂತೆ ಅಂದಗಾರಾರಾದದ್ದು ಮತ್ತೊಂದು ಸಮಸ್ಯೆ. ಜನಗಳ ಕೈಲಿ ಬೇರೆ ಆಯ್ಕೆಯಿಲ್ಲ. ಹೇಗೋ ಒಬ್ಬನ್ನನ್ನು ಆಯ್ಕೆ ಮಾಡಿಕೊಳ್ಳುತಾರೆ. ಆಯ್ಕೆ ಮಾಡಿಕೊಳ್ಳ ಬೇಕಾದದ್ದು ಜರೂರತ್ತು ಕೂಡಾ. ಹಾಗೆ ಆಯ್ಕೆ ಮಾಡಿಕೊಂಡರಷ್ಟೇ ಸ್ಪರ್ಧೆ ನೋಡಲೆಂದು ಬಂದ ತಮಗೂ ಒಂದು ಸಮಾಧಾನ. ತನ್ನವನು ಗೆದ್ದರೆ ತಾನೇ ಗೆದ್ದೆನೆಂಬಷ್ಟು ಸಂಭ್ರಮ.

ಸ್ಪರ್ಧೆ ಆರಂಭವಾಗುತ್ತದೆ..

ಎಲ್ಲರು ಮಿಂಚಿನಂತೆ ಓಡುತ್ತಾರೆ. ಯಾರಿಗೂ ಸೋಲುವ ಮನವಿಲ್ಲ. ಸೋಲುವುದಕ್ಕೆಂದು ಯಾರೂ ಆ ಸ್ಪರ್ಧೆಗೆ ಬಂದದ್ದೇ ಅಲ್ಲ. ಎಲ್ಲರ ನಿರೀಕ್ಷೆಯೂ ಗೆಲುವೇ. ಆ ಒಂದು ಕ್ಷಣ ಜಗತ್ತನ್ನೇ ಮರೆತು ಓಡುತ್ತಾರೆ. ತಮ್ಮ ಪೂರ್ವಾಪರ, ಇತಿಹಾಸ, ಭೂಗೋಳ, ಎಲ್ಲವನ್ನೂ ಓಟ ಮರೆಸುತ್ತದೆ. ಓಡುತ್ತಾರೆ.. ಓಡುತ್ತಾರೆ.. ಓಡುತ್ತಾರೆ. ತಮ್ಮ ಸ್ವಶಕ್ತಿ ಸಾಮರ್ಥ್ಯಗಳನ್ನ ಮೀರುವಷ್ಟು ಓಡುತ್ತಾರೆ. ಓಡುವವರು ಒಬ್ಬರನ್ನೊಬ್ಬರು ನೋಡಿಕೊಳ್ಳುವುದಿಲ್ಲ. ಕೀಲಿ ಕೊಟ್ಟ ಬೊಂಬೆಗಳಂತೆ ಓದುವುದಷ್ಟೇ ಅವರ ಕೆಲಸ. ಕೊನೆಯದಾಗಿ ಅವರ ಗುರಿ ಅಲ್ಲಿ ನಿಗದಿ ಮಾಡಿ ಮಾಡಿರುವ ಸ್ಥಳದಲ್ಲಿ ಎಳೆದ ಗೆರೆಯನ್ನ ಮೊದಲು ದಾಟುವುದಷ್ಟೇ.

ಆ ಗೆರೆಯನ್ನ ಮೊದಲು ದಾಟುವುದಷ್ಟೇ ಸ್ಪರ್ಧೆ. ಅಸಲು ಓಡುವುದು ಅಲ್ಲಿ ಮುಖ್ಯವೇ ಅಲ್ಲ. ಓಡುವುದು ಮುಖ್ಯವಲ್ಲ ಅಂದ ಮಾತ್ರಕ್ಕೆ ಅಲ್ಲಿ ನಡೆಯುವುದು ಕಾನೂನು ಬಾಹಿರ. ಅದು ಸ್ಪರ್ಧೆಯ ನಿಯಮವಲ್ಲ. ಓಟದ ಸ್ಪರ್ಧೆ.. ಹಾಗಾಗಿ ಓಡಲೇ ಬೇಕು. ಆದರೆ ಇಷ್ಟೇ ವೇಗದಲ್ಲಿ ಓಡ ಬೇಕೆಂಬುದು ಯಾರ ಮಾನ ದಂಡವೂ ಅಲ್ಲ. ಅದು ಓಡುವವನ ಆಯ್ಕೆ. ಅವರಿಗೆ ಪೂರ್ಣ ಸ್ವಾತಂತ್ರ್ಯವಿದೆ ತಮ್ಮಗಳ ವೇಗದ ಮೇಲೆ. ಮನಸ್ಸು ಮಾಡಿ ಎಲ್ಲರೂ ಮೆತ್ತಗೆಯೇ ಓಡ ಬಹುದಿತ್ತು. ಮೆತ್ತಗೂ ಓಡಬಹುದೆಂದು ಯಾರಿಗೂ ತೋಚುವುದಿಲ್ಲ. ಎಲ್ಲರೂ ಮೆತ್ತಗೆ ಓಡಿ ಎಲ್ಲಿ ಒಬ್ಬೇ ಒಬ್ಬ ವೇಗವಾಗಿ ಓಡಿಬಿಡುವನೋ ಎಂಬ ಆತಂಕ. ಎಲ್ಲರೂ ವೇಗವಾಗಿ ಓಡಿ, ತಾನು ಮಾತ್ರ ಮೆತ್ತಗಾಗಿ ಬಿಡುವೆನೋ ಎಂಬ ಕಳವಳ. ಅಲ್ಲಿಗೆ ವೇಗ ಅವನ ಶಕ್ತಿಗೆ ಮನೋ ಸ್ಥೈರ್ಯಕ್ಕೆ ಪೂರಕವಾದದ್ದು. ಓಡ ಹೇಳಿದೊಡನೆ ತನ್ನ ಕೈಲಾಗುವಷ್ಟು ವೇಗಕ್ಕೆ ಓಡುತ್ತಾನೆ. ಪ್ರತಿಯೊಬ್ಬನಿಗೂ ಪ್ರತಿಯೊಬ್ಬನು ಜಿಂಕೆಯೂ ಆಗುತ್ತಾನೆ. ಪ್ರತಿಯೊಬ್ಬನೂ ಚಿರತೆಯೂ ಆಗುತ್ತಾನೆ. ತಾನು ಚಿರತೆಯಾಗಬೇಕು ಮಿಕ್ಕವರು ಜಿಂಕೆಯಾಗಬೇಕೆಂಬ ಛಲ ಎಲ್ಲರಲೂ. ಜಿಂಕೆಯಾದವರಿಗೂ ತಾನು ಚಿರತೆಯಾಗುವ ಹಠ. ಓಟ ಮುಂದುವರೆಯುತ್ತದೆ.

ಇತ್ತ ಜನ ಉದ್ವೇಗಿತರಾಗುತ್ತಾರೆ. ತಾನು ಗುರುತಿಸಿ ಕೊಂಡವನು ಗೆಲ್ಲಬೇಕಿದೆ. ಆ ಮೂಲಕ ತಾನು ಗೆಲ್ಲಬೇಕಿದೆ. ಅವನ ಗೆಲುವು ತನ್ನ ಗೆಲುವೇ ಆಗಿದೆ. ಆ ಹತ್ತು ಜನರಲ್ಲಿ ತಾನು ನಂಬಿಕೊಂಡವನು ಮಾತ್ರ ಪ್ರಖರವಾಗಿ ಗೋಚರಿಸುತ್ತಾನೆ. ಮಿಕ್ಕವರೆಲ್ಲ ಗೌಣ. ತಾನು ನೆಚ್ಚಿ ಕೊಂಡವನಷ್ಟೇ.. ತನ್ನ ಮೆಚ್ಚಿನ ಓಟಗಾರನಷ್ಟೇ.. ತನ್ನ ಆಯ್ಕೆಗೆ ಮಾನದಂಡ ಆದವನಷ್ಟೇ.. ಅಲ್ಲಿ ತನ್ನವನಾಗಿ ಗೋಚರಿಸುತ್ತಾ ಹೋಗುತ್ತಾನೆ. ಬಾಕಿಯವರು ಯಾರೂ ಅಲ್ಲಿ ಯಾರಿಗೂ ಏನೂ ಅಲ್ಲದಿದ್ದರೂ.. ಯಾರಿಗೂ ಏನೂ ಮಾಡದಿದ್ದರೂ ತಿರಸ್ಕೃತಗೊಳ್ಳುತಾರೆ. ತನ್ನವನು ಗೆಲ್ಲಲಿ ಎಂಬ ಒಂದೇ ಒಂದು ಆಸೆಗೆ ಮಿಕ್ಕವರೆಲ್ಲ ಸೋಲಲೆಂಬ ಶಾಪಕ್ಕೆ ಗುರಿಯಾಗುತ್ತಾರೆ. ಅನಿವಾರ್ಯ ಅಲ್ಲಿ ಶಾಪಕ್ಕೆ ಯಾರೂ ಗುರಿಯಾಗ ಬಹುದು. ಹೆಚ್ಚಿನವರ ಶಾಪ ಯಾರಿಗೆ ತಟ್ಟಲಿದೆಯೋ ಅವನಲ್ಲೇನೋ ಕೊರತೆ ಇದೆ. ಅಥವಾ ಅವನಲ್ಲೇನೂ ಕೊರತೆ ಇಲ್ಲದಿದ್ದರೂ ಜನ ತಮ್ಮ ಆಯ್ಕೆಯ ಮಾನದಂಡಕ್ಕನುಗುನವಾಗಿ ಮಿಕ್ಕವರಲ್ಲಿ ಕೊರತೆಗಳನ್ನ ಕಾಣುತ್ತಾ ಹೋಗುತ್ತಾರೆ. ಆ ಮೂಲಕ ಆ ವ್ಯಕ್ತಿ ಆ ಕೊರತೆಗಳಿಗೆಲ್ಲ ಹಕ್ಕುದಾರನಾಗಿ ಹೋಗುತ್ತಾನೆ. ತನ್ನವನು ಗೆಲ್ಲಲೆಂದು ಹಾರೈಸುತ್ತಾರೆ.. ಕೂಗುತ್ತಾರೆ.. ಕಿರುಚುತ್ತಾರೆ.. ಅರಚುತ್ತಾರೆ.. ಜಯಘೋಶಗಳನ್ನು ಹೇಳುತ್ತಾರೆ. ಒಂದಷ್ಟು ಜನ ಮೊರೆಯುತ್ತಾರೆ.. ದೇವರ ಬಳಿ ಹರಕೆಯನ್ನೂ ಹೊರುತ್ತಾರೆ. ಅನಾವಶ್ಯಕವಾಗಿ ಅವನು ತನ್ನವನಾಗಿ ಹೋಗುತ್ತಾನೆ. ಅವನು ಹತ್ತಿರದವನಾಗಿ ಹೋಗುತ್ತಾನೆ.

ಇತ್ತ ಈ ಸ್ಪಾರ್ಧಾಳುಗಳು ಓಡುತ್ತಲೇ ಇದ್ದಾರೆ. ಗುರಿಯೆಡೆಗೆ ನಿರ್ಧರಿಸಿ ಬಿಟ್ಟ ಬಾಣಗಳಂತೆ. ಗುರಿ ಮುಟ್ಟುವ ತನಕ ಅವರ ಓಟಕ್ಕೊಂದು ಅರ್ಥ ಸಿಗುವುದಿಲ್ಲ. ಅವರ ಓಡುವಿಕೆಗೊಂದು ಬೆಲೆ ದಕ್ಕುವುದಿಲ್ಲ. ಅಲ್ಲಿ ಯಾವುದೋ ಒಂದು ಬಾಣ ಮೊದಲು ತಲುಪುವುದು ನಿಶ್ಚಿತ. ಆ ಮೊದಲ ಬಾಣ ಯಾವುದು..?? ಆ ಮೊದಲ ಓಟಗಾರ ಯಾರು ಅನ್ನುವುದು ಅಲ್ಲಿ ಎಲ್ಲರ ಕುತೂಹಲ. ಆ ಮೊದಲು ಬಂದ ಓಟಗಾರ ಆ ಕ್ಷಣಕ್ಕೆ ಜಗದೇಕ ವೀರನಾಗುತ್ತಾನೆ. ಇಲ್ಲಿ ಓಡುವವನಿಗೆ ತಾನು ಜಗದೇಕ ವೀರನಾಗಬೇಕಿದೆ. ಅಲ್ಲಿ ಈ ಓಟಗಾರನನ್ನ ಬೆಂಬಲಿಸುವವನಿಗೆ ತಾನು ಜಗದೇಕ ವೀರನ ಸ್ವಂತದವನಾಗ ಬೇಕಿದೆ.

ಓಟ ಮುಗಿಯುತ್ತದೆ. ಯಾರೋ ಒಬ್ಬ ಗೆದ್ದಿರುತ್ತಾನೆ. ಗೆದ್ದಿರುತ್ತಾನೆಂದರೆ ತನ್ನ ಹಿಂದಿನವನಿಗಿಂಥ ಒಂದೆರಡು ಮಿಲಿ ಸೆಕೆಂಡ್ ಗಳಷ್ಟು ಮುಂಚೆ ಗುರಿ ತಲುಪಿರುತ್ತಾನೆ. ಗೆದ್ದವನ ಹಿಂದೆ ತಲುಪಿದವನು ತನಗಿಂತ ಹಿಂದೆ ಇದ್ದವನಿಗಿಂತ ಒಂದೆರಡು ಮಿಲಿ ಸೆಕೆಂಡ್ ಗಳಷ್ಟು ಮುಂದೆ ಇರುತ್ತಾನೆ. ಹೀಗೆ ಪ್ರತಿಯೊಬ್ಬರೂ ಒಬ್ಬಬ್ಬರಿಗಿಂಥ ಒಂಚುಚೂರು ಕಾಲಾವಕಾಶದಲ್ಲಿ ಹಿಂದೆ ಉಳಿದಿರುತ್ತಾರೆ. ಅಥವಾ ಮುಂದೆ ನಡೆದಿರುತ್ತಾರೆ. ಇಲ್ಲಿ ಕೊನೆಯವನನ್ನು ಗೆದ್ದವನ್ನನು ಮತ್ತೊಬ್ಬ ಗೆದ್ದಿರುತ್ತಾನೆ. ಆ ಮತ್ತೊಬ್ಬನನ್ನು ಇನ್ನೊಬ್ಬ. ಹಾಗೆ ಉಳಿದ ಇನ್ನೊಬ್ಬರನ್ನು ಹೀಗೆ ಮೊದಲು ಬಂದವ ಗೆದ್ದಿರುತ್ತಾನೆ. ಹಾಗೆ ನೋಡಿದರೆ ಮೊದಲು ತಲುಪಿದವ ಮೊದಲೆನೆಯದಾಗಿ ಗೆದ್ದಿರುತ್ತಾನೆ. ಎರಡನೆಯವ ಎರಡನೆಯನವನಾಗಿ.. ಮೂರನೆಯವ ಮೂರನೆಯನವನಾಗಿ.. ಕೊನೆಯವ ಕೊನೆಯದಾಗಿ ಗೆದ್ದಿರುತ್ತಾನೆ. ಎಲ್ಲರೂ ಗೆಲ್ಲಬಲ್ಲ ಕಲಿಗಳೇ. ಎಲ್ಲರೂ ಗೆದ್ದಿರುತ್ತಾರೆ. ಆದರೆ ಎಲ್ಲರೂ ಗೆದ್ದವರಾಗಬಾರದೆಂಬುದೇ ಸ್ಪರ್ಧೆಯ ನಿಯಮ. ಹಾಗಾಗಿ ಮೊದಲು ಗೆದ್ದವನು ವಿಜಯಿಯಾಗುತ್ತಾನೆ. ನಂತರದವರದ್ದೆಲ್ಲ ಸೋಲು. ಎರಡನೆಯ ವನೂ ಸೋತವನೇ ಆದರೆ ಕೊನೆಯವನಷ್ಟು ಹೀನ ಸೊಲುಗಾರ ಅಲ್ಲ. ಅಲ್ಲಿ ಕೊನೆಯವನು ಕೀಳಾಗಿ ಕಾಣಿಸಲಾರಂಭಿಸುತ್ತಾನೆ. ಅವನನ್ನು ಅನುಸರಿಸಿದವರೆಲ್ಲರೂ ಅವನಿಗೆ ಮೂದಲಿಸುತ್ತಾರೆ. ಶಾಪ ಹಾಕುತ್ತಾರೆ. ಅದು ಅವನ ಸ್ವಯಾರ್ಜಿತ ಅಲ್ಲದಿದ್ದರೂ ಅದು ಅವನು ಮಾಡಿದ ತಪ್ಪೇ ಆಗುತ್ತದೆ. ಅವನು ಎಲ್ಲರಂತೆ ಕ್ಷಮತೆ ಉಳ್ಳವನಾದರೂ.. ಬಲವಂತನಾದರೂ.. ಸೋತವನೆಂಬ ಹಣೆ ಪಟ್ಟಿ ಹೊತ್ತು ಕೊಳ್ಳುವುದು ಅನಿವಾರ್ಯತೆ ಆಗುತ್ತದೆ. ಮೊದಲು ಗೆದ್ದವನ ಅನುಸರಿಸಿದವರೆಲ್ಲಾ ಸಂಭ್ರಮಿಸುತ್ತಾರೆ. ತಮ್ಮ ಆಯ್ಕೆಯ ಬಗ್ಗೆ ಹೆಮ್ಮೆ ಪಡುತ್ತಾರೆ. ತಮ್ಮ ಹಾರೈಕೆಯ ಬಗ್ಗೆ ಆನಂದಿತರಾಗುತ್ತಾರೆ. ಸೋತವರ ಅನುಯಾಯಿಗಳಲ್ಲಿ ಹಲವರು ಈಗ ಸೋತವನನ್ನು ಮರೆತು, ಗೆದ್ದವನ್ನನ್ನ ಅಭಿಮಾನಿಸಲು ಶುರು ಮಾಡುತ್ತಾರೆ. ಗೆದ್ದವನು ಅವರ ಕಣ್ಣಲ್ಲಿ ಹೀರೋ ಆಗುತ್ತಾನೆ. ಅತಿ ಮಾನುಷ ಅನಿಸಿ ಕೊಳ್ಳುತಾನೆ. ಅವನ ಸಂಘದಿಂದ.. ಅವನ ಸ್ನೇಹದಿಂದ ತಮಗೊಂದು ವರ್ಚಸ್ಸು ದೊರಕುತ್ತದೆ ಅಂದು ಕೊಳ್ಳುತ್ತಾರೆ. ಸೋತವನನ್ನು ಕಡೆಗಣಿಸುತ್ತಾರೆ. ಅವನ ಜೊತೆ ಇದ್ದರೆ ತಮ್ಮ ಘನತೆಗೆ ಕುಂದು ಎಂದು ಅವನನ್ನ ದೂರ ಇಡುತ್ತಾರೆ. ಸೋತವನು ಮತ್ತೊಮ್ಮೆ ಗೆಲ್ಲುವ ತನಕ ಹಾಗೆ ಕೀಳಾಗೆ ಕಾಣಿಸಿ ಕೊಳ್ಳುವುದು ಅನಿವಾರ್ಯ ಆಗುತ್ತದೆ.

ನಮ್ಮ ಬದುಕೂ ಹಾಗೆ.. ಇಲ್ಲಿ ಎಲ್ಲರೂ ಸ್ಪರ್ಧಾಳುಗಳೇ. ಭೂಮಿಗೆಂದು ಬಂದ ಮೇಲೆ ಬದುಕೋದು ಒಂದು ಸ್ಪರ್ಧೆಯೇ. ಇಲ್ಲಿ ಎಲ್ಲರೂ ತಮ್ಮ ಸ್ಪರ್ಧೆಗನುಸಾರವಾಗಿ ಸ್ಪರ್ಧಿಸುತ್ತಾರೆ.. ಅವರ ಶಕ್ತಿಗನುಸಾರವಾಗಿ ಗೆಲ್ಲುತ್ತಾ ಹೋಗುತ್ತಾರೆ. ಆದರೆ ಸ್ಪರ್ಧೆಯಲ್ಲಿ ಮೊದಲು ಬಂದವನಷ್ಟೇ ಗೆದ್ದವ ಎಂಬ ಪಟ್ಟಕ್ಕೆ ಅರ್ಹ ಎಂಬುದು ನಿಯಮವಾದ್ದರಿಂದ ಗೆದ್ದ ಮಿಕ್ಕೆಲ್ಲರೂ ಸೋತವ ಎಂಬ ಹಣೆ ಪಟ್ಟಿ ಹೊರುವುದು ಅನಿವಾರ್ಯವಾಗುತ್ತದೆ.

ಮನುಷ್ಯ ಸೋಲಿಗೆ ಕಂಗೆಡುತ್ತಾನೆ.. ಭೀತನಾಗುತ್ತಾನೆ.. ಆ ಪಟ್ಟ ಹೊರಲು ಅಳುಕುತ್ತಾನೆ.. ಅಂಜುತ್ತಾನೆ. ಇದೆ ಕಾರಣಕ್ಕೆ. ನಾವು ಮಾಡಿಕೊಂಡ ನಿಯಮ ಅಂತಹದ್ದು, ಸೋತವ ಕೀಳು ಎಂಬ ಪದ್ಧತಿ ನಮ್ಮನ್ನ ಕೊರಗಿಸುತ್ತದೆ. ಅವನದಲ್ಲದ ಪಟ್ಟವನ್ನ ಅವನು ಅನಿವಾರ್ಯ ಅಲ್ಲದೆಯೂ ಹೊರಬೇಕಾಗುತ್ತಾದೆ. ಹಾಗಾಗಿಯೇ ಸೋಲುವುದಕ್ಕೆ ಹೆದರುತ್ತಾನೆ. ಸೊಲುವುದಕ್ಕಲ್ಲ.. ಕಡೆಯದಾಗಿ ಗೆಲ್ಲುವುದಕ್ಕೆ. ಕಡೆಯದಾಗಿ ಗೆಲ್ಲುವುದು ಅವನ ಧ್ಯೇಯ ಆಗುವುದಿಲ್ಲ ಮೊದಲು ಗೆಲ್ಲಬೇಕೆಂಬುದು ಆಧ್ಯತೆ ಆಗುತ್ತದೆ. ಗುರಿ ಆಗುತ್ತದೆ ಬಾಧ್ಯತೆ ಆಗುತ್ತದೆ. ಗೆದ್ದವನಿಗೆ ಅಭಿಮಾನ ಸಿಗುತ್ತದೆ.. ಪ್ರೀತಿ ಸಿಗುತ್ತದೆ.. ಅಧಿಕಾರ ಸಿಗುತ್ತದೆ.. ವರ್ಚಸ್ಸು ಮೊಳೆಯುತ್ತದೆ. ಹಾಗಾಗಿಯೇ ಗೆಲ್ಲುವುದು ಎಲ್ಲರ ಗುರಿ ಯಾಗುತ್ತದೆ. ಎಲ್ಲರ ಹಪಾ ಹಪಿಯಾಗುತ್ತದೆ.

ಮ ಬಲ ಉಳ್ಳ ಹತ್ತು ಜನರಿದ್ದರೂ ಹತ್ತು ಜನರನ್ನ ಮೀರಿಸಬಲ್ಲ ಒಬ್ಬನನ್ನಷ್ಟೇ ಜಗತ್ತು ಗುರುತಿಸುವುದರಿಂದ ಆ ಒಬ್ಬನಾಗಲು ನಾವು ಹೆಣಗುತ್ತೇವೆ, ಹೋರಾಡುತ್ತೇವೆ. ಅದೆಷ್ಟು ಬಾರಿ ಸೋತರೂ ಮತ್ತೆ ಮತ್ತೆ ಪ್ರಯತ್ನ ಮಾಡುತ್ತಲೇ ಹೋಗುತ್ತೇವೆ. ಆ ಸೋತವ ಎಂಬ ಸುಳ್ಳು ಹಣೆಪಟ್ಟಿಯ ಮೇಲಿನ ಭಯದಿಂದ, ಕೊನೆಯದಾಗಿ ಗೆದ್ದವ ಎಂಬ ಸಿಹಿ ಆನಂದವನ್ನ ಅನುಭವಿಸದೆ ಕೊರಗುತ್ತೇವೆ. ಮೊದಲನೆಯವನಾಗುವ ಭ್ರಮೆಯಲ್ಲಿ ಹೋರಾಡುತ್ತಲೇ ಹೋಗುತ್ತೇವೆ.

ಸೋಲು ಗೆಲುವು ನಮ್ಮ ಸ್ತಿತಿ ಗತಿಗಳನ್ನು ನಿರ್ಧರಿಸುವುದರಿಂದ.. ನಮಗೊಂದು ಸ್ಥಾನ ಮಾನವನ್ನು ಕಲ್ಪಿಸಿ ಕೊಡುವುದರಿಂದ.. ನಾವೆಲ್ಲರೂ ಅನಿವಾರ್ಯವಾಗಿ ಸ್ಪರ್ಧಾಳುಗಳಾಗುತ್ತೇವೆ. ಸ್ಪರ್ಧೆ ಎಂದು ಬಂದಾಗ ನಾವೆಲ್ಲರೂ ಒಬ್ಬರಿಗೊಬ್ಬರೂ ವೈರಿಯಾಗದಿದ್ದರೂ, ಒಬ್ಬರಿಗೊಬ್ಬರು ಮೀರಿ ಬದುಕಲು ಪ್ರಯತ್ನಿಸುತ್ತೇವೆ. ಆ ಮೀರಿ ಬದುಕುವಿಕೆಯೇ ನಮ್ಮ ಸಮಾನತೆಯಲ್ಲೊಂದು ಅಂತರವನ್ನ ಸೃಷ್ಟಿಸುತ್ತವೆ. ಎಲ್ಲರೂ ಜಗತ್ತೆಂಬ ಭವ್ಯ ಅರಮನೆಯೊಳಗೆ ಇರುತ್ತರಾದರೂ ಅಲ್ಲಿ ರಾಜ ಮುಖ್ಯವೆನಿಸಿ ಕೊಳ್ಳುವುದು ಅದಕ್ಕಾಗಿಯೇ ಅಲ್ಲವೇ. ಸಿಂಹಾಸನ ರಾಜನಿಗಾಗಿಯೇ ಇರುತ್ತದೆ. ಮತ್ತು ರಾಜನಷ್ಟೇ ಸಿಂಹಾಸನದ ಮೇಲೆ ವಿರಾಜಮಾನನಾಗಲು ಯೋಗ್ಯನಾಗುತ್ತಾನೆ.

Sunday 16 June 2013

ಎಲ್ಲರಂತಲ್ಲ.. ಎಲ್ಲರಂತಿಲ್ಲ ನನ್ನಪ್ಪ..!!

ನನ್ನಿಷ್ಟದ ಪಾನಿಪುರಿ ತಿನ್ನುತ್ತಾ ಇದ್ದೆ ಹೊಸೂರಿನ ನನ್ನ ಪರಿಚಯದ ಹುಡುಗನೊಬ್ಬನ ತಳ್ಳು ಗಾಡಿಯಲ್ಲಿ. ಒಂದು ಮಸಾಲೆ ಪುರಿ, ಒಂದ್ನಾಲ್ಕು ಪಾನಿಪುರಿ ಹಾಕಿಸಿಕೊಂಡು ತಿಂದು, ಕಾಸು ಕೊಟ್ಟು ಕೈ ಬಾಯಿ ತೊಳೆದು ಕೊಂಡು ಇನ್ನೇನು ಹೊರಡಬೇಕು.. ಆಗ ಬಂತು ನೋಡಿ ಮೂರು ಜೀವಗಳು ನಾನಿದ್ದ ಅದೇ ಪಾನಿಪುರಿ ಅಂಗಡಿ ಕಡೆ.. ನಾಲ್ಕು ವರ್ಷದವನಿರಬಹುದಾದ ಒಂದು ಪುಟ್ಟ ಹುಡುಗ.. ಆರು ವರ್ಷದ ಪುಟ್ಟ ಹುಡುಗಿ ಮತ್ತವುಗಳ ಅಪ್ಪ. ನೂರು ರುಪಾಯಿಗೆ ಚೇಂಜ್ ಇಲ್ಲದೆ ಸಹಾಯಕನೊಬ್ಬನ್ನನ್ನ ನೂರು ರುಪಾಯಿಗೆ ಚೇಂಜ್ ತರಲು ಕಳಿಸಿದ ತಳ್ಳುಗಾಡಿಯ ಹುಡುಗ ಸಾರ್ ಒಂದೆರಡು ನಿಮಿಷ ತಡೀರಿ ಹುಡುಗ ಈಗ ಚೇಂಜ್ ತಂದು ಬಿಡ್ತಾನೆ ಅಂತ ನನ್ನನ್ನ ಕಾಯಲು ಹೇಳಿದ. ಎರಡು ನಿಮಿಷ ತಾನೇ ಎರಡು ಗಂಟೆಯಲ್ಲವಲ್ಲ.. ಕಾಯುತ್ತ ನಿಂತೆ.

ಅಪ್ಪ ಅಪ್ಪ ಪಾನಿಪುರಿ ಬೇಕು ಅಂತ ಹಠ ಮಾಡಿದ್ದರಿಂದಲೇ ಆ ಮಕ್ಕಳನ್ನು ಅಲ್ಲಿಗೆ ಕರೆ ತಂದಿದ್ದದ್ದೇನೋ ಆಯಪ್ಪ ಅವರನ್ನ. ಅಲ್ಲಿಗೆ ಬಂದು ಕೂತಾಗಲೂ ಆ ಹುಡುಗ ಅಪ್ಪ ಅಪ್ಪ ಪಾನಿಪುರಿ ಅನ್ನುವ ಮಂತ್ರವನ್ನ ಬಿಟ್ಟಿರಲಿಲ್ಲ.  ಅವರನ್ನೇ ನೋಡುತ್ತಾ ನಿಂತೆ. ಆ ಮಕ್ಕಳ ತಂದೆ ಸ್ವಲ್ಪ ಬಡವನೇ ಅನ್ನುವ ಹಾಗಿದ್ದ. ಹಳೆಯ ಹರಕು ಮತ್ತು ಮಾಸಲು ಪ್ಯಾಂಟ್ ಶರ್ಟ್ ಒಂದನ್ನು ತೊಟ್ಟಿದ್ದ ಅಯ್ಯಪ್ಪ, ಜೇಬಿನಲ್ಲಿ ತನ್ನ ಬಳಿಯಿದ್ದ ಚಿಲ್ಲರೆ ಹಣವನ್ನೆಲ್ಲ ಒಮ್ಮೆ ಒಟ್ಟಿಗೇ ಎಣಿಸಿ ಒಂದೇ ಒಂದು ಪ್ಲೇಟ್ ಪಾನಿಪುರಿಯನ್ನ ಕೊಡಲು ಹೇಳಿದ. ಆ ಒಂದು ಪ್ಲೇಟ್ ಪಾನಿ ಪುರಿಯನ್ನ ಒಂದೇ ಚಮಚದಿಂದ ಎರಡೂ ಮಕ್ಕಳಿಗೆ ತಿನಿಸುತ್ತಿದ್ದ ಅವನು.. ಅಪ್ಪ ಇದೇನು..?? ಅಪ್ಪ ಅದೇನು..?? ಅದ್ಯಾಕೆ ಹೀಗೆ..?? ಆ ಗೊಂಬೆ ಯಾಕೆ ಅಲ್ಲಿಟ್ಟಿದಾರೆ..?? ಅವರ್ಯಾರು..?? ಇವರ್ಯಾರು..?? ಅಂಥವೇ ಅನೇಕ.. ಆ ಮಕ್ಕಳ ಆ ಕ್ಷಣದ ಅದೆಷ್ಟೋ ಪ್ರಶ್ನೆಗಳಿಗೆ ತನಗೆ ತೋಚಿದಂತೆ ಉತ್ತರಿಸುತ್ತಾ ತಿನ್ನಿಸುವುದನ್ನ ಮುಂದುವರೆಸಿದ್ದ. ಆ ಒಂದು ದೃಶ್ಯ ಅದೆಷ್ಟು ಕಣ್ತುಂಬಿ ಕೊಳ್ತು. ಆಗಷ್ಟೇ ಅಪ್ಪನ ಬಳಿ ಮಾತಾಡಿ ಫೋನಿಟ್ಟು ಪಾನಿಪುರಿ ತಿನ್ನಲು ಬಂದಿದ್ದು ನಾನು.

ನಿನ್ನೆ ರಾತ್ರಿ ಸುಮಾರು ಹತ್ತು ಗಂಟೆ ಸುಮಾರಿಗೆ ಅಪ್ಪ ನನಗೆ ಫೋನ್ ಮಾಡಿದ್ದರು ಅನ್ನಿಸತ್ತೆ. ನಮ್ಮ ಹೊಸೂರು ಆಫೀಸಿನಿಂದ ವರ್ಗಾವಣೆಯಾದ ಹಲವರಿಗೆ ಒಂದು ವಿದಾಯ ಕೂಟ ಮತ್ತು ಅದೇ ಕೂಟವೇ ಹೊಸದಾಗಿ ಬಂದು ಹೊಸೂರು ಕೂಡಿಕೊಂಡ ಹೊಸ ವಾರ್ಗಾಯಿತ ಕಾರ್ಮಿಕರಿಗೆ ಸ್ವಾಗತ ಕೂಟವೂ ಆಗಿತ್ತು. ನಮ್ಮಗಳ ನಡುವೆ ಅಪರೂಪಕ್ಕೆ ಇಂಥದ್ದೊಂದು ಕೂಟ ನಡೆಯುತ್ತದೆ. ಸ್ವಾಗತ.. ಪರಿಚಯ.. ವಿದಾಯ.. ವಿಷಾದ.. ಊಟ.. ಹಾಡು.. ಕುಣಿತ.. ಒಂದಷ್ಟು ಖುಷಿ.. ಒಂದಷ್ಟು ಬೇಸರ.. ಹೀಗೆ ಕಾರ್ಯಕ್ರಮ ಮುಗಿಯುವುದರೊಳಗಾಗಿ ರಾತ್ರಿ ಹನ್ನೊಂದು ಗಂಟೆ. ಮೊಬೈಲ್ ಅನ್ನು ಸೈಲೆಂಟ್ ಇಟ್ಟದ್ದರ ಪರಿಣಾಮ ಅಪ್ಪನ ಫೋನ್ ಬಂದದ್ದು ಗೊತ್ತೇ ಆಗಿರಲಿಲ್ಲ. ಪಾರ್ಟಿ ಮುಗೀತು. ಯಾವುದೋ ಒಂದು ಕ್ಷಣಕ್ಕೆ ಮೊಬೈಲ್ ಕೈಗೆತ್ತಿ ನೋಡಿದರೆ ಮೂರು ಮಿಸ್ ಕಾಲ್..!! ಅಪ್ಪ, ಅಮ್ಮ, ತಮ್ಮ, ಮೂವರ ನಂಬರ್ ಇಂದಲೂ. ತಕ್ಷಣ ಮೂರು ನಂಬರಿಗೂ ಫೋನ್ ಮಾಡುವ ಪ್ರಯತ್ನ ಮಾಡಿದೆನಾದರೂ ನೆಟ್ವರ್ಕ್ ನ ಅಲಭ್ಯತೆ ಇಂದ ಫೋನ್ ಕನೆಕ್ಟ್ ಆಗಲೇ ಇಲ್ಲ. ಸರಿ ಬೆಳಿಗ್ಗೆಯಾದರೂ ಮಾತಾಡುವ ಅಂದ್ಕೊಂಡು ಮಲಗಿದ್ದೆ. ಇಂದು ಬೆಳಿಗ್ಗೆ ಅಷ್ಟು ಹೊತ್ತಿಗೆ ಬೆಂಗಳೂರು ಹೊರಟು ಬಂದೆನಾದರೂ ಫ್ರೆಂಡ್ಸ್ ಜೊತೆಗೆ ಅದೂ ಇದೂ, ಅಲ್ಲಿ ಇಲ್ಲಿ ಅಂತ ತಿರುಗುವುದರೊಳಗೆ ಸಂಜೆಯಾಗಿತ್ತು ನಡುವೆ ಮನೆಗೆ ಫೋನ್ ಮಾಡುವ ಪ್ರಯತ್ನವೇ ಮಾಡಿರಲಿಲ್ಲ. ಹೊಸೂರಿಗೆ ಬಸ್ಸೇರಿ ಕೂತು ಹೊಸೂರು ತಲುಪಿದ ಮೇಲೆ.. ಆ ಪಾನಿಪುರಿ ಅಂಗಡಿ ತಲುಪುವ ವೇಳೆಗೆ ಅಪ್ಪನ ಬಳಿ ಫೋನ್ ಮಾಡಿ ಮಾತಾಡಿದ್ದೆ.

ಫೋನ್ ಮಾಡಿದೆ.. ಮಾಮೂಲಿನಂತೆ ಉಭಯ ಕುಶೋಲಪರಿ ಆಯ್ತು. ಚೆನಾಗಿದಿಯಾ.. ಚೆನಾಗಿದಿನಿ. ಕಾಫಿ ಆಯ್ತಾ.. ಆಯ್ತು. ಆ ಕಡೆ ಮಳೆನಾ..?? ಇಲ್ಲ. ಈಗೊಂದೆರಡು ದಿನದಿಂದ ಅಂಥಾ ಮಳೆ ಏನಿಲ್ಲ.. ಹೊಸೂರ್ ನಲ್ಲಿ..?? ಹೊಸೂರಲ್ಲಿ ಕೂಡ ಈಗ ಸುಮಾರು ಹದಿನೈದು ದಿನದಿಂದಲೂ ಇಲ್ಲ. ಮಾತು ಹೀಗೆ ಸಾಗಿತ್ತು. ಊರಿಂದ ಬಂದ ಒಂದು ವಾರಕ್ಕೆ ಇವತ್ತು ಫೋನ್ ಮಾಡಿ ಮಾತಾಡಿದ್ದೆ ಮನೆಗೆ. ಅಮ್ಮನ ಬಳಿ ಇದೇ ವಾರದಲ್ಲಿ ಮೂರು ಬಾರಿ ಮಾತಾಡಿದ್ದೆನಾದರೂ ಅಪ್ಪನ ಬಳಿ ಇದೆ ಮೊದಲು. ಹಬ್ಬಕ್ಕೆಂದು ಊರಿಗೆ ಹೋಗಿದ್ದ ನಾನು ತಿರುಗಿ ಬರುವಾಗ ಸಾಧಾರಣವಾಗಿ ಏನು ಬಂದಿರಲಿಲ್ಲ. ಮನೆಯಲ್ಲೊಂದು ಮಹಾ ಕದನಕ್ಕೆ ವಿರಾಮವಿತ್ತು ಅಸಾಮಾಧಾನದ ಅಲ್ಪ ಮನಸ್ಸಿಂದಲೇ ಬಂದಿದ್ದೆನಷ್ಟೇ..!!

ಆಗಿದ್ಡಿಷ್ಟೇ.. ವರುಷಕ್ಕೊಮ್ಮೆ ಮಾಡುವ ಊರ ಹಬ್ಬ. ಮೂರು ದಿನಗಳ ಉತ್ಸವ. ಈ ಸಾರಿ ಮಾಮೂಲಿನಂತೆ ಅದ್ಧೂರಿಯಾಗಿ ಹಬ್ಬ ಜರುಗಲಿಲ್ಲವಾದರೂ ಸಂಪ್ರದಾಯದಂತೆ ಪೂಜೆ ಪುನಸ್ಕಾರಗಳಿಗೆ ಕೊರತೆ ಇರಲಿಲ್ಲ. ಹಬ್ಬಕ್ಕೆ ಹತ್ತಿರದ ಊರುಗಳಿಂದ ಬಂದಿದ್ದ ನೆಂಟರಿಷ್ಟರು, ಸ್ನೇಹಿತರೆಲ್ಲ ಹಬ್ಬದ ಎರಡನೇ ದಿನವೇ ಹೋಗಿದ್ದರಿಂದ.. ನಾನು, ಅಕ್ಕ ಮತ್ತು ಭಾವ ಮಾತ್ರವೇ ಅತಿಥಿಗಳಾಗಿ ಉಳಿದು ಕೊಂಡದ್ದು. ಕೆಲಸ ಸಿಕ್ಕು ಬದುಕು ಕಟ್ಟಿ ಕೊಳ್ಳಲು ತಮಿಳುನಾಡು ಸೇರಿದಮೇಲೆ ನನ್ನ ಮನೆಗೆ ಆಗಾಗಷ್ಟೇ ಹೋಗುವ ನಾನೇ ಅತಿಥಿಯಾಗಬೇಕಾದ್ದು ಅನಿವಾರ್ಯತೆ ಕೂಡ..!! ಅವತ್ತು ಹಬ್ಬದ ಮೂರನೇ ದಿನ. ಊರೊಳಗೆ ಊರ ದೇವಿಯ ಉತ್ಸವ ಮೆರವಣಿಗೆ. ಮೊದಲೆಲ್ಲ ಮೂರನೇ ದಿನಕ್ಕೆ ಸರಿಯಾಗಿ ನಾಟಕವೋ.. ಆರ್ಕೆಷ್ಟ್ರವೋ ಇರುತ್ತಿತ್ತು. ಈ ಸಾರಿ ಊರಲ್ಲಿ ದೇವಸ್ಥಾನಕ್ಕೊಂದು ಕಲ್ಯಾಣ ಮಂಟಪ ಕಟ್ಟುತ್ತಿರುವ ಕೆಲಸ ನಡೆಯುತ್ತಿದ್ದರಿಂದ, ಅಷ್ಟು ವಿಜ್ರುಂಭಣೆ ಇಂದ ಆಚರಿಸೋದು ಸಾಧ್ಯವಾಗಿರಲಿಲ್ಲ. ಆದ್ರಿಂದ ಕೆಂಚಮ್ಮ, ಕರಿಯಮ್ಮ ದೇವಿಯರ ವಿಗ್ರಹಗಳನ್ನ ಟ್ರಾಕ್ಟರ್ ಮೇಲೆ ಕೂರಿಸಿ ಅಲಂಕರಿಸಿ ಬೀದಿ ಬೀದಿಯೋಳಗೂ ಕೊಂಡೊಯುತ್ತಾ ಮನೆಮನೆಯಲ್ಲೂ ಪೂಜೆಯೊಂದಿಗೆ ಮೆರವಣಿಗೆ ಸಾಗ್ತಾ ಇತ್ತು. ಆರ್ಕೆಷ್ಟ್ರ ಇಲ್ಲವಲ್ಲ..!! ಊರ ಹುಡುಗರೆಲ್ಲ ಸೇರಿ ತಾವೇ ಕೈ ಇಂದ ಒಂದಿಷ್ಟು ಹಣ ಹಾಕಿ, ದೊಡ್ಡ ದೊಡ್ಡ ಸ್ಪೀಕರ್ ಬಾಕ್ಸ್ ಗಳ ಜೊತೆ ಒಂದು ರೆಕಾರ್ಡ್ ಪ್ಲೇಯರ್ ಕೂಡಾ ಬಾಡಿಗೆಗೆ ತಂದು ತಮ್ಮಿಷ್ಟದ ಹಾಡುಗಳನ್ನ ಹಾಕಿಕೊಂಡು ಮೆರವಣಿಗೆಯಲ್ಲಿ ತಮಗಿಷ್ಟದ ಹಾಗೆ ಕುಣಿಯೋಕೆ ಶುರು ಮಾಡಿದರು..!! ಹೀಗೆ ಕುಣಿಯೋಕೆ ಶುರು ಮಾಡಿದ ಮೇಲೆ ಒಂದಿಷ್ಟು ಸಣ್ಣ ಪುಟ್ಟ ರಗಳೆ.. ಜಗಳ ಬರದೆ ಇರುತ್ತದೆಯೇ..?? ಅದೂ ಕುಡಿದು ಪಾನಮತ್ತರಾಗಿ ತೂರಾಡುವ ಹುಡುಗರೆಂದ ಮೇಲೆ..?? ಒಂದು ಸಣ್ಣ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರು ಆಯ್ತು. ಇಬ್ಬರದು ಎರಡು ಗುಂಪಾಯ್ತು. ಈಗ ಇದು ಎರಡು ಗುಂಪುಗಳ ಜಗಳ..!! ಒಂದಿಷ್ಟು ಊರ ಹಿರಿಯರು ಜಗಳ ನಿಲ್ಲಿಸುವ ಪ್ರಯತ್ನ ಮಾಡಿದರಾದರೂ.. ಪರಿಸ್ತಿತಿ ಹದಕ್ಕೆ ಬರಲಿಲ್ಲ. ನಾನು ಮನೆಯಿಂದ ಮೆರವಣಿಗೆಯ ಜಾಗಕ್ಕೆ ಬರುವ ಹೊತ್ತಿಗಾಗಲೇ ಜಗಳ ಸ್ವಲ್ಪ ತೀವ್ರ ಗತಿಯನ್ನೇ ಪಡೆದಿತ್ತು. ನನ್ನ ಜೊತೆ ಅಮ್ಮನೂ ಬಂದಿದ್ರು. ಗುದ್ದಾಡುತ್ತಿರುವ ಒಂದು ಗುಂಪಲ್ಲಿ ನನ್ನ ತಮ್ಮನು ಕೂಡಾ.. ಅಮ್ಮ ನಾನು ಎಷ್ಟು ತಡೆದರೂ ಪುಸಲಾಯಿಸಿ ಕರೆದರೂ ಜಗಳ ಬಿಟ್ಟು ಬರಲೊಲ್ಲ..!! ನಾನೂ ಅವನ ಮಾತ್ರವಲ್ಲದೆ ಜಗಳವನ್ನ ಬಿಡಿಸುವ ಪ್ರಯತ್ನ ಮಾಡಿದೆನಾದರೂ ಪ್ರಯೋಜನವಾಗಲಿಲ್ಲ. ಎಲ್ಲರೂ ಕುಡಿದಿದ್ದರು.. ತಮ್ಮನೂ ಕೂಡ..!! ಯಾರ ಹಟಕ್ಕೆ ಬಗ್ಗಿಯಾರು..?? ಯಾರ ತಹಂಬದಿಗೆ ಸಿಕ್ಕಾರು..?? ಅವರಾಡಿದ್ದೆ ಆಟವಾಗಿತ್ತು ಆ ಕ್ಷಣಕ್ಕೆ. ಹೆದರಿದ ಅಮ್ಮ ಅಪ್ಪನಿಗೆ ಫೋನ್ ಮಾಡಿ ಕರೆದಿದ್ರು. ಅಲ್ಲೆಲ್ಲೋ ಭದ್ರಾವತಿಯಲ್ಲಿ ಗೆಳೆಯರೊಬ್ಬರ ಮನೆಯಲಿದ್ದ ಅಪ್ಪ ಓಡೋಡಿ ಬಂದಿದ್ದರು.

ಅಪ್ಪ ಬಂದವರೇ ಜಗಳದ ಕೂಟದೊಳಗೆ ತೂರಿ, ತಮ್ಮನ ಕೈ ಹಿಡಿದು ದರ ದರ ಎಳೆದು ಕೊಂಡು ಮನೆಗೆ ಬಂದವರೇ ಕುಡಿದು ರೋಷದಲ್ಲಿದ್ದ ತಮ್ಮನ ಕೆನ್ನಿಗೆ ಮತ್ತು ಬೆನ್ನಿಗೆ ಏಟು ಕೊಟ್ಟು, ಸಿಕ್ಕ ಸಿಕ್ಕಲ್ಲಿಗೆ ಝಾಡಿಸಿ ಒದೆಯೋಕೆ ಶುರು ಮಾಡಿದ್ರು..!! ನಾವೆಲ್ಲಾ ಓಡಿ ಬಂದು ಬಿಡಿಸುವುದರೋಳಗಾಗಿ ಕನಿಷ್ಠ ಹತ್ತು ಏಟಾದರೂ ಹೊಡೆದಿದ್ದರು..!! ನನಗಿಂತ ಎರಡು ವರ್ಷ ಚಿಕ್ಕವನಾದ ತಮ್ಮನಿಗೆ ಈಗ ಇಪ್ಪತ್ಮೂರು ವರುಷ. ನನ್ನಂತೆ ಸಾಧುವಲ್ಲ. ಶಾಂತ ಸ್ವಭಾವ ಅವನದ್ದಲ್ಲ. ತನ್ ಮೇಲೆ ಕೈ ಮಾಡುವ ಯಾರಾದರೂ ತಿರುಗಿ ಬೀಳುವ ಕೋಪಿಷ್ಠ..!! ಕುಡಿದಿದ್ದ ಬೇರೆ ಏನು ಮಾಡುತ್ತಿರುವೆ ಎಂಬ ಪರಿಜ್ಞಾನ ಬೇರೆ ಇಲ್ಲ. ಒಂದು ಕ್ಷಣ ಏನು ಮಾಡುತ್ತಿರುವೆ ಎಂದು ತೋಚದೆ ಅಪ್ಪನ ಮೇಲೆ ಕೈ ಎತ್ತಿ ಮುಂದಕ್ಕೆ ಹೋದ..!! ನಾನು ಗಟ್ಟಿಯಾಗಿ ಹಿಡಿದು ಕೊಂಡೆ. ತನ್ನತ್ತಲೇ ಕೈ ಎತ್ತಿ ಬಂದ ಮಗನ ಮೇಲೆ ಇನ್ನೂ ಸಿಟ್ಟಾದ ಅಪ್ಪ.. ತಾವೂ ಅವನನ್ನ ಹೊಡೆಯುವುದಕ್ಕೆ ಮುಂದೆ ಬಂದರು. ನಾನು ತಮ್ಮನನ್ನು ಹಿಡಕೊಂಡೆ.. ಅಳುತ್ತಲೇ ಇದ್ದ ಅಮ್ಮ ಮತ್ತು ಭಾವ ಅಪ್ಪನನ್ನ ಹಿಡಿದು ಸುಧಾರಿಸುವ ಪ್ರಯತ್ನ ಮಾಡುತ್ತಿದ್ದರು. ಅಕ್ಕ ಮತ್ತು ಅಕ್ಕನ ಮಕ್ಕಳದ್ದು ಒಂದೇ ಸಮನೆ ಅಳು. ಕುಡಿದು ತನ್ ಮೇಲೆ ಕೈ ಮಾಡಲು ಬಂದ ತಮ್ಮನ ಮೇಲೆ ಅಪ್ಪ ಕೆಂಡಾಮಂಡಲ ಕೋಪದಿಂದ ಬಾಯಿಗೆ ಬಂದಂತೆ ತುಚ್ಚವಾಗಿ ಬೈಯೋಕೆ ಶುರು ಮಾಡಿದ್ದರು. ಕುಡಿದು ಏಟು ತಿಂದು ಪರಿಜ್ಞಾನ ಕಳೆದುಕೊಂಡ ತಮ್ಮನದು ಒಂದೇ ಹಠ.. ಇನ್ನು ನಾನಿನ್ನು ಈ ಮನೇಲಿ ಇರೋಲ್ಲ ನಾಳೆನೆ ಬಿಜಾಪುರಕ್ಕೆ ಹೋಗ್ತೀನಿ. ಅಲ್ಲಿ ಇಡೀ ತಾಲೂಕಿನ ಎಲೆಕ್ಟ್ರಿಕಲ್ ಮೀಟರ್ ಚೇಂಜ್ ಮಾಡುವ ಟೆಂಡರ್ ಸಿಕ್ಕಿದೆ.. ನಾನು ಮತ್ತು ಇನ್ನು ನಾಲ್ಕು ಜನ ಹೋಗ್ತಾ ಇದಿವಿ. ಎದೆ ಮಟ್ಟಕ್ಕೆ ಬೆಳೆದ ಮಗನ ಮೇಲೆ ಕೈ ಮಾಡುವ ಇಂಥೋರ ಜೊತೆ ಯಾರ್ ಇರ್ತಾರೆ..?? ಇನ್ನು ನನ್ ದಾರಿ ನಂದು.. ನಿಮ್ ದಾರಿ ನಿಮ್ದು..!! 

ತಮ್ಮನ ಈ ವರಸೆ ಹೊಸದೇನಲ್ಲ. ಹತ್ತೊಂಭತ್ತನೇ ವಯಸ್ಸಿಗೆ ಯಾರಿಗೂ ಹೇಳದೆ ಮನೆ ಬಿಟ್ಟು ಓಡಿ ಹೋಗಿ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿ ತಿಂಗಳ ನಂತರ ಫೋನ್ ಮಾಡಿ ತಿಳಿಸಿದ್ದ. ಪೀಯೂಸಿ ಓದಲಾಗದೆ ಓಡಿ ಹೋಗಿದ್ದ. ಹಾಗೆ ಕೈ ಮೀರಿ ಹೋದ, ಇಂಥಾ ನಿರ್ಧಾರಗಳನ್ನ ತನ್ನಷ್ಟಕ್ಕೆ ತಾನೇ ತೆಗೆದುಕೊಳ್ಳುವಷ್ಟು ದೊಡ್ಡವನಾದ ಮಗನ ಇಂಥಾ ವರ್ತನೆಗಳನ್ನ ಕಂಡು ಯಾರಿಗೆ ತಾನೇ ನೋವಾಗುವುದಿಲ್ಲ..?? ಅಪ್ಪ ಅಮ್ಮನಿಗೆ ನೋವಾದರೂ ಹೇಗೋ ಒಂದು ಕಡೆ ಕೆಲಸ ಮಾಡ್ಕೊಂಡು ಚೆನ್ನಾಗಿದ್ದಾನಲ್ಲಾ ಬಿಡು ಅಂತ ಸಮಾಧಾನ ಮಾಡಿ ಕೊಳ್ಳುವಷ್ಟರಲ್ಲೇ, ಎರಡನೇ ತಿಂಗಳಿಗಾಗಲೇ ಕೆಲಸ ಬಿಟ್ಟು ಮನೆಗೆ ವಾಪಸು ಬಂದಿದ್ದ..!! ಬಂದವನನ್ನ ಹೇಗೋ ಮನವೊಲಿಸಿ, ನಲವತ್ತು ಐವತ್ತು ಸಾವಿರ ಖರ್ಚು ಮಾಡಿ ಐ ಟಿ ಐ ಸೇರಿಸಿ ಕಳಿಸಿದರೆ.. ಅಲ್ಲೂ ಮೂರು ತಿಂಗಳಿಗೆ ನಾನು ಕಾಲೇಜು ಹೋಗೋದಿಲ್ಲ ಅಂತ ಕೂತ. ಮಗ ಕೈ ತಪ್ಪಿದ್ದಾಗಿದೆ, ಹಾದಿ ತಪ್ಪುವುದು ಬೇಡ ಅಂತ ಅಮ್ಮ ತಮ್ಮ ಜೊತೆಯಲ್ಲೇ ತಮ್ಮನನ್ನೂ ಕೆಲಸಕ್ಕೆ ಕರೆದುಕೊಂಡು ಹೋಗಲು ಶುರು ಮಾಡಿದ್ದರು. ಮನೆಯ ಎಲೆಕ್ಟ್ರಿಕಲ್ ವೈರಿಂಗ್ ಕೆಲಸ. ಒಂದೂವರೆ ವರ್ಷ ಅಪ್ಪನ ಜೊತೆಯಲ್ಲೇ ಕೆಲಸ ಮಾಡಿದ್ದ ತಮ್ಮ, ಕೆಲಸದ ಆದಿ ಅಂತ್ಯಗಳನ್ನು ಚೆನ್ನಾಗಿ ಬಲ್ಲವನ್ನಾದ್ದರಿಂದ, ಈಗ ತಾನೇ ಸ್ವಂತಕ್ಕೆ ಅದೇ ಕೆಲಸವನ್ನ ಸ್ವತಂತ್ರವಾಗಿ ಮಾಡುವಷ್ಟು ಯೋಚಿಸಿ ಮುಂದುವರೆದಿದ್ದ..!! 

ತಮ್ಮ ಗುಟಖಾ ಹಾಕುವುದು.. ಕುಡಿಯುವುದು ನಮ್ಮೆಲ್ಲರಿಗೂ (ಬಹುಷಃ ಅಪ್ಪನಿಗೂ) ಗೊತ್ತಿತ್ತಾದರೂ ಯಾರೂ ನೇರ ಕೇಳಲಿಕ್ಕೆ ಹೋಗಿರಲಿಲ್ಲ. ಮುನಿಸಿಕೊಂಡು ಮತ್ತೆ ಮನೆ ಬಿಟ್ಟು ಹೋದರೆ..?? ನಾನೊಂದೆರಡು ಬಾರಿ ಬುದ್ಧಿ ಹೇಳೋ ಪ್ರಯತ್ನ ಮಾಡಿದೆನಾದರೂ ನಾನು ಕುಡಿತಿನಿ, ಪಾನ್ ಪರಾಗ್ ಹಾಕ್ತೀನಿ ಅಂತ ಯಾರ್ ಹೇಳಿದ್ದು ನಿಂಗೆ..?? ಕರ್ಕೊಂಡ್ ಬಾ ಅವನ್ಯಾರು ಅಂತ ನಾನೂ ಕೇಳ್ತೀನಿ.. ಅವನು ಹಾಗೆ ಹೇಳಿದ್ದೆ ಆದ್ರೆ ಆಮೇಲೆ ನೀನು ಹೇಳಿದ ಹಾಗೆ ಕೇಳ್ತೀನಿ ಅಂತ ನನ್ನನ್ನೇ ಸಮಾಧಾನ ಪಡಿಸಲು ನೋಡಿದ. .!! ಅಪ್ಪನಿಗೆ ಈ ವಿಚಾರ ಗೊತ್ತಿದ್ದೋ ಗೊತ್ತಿಲ್ಲದೆಯೋ ಇದರ ಕುರಿತಾದ ಯಾವ ರಗಳೆಗಳೂ ತೆಗೆಯಲು ಹೋಗಿರಲಿಲ್ಲ. ತಮ್ಮನ ಮೇಲಿದ್ದ ಅದಷ್ಟೂ ದಿನದ ಕೋಪ.. ಬೇಸರ, ನಿರಾಸೆ, ನಿಟ್ಟುಸಿರು,, ಸಿಟ್ಟು ಸೆಡವುಗಳನ್ನೆಲ್ಲ ಅಪ್ಪ ಅವತ್ತು ಅವನನ್ನ ಹೊಡೆದು ತೀರಿಸಿಕೊಂಡರೋ ಏನೋ..?? ಅಪ್ಪ ಮತ್ತು ತಮ್ಮನ ವಾಗ್ವಾದ ನಡೆಯುತ್ತಲೇ ಇತ್ತು. ಅಕ್ಕ ಪಕ್ಕದ ಮನೆಯವರೆಲ್ಲ ಬಂದು ಮನೆಯ ಮುಂದೆ ಜಡಾಯಿಸಿದ್ದರು..!! ಪುಣ್ಯಕ್ಕೆ ದೇವರ ಉತ್ಸವದ ಮೆರವಣಿಗೆ ಎರಡು ಬೀದಿಗಳ ಆಚೆಗೆ ಇದ್ದದ್ದರಿಂದ ಊರಿನ ಅಷ್ಟು ಜನ ಮನೆ ಮುಂದೆ ಸೇರೋದು ತಪ್ಪಿತ್ತು..!! ಇಲ್ದಿದ್ರೆ ಇಡೀ ಊರಿನ ಮುಂದೆ ಮಾನ ಹೋಗ್ತಾ ಇತ್ತು. ತಮ್ಮ ಮತ್ತು ಅಪ್ಪನನ್ನ ತಹಂಬದಿಗೆ ತರುವುದರೊಳಗೆ ಸಾಕು ಸಾಕಾಗಿ ಹೋಯ್ತು..!! ಅಪ್ಪನಿಗೆ ಇವನು ಕೆಲಸ ಮಾಡೋ ವಿಚಾರವಾಗಿ ಯಾವ ತಕರಾರಿಲ್ಲ ಆದರೆ ಇವನು ಕೆಲಸ ಮಾಡುವ ಆ ಜಾಗದ ಕುರಿತಾಗಿ, ಆ ಕಾಂಟ್ರಾಕ್ಟ್ ದಾರನ, ಆ ಟೆಂಡರ್ ಕೆಲಸದ ಮಾಹಿತಿಯ ಕುರಿತಾಗಿ ಯಾವ ಮಾಹಿತಿಯೂ ಇವನಿಗೂ ಗೊತ್ತಿಲ್ಲ. ಸುಮ್ನೆ ಅದ್ಯಾರೋ ಏನೋ ಹೇಳಿದ್ದನ್ನೇ ನೆನಪಿನಲ್ಲಿಟ್ಟುಕೊಂಡು ಈಗ ಅಪ್ಪ ಕೈ ಮಾಡಿದ್ದನ್ನೇ ನೆಪವಾಗಿಟ್ಟುಕೊಂಡು ಮನೆ ಬಿಟ್ಟು ಓದಿ ಹೋಗುವ ಹೊಂಚು ಹಾಕುತ್ತಿರುವ ತಮ್ಮನ ನಿಲುವು ಅಪ್ಪನಿಗೆ ಸ್ವಲ್ಪವೂ ಹಿಡಿಸಲಿಲ್ಲ. ಎಲ್ಲೆಲ್ಲೊ ಹೋಗಿ ಏನೇನೋ ಆಗುವುದರ ಬದಲು.. ಯಾರದ್ದೋ ಮೋಸಕ್ಕೆ ಬಲಿಯಾಗಿ ನಮ್ಮದಲ್ಲದ ಊರಲ್ಲಿ ಕೂಲಿಯೂ ಇಲ್ಲ, ಕವಡೆಯೂ ಇಲ್ಲ ಅನ್ನೋ ಹಾಗೆ ಆಗೋದರ ಬದಲು.. ಮಗ ಸೋಂಬೇರಿಯಾಗಿ ಆದರೂ ಕಣ್ಮುಂದೆ ಇರುವುದೇ ಲೇಸು ಅನ್ನುವ ಲೆಕ್ಖಾಚಾರ ಅಪ್ಪನದು. ಹಾಗೋ ಹೀಗೋ ಸಂಧಾನದ.. ಸಮಾಧಾನದ ಅರ್ಧ ಗಂಟೆಯ ಮಾತುಕತೆಯ ಬಳಿಕ ತಮ್ಮನಿಂದ ಅಪ್ಪನ ಬಳಿ ಕ್ಷಮೆ ಕೇಳಿಸಿದ್ದಾಯ್ತು. ಹೊಡೆದದ್ದಾದರೂ ಯಾರು ಅಪ್ಪ.. ಅದು ತಾಳದೆ ಹೋದರೆ ಹೇಗೆ..?? ಮನೆ ಮುಂದೆ ಬಂದ ದೇವಿಯ ಪೂಜೆಗೆ ಸಕುಟುಂಬ ಸಮೇತರಾಗಿ ನಿಂತು ಪೂಜೆ ಮಾಡಿಸಿದ್ವು. ಎಲ್ಲರ ಹಾರೈಕೆಯೂ ಹರಕೆಯೂ ತಮ್ಮನ ಒಳಿತಿನ ಕುರಿತೇ ಆಗಿತ್ತು. ತಮ್ಮ ಅದೆಷ್ಟೋ ತಿಳುವಳಿಕೆ ಹೇಳಿದ ನಂತರ ಮನೆ ಬಿಟ್ಟು ಹೋಗುವ ಇರಾದೆ ಇಂದ ಹೊರ ಬಂದಿದ್ದ. ಅದೇ ಧೈರ್ಯದ ಮೇಲೆಯೇ ನಾನು ಮಾರನೆ ದಿನ ಹೊಸೂರಿಗೆ ಹೊರಟಿದ್ದೆ. 

ಇಂದು ಫೋನ್ ಮಾಡಿದ ಅಪ್ಪ ಸಂತುಗೆ ಒಂದು ಸೆಕೆಂಡ್ ಹ್ಯಾಂಡಲ್ ಬೈಕ್ ನೋಡಿದಿನಿ.. ಪಲ್ಸರ್ ಬೈಕ್ ಚೆನ್ನಾಗಿದೆ. ನಮಗೆ ಗೊತ್ತಿರೋರ ಮಗನದ್ದೇ ಬೈಕು. ಆ ಹುಡುಗ ಈಗ ಮುಂಬೈ ನಲ್ಲಿ ಇರೋದ್ರಿಂದ ಮನೇಲಿ ಸುಮ್ನೆ ಬಿದ್ದಿದೆ ಅಂತ ಅವರಪ್ಪ ಇದನ್ನ ಮಾರ್ತಾ ಇದಾರೆ. ಅದೂ ಅಲ್ದೆ ಅವರೇನೋ ಹೊಸಾ ಬೈಕ್ ತಗೋತಾರಂತೆ. ಈ ಬೈಕ್ ಆದ್ರೆ ಅವರಿಗೆ ಓಡ್ಸೋದು ಕಷ್ಟ ಅಂತೆ. ಮಾತು ಕಥೆ ಮಾಡಿ ಸ್ವಲ್ಪ ಕಮ್ಮಿ ಬೆಲೆಗೆ ಸಿಕ್ರೆ ತಗೊಂಡು ಬಿಡೋಣ ಅಲ್ವಾ..?? ಅವನಿಗೂ ಮನೆ ಹತ್ರ ಅದೂ ಇದೂ ಕೆಲಸಕ್ಕೆ ಉಪಯೋಗ ಆಗತ್ತೆ.. ನಿನ್ನ ಒಂದು ಮಾತು ಕೇಳೋಣ ಅಂತ ಫೋನ್ ಮಾಡಿದೆ. ಏನ್ ಹೇಳ್ತೀಯ ಅಂದ್ರು ಅಪ್ಪ. ಇದು.. ಈವರೆಗೂ ನಮಗೆ ಕಾಣಿಸಿರದ ಅಪ್ಪನ ಅಪರೂಪದ ಮುಖ..!! ಅಪ್ಪ ಅದ್ಯಾವಾಗ್ಲೂ ಹಾಗೆ ತಮ್ಮ ಸಿಟ್ಟು ಸೆಡವಿನ ಮುಖದ ಹಿಂದೆ ಒಂದು ಅಪಾರ ಪ್ರೇಮದ ಮುಖವನ್ನ ಹೊತ್ತಿರೋದು. ಆದ್ರೆ ಅದು ಅಷ್ಟು ಸುಲಭಕ್ಕೆ ಅವರೂ ತೋರಗೊಡೋದಿಲ್ಲ.. ನಮಗೂ ಅಷ್ಟು ಸುಲಭಕ್ಕೆ ಗೋಚರಿಸೋಲ್ಲ. ಅಪ್ಪನದ್ದು ಕೋಪ, ಪ್ರೇಮದ್ದು ಎರಡು ಮುಖವಷ್ಟೇ.. ಅವರ ವರ್ತನೆಗಳ ರೂಪ ಬೇರೆ ಬೇರೆ..!! ಅದು ಸಂಧರ್ಭ ಮತ್ತು ಪರಿಸ್ತಿತಿಗಳ ಮೇಲೆ ನಿರ್ಧಾರಿತ. ಅವರ ವರ್ತನೆಗಳು, ಕಟ್ಟುಪಾಡುಗಳು, ರೀತಿನೀತಿಗಳು, ಮಾತು, ಸಿದ್ಧಾಂತಗಳು ಯಾರಿಗಾದರೂ ಸರಿ ಹೊಂದಿಕೊಲ್ಲೋದೆ ಇಲ್ಲ. ಬೈಕ್ ತಗೊಳ್ಳುವುದರಲ್ಲಿ ನನದ್ಯಾವ ಅಭ್ಯಂತರವೂ ಇಲ್ಲ.. ನಾಳೆನೆ ಅಕೌಂಟ್ ಗೆ ದುಡ್ಡು ಕಳಿಸ್ತೀನಿ ತಗೋಳಿ ಅಂದೆ. ಸರಿ ಅಂದು ಸುಮ್ಮನಾದ್ರು. ಮೊದಲಿಂದಲೂ ಹಾಗೆ ನಮ್ಮಗಳ ನಡುವೆ ಫೋನ್ ಅಥವಾ ನೇರ ಮಾತು ಕಥೆ ಅಂದರೆ ಅಷ್ಟೇ.. ಆ ಸಂಧರ್ಭಕ್ಕೆಷ್ಟು ಬೇಕೋ ಅಷ್ಟೇ. ಮನೆಯೊಳಗಾದರೂ ಸರಿ ಅಗತ್ಯಕ್ಕಿಂತ ಯಾರೂ ಹೆಚ್ಚು ಮಾತಾಡುವುದಿಲ್ಲ.ನಕ್ಕು ಮಾತಾಡುವ ಪರಿಪಾಟ ಕಲಿತದ್ದೇ ಇಲ್ಲ. ಬಾಲ್ಯದಿಂದಲೂ ಅಪ್ಪನ ಗಂಭೀರ ಸ್ವಭಾವವೇ ನಮಗೆ ಆಪ್ತ ಪರಿಚಿತ. ಅಪ್ಪ ನಗು ನಗುತ್ತ ಮಾತಾಡುವುದು ನೋಡುವುದಾದರೆ ಅದು ಅವರ ಗೆಳೆಯರ ಬಳಗದ ಮಾತು ಕತೆಯಲ್ಲಷ್ಟೇ. ಅವರು ನಕ್ಕಾಗ ವಿಭಿನ್ನವಾಗಿ, ಚೆನ್ನಾಗಿ ಕಾಣಿಸುತ್ತಾರೆನ್ನುವುದು ನಿಜ. 

ಕೆಲಸ ಸಿಕ್ಕು ತಮಿಳು ನಾಡು ಸೇರಿರುವ ನಾನು ಪರಿಸ್ತಿತಿಯ ಪ್ರಭಾವ ಅದೆಷ್ಟೋ ಸಾರಿ ಅಂದುಕೊಂಡ ಹಾಗೆ ಒಮ್ಮೊಮ್ಮೆ ಊರಿಗೆ ಹೋಗಲಾಗುವುದಿಲ್ಲ. ಅಂತ ಸಂಧಿಗ್ದತೆಯಲ್ಲೇ ಒಂದೆರಡು ಬಾರಿ ಯುಗಾದಿ, ಗಣೇಶ ಹಬ್ಬ, ಶಿವರಾತ್ರಿಗೆ ಊರಿಗೆ ಹೋಗದೆ ಇರುವಾಗಲೆಲ್ಲ ಅಥವಾ ಅಕ್ಕ ಪಕ್ಕದೂರಿನ ಜಾತ್ರೆಗಳಾದಾಗಲೆಲ್ಲ ಅಪ್ಪ ಫೋನ್ ಮಾಡಿ ಇಲ್ಲಿ ಹೀಗಾಯ್ತು.. ಅಲ್ಲಿ ನಿನ್ ಜೊತೆ ಯಾರೂ ಇಲ್ಲ.. ನಿನ್ ಪಾಲಿಗೆ ಹಬ್ಬಗಳು ಅದು ಹ್ಯಾಗೋ ಏನೋ..?? ಸಾಧ್ಯ ಆದ್ರೆ ಸಂಜೆ ಸ್ನಾನ ಮಾಡ್ಕೊಂಡು ದೇವಸ್ಥಾನಕ್ಕೆ ಹೋಗಿ ಬಾ ಅನ್ನುತ್ತಾರೆ. ರಜೆ ಸಿಕ್ಕದೇ ಹೋದರು ಹಬ್ಬದ ಅಡುಗೆ ಇಂದ ನಾನೇನು ವಂಚಿತನಾಗೋದಿಲ್ಲ. ಬೆಂಗಳೂರಿನ ಕೆಲ ಗೆಳೆಯರ ಮನೆಯೋ ಅಥವಾ ಕಾಲೋನಿಯಲ್ಲಿನ ಏಕೈಕ ಕನ್ನಡ ಕುಟುಂಬ ಗೆಳೆಯ ಪ್ರಶಾಂತನ ಮನೆಯಲ್ಲೋ ಊಟ ಆಗಿ ಹೋಗುತ್ತದೆ. ಆದರೆ ಅಪ್ಪ ಹೇಳಿದ ಹಾಗೆ ದೇವಸ್ಥಾನಕ್ಕೆ ಹೋಗಿ ಬಂದರೇನೆ ಹಬ್ಬದ ದಿನ ಒಂದು ವಿಶೇಷ ಸಮಾಧಾನದ ತೃಪ್ತಿ ಸಿಗೋದು. ಇವತ್ತು ಅಪ್ಪಂದಿರ ದಿನ ಅಪ್ಪನಿಗೆ ವಿಶ್ ಮಾಡುವ ಮನಸ್ಸಿತ್ತು.. ಆದರೆ ನಾವುಗಳ್ಯಾರು ಅಂಥಹ ಆಚರಣೆಗಳಿಗೆ ನಮ್ಮನ್ನ ನಾವು ತೊಡಗಿಸಿ ಕೊಂಡ ಉದಾಹರಣೆಗಳಿಲ್ಲ. ಇನ್ನು ನಾನು ಈ ಕಡೆ ಬಂದಾದ ಮೇಲೆ ಅದೂ ಇದೂ.. ಆ ದಿನ ಈ ದಿನ.. ಹುಟ್ಟಿದ ದಿನ ಅಂತೆಲ್ಲ ದಿನಗಳಿಗೆ ಸ್ಪಂದಿಸುವ ಪ್ರವೃತ್ತಿ ಬೆಳೆಸಿಕೊಂಡೆನಾದರೂ.. ನಮ್ಮ ಮನೆಯವರಿಗೆಲ್ಲ ಅದು ಈಗಲೂ ಅಪರಿಚಿತವೇ. ಅದನ್ನ ಪರಿಚಿತಗೊಳಿಸುವ ಆಸೆಯೇ.. ಆದರೆ ಅದಕ್ಕೆ ಅವರು ಸ್ಪಂದಿಸುವುದಿಲ್ಲವೆಂಬ ಬೇಸರ.. ಒಪ್ಪಿಕೊಳ್ಳುವುದಿಲ್ಲ ಎಂಬ ನಿರಾಸೆ. ಬದಲಾಗಿರೋದು ನಾನೇ ಹೊರತು ಅವರಲ್ಲ. ಫೋನ್ ಮಾಡಿದ್ದು ಸಂಜೆ ಆರು ಗಂಟೆ ಸುಮಾರಿಗಾದ್ದರಿಂದ ಅಪ್ಪ ಇನ್ನು ಮನೆಗೆ ಹೋಗಿರಲಾರರು ಗೊತ್ತು. ಎರೆಹಳ್ಳಿಯಲ್ಲಿಯೇ ಅಪ್ಪನ ದಿನದ ಬಹುಪಾಲು ಸಮಯ ಕಳಿಯೋದು. ಅಲ್ಲಿಂದ ಎರಡು ಕಿಮೀ ದೂರಕ್ಕೆ ನಮ್ಮ ತಾಲೂಕಿಗೆ ಪ್ರಸಿದ್ಧವಾದ ಸುಣ್ಣದಹಳ್ಳಿ  ಆಂಜನೇಯ ಸ್ವಾಮೀ ದೇವಸ್ಥಾನವಿದೆ. ಅಪ್ಪನಿಗೆ ಆ ದೇವಸ್ಥಾನಕ್ಕೆ ಹೋಗಿ ಬರಲು ಹೇಳಿದೆ. ಅಪ್ಪ ಯಾಕೆಂದು ಕೇಳಿದರು. ಇಂದು ಅಪ್ಪಂದಿರ ದಿನ ಅಂತ ವಿವರಿಸುವ ಧೈರ್ಯ ನನಗೆ ಬರಲಿಲ್ಲ.. ಯಾಕೋ ಮನಸ್ಸಿಗೆ ತಳಮಳ ಶುರುವಾಗಿತ್ತು ಅದಕ್ಕೆ ಒಮ್ಮೆ ಹೋಗಿ ಬನ್ನಿ ಅಂತ ಸುಳ್ಳು ಕಾರಣ ಕೊಟ್ಟೆ. ಸರಿ ಅಂದು ಫೋನ್ ಇಟ್ಟರು. 

ನಿಜ ಹೇಳಬೇಕೆಂದರೆ ನಾವು ಅಪ್ಪನಿಂದ ಕಂಡ ಸಂತೋಷ ಅಷ್ಟಕ್ಕಷ್ಟೇ. ಒಂದು ಬೇಲಿ ಬಿಗಿದ ವಾತಾವರಣದಲ್ಲೇ ಬೆಳೆದ ನಾವು ಬೇಲಿ ದಾಟುವ ಅವಕಾಶವನ್ನೇ ಅಪ್ಪ ನಮಗೆ ಮಾಡಿ ಕೊಡಲಿಲ್ಲ. ಬೇಲಿ ಎಂದರೆ ನಮ್ಮ ಇಚ್ಚೆಗನುಸಾರವೆಂದಲ್ಲ ಸಾಮಾನ್ಯ ಮಕ್ಕಳ ದೈನಂದಿಕ ಜೀವನದ ಹಾಗಿನದ್ದು. ಮನೆಯಲ್ಲಿ ತಾನು ನಡೆಸಿದ್ದೇ ಆಗಬೇಕು ಅನ್ನುವ ಹಠ. ಅವರ ನಿರ್ಧಾರಗಳನ್ನು ಯಾರೂ ಪ್ರಶ್ನಿಸುವಂತಿಲ್ಲ. ಎದುರಾಡುವಂತಿಲ್ಲ. ಸಾಮಾನ್ಯ ಜನರೊಡನೆ ಅಷ್ಟಾಗಿ ಬೇರೆಯುವಂತಿಲ್ಲ. ನಾವುಗಳು ಮಕ್ಕಳಾದರೆ ಊರ ಮಕ್ಕಳ ಜೊತೆ ಹೆಚ್ಚಾಗಿ ಬೇರೆಯುವಂತಿಲ್ಲ. ನಾನಾಗ ಹತ್ತನೇ ತರಗತಿ.. ಒಮ್ಮೆ ಸರೋಜಮ್ಮನ ಹೋಟೆಲಿನ ಕಟ್ಟೆಯ ಮೇಲೆ ನಾಲ್ಕಾರು ಹಿರಿಯರು ಚೌಕಾಬಾರ ಆಡುತ್ತಿದ್ದನ್ನ ನಿಂತು ನೋಡುತ್ತಿದ್ದ ನನ್ನನ್ನ, ಹಸಿ ಬಾಳೆ ದಿಂಡಿನಿಂದ ಊರೆಲ್ಲ ಓಡಾಡಿಸಿ ಹೊಡೆದಿದ್ದರು..!! ಮೈಯೆಲ್ಲಾ ಕೆಂಪು ಬಾರೆ..!! ಈಗಲೇ ಜೂಜು ಬೇಕಾ ನಿಂಗೆ..?? ಜೂಜು ಕೋರರ ಸಹವಾಸ ಮಾಡ್ತೀಯ ಅಂತ ಅಣಕಿಸಿ ಅಣಕಿಸಿ ಹೊಡೆದಿದ್ದರು..!! ತೀರ ಇತ್ತೀಚೆಗೂ ಕೂಡಾ ಒಂದು ವರ್ಷದ ಕೆಳಗೆ ಅವರ ಅಷ್ಟೂ ಧೋರಣೆಗಳಿಗೆ ಬೇಸತ್ತು ಅವರ ಅದ್ಯಾವುದೋ ಯೋಜನೆಯೊಂದಕ್ಕೆ ನಕಾರ ಸೂಚಿಸಿ ಅವರಿಗೆ ಎದುರಾಡಿದ್ದ ನನಗೂ ಮತ್ತು ಅಮ್ಮನಿಗೂ ಇಬ್ಬರಿಗೂ ನಡು ರಾತ್ರಿಯಲ್ಲಿ ಮನೆ ಬಿಟ್ಟು ಹೋಗುವಂತೆ ರಾದ್ಧಾಂತ ರಂಪಾಟಗಳನ್ನ ಮಾಡಿದ್ದರು. ಅದನ್ನ ಬಗೆ ಹರಿಸಿದ್ದು ಮತ್ತೊಂದು ಗೋಳಿನ ಕಥೆ. ಇದ್ದ ಒಬ್ಬಳೇ ಹೆಣ್ಣು ಮಗಳು ಅಕ್ಕ ಎಂದರೆ ಮತ್ತು ಅಕ್ಕನ ಎರಡು ಮುದ್ದು ಮುದ್ದು ಪುಟಾಣಿ ಮಕ್ಕಳೆಂದರೆ ಬಲು ಪ್ರೀತಿ. ಅವರೊಂದಿಗಿರುವಾಗ ಮಾತ್ರ ಅವರ ಮಗು ಮೊಗವ.. ನಗು ಮೊಗವ ಕಾಣಲು ಸಾಧ್ಯ. ಇಷ್ಟು ವರ್ಷ ಅಪ್ಪನೊಂದಿಗೆ ಹೆಣಗುತ್ತಿರುವ ಅಮ್ಮನಿಗೆ ಅಪ್ಪ ಅದೊಂದೇ ಸಮಯದಲ್ಲಿ ಇಷ್ಟವಾಗೋದು ಮಕ್ಕಳ ಜೊತೆ ಮಗುವಾದಾಗ..!!

ಅವತ್ತೊಂದು ಮಾತುಕತೆಯಲ್ಲಿ ಅಪ್ಪನಿಗೆ ಎದುರಾಡಿದ್ದ ನಾನು ನನ್ನ ಜೀವ ಮಾನದಲ್ಲಿ ಬೇರೆ ಯಾವತ್ತಿಗೂ ಅವರ ಯಾವ ವಿಚಾರಗಳಿಗೂ ಎದುರಾಡಿದವನಲ್ಲ. ಇನ್ನು ಅಮ್ಮನ ಬಳಿ ರೇಗಾಡುತ್ತೇನೆ.. ಕೂಗಾಡುತ್ತೇನೆ.. ನಕ್ಕು ಮಾತಾಡುತ್ತೇನೆ ಬಿಟ್ರೆ ಅಪ್ಪನ ಬಳಿಯಲ್ಲ. ಅಪ್ಪನಿಗೆ ನನ್ನ ಮೇಲೆ ವಿಶೇಷ ಅಭಿಮಾನ ಗೌರವ. ಅವರ ಪ್ರಕಾರ ನಾನು ಅವರಪ್ಪನ ಅಂದರೆ ನಮ್ಮ ಅಜ್ಜನ ಅವತಾರವಂತೆ. ನಮ್ಮಜ್ಜನವರು ಶಾಂತ ಮೂರ್ತಿಯಂತೆ.. ಆ ಕಾಲಕ್ಕೆ ಬಹಳ ಜನಕ್ಕೆ ಉಪಕಾರ ಮಾಡಿದವರಂತೆ.. ಬಹಳ ಜನರ ಬಾಳಿಗೆ ಬೆಳಕು ಕೊಟ್ಟವರಂತೆ. ನನ್ನ ಮೇಲೆ ಅವರಿಗೊಂದು ಅಭಿಮಾನವೂ ಅದೇ ಕಾರಣಕ್ಕೆ ಇರಬೇಕೇನೋ.. ನಾನು ನೋಡಲು ನಮ್ಮ ತಾತನ ಹಾಗೆ ಇರುವೆನಂತೆ..! ಅವರಂತೆ ಶಾಂತ ಮೂರ್ತಿಯಂತೆ. ಇನ್ನೊಬ್ಬರ ನೋವಿಗೆ ಮಿಡಿಯುವ ಮನಸ್ಸಂತೆ.. ಮೇಲಾಗಿ ನನ್ನ ಇತ್ತೀಚಿನ ಕೆಲ ಸಣ್ಣ ಪುಟ್ಟ ಬೆಳವಣಿಗೆ.. ಸಾಧನೆಗಳನೆಲ್ಲ ಕಂಡ ಮೇಲೆ ಅವರಿಗೆ ನನ್ನ ಮೇಲೊಂದು ವಿಶೇಷ ಗೌರವ. ನನ್ನನ್ನ ಯಾವತ್ತಿಗೂ ಲೋ ಅಪ್ಪ.. ಲೋ ಪುಟ್ಟ ಅಂದದ್ದೇ ಹೆಚ್ಚು. ಹೆಸರಿಡಿದ್ದು ಕರೆದದ್ದು ಕಮ್ಮಿಯೇ. ನನ್ನ ಆಸಕ್ತಿಗಳ ಕಡೆಗೆ ಅವರ ಪ್ರೋತ್ಸಾಹಗಳೇನೂ ಇಲ್ಲದೆ ಹೋದರು ನನ್ನ ಸಣ್ಣ ಪುಟ್ಟ ಸಾಧನೆಗಳ ಕಂಡು ಸಮಾಧಾನ ಪಡುವ ಮನಸು ಅವರಿಗಿದೆ ಅದು ಸಾಕು. 

ನಮ್ಮ ಬಳಿ ಇಷ್ಟು ಒರಟಾಗಿ ಕಾಣುವ ಅಪ್ಪ ಹೊರಗಿನ ಜಗತ್ತಿಗೆ ಬಹು ಜನಕ್ಕೆ ಬಹು ಪರಿಚಿತವಾಗಿರುವ ವ್ಯಕ್ತಿ. ಸುಳ್ಳು ಹೇಳಬಾರದು.. ಅವರ ದೆಸೆಯಿಂದ ಪರಿಚಯವಾದ ಗಣ್ಯವ್ಯಕ್ತಿಗಳು ಒಬ್ಬಿಬ್ಬರಲ್ಲ.. ಅಂತಿಂಥವರಲ್ಲ. ಐ ಟಿ ಐ ಮುಗಿಸಿ ಕೆಲಸ ಸಿಗದೇ ಕಂಗಾಲಾಗಿ ಕುಳಿತಿದ್ದ ನನಗೆ, ಲೋ ಪುಟ್ಟ ಹೆದರಬೇಡ ನಿನಗೆ ನಾನು ಗೌರ್ನಮೆಂಟ್ ಕೆಲಸ ಕೊಡಿಸ್ತೀನಿ ಅಂತ ಆಶ್ವಾಸನೆ ಇತ್ತವರು ಅವರು. ಹಾಗೆ ಮಾಡ ಬಲ್ಲವರು ಕೂಡಾ. ಅವರಿಗೆ ಆ ಚೈತನ್ಯ ಇದೆ ಕೂಡಾ.. ಅವರ ಜನ ಬಳಕೆ & ಸಂಪರ್ಕ ಅಂಥಾದ್ದು. ನನ್ನ ಹುಚ್ಚು ಆಸೆ, ಆದರ್ಶ, ಸಿದ್ಧಾಂತಗಳಿಗೆ ಕಟ್ಟುಬಿದ್ದು ನನ್ನ ಈಗಿನ ಒಂದೊಳ್ಳೆಯ ಪರಿಸ್ತಿತಿಯನ್ನ ನನ್ನ ಕೈಯಾರೆ ನಾನೇ ಹಾಳು ಮಾಡಿ ಕೊಂಡಿದ್ದೆ ಆದರೆ.. ನನ್ನ ಬದುಕನ್ನ ಮತ್ತೆ ನಾನು ನನ್ನದೇ ಹಳಿಗೆ ಕೊಂಡು ಬರಲು ಆಗುತ್ತೋ ಇಲ್ಲವೋ.. ನನ್ನ ಗೆಳೆಯರ ಶ್ರಮದ ಹೊರತಾಗಿ ಕೂಡ ಅದು ಸಾಧ್ಯವೋ ಇಲ್ಲವೋ.. ಆದರೆ ನನ್ನಪ್ಪ ನನ್ನ ಬದುಕು ಕಟ್ಟಬಲ್ಲರು. ಅವರಿಗಾ ಚೈತನ್ಯವಿದೆ. ಶಕ್ತಿಯಿದೆ. ಒಂದು ಕಾಲೆಜೋ ಅಥವಾ ಐ ಟಿ ಐ ನೋ ಮುಗಿಸಿದ್ದಿದ್ದರೆ.. ನನ್ನ ತಮ್ಮನ ಜೀವನವನ್ನ ಕೂಡಾ ಅವರು ರೂಪಿಸಿ ಬಿಡುತ್ತಿದ್ದರು. ಬದುಕಿನ ಭವಿಷ್ಯದ ಕುರಿತಾದ ಯಾವುದೇ ಚಿಂತನೆಗಳಿಲ್ಲದ ನನ್ನ ತಮ್ಮನದ್ದೇ ಅವರ ಬಹು ದೊಡ್ಡ ಚಿಂತೆ ಈಗ. ಆ ಚಿಂತೆಯ ಪ್ರಭಾವವೇ ಈಚೆಗೆ ಕುಡಿಯಲು ಕಲಿತಿದ್ದಾರೆ. ಯೋಚಿಸಿ ಕೊರಗಳು ಶುರುವಿಟ್ಟಿದ್ದಾರೆ. ಅದರ ಪ್ರಭಾವ ಈಗಲೂ ಸಿಡುಕಾಡುತ್ತಾರೆ. ಕಿಡಿ ಕಾರುತ್ತಾರೆ.

ನನ್ನಪ್ಪ ಶ್ರಮ ಜೀವಿ.. ಬದುಕಲ್ಲಿ ಬಹಳ ನೋವುಂಡ ಜೀವಿ.. ಚಿಕ್ಕ ವಯಸ್ಸಲ್ಲೇ ತಂದೆ ತಾಯಿಯರನ್ನು ಕಳೆದು ಕೊಂಡು ತಮ್ಮ ತಂಗಿಯೊಡನೆ ಪರ ಊರಿಗೆ ಬಂದು ಬದುಕಿ ಬಾಳಿದ್ದು ಸಾಧನೆಯೇ ಸರಿ. ಬದುಕೋಕೆ ಬೇಕಾದ ಬಹಳ ಕೆಲಸ ಬಲ್ಲ ಜೀವಿ. ಆದರೂ ನಮ್ಮಪ್ಪನೆಂದರೆ ಅದೊಂದು ನಿರಾಶ ಭಾವವೇ ಮನದೊಳಗೆ ಮನೆ ಮಾಡುತ್ತದೆ. ಅವರ ಅದಾವ ಉಚ್ಚ ಗುಣಗಳೂ ಕೂಡ ನಮ್ಮಗಳ ಸಂಭಂಧಗಳ ನಡುವೆ ಗೌಣ. ನನಗೆ ಅಪ್ಪನ ಮೇಲೆ ವಿಶ್ವಾಸವಿದೆ, ಪ್ರೀತಿ ಇದೆ, ಅಭಿಮಾನವಿದೆ. ಆದರೂ ಅದಕ್ಕಿಂತಲೂ ಹೆಚ್ಚಿನದಾದ ನಿರಾಸೆಯಿದೆ.. ಕೋಪವಿದೆ.. ಮುನಿಸಿದೆ.. ತಾತ್ಸಾರ ಭಾವವಿದೆ..!! ಅಷ್ಟಾದರೂ ಅಪ್ಪ ನಿಮಗೆ ಅಪ್ಪಂದಿರ ದಿನದ ಶುಭಾಶಯಗಳು. "ಒಬ್ಬ ಅಪ್ಪನೆಂದರೆ ಕೇವಲ ಮಕ್ಕಳೆಡೆಗಿನ ತನ್ನ ಕರ್ತವ್ಯವನ್ನ ಮಾಡಿ ಮುಗಿಸುವವನು ಮಾತ್ರವಲ್ಲ. ತನ್ನ ಮಗುವಿನ ಕಣ್ಣಲ್ಲಿ ಅವನು ಕಾಣಲಾರದ ಒಂದು ಸುಂದರ ಜಗತ್ತಿನ ಚಿತ್ರಣವನ್ನ ಕಾಣಿಸಿ ಕೊಡುವವನೂ ಕೂಡ" ನಾವು ನಿಮಗೆ ನಮ್ಮ ಕಣ್ಣೊಳಗಿನ ಜಗತ್ತು ಬದಲಾಯಿಸುವಂತೆ ಕೇಳಿ ಕೊಳ್ಳುವುದಿಲ್ಲ. ನೀವು ಸೂಪರ್ ಹೀರೋ ಆಗೋದು ಬೇಡ..!! ಆದರೆ ಜಗತ್ತಿಗನುಗುಣವಾಗಿ ಒಬ್ಬ ಸಾಮಾನ್ಯ ಮನುಷ್ಯನಂತೆ ನಡೆದುಕೊಳ್ಳಬೇಕೆಂಬ ವಿನಂತಿ ಅಷ್ಟೇ. 

ಸಂತೆಗೆ ಹೋದಾಗಲೆಲ್ಲ ಮಂಡಕ್ಕಿ, ಬತ್ತಾಸು, ಮೈಸೂರು ಪಾಕು, ಜಿಲೇಬಿ ತಂದು ಕೊಟ್ಟು ನಮಗೆ ತಿನ್ನಿಸುತ್ತಿದ್ದ..  ಅದಾಗಲೇ ಊಟ ವಾಗಿ ಮಲಗಿದ್ದರೂ ಮತ್ತೊಮ್ಮೆ ಎಬ್ಬಿಸಿ ತನ್ನ ಜೊತೆ ಕೂರಿಸಿಕೊಂಡು ಮಂಪರುಗಣ್ಣಲಿದ್ದ ನಮಗೆ ತನ್ನ ಕೈ ತುತ್ತಿನಲ್ಲೇ ನಾಲ್ಕು ತುತ್ತು ತಿನ್ನಿಸುತ್ತಿದ್ದ.. ಸ್ಕೂಲ್ ನಲ್ಲಿ ಟೀಚರ್ ಬರೆ ಬರುವ ಹಾಗೆ ಹೊಡೆದರೂ ಅಂತ ಟೀಚರ್ ಮೇಲೆ ಕಂಪ್ಲೇಟ್ ಕೊಡಲು ಹೋಗಿದ್ದ ಪ್ರೀತಿಯ ಅಪ್ಪನ್ನನ್ನು ಕಳೆದುಕೊಂಡು ಅದೆಷ್ಟೋ ಕಾಲವೇ ಆಗಿ ಹೋಯ್ತು. ಈಗ ನಮ್ಮ ಜೊತೆ ಇರೋದು ತನ್ನದೇ ಸಿದ್ಧಾಂತ, ಹಠ, ಮೌಲ್ಯ, ಗುರಿ, ಹಣದಾಸೆಯ ಧೋರಣೆಯುಳ್ಳ ಅಪ್ಪನ ಆಕೃತಿ ಅಷ್ಟೇ. ಅದ್ಯಾಕೋ ಆ ಪಾನಿಪುರಿ ತಿನ್ನಿಸುತ್ತಿದ್ದ ಆ ಅಪ್ಪ ಬರಿ ಕಣ್ಣುಗಳನ್ನಷ್ಟೇ ಅಲ್ಲ.. ಮನಸ್ಸನ್ನೂ, ಹೃದಯವನ್ನೂ ತುಂಬಿಕೊಂಡ. ನನ್ನಪ್ಪನ ಬಗ್ಗೆ ಹೇಳಲು ಇನ್ನು ಬಹಳಷ್ಟಿದೆ. ಸಮಯ ಕೂಡಿ ಬಂದಾಗ, ಹೇಳಿಕೊಳ್ಳುವ ಮನಸ್ಸಾದಾಗ ಖಂಡಿತ ಹೇಳಿ ಕೊಳ್ಳುವೆ. ನನ್ನ ನೋವನಾಲಿಸುವ ತಾಳ್ಮೆ ನಿಮಗಿದೆಯಲ್ಲವೇ..?? ಪಾನಿಪುರಿಯವ ಚೇಂಜ್ ಕೊಟ್ಟ.. ಆ ಎರಡು ಮಕ್ಕಳು ಪಾನಿ ಪುರಿ ತಿಂದ ಹಣವನ್ನೂ ನಾನೇ ಕೊಟ್ಟು.. ಆ ಅಪ್ಪನ ಬಳಿ ಹಣ ತೆಗೆದು ಕೊಳ್ಳ ಬಾರದಂತೆ ಪಾನಿ ಪುರಿ ಅಂಗಡಿಯವನಿಗೆ ಹೇಳಿ, ಆ ಮಕ್ಕಳ ಮುಗ್ಧ ಪ್ರಶ್ನೆ ಕೇಳುವ ಪರಿಯನ್ನು ಕಂಡು ಖುಷಿಗೊಂಡು ಅಲ್ಲಿಂದ ಹೊರಡುತ್ತೇನೆ.

Monday 10 June 2013

ಈ ಸಾವು ನ್ಯಾಯವೇ..??

ಈ ರಸ್ತೆ..!!

ಹೊಸದಾಗಿ ನವೀಕರಣಗೊಳ್ಳುತ್ತಾ.. ಮತ್ತಷ್ಟು ಅಗಲಗೊಳ್ಳುತ್ತಾ.. ತನ್ನೆದೆಯ ಮೇಲೆ ಈವರೆಗೂ  ಬಿದ್ದ ಅದೆಷ್ಟು ರಕ್ತದ ಕಲೆಗಳನ್ನ ಮುಚ್ಚಿ ಹಾಕುತ್ತಾ.. ಕಡು ಕಪ್ಪಿನೊಂದಿಗೆ ಶೋಭಿಸುತ್ತಾ ದಿನ ದಿನಕ್ಕೂ ಹೊಸ ರೂಪ ಪಡೆದು ಕೊಳ್ಳುತ್ತಿದೆ. ಎರಡು ಪಥವಿದ್ದ ರಸ್ತೆ ನಾಲ್ಕು ವರ್ಷಗಳ ಹಿಂದೆ ನಾನು ತಮಿಳುನಾಡು ಸೇರುವ ಹೊತ್ತಿಗೆ ನಾಲ್ಕು ಪಥವಾಗಿದ್ದು.. ನಾಲ್ಕು ಪಥವೂ ಸಾಲದೇ ಈಗ ಆರು ಪಥವಾಗಿ ಬದಲಾಗುತ್ತಾ.. ಅದೆಷ್ಟು ರೈತರ ಜಾಗವನ್ನು ನುಂಗಿ.. ಅದೆಷ್ಟು ಬಡ ವ್ಯಾಪಾರಿಗಳ ಮಳಿಗೆಗಳ ಒಡೆದು.. ಅದೆಷ್ಟು ಮರಗಳ ಮಾರಣ ಹೋಮ ನಡೆಸಿ.. ಅದೆಷ್ಟು ಗುಡ್ಡ ಗಾಡುಗಳ ಎದೆ ಸೀಳಿ ಅಭಿವೃದ್ದಿಯ ನೆಪದಲ್ಲಿ ಮರಣ ದಾರಿಯೇ ಆಗಿಹುದೇನೋ ಅನ್ನಿಸುತ್ತದೆ.

ರಸ್ತೆ ಅಗಲವಾದಷ್ಟೂ ಅದರಗಲ ಮೀರಿ ಚಲಿಸುವಂತೆ ವಾಹನಗಳ ಸಂಖ್ಯೆ ಮೀರಿ ಬೆಳೆಯುತ್ತಿರುವುದು ಕೂಡ ಈಗಿನ ವಿಷಮ ಪರಿಸ್ಥಿತಿಗಳಲ್ಲೊಂದು. NH -7  AH - 45 ಎಂದೆಲ್ಲ ಕರೆಸಿಕೊಳ್ಳುವ ಈ ರಾಷ್ಟ್ರೀಯ ಹೆದ್ದಾರಿಯ ಇತಿಹಾಸಕ್ಕೆ.. ದಿನಕ್ಕೊಂದು ಅಪಘಾತ, ಆಘಾತ ಮತ್ತು ಉರುಳಿ ಬಿದ್ದು ರಸ್ತೆಗೆ ಅಂಗಾತ ಮಲಗಿಕೊಳ್ಳುವ ಹೆಣಗಳ ಸಂಖ್ಯೆ ದಿನದಿಂದ ದಿನಕ್ಕೂ ಜಾಸ್ತಿ ಯಾಗುತ್ತಲೇ ಹೋಗುತ್ತಿದೆ. ಅದರಲ್ಲೂ ಹೊಸೂರು ಮತ್ತು ಕೃಷ್ಣಗಿರಿ ನಡುವಿನ 50 ಕಿಮೀ ನಿಜಕ್ಕೂ ಸಾವಿನ ರಹದಾರಿ ಒಂದು ದಿನಕ್ಕೆ ಒಂದಾದರೂ ಸಾವಿನ, ಅಪಘಾತದ, ನೋವಿನ ಸುದ್ದಿಯನ್ನ ಈ ರಸ್ತೆ ಕೊಡದೆ ಇದ್ದದ್ದೇ ಆದರೆ, ಈ ರಸ್ತೆಯ ಎದೆಯ ಮೇಲೆ ಅಂದು ಯಾವ ವಾಹನವೂ ಚಲಿಸೇ ಇಲ್ಲವೇನೋ ಎಂದೇ ಅರ್ಥ. ಅದಕ್ಕೆ ಮೊನ್ನೆ ದಿನ ಕೂಡಾ ಹೊರತಾಗಿಲ್ಲ. 

ಕೆಲಸದ ನಿಮಿತ್ತ ಹೊಸೂರು ಪೇಟೆಯ ಕಡೆ ಹೋಗಿದ್ದೆ.. ದಿನವೂ ಹೋಗುವೆ.. ಪ್ರತಿ ದಿನವೂ ಒಂದಿಲ್ಲೊಂದು ಅಪಘಾತದ ದೃಶ್ಯಗಳಿಗೆ ನನ್ನ ಕಣ್ಣು ತೆರೆದುಕೊಳ್ಳುವ ಪರಿ ನನ್ನ ದುರಾದೃಷ್ಟವೇ ಸರಿ. ಹೊಸದಾಗಿ ನಮ್ಮ ಆಫೀಸಿ ಟ್ರಾನ್ಸ್ಫರ್ ಆಗಿ ಬಂದು ಸೇರಿಕೊಂಡ ಸಂತೋಷ್ ಅವರ ತಂದೆ ತಾಯಿಯವರನ್ನ, ಹೊಸೂರು ಬಸ್ ಸ್ಟಾಂಡ್ ನಲ್ಲಿ ಕಾಟ್ಪಾಡಿ ಯಲ್ಲಿ ಹೈದರಾಬಾದ್ ರೈಲು ಹಿಡಿಯುವ ಸಲುವಾಗಿ ಬಸ್ಸು ಹತ್ತಿಸಿ.. ನ್ಯಾಷನಲ್ ಇನ್ಸೂರೆನ್ಸ್ ನಲ್ಲಿ ಕಂಪೆನಿಯ ಕೆಲಸವನ್ನ ಮುಗಿಸಿಕೊಂಡು ಅಲ್ಲೇ ಹತ್ತಿರವಿದ್ದ ಆರ್ಯಭವನ್ ಸ್ವೀಟ್ಸ್ ನಲ್ಲಿ ಒಂದೊಂದು ಚಂಪಾಕಲಿ ಚಪ್ಪರಿಸುತ್ತಾ, ನಾನು ಮತ್ತು ಡ್ರೈವರ್ ಬಾಲಕೃಷ್ಣ ತಮಾಷೆಯ ಮಾತುಗಳೊಂದಿಗೆ ಕಾರನೇರಿ ಹೊಸೂರಿನಿಂದ ಇಪ್ಪತೊಂದು ಕಿಲೋ ಮೀಟರ್ ದೂರದಲ್ಲಿನ ನಮ್ಮ ಆಫೀಸಿನ ಕಡೆಗೆ ಸಾಗುತ್ತಿದ್ದೆವು. ಹೊಸೂರು ನಗರ ವಲಯವನ್ನ ಇನ್ನು ದಾಟೆ ಇಲ್ಲ. ಚಂದ್ರ ಚೂಡೆಶ್ವರ ದೇವಸ್ಥಾನಕ್ಕೊಂದು ಬಲ ತಿರುವಿದೆ ಆ ರಾಷ್ಟ್ರೀಯ ಹೆದ್ದಾರಿಯೊಳಗೆ. ಆ ತಿರುವಿನಲ್ಲಿ ಬಲಕ್ಕೆ ತಿರುಗಿಸುತ್ತಿದ್ದ ಪ್ಯಾಕೇಜ್ ಡ್ರಿಂಕಿಂಗ್ ವಾಟರ್ ನ ಇಪ್ಪತೈದು ಲೀಟರುಗಳ ತುಂಬಿದ ಬಾಟಲಿಗಳನ್ನ ಹೊತ್ತು ಸಾಗುತ್ತಿದ್ದ "ಟಾಟ ಏಸ್" ಮಿನಿ ಸಾಮಾಗ್ರಿ ಸರಬರಾಜು ವಾಹನಕ್ಕೆ ಹೋಗಿ ಅಪ್ಪಳಿಸಿದ್ದು ಒಂದು ಬೈಕು..!!

ಸತ್ಯವಾಗಲೂ ನಮಗೂ ಆ ಬೈಕಿಗೂ ಹೆಚ್ಚೆಂದರೆ ಹತ್ತು ಮೀಟರುಗಳಷ್ಟು ದೂರವಿದ್ದಿರಬಹುದೇನೋ. ಆಗಷ್ಟೇ ಕೊಂಡ ಹೊಸ ಅಪಾಚೆ ಗಾಡಿ. ನಂಬರ್ ಕೂಡ ಟೆಂಪರರಿ ರಿಜಿಸ್ಟರ್ಡ್ ನಂಬರ್.. ಬೆಂಗಳೂರಿನದ್ದು. ಹುಡುಗ ನನ್ನದೇ ವಯೋಮಾನದ.. ನನ್ನದೇ ದೇಹ ಧೃಡತೆಯ.. ಸ್ವಲ್ಪ ಕಪ್ಪಗಿನ ಬಣ್ಣದ ಹೋಲಿಕೆಯ ವ್ಯಕ್ತಿ. ಹೋಗಿ ಹೊಡೆದದ್ದೇ ತಡ ಅವನ ತಲೆಗೆ ಹಾಕಿದ್ದ ಹೆಲ್ಮೆಟ್ ನಾಲ್ಕು ಚೂರು ಗಳಾಗಿತ್ತು. ಬೈಕಿನ ಮುಂಭಾಗದ ಚಕ್ರ ಹೊಡೆದ ರಭಸಕ್ಕೆ ಬೆಂಡಾಗಿ ಆಕಾರ ಕಳೆದು ಕೊಂಡು ನುಜ್ಜು ಗುಜ್ಜಾಗಿ ಹೆಡ್ ಲೈಟ್ ಒಡೆದು ಅಸಂಖ್ಯಾತ ಚೂರುಗಳಾಗಿ ಹೋಗಿ ಬೈಕ್ ಅವನ ಸಮೇತ ಜಾರಿ ಕೊಂಡು ಆ ಲಗೇಜು ಗಾಡಿಯ ಅಡಿ ಹೋಗಿ ಬಿತ್ತು. ಬೈಕ್ ಜಾರುತ್ತಾ ಅದರ ಮೇಲೆ ಕೂತಿದ್ದ ಅವನನ್ನು ಎಳಕೊಂಡು ಅದರಡಿಗೆ ಬಿದ್ದದ್ದು ಸಾಲದೆಂಬಂತೆ ಇನ್ನು ಅದರ ಸೊಕ್ಕಡಗದ ಹಾಗೆ ಶಬ್ದ ಮಾಡುತ್ತಲೇ ಇತ್ತು.!!. ಹಾಗೆ ಬೈಕಿನೊಡನೆ ಜಾರಿ ಆ ಗಾಡಿಯ ತಳ ಸೇರಿದ ಆ ವ್ಯಕ್ತಿಯ ಎದೆ ಭಾಗ ಮತ್ತು ಕೈಗಳಲ್ಲಿ ರಕ್ತ ಧಾರೆ. ಒಬ್ಬ ವ್ಯಕ್ತಿಯ ದೇಹದಿಂದ ಹಾಗೆ ಆ ಪ್ರಮಾಣದಲ್ಲಿ ರಕ್ತ ಹರಿಯುವುದನ್ನು ಕಂಡದ್ದು ಅದೇ ಮೊದಲು..!!- ತರಕಾರಿ ಹೆಚ್ಚುವಾಗ ಕೊಯ್ದು ಕೊಂಡ ಚಿಕ್ಕ ಗಾಯಕ್ಕೇ ಪ್ರಾಣ ಹೋಗುವಂತೆ ನರಳುವ ಮನುಷ್ಯನಿಗೆ ಅಂತ ಪರಿಸ್ತಿತಿಯಲ್ಲಿ ಹೇಗಾಗಿರಬೇಡ...!!

ತಲೆಗೆ ಒಂಚೂರು ಏಟು ಬೀಳದ ಆ ವ್ಯಕ್ತಿ ಪ್ರಾಯಶಃ ಬದುಕ ಬಲ್ಲ ಅನ್ನೋ ಒಂದು ಸಣ್ಣ ನಿರೀಕ್ಷೆ ಇತ್ತು. ಅಷ್ಟೇ.. ಹೋಗಿ ಆ ಲಗೇಜು ಗಾಡಿಯ ತಳ ಸೇರಿದ ಆ ದೇಹ ಎರಡೇ ಎರಡು ಕ್ಷಣ ಕಂಪಿಸಿದ್ದಷ್ಟೇ.. ಆಮೇಲೆ ಮಿಸುಕಾಡಲೇ ಇಲ್ಲ..!! ಅಕ್ಕ ಪಕ್ಕದ ಜನ ಓಡಿ ಹೋಗಿ ಆ ದೇಹವನ್ನ ಹೊರಗೆಳೆದು ಆರೈಕೆ ಮಾಡುವಷ್ಟರಲ್ಲೇ ಆ ಜೀವ ಇಹವನ್ನ ತ್ಯಜಿಸಿತ್ತು. ಕಷ್ಟ ಕೊಟ್ಟು ಹುಟ್ಟಿ.. ಇಷ್ಟ ಪಟ್ಟು ಇಪ್ಪತ್ತೈದು ವರ್ಷ ಬದುಕಿ.. ಹೀಗೆ ಎರಡು ನಿಮಿಷ ಒದ್ದಾಡಿ, ಎರಡು ಕ್ಷಣದೊಳಗೆ ರಸ್ತೆಯ ಮಧ್ಯದಲ್ಲಿ ಅನಾಥ ಹೆಣವಾಗಿ ಮಲಗ ಬೇಕಾದರೆ ನಮ್ಮ ಹಣೆಬರಹವೋ.. ದುರಾದೃಷ್ಟವೋ ಅದೆಷ್ಟು ಕ್ರೂರವಿರಬೇಡ..!!

ಆ ವ್ಯಕ್ತಿ ಯಾರೋ ಏನೋ..?? ಎಲ್ಲಿಯವನೋ..?? ಇಲ್ಲಿಗೇಕೆ ಬಂದನೋ..?? ಮನೆಯವರ ಕಥೆಯೇನು,..?? ನಂಬಿಕೊಂಡವರ ವ್ಯಥೆಯೇನು..?? ಮನದಲ್ಲಿ ಆ ಕ್ಷಣಕ್ಕೆ ಹುಟ್ಟಿದ ಈ ಪ್ರಶ್ನೆಗಳಿಗೆಲ್ಲ ಉತ್ತರ ಕೊಡಬಲ್ಲ ಆ ಜೀವ ಮಾತ್ರವೇ ಅಲ್ಲಿ ಮೂಕವಾದದ್ದು. ರೋಡಿನ ತುಂಬಾ ಮೇಳೈಸಿದ ಜನ.. ರಸ್ತೆಯ ಉದ್ದುದ್ದಕೆ ನಿಂತ ಅಷ್ಟೂ ವಾಹನಗಳಿಗಿದು ನೇರ ದೃಶ್ಯ. ಮೊಟ್ಟ ಮೊದಲಿಗೆ ಇಂಥಾ ಘೋರ ದೃಶ್ಯಕ್ಕೆ ನಾನೂ ನೇರ ಸಾಕ್ಷಿಯಾಗಿದ್ದೆ. ಆಗೊಮ್ಮೆ ಈಗೊಮ್ಮೆ ಸಣ್ಣ ಪುಟ್ಟ ಅಫಘಾತಗಳನ್ನ ನಾನು ಕಂಡಿರುವವನೆ ಆದರು.. ಇಷ್ಟು ಘೋರ ಯಾವತ್ತೂ ಕಂಡಿರಲಿಲ್ಲ. ಅಥವಾ ಘೋರ ಅನಿಸಿಕೊಂಡ ಅಫಘಾತಗಳ ಅವಶೇಷಗಳನ್ನು ರಸ್ತೆಯಲ್ಲಿ ಹೋಗುವಾಗ ಅದೆಷ್ಟೋ ತಡವಾಗಿ ನೋಡಿದ ಉದಾಹರಣೆ ಇತ್ತೇ ವಿನಃ ಇಂಥಾ ಘಟನೆಗೆ ನಾನೆಂದು ಸಾಕ್ಷಿಯಾಗಿರಲಿಲ್ಲ.

ಅಷ್ಟೇ ಜೀವ ಉಳಿದಿದ್ದರೆ ಉಳಿಸುವ ಪ್ರಯತ್ನ ಮಾಡ ಬಹುದಿತ್ತು. ಬಿದ್ದೊಡನೆ ಹಾರಿದ ಪ್ರಾಣ ಪಕ್ಷಿ ಇಲ್ಲದ ಆ ದೇಹಕ್ಕೆ ಇನ್ನಾವ ಆರೈಕೆ ಚೈತನ್ಯ ಕೊಟ್ಟೀತು..?? ಒಂದು ಅತೀವ ಶೋಕ.. ಅಗೋಚರ ಭ್ರಮೆ.. ಅದಮ್ಯ ನೋವು.. ಅನಾಗರೀಕ ಭಯ.. ಅಮಾನುಷ ಗಾಭರಿ..  ಅಶೇಷ ನಿರ್ಭಾವುಕತೆಯ ಜೊತೆ ನನ್ನ ಪಾಡಿಗೆ ನಾನಿರುವಾಗ ಬಾಲ ತನ್ನ ಪಾಡಿಗೆ ತಾನು ಕಾರು ಚಲಿಸಲು ಶುರು ಮಾಡಿದ. ಅಷ್ಟಾದರೂ ಕಾರಿನಲ್ಲಿ ತನ್ನ ಪಾಡಿಗೆ ತಾನು ಹಾದಿ ಕೊಳ್ತಾ ಇದ್ದ ಆ ಮ್ಯೂಸಿಕ್ ಪ್ಲೇಯರ್ ಸುಮ್ಮನಾಗಿರಲಿಲ್ಲ. ಈ ಪ್ಲೇಯರ್ ನಂತೆಯೇ ಅಲ್ಲವೇ ನಮ್ಮೆಲ್ಲರ ಜೀವನ.??. ಹಾಡುವ ತನಕ ಅದಾವ ಪರಿಸ್ತಿತಿಯಾದರೂ ಹಾಡಲೇ ಬೇಕು.. ಹಾಡಲಾಗದ, ಅಥವಾ ಮರಳಿ ಹಾಡುವಂತೆ ರಿಪೇರಿಯಾಗದ ಹಾಗಿನ ಯಾವುದಾದರೂ ದೋಷವಾದಲ್ಲಿ ತನ್ನ ಇರವನ್ನ ತ್ಯಜಿಸಿ ನಾಶವಾಗಬೇಕು. ಈ ಕಾರಿಗಾದರೆ ಹೊಸ ಪ್ಲೇಯರ್ ಬಂದೀತು ನಮ್ಮ ಬದುಕಿಗಾದರೆ ನಮ್ಮ ಸ್ಥಾನಕ್ಕೆ ಮತ್ತೊಬ್ಬರು..?? ಈಗಿನ ಲೆಕ್ಖಾಚಾರಕ್ಕೆ ಕಡಿಮೆ ಎಂದರು ೫೦- ೬೦ ವರುಷ ಗಳಷ್ಟಾದರೂ ಇರಬಹುದಾದ ಮನುಷ್ಯನ ಆಯಸ್ಸು ಹೀಗೆ ಎರಡು ಕ್ಷಣದಲ್ಲಿ ಹೋಗಿ ಬಿಡ ಬಹುದಾದರೆ ಸಾವು ಅದೆಂಥ ಕ್ರೂರಿ..!!

ಹೆಚ್ಚೆಂದರೆ ನಲವತ್ತರ ಆಸುಪಾಸಿನಲ್ಲಿ ಮಂದವಾಗಿ ಚಲಿಸುತ್ತಿರುವ ಕಾರು.. ಅಫಘಾತದ ಕುರಿತು.. ಸತ್ತ ವ್ಯಕ್ತಿಯ ಕುರಿತು ಅನವರತ ಮಾತಾಡುತ್ತಲೇ ಇದ್ದ ಬಾಲನ ಅಸ್ಪಷ್ಟ ಮಾತುಗಳ ನಡುವೆ ನನ್ನ ತಲೆಯೊಳಗೆ ನನ್ನದೇ ಒಂದು ಯೋಚನಾ ಲಹರಿ..!! ನನ್ನದೇ ಒಂದು ಚಿಂತೆಗಳ ಕಂತೆ. ಸತ್ತವನ ಜಾಗದಲ್ಲಿ ನಾನೇ ಇದ್ದಿದ್ದರೆ..?? ಮನೆಗೆ ಊರುಗೋಲು ಅನಿಸಿಕೊಂಡ ನಾನೇ ಇಲ್ಲವಾದರೆ..?? ನನ್ನನ್ನ ನಂಬಿ ಪೋಲಿ ಬಿದ್ದಿರುವ ತಮ್ಮನ ಭವಿಷ್ಯದ ಬಗ್ಗೆ ಉಜ್ವಲ ಕನಸುಗಳನು ಹೊತ್ತ ಅಪ್ಪ ಅಮ್ಮನ ಆಸೆಗಳೇ ಮಣ್ಣಾದರೆ..?? ನನಗಾದರೂ ಅವನು ಪ್ರೀತಿಯ ತಮ್ಮ.. ಅವನ ಏಳ್ಗೆ ನನ್ನ ಅತೀವ ಸಾರ್ಥಕತೆಯ ಸಾಧನೆಗಳಲ್ಲಿ ಒಂದು. ಹೊಸದೊಂದು ಚೆಂದದ ಮನೆ ಕಟ್ಟಬೇಕು.. ಅಲ್ಲಿ ನಾವೆಲ್ಲರೂ ಸಂತೋಷವಾಗಿ ಬದುಕಬೇಕು ಎಂಬ ಅದೆಷ್ಟೋ ವರುಷದ ನಮ್ಮೆಲ್ಲರ ಕನಸು ಕನಸಾಗೇ ಉಳಿದು ಹೋದರೆ..?? ಅಪ್ಪ ಅಮ್ಮ ಹಾಗೆ ಮತ್ತೆ ಕೂಲಿ ಮಾಡೇ ಬದುಕಬೇಕೆ..?? ನಾನಿಲ್ಲವೆಂಬ ನೋವ ದಿನವೂ ನೆನೆದು ನೆನೆದೇ ಬದುಕಬೇಕೇ..?? ನಾನು ಕನಸು ಕಟ್ಟಿದ ಬದುಕು ಹೀಗೆ ಒಂದು ಕ್ಷಣದಲ್ಲಿ ಹುಡಿಯಾಗ ಬಲ್ಲದೇ..?? ಛೆ ಇಪ್ಪನ್ತಾಲ್ಕು ವರುಷ ಅದೇನೇನೋ ಅನುಭವಿಸಿ ಕಂಡು, ಕಾಣದಂತೆ, ಇದ್ದೂ ಇಲ್ಲದಂತೆ, ಬದುಕಿಯೂ ಬದುಕದಂತೆ ಇದ್ದ ದಿನಗಳನ್ನೆಲ್ಲ ದಾಟಿ ಈಗೊಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟು ಬದುಕುವ ಕಾಲಕ್ಕೆ ಹೀಗೊಂದು ಭಯ ಕಾಡುವುದು ಬೇಕೇ..??

ಅಸಲು ಈ ಅಫಘಾತದ ತಪ್ಪಾದರೂ ಯಾರದ್ದು..?? ಕಾನೂನು ಬದ್ದವಾಗಿ ಅಲ್ಲಿ ತಿರುವಿದ್ದ ಜಾಗದಲ್ಲಿ ತಿರುವಲ್ಲಿ ನಿಂತಿದ್ದ ಆ ಲಗೇಜು ಗಾಡಿಯದ್ದೋ ಅಥವಾ ನಗರ ವಲಯ ಅನ್ನುವುದನ್ನು ಮರೆತು ಕೂಡಾ ಅಷ್ಟು ವೇಗವಾಗಿ ಬಂದು ನಿಯಂತ್ರಣ ತಪ್ಪಿ ಅಪ್ಪಳಿಸಿ ಅಸುನೀಗಿದ ಬೈಕ್ ಸವಾರನದ್ದೋ..?? ನಿಸ್ಸಂದೇಹವಾಗಿ ಇಲ್ಲಿ ಯಾರಾದರೂ ಸರಿ ತಪ್ಪು ಯಾರದ್ದೆಂದು ಹೇಳಿ ಬಿಡಬಹುದು. ಅದರಿ ತಪ್ಪು ಸರಿ ತಿಳಿದು ಈಗ ಆಗ ಬಹುದಾದರೂ ಏನು..?? ಒಂದು ಕ್ಷಣದ ಪರಿಜ್ಞಾನ, ಒಂದು ಕ್ಷಣದ ರೋಮಾಂಚಕತೆ, ಒಂದು ಕ್ಷಣದ ಉನ್ಮಾದ ನಮ್ಮನ್ನ ಈ ರೀತಿಯ ಹಂತಕ್ಕೆ ನೂಕಿ ಬಿಡಬಹುದೇ..?? ಹೌದು ನಾನೇನು ಕಮ್ಮಿಯಲ್ಲ.. ಹೊಂಡಾ ಯೂನಿಕಾರ್ನ್ ಅನ್ನುವ ದೈತ್ಯ ಬೈಕ್ ಒಂದರ ಮಾಲೀಕನಾದ ನಾನು, ಅದರ ಅದಮ್ಯ ಅಭಿಮಾನಿಯಾದ ನಾನು, ಅದನ್ನ ನನ್ನ ಗರ್ಲ್ ಫ್ರೆಂಡ್ ಅಂತಲೇ ಕರೆದು ಕೊಳ್ಳುವ ನಾನು.. ಅದರ ಮೇಲೆ ಕೂತೊಡನೆ ಸಾವಿರ ಕುದುರೆಗಳ ಮೇಲೆ ಕೂತ ಚೈತನ್ಯ ಬಂದಂತಾಗುವ ನಾನು.. ಬೈಕ್ ಸ್ಟಾರ್ಟ್ ಮಾಡಿ ಐದೇ ಸೆಕೆಂಡಿಗೆ ಕಿಮೀ ಎಂಭತ್ತರ ಗಡಿಯನ್ನ ದಾಟಿಸುವಷ್ಟು ಚುರುಕಾಗಿ ಗಾಡಿ ಓಡಿಸುವ ನಾನು ಇದನ್ನೆಲ್ಲಾ ಯೋಚಿಸಬೇಕ್ಕಾದ್ದು ಈ ಕ್ಷಣಕ್ಕೆ ಅನಿವಾರ್ಯವೇ. 

ನನ್ನ ಬೈಕ್ ಅನ್ನು ಕೊಂಡ ಮೊದಲ ದಿನವೇ ನೂರಿಪ್ಪತ್ತರ ಗಡಿ ದಾಟಿಸುವಷ್ಟು ರಭಸದಲ್ಲಿ ಚಲಿಸಿದ ಕುಖ್ಯಾತಿ ನನ್ನದು..!! ನೀವು ನಂಬಲೇ ಬೇಕು ನನ್ನ ಬೈಕ್ ತೆಗೆದು ಕೊಂಡ ದಿನವೇ ನಾನು ಸರಿಯಾಗಿ ಬೈಕ್ ಓಡಿಸುವುದನ್ನ ಕಲಿತದ್ದು ಅನ್ನೋದನ್ನ.!!. ಅಂದೇ ಕಲಿತು ಅಂದೇ ನೂರರ ಗಡಿ ದಾಟಿ ಒಂದು ಹುಚ್ಚು ಆವೇಗದಲ್ಲಿ ಬೈಕ್ ಓಡಿಸುವ ಖಯಾಲಿ ನನಗದ್ಯಾಕೆ ಬಂತೋ ನಾ ಕಾಣೆ. ನನಗೆ ನಾನೇ ಹೇಳಿ ಕೊಳ್ಳಬೇಕು ಅನ್ನುವಷ್ಟು ಮಿಕ್ಕೆಲ್ಲಾ ವಿಚಾರಗಳಲ್ಲೂ ಸೌಮ್ಯನಾದ ನಾನು.. ಈ ಬೈಕಿನ ವೇಗದಲ್ಲಿ ಮಾತ್ರ ಸಹನೆಯನ್ನ, ಇತಿಯನ್ನ,ಮಿತಿಯನ್ನ ಮೀರುವಂಥ ಹುಚ್ಚನ್ನು ಹೊಂದಿದ್ದೇನೋ ಕಾಣೆ..!! ನಿಜ ಆ ಪ್ರಚಂಡ ವೇಗದಲ್ಲಿ ಒಂಥರಾ ಉನ್ಮಾದ ಸಿಗುತ್ತದೆ, ಬಣ್ಣಿಸಲಾಗದ ಒಂದು ಅದಮ್ಯ ಸಂತೋಷ ಸಿಗುತ್ತದೆ. ಅದರಲ್ಲೂ ಗಾಡಿ ಚಲಿಸೋದು ನಾವೇ ಆದರಂತೂ ಅದರ ಆನಂದವನ್ನ ಪದಗಳಲ್ಲಿ ಕಟ್ಟಿ ಕೊಡುವುದು ಅಸಾಧ್ಯ ಅನ್ನಬೇಕು. ಹಾಗೆ ಗಾಳಿಯಲ್ಲಿ ತೇಲಾಡಿ ದಂತಹ ಅನುಭವ. 

ಹೌದು ಈಗ ಅನ್ನಿಸುತ್ತದೆ ಅಂಥಹ ಸಂತೋಷ ಯಾಕಾದರೂ ಬೇಕು..?? ಅಂಥಹ ಅನುಭವ ಯಾಕಾದರೂ ಬೇಕು..?? ಯಕಶ್ಚಿತ್ ಬೈಕ್ ಕಂಟ್ರೋಲ್ ಮಾಡದೆ ನಾಯಿಗೆ ಗುದ್ದಿ ನಿಯಂತ್ರಣ ತಪ್ಪಿ ಬಿದ್ದು ಕೈ ಕಾಲು ಮುರಿದು ಕೊಂಡ ಬೆಸ್ಟ್ ಫ್ರೆಂಡ್ ಸುಬ್ರಮಣಿಯ ಉದಾಹರಣೆ ಇನ್ನು ನೆನಪಿದೆ. ಸಣ್ಣ ತಿರುವಲ್ಲಿ ಯಾರಾದರೂ ನಕ್ಕುಬಿಡುವಂತೆ ಬಿದ್ದು ಮೈ ಕೈ ಪರಚಿಕೊಂಡ ಪ್ರಶಾಂತನ ಘಟನೆ ಇನ್ನು ಕಣ್ಮುಂದೆ ಹಾಗೆ ಇದೆ.. ಸಾಮಾನ್ಯ ವೇಗದ ಇವರದ್ದೇ ಇಂಥ ಕಥೆಯಾದರೆ ಪ್ರಚಂಡ ವೇಗದ ಪ್ರಕರಣಗಳ ಅಂತ್ಯ ಹೀಗೆ ಆಗಬೇಕೆನೋ..?? ಹಾಗೆ ಯೋಚಿಸುತ್ತೇನೆ.. ಅದೇ ವೇಗದಲ್ಲಿ ಆಯ ತಪ್ಪಿ ನಾನೇ ಯಾರಿಗಾದರೂ ಡಿಕ್ಕಿ ಹೊಡೆದರೆ..?? ಅಥವಾ ನನ್ನದೇ ವೇಗವನ್ನ ಅನುಸರಿಸಿ ಬರುತ್ತಿರೋ ಇನ್ನ್ಯಾವುದೋ ವಾಹನದವನು ಯಾವುದೋ ಕಾರಣಕ್ಕೆ ವಾಹನ ವೇಗ ತಗ್ಗಿಸಿ ಚಲಿಸುವ ನನ್ನ ಮೆಲೆಯೇ ಹಾಯ್ದು ಹೋದರೆ ಗತಿ..?? ಅಯ್ಯಪ್ಪ ಜೀವದ ಕುರಿತಾಗಿ ಯೋಚಿಸುವಾಗ.. ಬದುಕಿನ ಮತ್ತು ಸಾವಿನ ಕುರಿತಾದ ಅದೆಷ್ಟು ಕಲ್ಪನೆಗಳು.. ಅದೆಷ್ಟು ಯೋಚನೆಗಳು..?? ಅದೆಷ್ಟು ಕ್ರೂರ ದಾರಿಗಳು..?? ನಾನು ಡಿಕ್ಕಿ ಹೊಡೆದರೂ ಸರಿ.. ಅಥವಾ ನನಗೆ ಯಾರಾದರೂ ಡಿಕ್ಕಿ ಹೊಡೆದರೂ ಸರಿ ಅಪಾಯ ಇಬ್ಬರಿಗೇನೆ.. ಹಾನಿ ಎರಡೂ ಕುಟುಂಬಕ್ಕೇನೆ. ನನ್ನಂಥದ್ದೇ ಬಡ ಕುಟುಂಬ ದಿಂದ ಬಂದ ಹುಡುಗನಾಗಿದ್ದರೆ ಅವನ ಮನೆಯವರ ಗತಿ..?? ಒಬ್ಬನೇ ಮಗನಾಗಿದ್ದರೆ ಮುಂದಿನ ಅವರ ಜೀವನ..?? ವಯಸ್ಸಾದ ತಂದೆ ತಾಯಿಯರಿದ್ದರೆ..?? ಮದುವೆಯಾಗದ ಅಕ್ಕ ತಂಗಿಯರಿದ್ದರೆ..?? ಪ್ರಾಣಕ್ಕೆ ಪ್ರಾಣ ಕೊಡೋ ಜೀವದ ಗೆಳೆಯರಿದ್ದರೆ..?? ಸಾಯುವಷ್ಟು ಪ್ರೀತಿಸುವ ಪ್ರೇಮಿಯೊಬ್ಬಳಿದ್ದರೆ..?? ಅಷ್ಟೆಲ್ಲ ಕನಸು ಕಟ್ಟಿಕೊಂಡು ಬದುಕೋ ನಾನೇ ಅಥವಾ ನನ್ನಂಥವನೆ ಅಲ್ಲವೇ ಅವನು..!! ಅಯ್ಯಪ್ಪ ಇದನ್ನೆಲ್ಲಾ ತೊರೆದು ಇದನ್ನೆಲ್ಲಾ ಮರೆತು ವಿನಾಕಾರಣ ಕ್ಷುಲ್ಲಕ ಕಾರಣಕ್ಕಾಗಿ ನಮ್ಮ ಅಮೂಲ್ಯ ಬದುಕನ್ನ ಬಲಿ ಕೊಡಬೇಕೇ..?? ಒಂದೇ ಒಂದು ಕ್ಷಣ ಯೋಚಿಸಿದ್ದರೆ, ಹದಿನೈದು ಸೆಕೆಂಡ್ ತಡವಾಗಿದ್ದರೆ, ಒಂದು ಕ್ಷಣ ಪರಿಜ್ಞಾನ ಕೆಲಸ ಮಾಡಿದ್ದರೆ ಅವನು ಬದುಕುತ್ತಿದ್ದ. ಅವನಂತೆ ಇರುವ ನನಗಿನ್ನೂ ಅವಕಾಶವಿದೆ. ನಾನು ತಿದ್ದಿ ಕೊಳ್ಳಬೇಕು.. ತಿದ್ದಿ ಕೊಳ್ಳುತ್ತೇನೆ.. ವಿನಾಕಾರಣ ಸತ್ತು ಬಿಡಲು ಬದುಕು ಪೂರ್ತಿ ನನ್ನದಲ್ಲ. ನನ್ನನ್ನ ನಂಬಿ ಒಂದಷ್ಟು ಜೀವಗಳಿವೆ. ಆ ಜೀವಗಳ ಖುಶಿಗಿಂತ ನನ್ನ ವೇಗದ ಉನ್ಮಾದ ನನ್ನನ್ನ ಸಂತೋಷಗೊಳಿಸಲಾರದು, ಕುಡಿತ ಜೂಜು, ತಂಬಾಕಿನಂತೆ.. ವೇಗ, ಉದ್ವೇಗ, ಉದ್ವೇಗ, ಆವೇಗವೂ ಒಂದು ಚಟವೇ..!! ಇಷ್ಟು ದಿನ ಎಲ್ಲರ ಬಳಿಯೂ ಎದೆಯುಬ್ಬಿ ಹೇಳುತ್ತಿದ್ದೆ ನನಗಾವ ಚಟವು ಇಲ್ಲವೆಂದು. ಇಲ್ಲಿನ ತನಕ ನನಗೆ ಈ ರೀತಿಯದ್ದೊಂದು ಚಟವಿತ್ತು..!! ಇನ್ಮುಂದೆ ಅದು ಇರಲಾರದೆಂಬ ಧೃಡ ನಂಬಿಕೆ ಇಟ್ಟು ನನ್ನ ಬೈಕ್ ಏರುವ ಪ್ರಯತ್ನ ಮಾಡುತ್ತೇನೆ. ಕೇವಲ ಬೈಕ್ ಮಾತ್ರವಲ್ಲ ವಾಹನ ಯಾವುದೇ ಇರಲಿ ಪರಿಸ್ತಿತಿ ಏನೇ ಇರಲಿ ಎರಡು ನಿಮಿಷದಲ್ಲಿ ಇಲ್ಲವಾಗದೆ ಹೋಗೋದಕ್ಕಿಂತ, ಎರಡು ನಿಮಿಷ ತಡವಾಗಿ ಹೋಗೋದೇ ಸೂಕ್ತ. ನಾವು ತಡವಾಗಿ ಬಂದರೇನೆ ತಲ್ಲಣಿಸುವ ಜೀವಗಳು.. ನಾವಿಲ್ಲದೇ ಹೋದಲ್ಲಿ ಹೇಗಿರಬೇಡ..??

ಯಾರಾದರೂ ಸರಿ ಟ್ರಾಫಿಕ್ ನಿಯಮಗಳನ್ನ ಸರಿಯಾಗಿ ಪಾಲಿಸಿ. ಆದಷ್ಟು ಮತ್ತೊಬ್ಬರ ಬಗ್ಗೆಯೂ ಎಚ್ಚರದಿಂದಿರೋಣ. ರಸ್ತೆಗಿಳಿದರೆ  ನಮ್ಮ ಜೀವ ಕೇವಲ ನಮ್ಮ ಕೈಲಿ ಮಾತ್ರ ಇರುವುದಿಲ್ಲ. ಅದು ಮತ್ತೊಬ್ಬನ ಕೈಲಿ ಕೂಡಾ ಇರುತ್ತದೆನ್ನುವುದು ಸತ್ಯ. ಒಂದೇ ಬದುಕು.. ಒಂದೇ ಜೀವ.. ಒಂದೇ ಜೀವನ, ಒಂದೇ ಅವಕಾಶ ಪೂರ್ತಿಯಾಗಿ ಬದುಕೋಣ. ಋಣವಿಲ್ಲದೆಯೇ ಯಾರಿಗೂ ಬದುಕಿಲ್ಲ. ಬದುಕಿನ ಋಣ ತೀರಿಸಿ ಹೋಗುವ ಪ್ರಯತ್ನ ಮಾಡೋಣ. ಇಷ್ಟೆಲ್ಲಾ ಯೋಚಿಸಿ ಬರೆದು ನಿಮ್ಮ ಬಳಿ ಹಂಚಿಕೊಳ್ಳಬೇಕು ಅಂತ ಅಂದು ಕೊಳ್ಳುವಾಗಲೇ ಆಫೀಸು ಬರುತ್ತದೆ. ಆಫೀಸಿಗೆ ಬಂದವನೇ ಅವಸರಕ್ಕೆ ಬಿದ್ದವನಂತೆ ಅರೆ ಬರೆ ಬರೆದು ಕೊಳ್ಳುತ್ತೇನೆ. ಇಂದು ಪೂರ್ತಿಯಾಗಿ ಬರೆದು ನಿಮ್ಮೆಲ್ಲರ ಬಳಿ ಹಂಚಿ ಕೊಂಡಿದ್ದೇನೆ.

ಸಾರ್ಥಕವಾಗಿ ಬದುಕಿದ ಅದೆಷ್ಟೋ ಉದಾಹರಣೆಗಳು ನಿಲುಕಿಸದ ಅನುಭವವ, ಕಲಿಸಿ ಕೊಡದ ಪಾಠವ, ತಿಳಿಸಿ ಕೊಡದ ವಿಚಾರವ ಇಂಥದ್ದೊಂದು ಅನ್ಯಾಯಕಾರ ಸಾವು ನಮಗೆ ತಿಳಿ ಹೇಳಿ ಬಿಡತ್ತೆ. ಕೇಳಿ ಬದಲಾಗುವುದಕ್ಕು ಕಂಡು ತಿದ್ದಿ ಕೊಳ್ಳುವುದಕ್ಕೂ ಇರುವ ವೆತ್ಯಾಸ ಅಂಥದ್ದು. ಸತ್ತವನ ಆತ್ಮಕ್ಕೆ ಶಾಂತಿ ಕೋರುವುದರ ಬದಲಾಗಿ.. ಅವನ ಕುಟುಂಬಕ್ಕೆ ಸದ್ಗತಿ ದೊರಕಲೆಂದು ಪ್ರಾರ್ಥಿಸಿ ಕೊಳ್ಳೋಣ.