Friday 21 December 2012

ಅಸಂಬದ್ಧ...

 
ಅರ್ಜೆಂಟ್ ನಲ್ಲಿದ್ದೆ..
 
ಹೌದು ಅರ್ಜೆಂಟ್ ಅಂದ್ರೆ ತುಂಬಾನೆ ಅರ್ಜೆಂಟ್ ನಲ್ಲಿದ್ದೆ..
 
ಯಾತಕ್ಕಾಗಿ ಅಷ್ಟು ಅರ್ಜೆಂಟ್ ನಲ್ಲಿದ್ದೆ ಅನ್ನೋದಕ್ಕೆ ಸ್ಪಷ್ಟ ಕಾರಣಗಳಿಲ್ಲ..!!
ಆದ್ರೆ ನಾನು ಅರ್ಜೆಂಟ್ ನಲ್ಲಿದ್ದೆ ಅನ್ನೋದಕ್ಕೆ ನನ್ನ ವರ್ತನೆಗಳು ಮೂಕ ಸಾಕ್ಷಿಯಾಗಿದ್ದವು. ಹೊರಗ್ಯಾರಿಗೂ ಕಾಣದ ಹಾಗೆ ಥರಗುಟ್ಟುತ್ತಿದ್ದೆ.. ಕೈ ಕೈಗಳ ಹಿಸುಕುತ್ತಿದ್ದೆ...!!
ಖಾಲಿ ರೋಡಿನ ಕೊನೆ ಬಿಂದುವಿನ ತನಕ ಕಣ್ಣು ನೆಟ್ಟು.. ಕಲ್ಲು ಗುಂಡಿನ ಹಾಗೆ ಅಲಾಡದೆ ಅದೇ ಜಾಗದಲ್ಲಿ ಹತ್ತು ನಿಮಿಷಕ್ಕೂ ಮಿಗಿಲಾಗಿ ನಿಂತು ಚಡಪಡಿಸುತ್ತಿದ್ದೆ..
 
ನಮ್ಮೂರು ಹೀಗಾಗಿ ಮೂರುವರೆ ವರ್ಷಗಳ ಮೇಲಾಯಿತು..!!
ಇದು ವಿಧಿ ಬರಹವೋ ಅಥವಾ ಜನರ ಹಣೆ ಬರಹವೋ ಅಲ್ಲ.. ಸದರೀ ಸರ್ಕಾರದ ಸೋಲಿಗ ತನ.
ಎರಡು ವರ್ಷಕ್ಕೆ ಮುಗಿಯಬೇಕಿದ್ದ NH ಎಲಿವೇಟೆಡ್ ಸೇತುವೆಯನ್ನ.. ಮೂರುವರೆ ವರ್ಷಕ್ಕೂ ಮಿಗಿಲಾಗಿ ಮೂರು ಪಿಲ್ಲರ್ ಗಳನ್ನ ಕಟ್ಟಲಿಕ್ಕಷ್ಟೇ ತನ್ನ ಸಾಮಾರ್ಥ್ಯವನ್ನ ತೋರಿದ ಘನತೆವೆತ್ತ ಸರ್ಕಾರದ ಅಖಂಡ ಬಲ ಪ್ರದರ್ಶನವದು..!!
ಶಿವಮೊಗ್ಗದಿಂದ ಬೆಂಗಳೂರಿಗೆ ಚಲಿಸುವ ಯಾವುದೇ ವಾಹನಗಳಿಗಾದರೂ ಈ ರಸ್ತೆಯೇ ರಾಜಪಥ. ಈ ರಸ್ತೆ ಯಾವತ್ತಿಗೂ ವಾಹನ ನಿಬಿಡ.
ಇನ್ನು ಮಸೀದಿಯ ಬಳಿ ರೈಲ್ವೆ ಹಳಿಯನ್ನು ಹಾದು ಹೋಗುವ ರಸ್ತೆ..!!
ಅಕ್ಷರ ಸಹ ಅದೊಂದು ಸಮಯಕ್ಕೆ ಮಾತ್ರ ಅದು ಊಹಾತೀತ ನರಕ. ರೈಲ್ ಬರುವ ಸಮಯಕ್ಕೆ ಸರಿಯಾಗಿ ಗೇಟ್ ಹಾಕಿ ನಿಲ್ಲಿಸಿದರಾಯ್ತು ಹತ್ತು ನಿಮಿಷ ವಾಹನದೊಳಗೆ ಮೌನಾಚರಣೆ..!!
ಬೆಂಗಳೂರನ್ನೊಮ್ಮೆ ನೆನಪಿಸಿ ಕೊಳ್ಳುವಂತೆ ಕಡಿಮೆ ಎಂದರೂ ನೂರಿನ್ನೂರು ಮೀಟರ್ಗೂ ಹೆಚ್ಚು ದೂರ ನಿಲ್ಲುತ್ತಿದ್ದ ವಾಹನಗಳು. ರೈಲು ಪಾಸಾಗುವುದನ್ನೇ ಜಾತಕ ಪಕ್ಷಿಗಳ ಹಾಗೆ ಕಾದು ಕುಳಿತ ವಾಹನ ಚಾಲಕರೆಲ್ಲರೂ ರೈಲು ಪಾಸಾಗಿ ಗೇಟ್ ತೆರೆಯುವುದೇ ತಡ..
ಆ ಸಮಯಕ್ಕೆ ಜಗತ್ತಿಗೆ ತಾವೇ ಸರ್ವೋತ್ತಮ ಅವಸರ ಪುರುಷರೆನೋ ಎನ್ನುವಷ್ಟರ ಮಟ್ಟಿಗೆ ಎರಡೂ ಬದಿಯಿಂದ ನಾ ಮುಂದು ತಾ ಮುಂದು ಎಂದು ಎರಡೂ ಬದಿಯಿಂದ ನುಗ್ಗಿ ರೈಲ್ವೆ ಹಳಿಯ ಮೇಲಿನ ಕಿರಿದಾದ ರಸ್ತೆಯ ಮೇಲೆ ಸಿಕ್ಕು...ಅಲ್ಲೂ ಹತ್ತು ಹದಿನೈದು ನಿಮಿಷ ಗೊಂದಲ ರಾಧಾಂತಗಳ ಸೃಷ್ಟಿಯಾಗುವಿಕೆ ಆ ರಸ್ತೆಯ ಖಾಯಂ ದೃಶ್ಯಗಳಲ್ಲೊಂದು..!!
ಇದನ್ನ ತಪ್ಪಿಸಲೆಂದೇ ಸರ್ಕಾರ ಮೂರುವರೆ ವರ್ಷಗಳ ಹಿಂದೆಯೇ ಆ ರೈಲ್ವೆ ಹಳಿ ಯನ್ನು ಕ್ರಾಸ್ ಮಾಡಲು ಎಲಿವೆಟೆಡ್ ರಸ್ತೆಗಾಗಿ ಮಂಜೂರಿಯಾಗಿ ಕೆಲಸ ಆರಂಭವಾಗಿತ್ತು. ಬಹುಷಃ ನಮ್ಮ ಶಿವಮೊಗ್ಗ ಜಿಲ್ಲೆಗೆ ಮೊದಲ ಎಲಿವೇಟೆಡ್ ರಸ್ತೆ ಇದಾಗಿರುತ್ತಿತ್ತು.. ಈ ವೇಳೆಗೆ ಕೆಲಸ ಮುಗಿದಿದ್ದರೆ.!!
 
ಭದ್ರಾವತಿ ನಗರದಿಂದ ನಮ್ಮೂರಿಗೆ ಸರಿಯಾಗಿ ಮೂರು ಕಿ.ಮೀ. NH ನಲ್ಲಿ ಭದ್ರಾವತಿಯಿಂದ ಸೀದಾ ಬೆಂಗಳೂರು ಮಾರ್ಗವಾಗಿ ಎರಡು ಕಿ.ಮೀ ಚಲಿಸಿದರೆ ಅಲ್ಲಿ ಸಿಗುವ ಶಿವನಿಕ್ರಾಸ್ ಎಂಬ ಎಡಕ್ಕೆ ತಿರುಗುವ ರಸ್ತೆಯಲ್ಲಿ ಒಂದು ಕಿ.ಮೀ ಗಿಂತಲೂ ಕಮ್ಮಿ ದೂರಕ್ಕೆ ಸಿಗುವ ಊರು ನಮ್ಮೂರು ಗೌರಾಪುರ. (ನಮ್ಮೂರಿನ ಹರಿಕತೆ.. ಪುರಾಣ ಈಗ ಬೇಕಿಲ್ಲವೆನ್ನಿ)
 
ಈ ಎಲಿವೆಟೆಡ್ ರಸ್ತೆಯ ಕೆಲಸ ಆರಂಭವಾದಂದಿನಿಂದ.. ನಮ್ಮೂರಿನ ಮೇಲೆ ಚಲಿಸುತ್ತಿದ್ದ ಎಲ್ಲಾ ಬಸ್ಸುಗಳು & ಸಂಪರ್ಕ ವಾಹನಗಳು ಈ ಕಾರಣಕ್ಕಾಗಿ ರಸ್ತೆ ಬಂದ್ ಆದ್ದರಿಂದ ಬೇರೆ ಮಾರ್ಗದ ಮೂಲಕ ಅಂದರೆ ನಮ್ಮೂರಿಂದ ಒಂದೂವರೆ ಕಿ.ಮೀ ದೂರದ ಪಕ್ಕದೂರಿನ ಮೂಲಕ ಅಡ್ಡ ರಸ್ತೆಯಲ್ಲಿ ಚಲಿಸಲು ಶುರುವಾದವು ಅಂದಿನಿಂದ ನಮ್ಮೂರಿಗೆ ಬಸ್ ಬಂದ್.,.!!
ಕಾಮಗಾರಿ ನಡೆಯುತ್ತಿದ್ದ ಆ ಜಾಗದ ಪಕ್ಕದಲ್ಲೇ ಹರಿಯುವ ಭದ್ರೆಯ ಕೆನ್ನೆಗಂಟಿ.. ರೇಲ್ವೆ ಹಳಿ ಮೇಲ್ಸೇತುವೆಯ ಕೆಳಗೆ ಕಿರುದಾರಿಯೊಂದಿತ್ತು.. ಬೈಕು. ಆಟೋ ಅಥವಾ ಕಾರುಗಳು ಚಲಿಸಬಹುದಾಗಿತ್ತು.
ನಮ್ಮೂರಿಂದ ಮುಂದೆ ಮೂರು ಕಿ. ಮೀ ದೂರದ ಅಂತರಗಂಗೆ ಇಂದ ಮೊದಲ್ಗೊಂಡು ಆಗೀಗ ಬರುತ್ತಿದ್ದ ಆಟೋವಷ್ಟೇ ನಮಗೆ ಗತಿ. ಸ್ವಂತ ವಾಹನವಿದ್ದರೆ ಮಾತ್ರ ನೆನೆಸಿಕೊಂಡ ಸಮಯಕ್ಕೆ ಭದ್ರಾವತಿ ಸೇರಬಹುದಿತ್ತು ಇಲ್ಲವೇ ಆಟೋಗಾಗಿ ಕಾದು ಸಾಯಬೇಕು. ಇಲ್ಲವೇ ಜುಜುಬಿ ಮೂರು ಕಿ.ಮೀ ಅಲ್ಲವೇ ಎಂದು ಮರುಗಿ ನಡೆದೇ ಸಾಗಬೇಕು ಆಗಲೇ ಭದ್ರಾವತಿಯ ದರ್ಶನ.
ಇಲ್ಲವೋ ಬಸ್ ಬರುವ ಸಮಯಕ್ಕೆ ಸರಿಯಾಗಿ ಪಕ್ಕದೂರಿನವರೆಗೂ ನಡೆದು.. ಬಸು ಬರುವವರೆಗೂ ಕಾದು ಬಸ್ ಸಿಕ್ಕರೆ ಹೋಗಬಹುದಿತ್ತು..
ಆಟೋಗಳು ಕೂಡ ಯಾವಾಗಲೋ ಒಮ್ಮೆ ಬಂದರುಂಟು ಇಲ್ಲದರಿಲ್ಲ. ಬಂದರೂ ಅಂತರಗಂಗೆ ಇಂದಲೇ ಪೂರ್ತಿಯಾಗಿ ಬರುವ ಆಟೋ ಒಳಗೆ ಸೀಟ್ ಸಿಕ್ಕುವುದು ಅದೃಷ್ಟವೇ.. ಅಂದಹಾಗೆ ನಮ್ಮೂರಿನ ಆಟೋಗಳ ಸೀಟ್ ಲೆಕ್ಖ ಬಂದು ಬರೋಬ್ಬರಿ ಒಂದು ಆಟೋಗೆ ಎಂಟು ಜನ..!!
Just Imagine .. How incredible..?? ವಯಸು ಹುಡುಗರೋ.. ಹುಡುಗೀರೋ. ಹೆಂಗಸರೋ.. ಗಂಡಸರೋ. ಮುದುಕರೋ ಮಕ್ಕಳೋ.. ಯಾವುದೋ ಒಟ್ಟು ಎಂಟು ಜನ ತುಂಬಿದರೆ ಮಾತ್ರ ಆಟೋ ಕದಲೋದು..!!
ಇಂತಿಪ್ಪ ಆಟೋದೊಳಗೆ ಸೀಟ್ ಸಿಕ್ಕುವುದೇ ಅದೃಷ್ಟ. ಸೀಟ್ ಇಲ್ಲವಾದಲ್ಲಿ ಆ ಆಟೋದವ ಕೂಡ ಕ್ಯಾರೆ ಎನ್ನದೆ.. ತಿರುಗಿ ನೋಡದೆ ಮುಲಾಜಿಲ್ಲದೆ ಗಾಡಿ ನಿಲ್ಲಿಸದೆ ಹೋಗಿ ಬಿಡುತ್ತಿದ್ದ.
 
ಹೀಗೆ ಒಂದು ಆಟೋಗಾಗಿ ಅಥವಾ ಇನ್ನ್ಯಾವುದಾದರೂ ಗಾಡಿಗಾಗಿ ರಸ್ತೆಯ ಮಧ್ಯೆ ನಿಂತು ಹಂಬಲಿಸಿ ಚಡಪಡಿಸುತ್ತಿಹ ನಾನು..!!
 
ಕೈಗೆ ವಾಚ್ ಕಟ್ಟಡ ನಾನು.. ನಿಮಿಷಕ್ಕೆ ಹದಿನೈದಕ್ಕಿಂತಲೂ ಹೆಚ್ಚು ಬಾರಿ ನನ್ನ ಮೊಬೈಲಿನಲ್ಲಿ ಟೈಮ್ ನೋಡುತ್ತಾ.. ಸಮಯಕ್ಕೆ ಸರಿಯಾಗಿ ಕೈಕೊಡೋ ಸಮಯವನ್ನ ಹಳಿಯುತ್ತಾ..
ಪೂರ್ತಿ ತುಂಬಿ ತುಳುಕುತ್ತಾ ನಿಲ್ಲಿಸದೆ ಹೊರಟ ಆಟೋಗಳ ಹಳಿಯುತ್ತಾ.. ರಸ್ತೆಯಲ್ಲಿ ಸಾಗುತ್ತಿದ್ದ ಟೂ ವೀಲರ್ಗಳ ಕಡೆಗೆ ಕೈ ನೀಟಿ ಅವುಗಳನ್ನ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದೆ.
ನನ್ನ ಅದೃಷ್ಟದ ಅದೃಷ್ಟ ನನಗಿಂತಲೂ ಮೊದಲೇ ಹಳ್ಳ ಹಿಡಿದಿತ್ತೇನೋ..??
ಆ ಮಾರ್ಗವಾಗಿ ಬಂದ ಯಾವ ಬೈಕುಗಳೂ ಸಿಂಗಲ್ಲಾಗಿ ಬರದೇ ಎಲ್ಲವೂ engaged..!!
ಸರೀ ಅವುಗಳನ್ನೂ ಹಳಿಯುತ್ತಾ ನನ್ನ ಧರ್ಮ ಕಾಯಕವನ್ನು ನಾನು ಮುಂದುವರೆಸುತ್ತಲೇ ನಿಂತೆ.
 
ಛೆ.. ಹಿಂಗೆ ಅಂತ ಗೊತ್ತಿದ್ದಿದ್ರೆ ನಡಕೊಂಡ್ ಆದರೂ ಹೋಗಬಹುದಿತ್ತು.. ಮನಸೊಳಗೆ ಗೊಣಗಾಟ..
ಮನೇಲಿ ಸೈಕಲ್ ಬೇರೆ ಪಂಚರ್..!!
ಆದರೂ ಮತ್ತ್ಯಾರದ್ದಾದ್ರೂ ಸೈಕಲ್ ಈಸ್ಕೊಂಡು ಹೋಗೋಣ ಅಂದ್ರೆ.. ಈಗ ಸರ್ಕಾರಿ ನೌಕರನೆಂಬ ಕಿರೀಟ ಬೇರೆ..!!
ಸೈಕಲ್ ಬಗ್ಗೆ ಅಷ್ಟು ಸುಲಭಕ್ಕೆ ಯೋಚಿಸಿದ ಬುದ್ಧಿ ಅಷ್ಟೇ ಸುಲಭಕ್ಕೆ ಹತ್ತಲು ಬಿಟ್ಟೀತೆ..??
ನೀಟಾಗಿ ಇನ್ಶರ್ಟ್ ಮಾಡಿ.. ಬಿಳಿ ಪ್ಯಾಂಟ್ ಹಾಕಿ ಟಾಕು ಟೀಕಾಗಿ ನಿಂತಿರೋ ನನ್ನ ಅಲಂಕಾರ ಕೆಟ್ಟರೆ.??
ಬೆವರಿದರೆ ಮಾಯವಾಗಿ ಬಿಡೋ ತಾಜಾತನ.. ಬಿಳಿ ಪ್ಯಾಂಟಿಗೆ ಸ್ವಲ್ಪ ಕರೆಯಾದರು ಎದ್ದು ಕಾಣಿಸೋ ಫೀಲಿಂಗು..!!
ಎಲ್ಲವನ್ನೂ ತಲೆಯ ಒಳಗೆ ಹಾಕಿಕೊಂಡು ಮಿಕ್ಸಿ ಆಡಿಸುತ್ತಾ ಹತ್ತು ನಿಮಿಷಕ್ಕೂ ಮಿಗಿಲಾದ ಉದ್ವೇಗದಲ್ಲಿ ಉನ್ಮತ್ತನಾಗಿ ಕುದಿಯುತ್ತಿದ್ದೆ.
 
ರಾಹುಕಾಲ ಕಳೆದಿರಬೇಕು..!!
ಅಗೋ ರಸ್ತೆಯ ಕೊನೆಯಂಚಿನ ಬಿಂದುವಿನಲ್ಲಿ ಗೋಚರಿಸಿದ ಕೆಂಪು ಕಾರು..
ಹತ್ತಿರ ಬರು ಬರುತ್ತಾ ಅದು ಆಲ್ಟೋ ಕಾರೆಂದು ಖಾತ್ರಿಯಾಯ್ತು...!! ಮನಸೊಳಗೆ ನೂರು ಕ್ಯಾಂಡಲ್ ಗಳನ್ನ ಹೊತ್ತಿಸಿ ಉರಿಯಲು ಬಿಟ್ಟ ಹಾಗಾಯ್ತು..!!
ಆಟೋ ಗೆ ಗತಿ ಇರದ ನಾನು.. ಆಲ್ಟೊ ಕಾರಿನ ಕನಸು ಕಾಣೋದು ಸರಿಯೇ..?? ಅತಿಯಾಸೆ ಗತಿಗೇಡು..!!
ಸಾಯಲಿ ಮಾರಾಯ.. ನನ್ನದು ಆಸೆಯಲ್ಲ.. ಯಾವುದಾರೂ ಒಂದು ಗಾಡಿ ಸಿಕ್ಕಲೆಂಬ ಪರಾಕಾಷ್ಠೆಯ ಹಂಬಲ.. ಆ ಕ್ಷಣಕ್ಕಿನ ಅನಿವಾರ್ಯತೆ.. ಆಪತ್ತಿಗಾದವನೇ ನೆಂಟ..
ಊರ ದೇವಿ ತಾಯಿ ಕೆಂಚಮ್ಮ ನಿಗೊಂದು ಉಘೆ ಹೇಳಿ ಕೈ ನೀಟಿದೆ.. ತಾಯಿ ಕೆಂಚಮ್ಮನ ಕೃಪೆ.. ಕಾರು ನನ್ನಿಂದ ಹತ್ತು ಮೀಟರ್ನಷ್ಟು ದೂರದಲ್ಲಿ ಹೋಗಿ ನಿಂತಿತು.
 
ನಮ್ಮ ಪಕ್ಕದಲ್ಲಿ ಸಾಮಾನ್ಯವಾಗಿ ಶ್ರೀ ಸಾಮಾನ್ಯರ್ಯಾರೂ ಕಾರಿಗೆ ಕೈ ಹಾಕೋ ಗೋಜಿಗೆ ಹೋಗೋದೇ ಇಲ್ಲ..
ಅಂತಸ್ತಿನ ಅಳತೆಯ ಅರಿವು ಇವರಿಗೂ ಇರಬಹುದು.. ಅಥವಾ ಕಾರಿನವರೇ ಮಾಡಿಕೊಡಬಹುದು..!!
ಸಾಮಾನ್ಯವಾಗಿ ಲಿಫ್ಟ್ ಅಂತ ಕೇಳೋಕೆ ಹೋದ್ರೆ ಆದು ಕೇವಲ ಬೈಕ್ ಗಳಿಗೆ ಮಾತ್ರ.. ಒಮ್ಮೊಮ್ಮೆ ಸೈಕಲ್ಲುಗಳಿಗೂ ಕೈ ನೀಟುವುದು ಅನಿವಾರ್ಯ.. ಕಾರ್ಯದೊತ್ತಡ..!!
ಒಮ್ಮೊಮ್ಮೆ ಅದೃಷ್ಟ ಖುಲಾಯಿಸಿ ಕಾರಿನವರೆ ಹತ್ತಿಸಿ ಕೂರಿಸಿ ಕೊಂಡೂ ಹೋಗೋದುಂಟು..!! ಆದರೆ ಕೇವಲ ಪರಿಚಯದವರನ್ನ ಮಾತ್ರ..
ನನಗೆ ಕಾರುಳ್ಳ ಯಾವ ವ್ಯಕ್ತಿಯೂ ಸುತ್ತ ಮುತ್ತಕ್ಕೆ ಪರಿಚಯವಿಲ್ಲ.. ಪರಿಚಯವಿದ್ದರೂ ನನ್ನನು ತಮ್ಮ ಕಾರಿನಲ್ಲಿ ಹತ್ತಿಸಿ ಕೂರಿಸಿಕೊಂಡು ಹೋಗುವಷ್ಟು ಗಾಢ ಮೈತ್ರಿ ಇಲ್ಲ. ಹಾಗಿರುವಾಗ ಯಾವುದೋ ಆಶಾ ಭಾವನೆಯಿಂದ ಕೈ ನೀಟಿದೊಡನೆ ನಿಲ್ಲಿಸಿದ ಆ ಆಲ್ಟೋವಿನ ಹಿಂದೆ.. ಆಶ್ಚರ್ಯಚಕಿತನಾಗಿ, ಆನಂದ ತುಂದಿಲನಾಗಿ ಓಡಿದೆ.
 
ಕಾರಿನ ಮುಂಬಾಗಿಲು ತೊರೆದು.. ಸಾರ್ ತುಂಬಾ ಅರ್ಜೆಂಟ್.. ಸ್ವಲ್ಪ ಭದ್ರಾವತಿಯ ತನಕ...
ಮಾತಿನ್ನೂ ಮುಗಿದಿರಲಿಲ್ಲ.. ಕಣ್ಣು ಗಳಲ್ಲೊಂದು ಮಿಂಚು..!! ಬಾಯಿ ತಂತಾನೇ ಸುಮ್ಮನಾಯಿತು..!! ನನ್ನನ್ನು ತಬ್ಬಿಬ್ಬಾಗ್ಗಿಸಿದ್ದು ಆ ವ್ಯಕ್ತಿಯ ಮುಖ..!!
ಸಾಕ್ಷಾತ್ ಪ್ರಕಾಶಣ್ಣ.. (ನಮ್ ಇಟ್ಟಿಗೆ ಸಿಮೆಂಟು ಪ್ರಕಾಶಣ್ಣ)..!!
ಆ ಕ್ಷಣಕ್ಕೆ ನನಗಿದ್ದ ತಳಮಳಕ್ಕೆ.. ನನಗಿದ್ದ ಉದ್ವೇಗಕ್ಕೆ.. ನನಗಿದ್ದ ತರಾತುರಿಗೆ ನಾ ಹೇಗೆ ವರ್ತಿಸಿದೇನೋ..?? ಮುಖದಲ್ಲಿ ಯಾವ ಭಾವವಿತ್ತೋ..?? ನೆನಪಿಲ್ಲ.
ಕೂತ್ಕೋ ಅಂತ ಪ್ರಕಾಶಣ್ಣ ಹೇಳುವ ಮೊದಲೇ ಕಾರಿನ ಮುಂಬಾಗದ ಸೀಟಿನಲ್ಲಿ ಕೂತುಬಿಟ್ಟ ನಾ ಪೂರ್ತಿ ಕಾರನ್ನೊಮ್ಮೆ ನೋಡಿದೆ.. ಪ್ರಕಾಶಣ್ಣನ ಹೊರತು ಕಾರು ಖಾಲಿ ಖಾಲಿ..
ಪ್ರಕಾಶಣ್ಣ ನೀವಾ..?? ದೇವರು ಬಂದ ಹಾಗೆ ಬಂದ್ರಿ.. ಸ್ವಲ್ಪ ಅರ್ಜೆಂಟಿದೆ.. ನನ್ನ ಭದ್ರಾವತಿ ವರೆಗೂ ಸ್ವಲ್ಪ ಡ್ರಾಪ್ ಮಾಡಿ ಬಿಡಿ. ಪ್ರಕಾಶಣ್ಣ ನನ್ನನ್ನ ಗುರುತು ಹಿಡಿಯಲಿಲ್ಲ ಅನ್ನಿಸತ್ತೆ..!!
ಗುರುತು ಹಿಡಿದಿದ್ದರೆ ಅವರೇ ಸತೀಶು ಅಂದಿರುತ್ತಿದ್ದರು. ಪ್ರಕಾಶಣ್ಣ ನನ್ನನ್ನ ಒಂಥರಾ ನೋಡುತ್ತಲೇ ಗಾಡಿ ಚಾಲೂ ಮಾಡಿ ಹೊರಟೆವು..!!
 
ಪಕ್ಕದಲ್ಲಿ ಕೂತಿರೋದು ಪ್ರಕಾಶಣ್ಣ.. ಏನು ಮಾತಾಡ್ಲೀ.??
ಈ ಮೊದಲು ಕೂಡ ಪ್ರಕಾಶಣ್ಣ ನ ಬಳಿ ನೇರವಾಗಿ ಅಷ್ಟೊಂದು ಮಾತಾಡಿದ ಉದಾಹರಣೆಯಿಲ್ಲ. ಅವರ ಪುಸ್ತಕ ಬಿಡುಗಡೆಯ ದಿನದೊಂದು ನೋಡಿ ನಕ್ಕು ಒಂದು ಹಲೋ ಹೇಳಿದ್ದಷ್ಟೇ..
ಅದಕ್ಕೂ ಮೊದಲು ೩K ಯ ಸಮಾರಂಭದ ದಿನ ಮುಖ ಪರಿಚಯವಷ್ಟೇ..
ಅವರ "ಇದರ ಹೆಸರು ಇದಲ್ಲ" ಬಹುವಾಗಿ ಮೆಚ್ಚಿ.. ಒಂದೇ ಓದಿಗೆ ಒಂದು ನಿಮಿಷ ಗ್ಯಾಪು ಕೊಡದೆ ಆ ಪುಸ್ತಕ ಓದಿ ಮುಗಿಸಿದ್ದ ರೀತಿಗೆ.. ಅವರ ಮೇಲೆ ಮೂಡಿದ್ದ ಆ ಕ್ಷಣದ (ಈ ಕ್ಷಣಕ್ಕೂ ಇರುವ) ಅದಮ್ಯ ಅಭಿಮಾನಕ್ಕೆ ತಕ್ಷಣವೇ ಫೋನಾಯಿಸಿ ಅವರ ಜೊತೆ ಫೋನಿನಲ್ಲಿ ಸುಮರು ಅರ್ಧಗಂಟೆಗೂ ಹೆಚ್ಚು ಕಾಲ ಮಾತಾಡಿದ್ದು ಬಿಟ್ಟರೆ..
ಒಂದೆರಡು ಬಾರಿ ಕತೆ ಕವನದ ವಿಚಾರದಲ್ಲಿ.. ಕಾಮೆಂಟುಗಳಲ್ಲಿ ಫೇಸ್ಬುಕ್ ನಲ್ಲಿ ಹರಟಿದ್ದ ನೆನಪು..
ನನಗೆ ಹೇಗೆ ಬಾಯ್ತೆರೆಯಬೇಕೆಂಬ ವಿಚಾರ ತಿಳಿಯದೆ.. ಪ್ರಕಾಶಣ್ಣ ನೇ ಬಾಯ್ತೆರೆಯಲಿ ಅನ್ನೋ ಆಸೆ (ದುರಾಸೆ)ಯೊಂದಿಗೆ ಗಪ್ ಚುಪ್ ಕುಳಿತುಬಿಟ್ಟೆ..!! ಕಡೆಗೆ ಪ್ರಕಾಶಣ್ಣ ನೆ ಬಾಯ್ತೆರೆದರು..!!
 
ಪ್ರಕಾಶಣ್ಣನ ದನಿ ಪ್ರಕಾಶಣ್ಣನ ದನಿಯಲ್ಲ..!!?? ಇದು ನನಗೆ ಹೊಸ ದನಿ..!!
ಯಾಕಿಷ್ಟು ಅರ್ಜೆಂಟು..?? ಪ್ರಕಾಶಣ್ಣ ಕೇಳಿದರು..
ಶಿವಮೊಗ್ಗಕ್ಕೆ ಹೋಗೋದಿದೆ ಪ್ರಕಾಶಣ್ಣ..
ಸಮಾಜ ಕಲ್ಯಾಣ ಇಲಾಖೆ ಆಫೀಸ್ ಹತ್ರ ಹೋಗಿ ಬರಬೇಕು ಸ್ವಲ್ಪ..
ಇವತ್ತು ಶನಿವಾರ ಬೇರೆ.. ಸಮಾಜ ಕಲ್ಯಾಣ ಇಲಾಖೆ ಮಧ್ಯಾನಕ್ಕೆ ಮುಚ್ಚಿ ಬಿಡ್ತಾರೆ..
ನಾಳೆ ಬೇರೆ ಭಾನುವಾರ ರಜೆ..
ಅದೂ ಅಲ್ದೆ ನಾಳೆ ನಾನು ಹೊಸೂರ್ ಗೆ ವಾಪಸ್ ಹೊರಟೆ.. ಸ್ವಲ್ಪ ಅರ್ಜೆಂಟ್ ಇತ್ತು ಅದ್ಕೆ...
 
ಓಹ್ ಹಾಗೇನು..?? ಮತ್ತೆ ಇಷ್ಟ್ ಅರ್ಜೆಂಟ್ ಇದ್ದೂ ಸ್ವಲ್ಪ ಬೇಗ ಹೊರಡೋದಲ್ವೇನು..?? ಪ್ರಕಾಶಣ್ಣ ನ ಪ್ರಶ್ನೆ..!!
ಅಯ್ಯೋ ಬೆಂಗಳೂರ್ ಹೋಗೋ ಮೊದಲು.. ನನ್ನ ಮಾರ್ಕ್ಸ್ ಕಾರ್ಡ್.. ಜಾತಿ ದೃಡೀಕರಣ ಪತ್ರ ಮತ್ತೆ ಇನ್ನಿತರ ನನ್ನ ಹಳೆ ರೆಕಾರ್ಡ್ಸ್ ನೆಲ್ಲ ಒಂದು ಫೈಲ್ ನಲ್ಲಿ ಹಾಕಿ ಮನೇಲಿಟ್ಟಿದ್ದೆ ಪ್ರಕಾಶಣ್ಣ.. ಈಗ ಬಂದು ಹುಡುಕಿದರೆ ಅರ್ಜೆಂಟ್ ಗೆ ಯಾವುದೊಂದೂ ನೆಟ್ಟಗೆ ಸಿಗಲಿಲ್ಲ.. ಅದ್ಕೆ ಹುಡ್ಕೋಕೆ ಸ್ವಲ್ಪ ಲೇಟ್ ಆಯ್ತು..
ಓಹ್ ಸರಿ ಸರಿ..
 
ಮೂರು ಕಿ.ಮೀ ದೂರವಿರೋ ಭದ್ರಾವತಿಯನ್ನ ಸೇರೋಕೆ ಕಾರೆಂದರೆ ಮೂರು ನಿಮಿಷ ಸಾಕು.
ಇನ್ನೇನು ಅರ್ಧ ಕಿ.ಮೀ ದೂರವಿರಬೇಕು.. ಭದ್ರಾವತಿ ಸಿಟಿ..
ತರೀಕೆರೆ ರಸ್ತೆ.. ಜೂನಿಯರ್ ಕಾಲೇಜು, ಮಹಾತ್ಮ ಗಾಂಧೀ ಶಿಲೆ ಇರುವ ಸರ್ಕಲ್ ನಲ್ಲಿ ಎಡಕ್ಕೆ ತಗೊಂಡ ಕಾರು ಸುಮಾರು ಅರವತ್ತು ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದಿರಬಹುದು..
ಗಾಂಧೀ ಶಿಲೆ ದಾಟಿ.. ಇಪ್ಪತ್ತು ಮೀಟರ್ ಹೋಗುವಷ್ಟರಲ್ಲೇ ಅಲ್ಲೇ SKC ಆಫೀಸ್ ಎದುರಿನಿಂದ ಪಾರ್ಕಿಂಗ್ ನಲ್ಲಿ ನಿಂತಿದ್ದ ಸ್ವಿಫ್ಟ್ ಕಾರು ಏಕಾ ಏಕಿ ಸ್ಟಾರ್ಟ್ ಆಗಿ.. ಮೂವ್ ಆಗಿ.. ನಾವ್ ಬರುವ ಹೊತ್ತಿಗೆ ರೋಡಿನ ಮಧ್ಯಕ್ಕೆ ಬಂದು ಬಿಟ್ಟಿತು..!!
ವೇಗ ತಗ್ಗಿಸದ ಪ್ರಕಾಶಣ್ಣ ಗಲಿಬಿಲಿಯಲ್ಲಿ ಸ್ವಲ್ಪ ಬಲಭಾಗಕ್ಕೆ ಸ್ಟೇರಿಂಗ್ ತಿರುಗಿಸಿದರು..
ಬಲಭಾಗದಲ್ಲೋ..!!!
ಅಂಡರ್ ಗ್ರೌಂಡ್ ಪೈಪ್ ಲೈನ್ ಸೋರಿಕೆಯ ಪರಿಣಾಮವಾಗಿ ಅದರ ರಿಪೇರಿಗೆಂದು ಸುಮಾರು ನಾಲ್ಕಡಿ ಅಗಲ.. ಮೂರಡಿ ಆಳಕ್ಕೆ ಗುಂಡಿ ತೋಡಿ ಪೂರ್ತಿ ಮುಗಿಸದೆ ಆ ಗುಂಡಿಯ ಬದಿಯ ಸುತ್ತಲೂ ದಪ್ಪ ದಪ್ಪ ಕಲ್ಲುಗಳನಿಟ್ಟು ಹೋಗಿದ್ದರು..
ಇತ್ತಕಡೆ ಸಡನ್ನಾಗಿ ರಸ್ತೆ ಮಧ್ಯದ ವರೆಗೂ ಬಂದ ಕಾರು..!!
ಅತ್ತಕಡೆ ದೊಡ್ಡ ಹಳ್ಳ.!!
ಇವೆರಡರ ನಡುವೆ ಸಣ್ಣದಾಗಿ ಒಂದು ಆಟೋ ಹೊಗುವಷ್ಟು ಜಾಗವಿದ್ದಿದ್ದರೆ ಹೆಚ್ಚು..!!
ಇತ್ತದರಿ ಅತ್ತ ಪುಲಿ.. ಪ್ರಕಾಶಣ್ಣ ನೋಡು ನೋಡುತ್ತಿದ್ದಂತೆ ಆ ಗ್ಯಾಪಲ್ಲಿ ಕಾರು ನುಗ್ಗಿಸಿಯೇ ಬಿಟ್ಟರು..!!
 
SKC ಆಫೀಸಿನ ಮುಂಭಾಗದಿಂದ ಬಂದ ಆ ಕಾರಿನ ಬಲಬಾಗದ ಹೆಡ್ ಲೈಟ್ ಪಾರ್ಟ್ ಗೆ ಜೋರಾಗಿ ಹೊಡೆದ ಪ್ರಕಾಶಣ್ಣನ ಕಾರು.. ಬಲಕ್ಕೆ ಹಳ್ಳದ ಬದಿಗಿರಿಸಿದ್ದ ಆ ಕಲ್ಲುಗಳ ಮೇಲೂ ಹರಿದು..
ರಸ್ತೆಯಿಂದ ಸುಮಾರು ಒಂದೂ-ಒಂದೂವರೆ ಅಡಿ ಎತ್ತರಕ್ಕೆ ಎತ್ತಿ ಡೋಲಾಯಮಾನವಾಗಿ ತುಳುಕಾಡುತ್ತ ಆ ಇಕ್ಕಟ್ಟು ಜಾಗವನ್ನು ದಾಟಿ ಬಿಟ್ಟಿತ್ತು..!!
ಕಣ್ಮುಂದೆ ಮಿಂಚು ಹುಳ.. ಹೊಟ್ಟೆಯಲ್ಲಿ ತಳಮಳ..!!
ಹೃದಯ ಆಗಲೇ ಬಾಯಿಗೆ ಬಂದಿತ್ತು..!!
ಸ್ವರ್ಗವೋ ನರಕವೋ..?? ಆಗಲೇ ಆರ್ಧ ದಾರಿ ಸಂಚರಿಸಿದ್ದ ಜೀವ ತಿರುಗಿ ಬಂದಿತ್ತು..!!
ಎದೆಯ ಢವಗುಟ್ಟುವಿಕೆಯ ಸದ್ದು ಮೂರು ಕಿ.ಮೀ ದೂರದ ಊರಿಗೂ ಕೇಳಿದ್ದಿರಬಹುದು..!!
ಏನಾಯಿತು.. ಏನು ಮಾಡಬೇಕೆಂದು ತೋಚದ ನನ್ನ ಬುದ್ಧಿ.. ಬ್ಲ್ಯಾಂಕ್ ಬ್ಲ್ಯಾಂಕ್ ಬ್ಲ್ಯಾಂಕ್..!!
 
ಸ್ವಲ್ಪ ಮುಂದೆ ಬಂದು ನಂದಿ ಮೆಡಿಕಲ್ಸ್ ಎದುರಿಗೆ ಕಾರನ್ನು ಸೈಡ್ ಹಾಕಿ ನಾನು ಮತ್ತು ಪ್ರಕಾಶಣ್ಣ ಕಾರಿನಿಂದ ಇಳಿದೆವು..
ಹಾರಿ ಹೋಗಿದ್ದ ನನ್ನ ಜೀವ ತಿರುಗಿ ಬಂದಿತ್ತೆ ವಿನಃ.. ನನ್ನ ಪಂಚೇಂದ್ರಿಯಗಳ ಪೂರ್ಣ ಜ್ಞಾನ ಇನ್ನೂ ಪೂರ್ತಿ ಬಂದಿಲ್ಲವಾಗಿತ್ತೇನೋ..??
ನನ್ನ ಭಯದಲ್ಲಿ ನಾನಿದ್ದೆ..!!
ಪ್ರಕಾಶಣ್ಣ ಕಾರಿನ ಸುತ್ತಲೂ ಪರಿವೀಕ್ಷಿಸುತ್ತಿದ್ದರು.. ಕಾರಿಗೆ ಏನಾಗಿದೆಯೋ ಏನೋ ಎಂದು ನೋಡುತ್ತಿದ್ದರೆನೋ..??
ಭಯದಲ್ಲಿನ ನನಗೆ.. ಅವರ ಮುಖ ರೂಪದಲ್ಲಿ ಸಣ್ಣದಾಗಿ ವೆತ್ಯಾಸ ಕಾಣ ತೊಡಗಿತ್ತು..!! ಬಹುಶಃ ನನ್ನ ಭಯದಲ್ಲಿ ನನಗವರು ಹಾಗೆ ಕಾಣಿಸುತ್ತಿದ್ದರೋ ಏನೋ..??
ನಮಗೆ ಡಿಕ್ಕಿ ಹೊಡೆದ ಆ ಕಾರು ನಮ್ಮ ಹಿಂದೆಯೇ ಬಂದು ನಿಂತಿತು. ನನಗೆ ಭಯ.. ಎಲ್ಲಿ ಮಾರಾಮಾರಿಯಾಗುತ್ತದೋ..??
ಆ ಕಾರಿನಿಂದಿಳಿದ ಮಧ್ಯ ವಯಸ್ಕ ಡ್ರೈವರ್ ತಾನೂ ತನ್ನ ಕಾರನ್ನು ಸುತ್ತಲೂ ಪರೀಕ್ಷಿಸಿದ..
ಏನಾಶ್ಚರ್ಯ..!! ಢಿಕ್ಕಿ ಹೊಡೆದ ಎರಡೂ ಕಾರುಗಳಿಗೂ ಕೂದಲೂ ಕೂಡ ಕೊಂಕದ ಹಾಗೆ.. ಲವಲೇಶವೂ ಡ್ಯಾಮೇಜ್ ಇಲ್ಲದೆ ಇರೋದನ್ನ ನೋಡಿ ನನಗೆ ನಂಬಲಾಗುತ್ತಿಲ್ಲ..!!
ಅದಕ್ಕೂ ಮಿಗಿಲಾದ ಆಶ್ಚರ್ಯ..!! ಆ ಕಾರಿನ ಡ್ರೈವರ ನಂತರ ಏನೂ ಮಾತಾಡದೆ.. ತನ್ನ ಪಾಡಿಗೆ ತಾನು ತನ್ನ ಕಾರನ್ನೇರಿ ಹಾಗೆ ಪ್ರಕಾಶಣ್ಣ ನೆಡೆಗೆ ಒಂದು ನಗು ಬೀರಿ.. ಕಾರು ಸ್ಟಾರ್ಟ್ ಮಾಡಿ ತನ್ನ ಪಾಡಿಗೆ ತಾನು ನಗುತ್ತಾ ಹೊರಟೆ ಹೋದ..!!
 
I Can't Imagine..!! ನನಗೆ ನಂಬಲಾಗುತ್ತಿಲ್ಲ..!! How is it possible..??
 
ನನ್ನ ಯೋಚನಾ ಲಹರಿಯಿಂದ ನಾನು ಹೊರ ಬರುವ ಮೊದಲೇ ಪ್ರಕಾಶಣ್ಣ ಕಾರಿನ ಮುಂಬಾಗಿಲು ತೊರೆದು ಡ್ರೈವಿಂಗ್ ಸೀಟ್ನಲ್ಲಿ ಕೂತು ಕಾರನ್ನು ಸ್ಟಾರ್ಟ್ ಮಾಡೇ ಬಿಟ್ಟರು..
ಆದದ್ದು ಆಗಿ ಹೋಯಿತು.. ಪ್ರಕಾಶಣ್ಣ ನಿಗೊಂದು ಥ್ಯಾಂಕ್ಸ್ ಹೇಳುವ.. ಅವರಿಗೆನಾಯ್ತು ಕೇಳುವ.. ಎಂದು ಬಗ್ಗಿದ..
ನಾನು ಮತ್ತೆ ತಬ್ಬಿಬ್ಬಾಗದೆ ಇರಲಿಲ್ಲ..!!
ಅಲ್ಲಿಯವರೆಗೂ ನೀಲಿ ಜೀನ್ಸ್ ಪ್ಯಾಂಟ್.. ಹಸಿರು ಟೀ ಶರ್ಟ್ ತೊಟ್ಟಿದ್ದ ಪ್ರಕಾಶಣ್ಣ.. ಈಗ ಕಪ್ಪು ಕಲರ್ ನ ಶಾರ್ಟ್ ತೊಟ್ಟು.. ನೀಲಿ ಬಿಳಿ ಪಟ್ಟೆ ಪಟ್ಟೆಯ ಟೀ ಶರ್ಟ್ ತೊಟ್ಟಿದ್ದರು..!!
ಅಷ್ಟು ಮಾತ್ರವಲ್ಲದೆ ಈಗ ಪ್ರಕಾಶಣ್ಣನ ಮುಖದ ರೂಪ ಗಂಭೀರವಾಗಿ ಬದಲಾಗಿದೆ..!!
ಹೇಳ ಹೊರಟರೆ ಅವರು ಪ್ರಕಾಶಣ್ಣನೆ ಅಲ್ಲ.!!
ದೂರದಿಂದ ನೋಡಿದರೆ ಯಾವುದೋ ಒಂದು ಆಂಗಲ್ ನಿಂದ ಆ ವ್ಯಕ್ತಿ ಪ್ರಕಾಶಣ್ಣನ ಹಾಗೆ ಕಾಣ ಬಹುದಿತ್ತೇನೋ..??
 
I Can't Imagine..!! ನನಗೆ ನಂಬಲಾಗುತ್ತಿಲ್ಲ..!! How is it possible..??
 
ನಾ ಯಾವ ಮಾತನ್ನೂ. ಯಾವ ಪ್ರತಿಕ್ರಿಯೆಯನ್ನೂ ನೀಡುವ ಮೊದಲೇ ಪ್ರಕಾಶಣ್ಣ ಅಂದರೆ ಪ್ರಕಾಶಣ್ಣನ ಥರ ಇದ್ದ ಆ ವ್ಯಕ್ತಿ ಕಾರ್ ಸ್ಟಾರ್ಟ್ ಮಾಡಿ ಹೊರಟೆ
ಬಿಟ್ಟರು..!!
 
ಇದು ಹೇಗೆ ಸಾಧ್ಯ..??
ಪ್ರಕಾಶಣ್ಣ ಬದಲಾದದ್ದು ಹೇಗೆ..??
ಅವರು ಧರಿಸಿದ್ದ ಉಡುಪುಗಳು ಬದಲಾದದ್ದು ಹೇಗೆ..??
ಅಷ್ಟು ಜೋರಾಗಿ ಢಿಕ್ಕಿ ಹೊಡೆದರೂ ಎರಡೂ ಕಾರಿಗೂ ಏನು ಆಗಿಲ್ಲವೇಕೆ..??
ಭದ್ರಾವತಿಗೆ ಪ್ರಕಾಶಣ್ಣ ಯಾಕೆ ಬಂದಿರಬಹುದು..??
ಅದರಲ್ಲೂ ನಮ್ಮೂರ ದಿಕ್ಕಿಂದ ಬಂದದ್ದೇಕೆ..?? ನಮ್ಮೂರ ಪಕ್ಕದಲ್ಲಿ ಅವರಿಗೆ ಗೊತ್ತಿರುವವರು ಯಾರಿರಬಹುದು..??
ನನ್ನಲ್ಲಿ ಹುಟ್ಟುತ್ತಿದ್ದ ಪ್ರಶ್ನೆಗಳಿಗೆ ಮತ್ತು ಅವುಗಳ ವೇಗಕ್ಕೆ ಯಾವ ಮತ್ತು ಯಾರ ಉತ್ತರವೂ ಇಲ್ಲ.. ನನ್ನದೂ ಕೂಡ..!!
ಮನಸೂ ಬುದ್ಧಿ ಎರಡೂ ಬ್ಲ್ಯಾಂಕ್ ಬ್ಲ್ಯಾಂಕ್..
ಅಯ್ಯಯ್ಯೋ.. ನನ್ನ ರೆಕಾರ್ಡ್ಸ್ ಗಳನ್ನ ಕೂಡ ನಾನು ಕಾರಿನಲ್ಲೇ ಬಿಟ್ಟಿರುವೆ.!! ಅದು ಎಲ್ಲಾ ಒರಿಜಿನಲ್.. ಮಾರ್ಕ್ಸ್ ಕಾರ್ಡ್ ಕೂಡ..!!!
ನನ್ನ ಕೈ ತಲೆ ಮೇಲೆ ಹೋಗುವುದರಲ್ಲಿತ್ತು...
 
ನನ್ನ ಮೊಬೈಲ್ ರಿಂಗಾಯಿತು..
ಗಲಿಬಿಲಿ ಇನ್ನೂ ತಿಳಿ ಗೊಂಡಿರಲಿಲ್ಲ.. ನಂಬರ್ ನೋಡಿದೆ..
8782 ಇಂದ ಶುರುವಾಗುವ ಅಪರಿಚಿತ ನಂಬರ್..
ರಿಸೀವ್ ಮಾಡಿ ಹಲೋ ಅಂದೇ..
ಹಲೋ ಪ್ರಭಾಕರ ನಾ..??
ಆ ಹೆಸರಿನ ವ್ಯಕ್ತಿಯನ್ನ ಕೇಳಿಕೊಂಡು ನನಗದು ಎರಡನೆ ಫೋನ್ ಕಾಲ್..
ನಿನ್ನೆ ಕೂಡ ಬೇರೆ ಅಪರಿಚಿತ ನಂಬರ್ ನಿಂದ ಅದೇ ವ್ಯಕ್ತಿಯನ್ನು ವಿಚಾರೀಕೊಂಡು ಒಂದು ಫೋನ್ ಬಂದಿತ್ತು..
ಇವತ್ತು ಕೂಡ ಅದೇ ವ್ಯಕ್ತಿಯನ್ನ ಕೇಳಿಕೊಂಡು ಮತ್ತೊಂದು ಅಪರಿಚಿತ ನಂಬರ್ ನಿಂದ ಕಾಲ್..
ನಾನು ಸ್ಸಾರಿ ರಾಂಗ್ ನಂಬರ್ ಅಂದೇ..
ಹೇ ಪ್ರಭಾಕರ ಸುಳ್ಳು ಹೇಳಬೇಡ ಅಂತು ಆಕಡೆಯ ದನಿ..
ನನ್ನ ಟೆನ್ಶನ್ ನನಗೆ.. ಹಲೋ ನಾನು ಪ್ರಭಾಕರ ಅಲ್ಲ ಪ್ಲೀಸ್ ಫೋನಿಡಿ..
ಇದು ಪ್ರಭಾಕರನ ನಂಬರ್ರೇ ನನಗೆ ಗೊತ್ತು.. ನೀವು ಪ್ರಭಾಕರ ಅಲ್ಲದಿದ್ರೆ ಮತ್ತ್ಯಾರು..?? ಆ ದನಿ..
ಹಲೋ ನಾನು ಪ್ರಭಾಕರ ಅಲ್ಲ.. ಇದು ನನ್ನ ನಂಬರ್.. ಮತ್ತು ನಾನು ಯಾರು ಅಂತ ನಿಮಗೆ ಹೇಳೋ ಅವಶ್ಯಕತೆ ಇಲ್ಲ ತಿಳ್ಕೊಳಿ ಅಂದೆ..
ನಿಮ್ ಹೆಸರೇನು..??
ಅದನ್ನ ಹೇಳಬೇಕಾದ ದರ್ದು ನನಗಿಲ್ಲ..!!
ಹೋಗ್ಲಿ ಇದು ಹೊಸದುರ್ಗಾ ಆಲ್ವಾ..??
ಅಲ್ರೀ ಇದು ಹೊಸೂರ್ ತಮಿಳ್ನಾಡು ನಂಬರ್..!!
ಹೌದು ಎಲ್ಲಿಯ ಹೊಸೂರ್ ಎಲ್ಲಿಯ ಹೊಸದುರ್ಗ..!! ಎತ್ತಣಿಂದೆತ್ತ ಸಂಬಂಧವಯ್ಯ..!!
ಇನ್ನು ನನ್ ಕೈಲಾಗಲಿಲ್ಲ.. ಅವಸರಕ್ಕೆ ಫೋನ್ ಕಟ್ ಮಾಡಿ ವಾಸ್ತವಕ್ಕೆ ಬಂದೆ..
 
ವಾಸ್ತವ ನನ್ನನ್ನು ನೇರ ನನ್ನ ಹಾಸಿಗೆಯ ಮೇಲೆ ತಂದು ಬಿಟ್ಟಿತ್ತು..!!
ಕಣ್ಣುಜ್ಜಿ.. ಮುಖವೊರೆಸಿ.. ನನ್ನ ಸುತ್ತಲೂ ಒಮ್ಮೆ ನೋಡಿದೆ..
unbeliavable ಇದು ನನ್ನದೇ so called ಬೆಡ್ ರೂಂ..
ಅಂದರೆ ಇಲ್ಲಿಯ ತನಕ ನಾ ಕಂಡದ್ದು ಕನಸು..!!
ಬೆಳಿಗ್ಗೆ ಆರೂವರೆ ಸಮಯದ ಸುಮಾರಿಗೆ.. ಚುರುಗುಟ್ಟುವ ಚಳಿಗೆ ಪೂರ್ತಿಯಾಗಿ ಹೊದ್ದು ಮಲಗಿದ್ದ ನಾನು.. ದಿಗ್ಭ್ರಾಂತನಾಗಿ ಎದ್ದು ಕನಸೊಡೆದು ಕೂರುವಂತೆ ಮಾಡಿದ್ದು ಆ ಅಪರಿಚಿತ ಫೋನ್ ಕಾಲ್..!!
ಹೌದು ಆ ಫೋನ್ ಕಾಲ್ ಮಾತ್ರವೇ ನಿಜ.. ಅದರಿಂದಾಚೆಗಿನದೆಲ್ಲ ಹಚ್ಚ ಹಸಿ ಕನಸು..
still unbelievable..!!
 
ಡಿಸೆಂಬರ್ ಒಂದನೇ ತಾರೀಕಿನ ಬೆಳ್ಳಂಬೆಳಿಗ್ಗೆ.. ನನಗೆ ಬಿದ್ದ ಕನಸಿದು..!!
ಅಷ್ಟು ಸುಲಭಕ್ಕೆ ದಾಖಲಾಗುವಂತೆ ಯಾವತ್ತೂ ನನಗೆ ಕನಸು ಬಿದ್ದಿರಲಿಲ್ಲ..
ನನ್ನ ಕನಸೊಳಗೆ ಅಷ್ಟು ಪರಿಚಯದವರೂ ಕೂಡ ಬಂದು ಗುರುತಿಸಿ ಕೊಂಡದ್ದಿಲ್ಲ..
ಅಪ್ಪ ಅಮ್ಮನೂ ಎಂದೋ ಬಂದಿರಬಹುದು.. ಆದರೆ ನಿಖರ ಘಟನೆಗಳು ನೆನಪಿಲ್ಲ..
ಆದರು ಮೊನ್ನೆ ಬಿದ್ದ ಈ ಕನಸು.. ಅಷ್ಟು ಸುಲಭಕ್ಕೆ ಮರೆಯಲಾಗದ ಆ ಘಟನೆ.. ಇನ್ನೂ ಆ ಕನಸಿನ ಜೀವಂತಿಕೆ ಉಳಿಸಿಕೊಂಡಿರುವುದು ಸುಳ್ಳಲ್ಲ..
ಆ ಕನಸಿನಲ್ಲಿ ಕಂಡಷ್ಟೇ ತಾಜಾತನದ ನೆನಪು ಆ ಘಟನೆಗಳು ನನ್ನಲ್ಲಿ..
ಕಣ್ಣು ಬಿಟ್ಕೊಂಡೆ.. ಮರೆಯಲಾಗದ ಸಾವಿರ ಹಗಲು ಕನಸುಗಳ ಕಂಡಷ್ಟೇ ರೂಡಿಯಿದ್ದ ನನಗೆ.. ಮೊನ್ನೆ ಬಿದ್ದ ಕನಸಿನ ಅರ್ಥ ಈಗಲೂ ತಿಳಿಯುತ್ತಿಲ್ಲ..
ಆದರು ಈ ಕನಸು.. ಅದಕ್ಕಿನ್ನೂ ಎಳೆ ವಯಸು..
 
ಬೆಳಿಗ್ಗೆ ಬೆಳಿಗ್ಗೆ ಬಿದ್ದ ಕನಸುಗಳು ನಿಜವಾಗ್ತವೆ ಅನ್ನೋ ಮಾತು ಬಹಳ ಹಿಂದಿನಿಂದಲೂ ಕೇಳಿದ ನೆನಪಿದೆ.. ಹಾಗಾಗುವುದಿದ್ದರೆ ನನ್ನದೊಂದು ಅಭಿಲಾಷೆ..
ಪ್ರಕಾಶಣ್ಣ ನಮ್ಮೂರಿಗೆ ಬರಲಿ.. ಇದು ನನ್ನ ಕನಸಿನ ನಿಜವಾಗುವಿಕೆಯ ತರ್ಕವಲ್ಲ. ನನ್ನ ಅಭಿಲಾಷೆಯೂ ಹೌದು..
ಆದರೆ ಪ್ರಕಾಶಣ್ಣನ ಮುಖ ಬದಲಾಗದಿರಲಿ..!!
ಮತ್ತು ಅಂಥ ಅಫಘಾತಗಳು ಕನಸಲ್ಲೂ ಆಗದಿರಲಿ..
 
 
*ಶುಭಂ*

Wednesday 12 December 2012

ಇಂದು ಸಂಜೆಯಾಗಲು ಸ್ವಲ್ಪ ತಡವಾಗಬಹುದೇನೋ..

ಏಯ್..
ಆ ಇಬ್ಬರು ಜೋಡಿಗಳು ನಮ್ಮನ್ನೇ ನೋಡ್ತಾ ಇದಾರಲ್ವಾ..?? ಅವಳಂದ್ಲು..
 
ನೋಡಲಿ ಬಿಡು ಹಾಗೆ ಕಣ್ಣಿಟ್ಟು ನೋಡೋ ಹಾಗೆ ಕೂತದ್ದು ನಮ್ಮ ತಪ್ಪು..
ಈ ಜಾಗ ನಾಲ್ಕು ಜನ ಬಂದು ಕೂತು ನೆಮ್ಮದಿ ಇಂದ ಒಂದಷ್ಟು ಹೊತ್ತು ಕೂತು ಕಳೆದು ಹೋಗ್ಲಿಕ್ಕಂತಾನೆ ಇರೋದು..
ಅದಕ್ಕೋಸ್ಕರ ಅಂತಾನೆ ಇಪ್ಪತ್ತು ರುಪಾಯ್ ಕೊಟ್ಟು ಒಳಗೆ ಬಂದಿರೋ ಅವರನ್ನ.. ಆರು ನಮ್ಮನ್ನೇ ನೋಡ್ತಿದಾರೆ ಅಂತ ಹೇಳೋದು ತಪ್ಪಾಗತ್ತೆ..
ನಮ್ಮ ಹಾಗೆ ಈ ಪಾರ್ಕಲ್ಲಿ ಅವರೂ ಒಂದು ಜೋಡಿ.. ನಾವ್ ಹೇಗೆ ಅವರನ್ನ ನೋಡ್ತೀವೋ ಅವರು ಹಾಗೆ ನಮ್ಮನ್ನೇ ನೋಡ್ತಾರೆ ಅಷ್ಟೇ.. ಇವನು.
 
ರವಿ.. ನಿನ್ನ ಒಂದ್ ಮಾತು ಕೇಳ್ಲಾ..??
 
ಕೇಳು ಶಶಿ..
 
ಅಲ್ಲಾ ರವಿ.. ನಮ್ ಗಾರ್ಮೆಂಟ್ಸ್ ನಲ್ಲಿ ಅಷ್ಟೊಂದು ಜನ ಹುಡುಗೀರಿದ್ರೂ.. ನೀನ್ ಬಂದು ನನ್ನನ್ನೇ ಯಾಕೆ ಪ್ರೀತಿಸಿದ್ದು..??
 
ನಾನ್ ನಿನಗೋದು ಮಾತು ಕೇಳ್ಲಾ..?? ಅವನು..
 
ಹಾಂ ಕೇಳು.. ಆದ್ರೆ ಮೊದಲು ನನ್ನ ಈ ಪ್ರಶ್ನೆಗೆ ಉತ್ತರ ಕೊಟ್ಟು ಕೇಳು..
 
ನಿನ್ ಪ್ರಶ್ನೆಗೆ ಉತ್ತರ ಈಗ ನಾ ಕೇಳೋ ಪ್ರಶ್ನೆಲೇ ಇದೆ...
 
ಏನದು..??
 
ಜಗತ್ತಲ್ಲಿ ಅಷ್ಟೊಂದು ಜನ ತಾಯಂದಿರಿದ್ರೂ.. ನೀನ್ ಯಾಕೆ ನಿಮ್ಮಮ್ಮನ ಹೊಟ್ಟೇಲೇ ಹುಟ್ದೆ..??
 
ಆಂ..?? ಅವಳು ಅವಕ್ಕಾದಳು..!!
 
ಅವನೇ ಮುಂದುವರಿದು..ಈ ಜಗತ್ತಲ್ಲಿ ಅಷ್ಟೊಂದು ಜಾಗಗಳಿದ್ರೂ.. ಭಾರತದಲ್ಲೇ ನೀನು ಯಾಕೆ ಹುಟ್ಟಿದೆ..?? ಹೋಗ್ಲಿ ಬೆನ್ನು ಬೆನ್ನಿಗೆ ಬೆಚ್ಚಿ ಬೀಳೋ ಥರ ಜಪಾನ್ ನಲ್ಲೆ ಯಾಕೆ ಮತ್ತೆ ಮತ್ತೆ ಭೂಕಂಪ ಸುನಾಮಿಗಳಾಗ್ತವೆ..??
 
ಅವಳಿಗದು ಅರ್ಥವಾದಂತೆ ತೋರಲಿಲ್ಲ.
 
ಅವನೇ ಮುಂದುವರೆದು..
 
ಶಶಿ ನನ್ ಪ್ರಶ್ನೆಗೆ ಉತ್ತರ ಇದೇನೇ.. ಕೆಲವರು ಇಂಥವರ ಹೊಟ್ಟೇಲೇ ಹುಟ್ಬೇಕು.. ಹೀಗೆ ಬದುಕಬೇಕು.. ಹೀಗೆ ಸಾಯಬೇಕು.. ಇಂಥವರೇ ಇವರ ಬಾಳ ಸಂಗಾತಿ ಆಗ್ಬೇಕು.. ಇಂಥಾ ಜಾಗದಲ್ಲಿ ಇಂಥಾದ್ದೇ ಆಗಬೇಕು ಅನ್ನೋದು ನಮಗ್ಯಾರಿಗೂ ಕಾಣದ ವಿಧಿ ಲಿಖಿತ ಅನ್ಕೊಬೋದು..
ಕೆಲವೊಂದಕ್ಕೆ ಕಾರಣಗಳು ಮುಖ್ಯ ಅನ್ಸೋದಿಲ್ಲ..
ಹಾಗೇನೆ ನಮ್ ಫ್ಯಾಕ್ಟರಿ ಯಲ್ಲಿ ಅಷ್ಟೊಂದು ಜನ ಹುಡುಗಿಯರಿದ್ರೂ ನನ್ ಹೃದಯ ನಿನ್ನನ್ನೇ ಯಾಕ್ ಹುಡುಕಿ ಕೊಳ್ತು ಅನ್ನೋದು ಕೂಡ ಯಾವುದೋ ಪ್ರೇರಣೆ ಇಂದಲೇ ಇರ್ಬೇಕು.. ಯಾಕಂದ್ರೆ ಕೆಲವೊಂದು ಅನುಬಂಧಗಳು ಅದೃಷ್ಟ ಇದ್ದವರಿಗೆ ಮಾತ್ರ ಸಿಗೋಕೆ ಸಾಧ್ಯ.. ನನಗೆ ನೀನು ಸಿಕ್ಕ ಹಾಗೆ.
ನೀನು ಸೇರೋ ಎರಡು ವಾರಗಳ ಮುಂಚೆ ಅಷ್ಟೇ ನಾನು ಈ ಗಾರ್ಮೆಂಟ್ ಸೇರಿದ್ದು.. ಅದಕ್ಕೂ ಮೊದಲು ಎಲ್ಲೋ ಇದ್ದವ. ಇಲ್ಲಿ ಇಲ್ಲಿವರ್ಗು ನನಗೆ ಫ್ರೆಂಡ್ ಅಂತ ಆಗಿದ್ದು ರಾಮ್.. ರಘು, ಗೋಪಾಲ್, ನಿತಿನ್ ಬಿಟ್ರೆ.. ಹುಡುಗೀರಲ್ಲಿ ನಾನು ಫ್ರೆಂಡ್ಶಿಪ್ ಮಾಡಿದ್ದು ನೀನು ಮತ್ತೆ ನಿನ್ನ ಫ್ರೆಂಡ್ ಲತಾ ಹತ್ರ ಮಾತ್ರ..
 
ಅಂಥಾ ವಿಶೇಷ ಏನಿದೆಯಪ್ಪಾ ನನ್ನಲ್ಲಿ..?? ನನ್ ಅಂದ ನೋಡಿ ಇಷ್ಟ ಪಟ್ಟದ್ದಾ..??
 
ಶಶಿ ಹುಡುಗೀರಿಗೆ ಬರಿ ಅಂದ ಮಾತ್ರ ಶೋಭೆ ಅಲ್ಲ.. ಗುಣ ಮತ್ತು ನಡತೆ ಕೂಡ..
ಅವತ್ತು ನಿನ್ ಎರಡನೆ ತಿಂಗಳ ಸಂಬಳದ ದಿನ.. ರೇಣುಕ ಬಂದು ನಿನ್ ಹತ್ರ ಎರಡು ಸಾವಿರ ದುಡ್ಡು ಕೇಳಿದ್ಲು ನೆನಪಿದೆಯಾ.??
 
ಹಾಂ.. ನಿಜ..
 
ಅವನು ಮುಂದುವರಿದು..
 
ಅವತ್ತು ಅವ್ಳು ಕೇವಲ ನಿನ್ ಹತ್ರ ಮಾತ್ರ ದುಡ್ಡು ಕೇಳಿದ್ದಲ್ಲ.. ನಿನ್ ಹಾಗೆ ಇನ್ನು ನಾಲ್ಕು ಜನ ಹುಡುಗೀರ ಹತ್ರ ಕೇಳಿದ್ಲು.. ಯಾರು ಕೊಟ್ಟಿರಲಿಲ್ಲ..
ಯಾರೂ ಕೊಡಲಿಲ್ಲ ಅಂದ ಮಾತ್ರಕ್ಕೆ ಅವರು ಕೆಟ್ಟವರು ಅಂತ ನಾ ಹೇಳ್ತಿಲ್ಲ.. ಇಂಥ ಬೆಂಗಳೂರಲ್ಲಿ ತಿಂಗಳಿಗೆ ನಮಗೇ ಅಂತ ಬರೋ ನಾಲ್ಕೂವರೆ ಸಾವಿರ ಸಂಪಾದನೆಯನ್ನ ಮೀರಿ ಖರ್ಚು ಬರೋದೆ ರೂಡಿ..
ಎಲ್ಲರಿಗೂ ಅವರ ಕಷ್ಟಗಳೇ ಮೇಲು ಅನ್ನಿಸಿ ಕೊಳ್ಳುವಾಗ ಯಾರೂ ಇನ್ನೊಬ್ಬರಿಗೆ ಕನಿಕರ ತೋರಿಸೋ ಇಚ್ಛೆ ಇದ್ದೂ.. ಸಹಾಯ ಮಾಡೋ ಮನಸಿದ್ದೂ.. ಮಾಡದೆ ಹೋಗೋದು ಅವರ ಅನಿವಾರ್ಯತೆ & ಅಸಹಾಯಕತೆ..
ಆ ದಿನ ರೇವತಿಯ ಅಮ್ಮನಿಗೆ ಹೊಟ್ಟೆ ನೋವು ಅಂತ ಅಸ್ಸ್ಪತ್ರೆ ಸೇರಿದಾಗ.. ಅಪೆಂಡಿಕ್ಸ್ ಐದೇ ಇಪ್ಪತ್ತು ಸಾವಿರ ಖರ್ಚಾಗತ್ತೆ ಅಂತ ಡಾಕ್ಟ್ರು ಹೇಳಿದ ನಂತರ.. ತಾನಿಷ್ಟು ದಿನ ದುಡಿದಿದ್ರಲ್ಲಿ ಅಷ್ಟೋ ಇಷ್ಟೋ ಉಳಿಸಿ ಕೂಡಿಟ್ಟಿದ್ದ ಐದು ಸಾವಿರ ದುಡ್ಡು.. ಕಿವಿಯಲ್ಲಿದ್ದ ಓಲೆ.. ಅವರಿವರ ಹತ್ರ ಕಾಡಿ ಬೇಡಿ ಪಡೆದ ಒಣದಷ್ಟು ಹಣ ಎಲ್ಲಾ ಸೇರಿ ಹದಿನೈದು ಸಾವಿರ ಸೇರಿಸಿ ಅಡ್ವಾನ್ಸ್ ಅಂತ ಕಟ್ಟಿ ಅವರಮ್ಮನ್ನ ಆಸ್ಪತ್ರೆಗೆ ಸೇರಿಸಿದ್ಲು..
 
 
ಮಿಕ್ಕ ಹಣವನ್ನ ಹೇಗಾದರೂ ಹೊಂದಿಸಬೇಕು ಅಂತ ನಮ್ಮ ಮ್ಯಾನೇಜರ್ ಹತ್ರ ಬಂದು ಸಹಾಯಕ್ಕೆ ಅಂತ ಸ್ವಲ್ಪ ದುಡ್ಡು ಕೇಳಿದ್ರೆ.. ಇಪ್ಪತ್ತೈದು ಸಾವಿರ ಸಂಬಳ ತೆಗೆಯೋ ಆ ಮನುಷ್ಯ ಅವಳಿಗೆ ಹೇಳಿದ್ದು ಏನು ಗೊತ್ತಾ..??
ಹೋಗಮ್ಮ ದಿನಾ ಬೆಳಗಾದ್ರೆ ಇಂಥ ಇಪ್ಪತ್ತು ಕಥೆ ಕೇಳ್ತಾನೆ ಇರ್ತೀನಿ.. ಕೇಳಿದೋರಿಗೆಲ್ಲಾ ಸಹಾಯ ಅಂತ ಮಾಡ್ತಾ ಇದ್ರೆ ನಾವ್ ಬದುಕೋದು ಹೇಗೆ ಅಂತ ಹೇಳಿ ತನ್ನ ಪಾಡಿಗೆ ತಾನು ಜಾರ್ಕೊಂಡಿದ್ದ.. ಆ ಹೊತ್ತಲ್ಲಿ ನಾನು ಅವರ ರೂಂ ನಲ್ಲೇ ಕೆಲಸ ಮಾಡ್ತಿದ್ದೆ.. ಪಾಪ ರೇವತಿ ನ ನೋಡೋಕ್ಕಾಗ್ತಿರ್ಲಿಲ್ಲ..
ಹುಡುಗರ ಹತ್ರ ಮಾತಾಡೋಕೆ ಮುಜುಗರ ಪಡೋ ಆ ಹುಡುಗಿ ಯಾವ ಹುಡುಗರ ಹತ್ರಾನೂ ಹೋಗಿ ಹತ್ರನು ದುಡ್ಡು ಕೇಳಿರಲಿಲ್ಲ.. ಕೊನೆಗೆ ನಾನೇ ಕರೆದು ಮಾತಾಡ್ಸಿ.. ನಾ ನಿಮಗೆ ಹಣ ಕೊಡ್ತೀನಿ ಆದ್ರೆ ಈಗಿಲ್ಲ ನಾಳೆ ಬೆಳಿಗ್ಗೆ ಕೊಡ್ತೀನಿ.. ಆದ್ರೆ ನನ್ನಿಂದ ಪೂರ್ತಿ ಐದು ಸಾವಿರ ಎಲ್ಲ ಕೊಡೋಕ್ಕಾಗಲ್ಲ ಬೇಕಿದ್ರೆ ಮೂರು ಸಾವಿರ ಅಡ್ಜಸ್ಟ್ ಮಾಡ್ತೀನಿ ಅಂದಿದ್ದೆ..
 
 
ಅದರ ನಂತರ ಆ ಹುಡುಗಿ ನಿನ್ ಹತ್ರ ಬಂದು ಮಿಕ್ಕ ಎರಡು ಸಾವಿರ ರುಪಾಯಿ ಕೇಳಿತ್ತು.. ನಿನ್ ಮನೇಲಿ ಅಷ್ಟು ಕಷ್ಟ ಇದ್ರೂ ನೀನ್ ಕೂಡ ಇಲ್ಲ ಅನ್ನದೆ ಕೊಡ್ತೀನಿ ಅಂದೆ..
ಅಲ್ಲೇ ನೀನ್ ನಂಗೆ ಮೊದಲು ಇಷ್ಟ ಆಗಿದ್ದು..
ಬೇರೆ ಹುಡುಗೀರ ಥರ ಒಣ ಪೋಗರಿಲ್ಲ..ಜಂಭ ಇಲ್ಲದ ನಿನ್ನ ವರ್ತನೆ.. ತುಂಬಾನೆ ಇಷ್ಟ ಆಗೋ ನಿನ್ನ ನಾಚಿಕೆ.. ಸದಾ ನಿನ್ನ ಅಭರಣವಾಗಿರೋ ಮೌನ.. ಚಿಕ್ ವಯಸ್ಸಲ್ಲೇ ಜವಾಬ್ದಾರಿಗಳು ಹೆಚ್ಚಿದರೂ ಬದುಕನ್ನ ಸಮರ್ಥವಾಗಿ ನಿಭಾಯಿಸೋ ನಿನ್ನ ಜಾಣ್ಮೆ.. ಸ್ನೇಹಿತರ ಜೊತೆ ನಿನ್ನ ಒಡನಾಟ.. ಅದೆಲ್ಲ ಆದ್ಮೇಲೆ ನೋಡ್ತಿದ್ದ ಹಾಗೆ ಎಂಥವರನ್ನ ಬೇಕಿದ್ರೂ ಉಲ್ಲಾಸಗೊಳಿಸೋ ನಿನ್ ಮುದ್ದು ನಗು ಮುಖ.. ಇದೆಲ್ಲವನ್ನ ಗಮನಿಸಿದ ಮೇಲೇನೆ ನೀನು ನನ್ನನ್ನ ಅಷ್ಟು ಸೆಳೆದದ್ದು..
 
ರವಿ.. ದೇವ್ರು ನಮ್ಮಂತೋರಿಗೆ ಯಾಕಿಷ್ಟು ಕಷ್ಟ.. ಒದ್ದಾಟ.. ಪರದಾಟ.. ಪರೀಕ್ಷೆಗಳನ್ನ ಕೊಡ್ತಾನೆ..??
 
ಶಶಿ ಎಲ್ಲರ ಬದುಕಲ್ಲೂ ಭಗವಂತ ಪರೀಕ್ಷೆಗಳನ್ನ ಕೊಟ್ಟೆ ಕೊಡ್ತಾನೆ... ಆದ್ರೆ ನಮಗೆದುರಾಗೋ ಪ್ರಶ್ನೆಗಳು ಮಾತ್ರವೇ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರ್ತವೆ..
ಯಾರು ಕಷ್ಟ ಪಡುವುದಿಲ್ವೋ ಬದುಕು ಅವರಿಗೆ ಅಷ್ಟು ಸುಲಭಕ್ಕೆ ಅರ್ಥ ಆಗಲ್ಲ.. ಕಾದು ತಟ್ಟಿಸಿ ಕೊಂದ ಕಬ್ಬಿಣ ಒಂದು ರೂಪಾಂತರಗೊಳ್ಳುವ ಹಾಗೇನೆ ಮನುಷ್ಯನ ಬದುಕು.. ನೋವು ತಿಂದಷ್ಟೂ ಮಾಗುತ್ತಾನೆ.. ಕಷ್ಟ ಪಟ್ಟಷ್ಟು ಬಾಗುತ್ತಾನೆ..
 
ಈಗ ನನ್ನನ್ನೇ ತಗೋ..
 
ಮನೇಲಿ ಹುಟ್ಟು ಕುಡುಕ ಅಪ್ಪ.. ಮೂಗೆತ್ತಿನಂತಿರೋ ಅಮ್ಮ..
ಅಲ್ಲಿ ಇಲ್ಲಿ.. ಅವರಿವರ ಮನೇಲಿ ಹೊಲದಲ್ಲಿ ಅವಳು ಕೂಲಿ ಮಾಡುತ್ತಿದ್ದರಿಂದಲೇ ಹೇಗೋ ನಡೀತಿತ್ತು..
ನಾನು ಹತ್ತನೇ ತರಗತಿ ಪಾಸಾಗೋ ಹೊತ್ತಿಗೆ ಹಾಳಾಗಲಿಕ್ಕೆ ಅಂತ ಇದ್ದ ಅಷ್ಟೂ ಚಟಗಳನ್ನ ಕಲಿತು.. ಊರು ಪುಂಡು ಪೋಕರಿಗಳ ಜೊತೆ ನನ್ನ ಪಾಡಷ್ಟೇ ನಾನು ನೋಡ್ಕೊಂಡಿದ್ದೆ..
ಅಷ್ಟಿದ್ದರೂ ಮನೆಯ ಜವಾಬ್ದಾರಿ ಹೊರದ ನಾನು ಕಾಲೇಜಿಗೆ ಅಂತ ಕಾಲಿಟ್ಟು ಅಲ್ಲೂ ದರಬಾರು ನಡೆಸೋಕೆ ಶುರು ಮಾಡಿದ್ದೆ... ಕೆಟ್ಟ ಹುಡುಗ ಅಂತ ಬಿರುದು ತಗೊಳ್ಳೋಕೆ ಅಂತ ಇದ್ದ ಅಷ್ಟೂ ಕೆಲಸಗಳನ್ನ ಮಾಡಿ ಎಲ್ಲಾ ಮೇಷ್ಟರ ಬಳಿಯೂ ಛೀಮಾರಿ ಹಾಕಿಸಿ ಕೊಂಡಿದ್ದೆ..
PUC ಫೇಲ್ ಆದ ದಿನ ಅಮ್ಮ ಬೈದದ್ದನ್ನ ಸಹಿಸಲಾರದೆ ಮನೆ ಬಿಟ್ಟು ಬೆಂಗಳೂರು ಸೇರಿದ ನಾ ಮತ್ತೆ ಆ ಕಡೆ ತಿರುಗಿ ನೋಡೋ ಪ್ರಯತ್ನ ಕೂಡ ಮಾಡಿರಲಿಲ್ಲ..
ಬೆಂಗಳೂರಿಗೆ ಬಂದು ಒಂದು ಲಾರಿ ಕ್ಲೀನರ್ ಆಗಿ ಕೆಲಸಕ್ಕೆ ಸೇರ್ಕೊಂಡ ನನ್ನ ಜೀವನ ಹೇಗೋ ನಡಿತಾ ಇತ್ತು..
 
 
ಅದೊಂದು ದಿನ ಹುಬ್ಬಳ್ಳಿ ಗೆ ಹೋಗ್ತಿದ್ದ ನಮ್ಮ ಲಾರಿ.. ರಾತ್ರಿ ಡ್ರೈವರ್ ನ ಮಂಪರು ನಿದ್ದೆ ಗಣ್ಣಿಗೆ ಆಯಾ ತಪ್ಪಿ ಬಿದ್ದದ್ದೊಂದೇ ನೆನಪು..
ನಾ ಕಣ್ಬಿಟ್ಟು ನೋಡಿದಾಗ ಅದ್ಯಾವುದೋ ಸರ್ಕಾರಿ ಆಸ್ಪತ್ರೆಯ ನೆಲದ ಮೇಲಿದ್ದ ಬೆಡ್ ಒಂದರ ಮೇಲಿದ್ದೆ..
ಅಲ್ಲೇ ಪಕ್ಕದಲ್ಲಿ ಕೂತಿದ್ದ ಅಮ್ಮನ ವಯಸ್ಸಿನ ಹೆಂಗಸೊಂದು ನನ್ನ ಬಳಿ ಬಂದು ನನ್ನ ಲಾರೀ ಡ್ರೈವರ್ ಸ್ಥಳದಲ್ಲೇ ಸತ್ತ ವಿಷಯ ತಿಳಿಸಿ.. ಅವನ ಹೆಣವನ್ನ ಸಂಸ್ಕಾರ ಗೊಳಿಸಿ ಎರಡು ದಿನವಾಯ್ತು ಅನ್ನೋ ವಿಚಾರ ತಿಳಿಸಿದ್ಲು..
ಅಷ್ಟರಲ್ಲೇ ವಾರ್ಡ್ ನ ಒಳಗೆ ಬಂದ ಡಾಕ್ಟರ್.. ಆ ತಾಯಿ ಬಳಿ ಹೇಳಿದ್ರು.. ಅಮ್ಮ ನಿಮ್ ಮಗಳಿಗೆ ಹೆಣ್ಣು ಮಗು.. ಮಗು ಏನೋ ಆರೋಗ್ಯಕರವಾಗೆ ಹುಟ್ಟಿತು.. ಆದ್ರೆ ತಾಯಿ ನ ಉಳಿಸೋಕ್ಕಾಗ್ಲಿಲ್ಲ ಸಾರಿ ಅಂದು ಬಿಟ್ರು..
 
 
ಆ ತಾಯಿ ರೋದನ ಹೇಳ ತೀರದಾಗಿತ್ತು.. ಅವಳಿಗೆ ಇದ್ದ ಆಸರೆ ಅವಳ ಮಗಳೊಬ್ಬಳೆ ಅಂತೆ.. ಆ ತಾಯಿಯ ಗಂಡ ಅವರಿಗೆ ಮಗುವಾಗಿ ಆರು ವರ್ಷಕ್ಕೆ ತೀರಿಕೊಂಡಿದ್ದರಂತೆ..
ಅಂದಿನಿಂದ ತಾವೇ ಕಷ್ಟ ಪಟ್ಟು ಕೂಲಿ ನಾಲಿ ಮಾಡಿ ಮಗಳನ್ನ ಬೆಳೆಸಿ ಒಂದು ಕಡೆ ಮಾಡುವೆ ಮಾಡಿ ಕೊಟ್ರೆ.. ವರದಕ್ಷಿಣೆ ನೆಪದಲ್ಲಿ ಅವಳ ಗಂಡ ಅವಳನ್ನ ವರ್ಷ ತುಂಬುವುದರೊಳಗೆ ಗರ್ಭಿಣಿಯಾಗಿದ್ದ ಸಮಯದಲ್ಲೇ ವರದಕ್ಷಿಣೆ ಕಿರುಕುಳ ಕೊಟ್ಟು ತವರಿಗಟ್ಟಿದವ ಆಗಲೂ ಬಂದು ತಿರುಗಿ ನೋಡಿರಲಿಲ್ಲವಂತೆ.. ಬಹಳ ಕರುಣಾಜನಕ ಆ ತಾಯಿಯ ವ್ಯಥೆ..
ಆಗ ಈ ಎಳೆ ಕಂದನನ್ನ ಸಾಕುವ ಹೊಣೆ ಆ ತಾಯಿಯ ಮೇಲೆ ಬಿದಿತ್ತು.. ಬಹಳ ರೋಧಿಸುತ್ತಿದ್ದ ಆ ತಾಯಿಯನ್ನ ಅಲ್ಲಿದ್ದ ಸುಮಾರು ಹೆಂಗಸರು ಸಮಾಧಾನ ಮಾಡುತ್ತಿದ್ದರು..
 
ನನಗೆ ಅಮ್ಮನ ನೆನಪಾಯಿತು..
ನಾನು ಮನೆ ಬಿಟ್ಟು ಬಂದಂದಿನಿಂದ ಯಾವತ್ತೂ ಆ ಕಡೆ ತಲೆ ಹಾಕಿರಲಿಲ್ಲ..
ಊರಿಗೆ ಹೋದೆ.. ಅಪ್ಪ ಅದಾಗಲೇ ಸತ್ತು ಎರಡು ತಿಂಗಳಾಗಿತ್ತು.. ಹಾಸಿಗೆ ಹಿಡಿದು ಮಲಗಿದ್ದ ಅಮ್ಮ ಜೀವಂತ ಶವವಾಗಿದ್ದಳು..
ಅಂದೇ ನನ್ನ ಹೇಯ ಜನ್ಮಕ್ಕೊಂದು ಧಿಕ್ಕಾರವಿಟ್ಟುಕೊಂಡೆ.. ಅಮ್ಮನನ್ನ ಊರು ಬಿಡಿಸಿ ಕರಕೊಂಡು ಬಂದು ಹೀಗೆ ಬೆಂಗಳೂರು ಸೇರಿ ದುಡಿಯಲು ಆರಂಭಿಸಿದೆ..
ದುಡಿತವೊಂದೆ ತುಡಿತವಾಗಿದ್ದ ನಾನು ಬದಲಾಗುತ್ತ ಹೋದದ್ದೇ ನನಗೆ ತಿಳಿಯಲಿಲ್ಲ..
ನನಗಾಗ ಯಾವ ಚಟದ ಅವಶ್ಯಕತೆಯೂ ಬೇಕಿರಲಿಲ್ಲ.. ನನ್ನಲೀಗ ಅದರ ಕುರುಹೂ ಇಲ್ಲ..
ನಾ ಈ ಮೊದಲು ಕೆಲಸ ಮಾಡುತ್ತಿದ್ದ ಕಂಪನಿ ಮುಚ್ಚುವ ಹಂತಕ್ಕೆ ಬಂದು ನಾ ಈ ಕಂಪನಿ ಸೇರಿದ್ದೆ.. ಅದಾಗಿ ಎರಡು ವಾರಕ್ಕೆ ನಿನ್ನನ್ನು ಕಂಡಿದ್ದೆ..
 
 
ನನಗೂ ನನ್ನ ಬದುಕ ನೊಗವೆಳೆಯಲು ಒಂದು ಹೆಗಲು ಬೇಕಿತ್ತು.. ಅದು ನೀನಾಗಬಲ್ಲೆ ಎಂಬ ನಂಬಿಕೆ ಮೂಡಿತ್ತು..
ಯಾಕಂದೆರೆ ನೀನ್ ನನ್ನ ಹಾಗೆ ಕಷ್ಟ ಅನುಭವಿಸಿ ಬಂದವಳೇ.. ಯಜಾಮನ ಎನಿಸಿ ಕೊಳ್ಳೋ ಅಪ್ಪನಿಲ್ಲದ ನಿನ್ನ ಮನೆ.. ಪೋಲಿಯೋ ಹಿಡಿದು ಕಾಲು ಕಳೆದು ಕೊಂಡಿರೋ ತಮ್ಮ... ಖಾಯಿಲೆ ಬಿದ್ದಿರೋ ನಿನ್ನಮ್ಮ.. ಇದೆಲ್ಲದರ ನಡವೆ ಕಷ್ಟ ಪಡೋ ನಿನ್ನ ಜೀವ ಇನ್ನೊಬ್ಬರ ಕಷ್ಟಕ್ಕೆ ಮಿಡಿವ ನಿನ್ನ ಮನಸು ನನ್ನನ್ನು ಬಹುವಾಗಿ ಸೆಳೆದಿತ್ತು..
ನನ್ನಮ್ಮ ನನ್ನು ನೀನು ಪ್ರೀತಿಯಿಂದ ನೋಡಿಕೊಳ್ಳ ಬಲ್ಲೆ ಎಂಬ ವಿಶ್ವಾಸ ಮೂಡಿತ್ತು..
ನಮ್ಮಿಬ್ಬರಿಗೆ ಆಸರೆಯಾಗಬಲ್ಲ ಶಕ್ತಿ ನಮ್ಮಿಬ್ಬರಿಗೆ ಮಾತ್ರ ಇರಬಹುದೆಂಬ ನಂಬಿಕೆ ನನ್ನಲ್ಲಿ ಮೂಡಿತ್ತು.
 
ಆಗಲೇ ನಾನು ನಿನ್ನ ಬಳಿ ಬಂದು ಪ್ರಪೋಸ್ ಮಾಡಿದ್ದೆ.. ನೀನು ಮೊದ ಮೊದಲು ಒಪ್ಪಿರಲಿಲ್ಲ..
ನಿನ್ನ ನೆನಪಲ್ಲಿ ನಾನು ಪ್ರೀತಿಗಾಗಿ ಹಠ ಹಿಡಿದು ಕೂರಲಿಲ್ಲ.. ದೇವದಾಸನಂತೆ ಕೊರಗಲಿಲ್ಲ.. ನನಗೆ ಬದುಕೋಕೆ ಬೇರೆಯದೇ ಕಾರಣಗಳಿದ್ವು.. ಬೇರೆಯದೇ ಜವಾಬ್ದಾರಿಗಳಿದ್ವು..
ನಿನ್ನ ಮೇಲೆನಗೆ ಪ್ರೀತಿ ಕರಗಿರಲಿಲ್ಲ. ಆದರು ನನ್ನ ಪಾಡಿಗೆ ನಾನಿದ್ದೆ.. ಅದೊಂದು ದಿನ ನೀನಾಗೆ ಬಂದು ಅದನ್ನ ಒಪ್ಪಿದೆ.. ನನಗೆ ನಂಬಿಕೆ ಇತ್ತು.
 
ರವಿ ನೀ ಎಷ್ಟೆಲ್ಲಾ ತಿಳಿದು ಕೊಂಡಿದ್ದೀಯ.. ಬದುಕನ್ನ ಎಷ್ಟೆಲ್ಲಾ ಅರ್ಥ ಮಾಡ್ಕೊಂಡಿದ್ದೀಯ.. ಅದನ್ನೆಲ್ಲಾ ಎಷ್ಟು ಚೆನ್ನಾಗಿ ಅರ್ಥ ಮಾಡಿಸ್ತೀಯ..
ಆದರು ನನಗೆ ನಿನ್ನ ಮೇಲೆ ಸಣ್ಣ ಅಪನಂಬಿಕೆಯೊಂದಿತ್ತು.. ಯಾಕಂದ್ರೆ ಪ್ರೀತಿ ಗೀತಿ ಅಂತ ಓಡಾಡುವ ಅವಶ್ಯಕತೆ ನನಗೂ ಇಲ್ಲದ ಪರಿಸ್ಥಿತಿಯಾಗಿತ್ತು..
ನನ್ನ ನಂಬಿ ಮನೆಯಲ್ಲಿ ಬದುಕುತ್ತಿರೋ ಎರಡು ಜೀವಗಳ ಮೇಲಿನ ಸೆಳೆತವಿತ್ತು.. ಆದರು ಅದೆಲ್ಲದರಾಚೆಗೂ ನಿನ್ನ ಮಾನವೀಯ ಮೌಲ್ಯ & ನಿನ್ನ ಪ್ರೀತಿ ನನ್ನನ್ನ ನಿನ್ನೆಡೆಗೆ ಸೆಳೆಯುತ್ತಿತ್ತು..
ನನ್ನಿಂದ ನಿನ್ನ ಪ್ರೀತಿ ಮಾಡದೆ ಇರಲಾಗಲಿಲ್ಲ.. ಆದರೆ ಒಂದು ಭಯ ಎಲ್ಲಿ ನಾನು ಮೋಸ ಹೋಗಿ ಬಿಡುತ್ತೀನೋ..
 
ಶಶಿ ಎಲ್ಲಿ ನಂಬಿಕೆ ಇರುವುದಿಲ್ಲವೋ.. ಅಲ್ಲಿ ಯಾವತ್ತಿಗೂ ಯಾವ ಸಂಭಂಧಗಳು ಶಾಶ್ವತವಲ್ಲ.. ನಿನ್ನನ್ನು ಪ್ರೀತಿಸೋ ವಿಚಾರ ಹುಡುಗಾಟವೂ ಅಲ್ಲ..
ಯಾಕಂದ್ರೆ ನಿನ್ನಂಥ ಹುಡುಗಿ ಬಾಳಲ್ಲಿ ಹುಡುಗಾಟ ಆಡುವ ಯಾವ ಮನುಷ್ಯನ ಬಾಳಲ್ಲೂ ಭಗವಂತ ಒಳ್ಳೇದು ಬರೆದಿರೋಲ್ಲ..
ನೋಡು ನಿನಗೆ ನನ್ನ ಮೇಲೆ ನಂಬಿಕೆ ಬರೋವರೆಗೂ ಯಾವತ್ತಿಗೂ ನಾನು ನಿನ್ನನ್ನ ಪೀಡಿಸಲಾರೆ.. ನಿನಗ್ಯಾವತ್ತು ನನ್ನ ಮೇಲೆ ಪೂರ್ತಿ ವಿಶ್ವಾಸ ಬಂದು ನನ್ನನ್ನ ಮದುವೆಯಾಗೋ ಇಚ್ಛೆ ಮೂಡುತ್ತದೋ.. ಅಂದು ನಮ್ಮೆರಡು ಮನೆಗಳ ಒಮ್ಮತದಲ್ಲೇ ನಾ ನಿನ್ನ ಮದುವೆಯಾಗ್ತೀನಿ..
 
ಶಶಿಯ ಕಣ್ಣಲ್ಲಿ ನೀರು.. ಇಲ್ಲಿಯವರೆಗೂ ಅವ ಹೇಳಿದ್ದೆಲ್ಲ ಕೇಳಿ ಅವಳೊಳಗೆ ಮೂಡಿರಬಹುದಾದ ಭಾವಗಳೆಲ್ಲ ಕಣ್ಣೀರ ಧಾರೆಯಾಗಿ ಹೊರ ಬರುತ್ತಿರಬಹುದು..
 
ತಮ್ಮೆದುರಾಗಿ ಸುಮಾರು ಮೂವತ್ತು ಅಡಿ ದೂರಕ್ಕೆ ಕುಳಿತಿರುವ ಜೋಡಿ ಏನು ಮಾತಾಡುತ್ತಿರಬಹುದೆಂದು ಅಣಕವಾಡಿ ತೋರಿಸುತ್ತಾ.. ರವಿ ತನ್ನ ಮನಸಿನ ಭಾವಗಳನ್ನ ಶಶಿಯ ಮುಂದೆ ನಿವೇದಿಸುತ್ತಿದ್ದಾನೆ..
ತನ್ನ ಬದುಕನ್ನ ತೆರೆದಿಟ್ಟಿದ್ದಾನೆ..
ಶಶಿ ಹುಟ್ಟು ಮೂಕಿಯೆಂದು ರವಿಗೆ ಗೊತ್ತು..!!
ಶಶಿಯ ಮನಸೊಳಗಿರಬಹುದಾದ ಪ್ರಶ್ನೆಗಳ ಗೂಡನ್ನ ರವಿ ತನ್ನದೇ ಕಲ್ಪನಾ ಹಂದರದಲ್ಲಿ ತಿಳಿಸಿ.. ತಿಳಿ ಗೊಳಿಸಿದ್ದಾನೆ..
ಶಶಿಯ ಮನಸು ತಿಳಿಯಾಗಿದೆ.. ನಿರಾಳವಾಗಿದೆ..
ಅವಳ ಮೊಗದಲ್ಲೊಂದು ಉಲ್ಲಾಸ ಭಾವ..
ಕಣ್ಣೀರ ಹನಿಗಳ ಜೊತೆ ರವಿ ಎಡೆಗಿನ ಅದಮ್ಯ ಪ್ರೀತಿಗೆ ಸಾಕ್ಷಿ ಎಂಬಂತೆ ಅವಳ ಮೊಗದಲ್ಲಿ ಕಿರು ನಗೆ ಮೂಡುವ ಪ್ರಯತ್ನ ಮಾಡುತ್ತಿತ್ತು..
 
ತಮ್ಮೆದುರು ಅಷ್ಟು ದೂರ ಕುಳಿತಿದ್ದ ಜೋಡಿ ಎದ್ದು ಹೊರಟು ಹೋಗುವುದನ್ನು ಕಂಡ ಶಶಿ ರವಿಯನ್ನು ಸೆಳೆದು ಅವನ ಕೆನ್ನೆಗೊಂದು ಮುತ್ತನಿಡುತ್ತಾಳೆ..
ಇವರಿಬ್ಬರ ಕತೆಯನ್ನ ಆಲಿಸುತ್ತ ತನ್ನ ಕೆಲಸವನ್ನ ಮರೆತ ಸೂರ್ಯ.. ಪಾರ್ಕಿನ ಮರಗಳ ಎಲೆಗಳ ನಡುವೆ ಕಣ್ಣಿರಿಸಿ ಇವರೆಡೆಗೆ ಆಗೊಮ್ಮೆ ಈಗೊಮ್ಮೆ ಕದ್ದು ಇಣುಕಿತ್ತಿದ್ದಾನೆ..
 
ಬಹುಷಃ ಇಂದು ಸಂಜೆಯಾಗಲು ಸ್ವಲ್ಪ ತಡವಾಗಬಹುದೇನೋ..!!

Monday 3 December 2012

ರಾಘವನ ರಗಳೆಗಳು..

ಸತ್ಯವನ್ನೇ ಹೇಳುತ್ತೇನೆ.. ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ ಎಂದು ಸಾಕ್ಷಾತ್ ಪಕ್ಕದಲ್ಲಿರೋ ಈ ಭಗವದ್ಗೀತೆಯ ಮೇಲೆ ಕೈ ಇರಿಸಿ ಪ್ರಮಾಣೀಕರಿಸುತ್ತೇನೆ.. ಹಾಳಾದ್ದು.. ಬರಿತಿರೋದು ರಾಘವ [ರಾಮ]ನ ಬಗ್ಗೆ.. ಪ್ರಮಾಣ ಮಾಡ್ತಿರೋದು ಭಗವದ್ಗೀತೆ ಮೇಲೆ. ನನ್ನಂತೋನು ಭಗವದ್ಗೀತೆ ಇಟ್ಟಿರೋದೆ ದೊಡ್ ವಿಷ್ಯ ಹೇಳಿ..!! ಇನ್ ರಾಮಾಯಣ ಇಟ್ಕೋಳೋ ರಾಮಾಯಣ ಯಾಕೆ ಅಲ್ವುರಾ..?? ಸೂಕ್ತ ಸಾಕ್ಷಾಧಾರ ಗಳಿಲ್ಲದ ಈ ಅಪರಿಸ್ತಿಥಿ ಯಲ್ಲಿ ಬರೆಯಲು ಕೂತ ಭಂಡತನಕ್ಕೆ ಮನವಿ ಕೋರುತ್ತ [ಕೊರೆಯುತ್ತಾ] ನಮ್ ರಾಘವನ ಕುರಿತ ಕೆಲವು [ಬೊಗಳೆ]ಮಾತುಗಳನ್ನು ಹೇಳ[ಬೊಗಳ]ಲಿದ್ದೇವೆ ಮನ್ನಿಸಿ.. ;) ;)
ವಿ.ಸೂ: ದಯವಿಟ್ಟು ಇದನ್ನ ಈ ಕಡೆ ಕಿವಿಯಲ್ಲಿ ಕೇಳಿ.. ಆ ಕಡೆ ಕಿವಿಯಲ್ಲಿ ಬಿಟ್ಟು ಬಿಡಬೇಕಾಗಿ ಕಡ್ಡಾಯವಾಗಿ ವಿನಂತಿಸಿ ಕೊಳ್ಳುತ್ತಿದ್ದೇವೆ..!!

ಕ್ರಿಸ್ತ ಶಕ 2011 ರ ಈಚೆಗೆ ಸುಮಾರು ನಾಲ್ಕೈದು ತಿಂಗಳುಗಳ ಹಿಂದೆ ಆರ್ಕುಟ್ ಎಂಬ ಕ್ಯಾಮೆ ಇಲ್ಲದ ಮಂದಿ ಕೂತು ಹರಟುವ ಅರಳೀ ಮರದ ಯೋಗ್ಯತೆಗೆ ಸರಿಸಮನಾಗಿ ಸರಿ ತೂಗುವ ಸಾಮಾಜಿಕ ಅಂತರ್ಜಾಲದ ತಾಣದಲ್ಲೊಮ್ಮೆ.. ರಾಘವ ಚಂದ್ರ ಎಂಬ ಅರ್ಧ ಹಿಂದೆ ಅರ್ಧ ಕನ್ನಡ ಹೆಸರು ಬೆರೆತ ಈ ಶಂಕಿತ ಆಸಾಮಿಯನ್ನು ಕಂಡಂದೇ ಮೊದಲು ನನಗನ್ನಿಸಿದ್ದು.. ಇದು ಖಡಾ ಖಂಡಿತ ನಮ್ ಪೂಜ್ಯ ಸಮಾನ, ಗುರುಗಳ ಸಮಾನಾರಾದ ಯೋಗರಾಜ ಭಟ್ಟರ ನಖಲೀ ಖಾತೆ ಇರಬಹುದೇನೋ ಎಂಬ ಶಂಕೆ..!!! ಯಾಕಂದ್ರೆ ನೂರಕ್ಕೆ ತೊಂಭತ್ತು ಭಾಗ ನಮ್ ಭಟ್ಟರದ್ದೇ ಅನ್ನಬಹುದಾದಷ್ಟು ಸಾಮ್ಯತೆಯ ಮಾತುಗಳನ್ನು ನುಡಿವ ಈ ಅಸಾಮಿಯ ಮಾತುಗಳನ್ನ ನೋಡಿದ ಪ್ರತಿಯೊಬ್ಬನಿಗೂ.. ನಮ್ ಊರಿನ ಅಗಸೆ ಬಾಗಿಲಾಣೆಯಾಗೂ ಹೇಳ್ತೀನಿ ಇಂತಹದ್ದೊಂದು ಅನುಮಾನ ಹುಟ್ಟದೆ ಹೋದಲ್ಲಿ ಆ ಅನುಮಾನಕ್ಕೆ ಪೆದ್ದ ರೋಗ ಎಂಬ ಅನರ್ಥ.. ಅಲ್ಲಲ್ಲ ಅನ್ವರ್ಥ ನಾಮ ಇಟ್ಟದ್ದೆ ಸರಿ ಇಲ್ಲ ಎಂಬ ತೀರ್ಮಾನಕ್ಕೆ ಬಂದು ಬಿಡುತ್ತೇನೆ..!!

ನಾವ್ಗಳೂ ಭಟ್ಟರ ಅಭಿಮಾನಿಗಳೇ ಹೇಳಿ.. ಅವರ ಹಾಡುಗಳನ್ನು ಆರಾಧಿಸುವ.. ಅವರ ಡೈಲಾಗ್ಸ್ ಗಳನ್ನು ಆನಂದಿಸುವ.. ಅವರ ನಿರ್ದೇಶನವನ್ನು ಅಭಿಮಾನಿಸುವ.. ಅವರ ಕಥೆಗಳನ್ನು ಕನಸಲ್ಲೂ ಕನವರಿಸಿ ಅಭಿನಂದಿಸುವ ವಡ್ಡ ಪಡ್ಡೆ ಹುಡುಗರ ಪೈಕಿ.. ಸ್ವಲ್ಪ ಡೀಸೆಂಟ್ ಆಗಿ ಕಾಣಿಸ್ಕೊಂಡು ನೋಡಿದವರ ಕಣ್ಣಿಗೆ ನೋಡ್ತಿದ್ದ ಹಾಗೆ ವಡ್ಡರಿವರೆನ್ನುವ ಹಾಗೆ ತೋರಗೊಡದ ಮಹಾನ್ ಭಂಡ ಹುಡುಗರೂ ಅನ್ನಿ ತಪ್ಪೇ ಇಲ್ಲ.. ;) ;)

ಹುಮ್ಮ್.. ಸಿನಿಮಾ ನೋಡಲು ಥಿಯೇಟರ್ ನತ್ತ ದಾಪುಗಾಲು ಹಾಕೋದಿರ್ಲಿ.. ಸಿನಿಮಾ ಪೋಸ್ಟರ್ ಗಳನ್ನೂ ತಲೆ ಎತ್ತಿ ನೋಡದ ನನ್ನಂತೋನು ಒಂದೇ ತಿಂಗಳಲ್ಲಿ ಒಂದೇ ಸಿನಿಮಾ ವನ್ನ ಬರೋಬ್ಬರಿ ಏಳು ಸಾರಿ ನೋಡುವಂತೆ ಮಾಡಿ.. ಅಷ್ಟು ಬಾರಿ ನೋಡಿಸಿಯೂ.. ನನ್ ಸಿನಿಮಾ ನೋಡುವ ತೃಷೆಯನ್ನು ಇಂಗಿಸಲಾರದ ನತದೃಷ್ಟ ನಿರ್ದೇಶಕರ ಸಾಲಿಗೆ ಸೇರುವ ಈ ಕಾಲದ ಏಕೈಕ ಜೀವವೇ ನಮ್ ಭಟ್ಟರದ್ದು.. ಆ ಚಿತ್ರ ಯಾವ್ದು ಅಂದ್ರಾ..?? ಅದೇ ಕಣ್ರೀ.. ಭಟ್ಟರ ಜೀವನದ ಅತಿ ದೊಡ್ಡ ಅಟ್ಟರ್ ಫ್ಲಾಪ್ ಸಿನಿಮಾ ನಮ್ ಮುಂಗಾರು ಮಳೆ..!!

ಏನಿತ್ತಪ್ಪಾ ಅಂಥಾದ್ದು ಆ ಸಿನಿಮಾದಲ್ಲಿ..?? ಅದು ತಲೆಕೆಟ್ಟು ಥಿಯೇಟರ್ ನಲ್ಲಿ ಏಳು ಸಾರಿ ಪ್ಲಸ್ ಟೀವಿಯಲ್ಲಿ ಲೆಕ್ಕವಿಲ್ಲದಷ್ಟು ಸಾರಿ ನೋಡಿಯೂ.. ಆಯಪ್ಪ ಆ ಸಿನಿಮಾದಲ್ಲಿ ಅದೇನ್ ಇಟ್ಟಿದ್ದ ಅಂತ.. ಅದು ಮಾಡಿದ ಗಿಮಿಕ್ ಏನೂ ಅಂತ ಅರ್ಥ ಆಗದೇನೆ ಏಳು ಪ್ಲಸ್ ಲೆಕ್ಕವಿಲ್ಲದಷ್ಟು ಸಾರಿ ಆ ಚಿತ್ರವನ್ನ ಮತ್ತೆ ಮತ್ತೆ ನೋಡುವಂತೆ ಮಾಡಿದ ಅಮೋಘ ಇತಿಹಾಸ ಆ ಸಿನಿಮಾದ್ದು ನಮ್ ಬದುಕ್ ನಲ್ಲಿ.

ಸಿಂಪಲ್ ಬಿಡಿ ಯಾರನ್ನ ಕೇಳಿದರೂ ಹೇಳ್ತಾ ಇದ್ದದ್ದು ಇದೇ ಮಾತುಗಳನ್ನ..!! ಮೊದಲನೇದಾಗಿ ಆ ಸಿನಿಮಾದ ಹಾಡುಗಳು.. ಆಯಪ್ಪನ ಬಾಯಿಗೆ ಮೊದಲನೇ ಲಾಡು ಬಿದ್ದದ್ದೇ ಆ ಹಾಡುಗಳಿಂದ. ಏನ್ ಹಾಡುಗಳ್ರೀ ಅವು..?? ದೂಸ್ರಾ ಮಾತೆ ಬೇಡ.. ಎಂಥಾ ಕಿವುಡನಿಗೂ ಇಷ್ಟವಾಗ ಬಲ್ಲ ಅನ್ ವರ್ಣಿಸಬಲ್ ಹಾಡುಗಳವು!! ಇನ್ನು ಆಯಪ್ಪನ ಬಾಯಿಗೆ ಬಿದ್ದ ಎರಡನೇ ಲಾಡು ಅಂದ್ರೆ ಆ ಚಿತ್ರದ ಡೈಲಾಗ್ಸ್. ಹಿರಿಯರಿಂ ಕಿರಿಯರ ತನಕ ಎಲ್ಲರೂ ಚಪ್ಪರಿಸಿ ಉಗಿದ ಮಾವಿನ ಕಾಯಿ ಉಪ್ಪಿನ ಕಾಯಿಯ ಗೊರಟೆ ಯಂಥಾ ಡೈಲಾಗ್ಸ್.. :) :) ಒಂದಷ್ಟು ದಿನ ಆ ಡೈಲಾಗ್ ಗಳ ಪರಿಣಾಮ ಹೇಗಿತ್ತಂದ್ರೆ.. ಪ್ರತಿ ಜನರ ಪ್ರತಿ ಗಣದ ಪ್ರತಿ ಮನದ ಆಂತರಿಕ ಮಾತುಗಳೆನ್ನುವಷ್ಟು ಮೋಡಿ ಮಾಡಿದ ಡೈಲಾಗ್ ಗಳವು.!!

ಇದಕ್ಕೂ ಮೊದ್ಲು ಮಣಿ, ರಂಗ [SSLC ] ಮಾಡಿದ್ದ ಭಟ್ಟರನ್ನ ಕ್ಯಾರೆ ಅನ್ನದೋರೆಲ್ಲಾ .. ಧಿಡೀರ್ ಅಂತ ಯೇ ಕೌನ್ ರೆ ಅಂತ ಮೂಗು, ಬಾಯಿ, ತಲೆ, ಕೆನ್ನೆ.. ಇನ್ನೂ ಸಿಕ್ ಸಿಕ್ಕ ಕಡೆ ಕೈ ಇಟ್ಕೊಂಡು ಯೋಚನೆ ಮಾಡೋ ಲೆವೆಲ್ ಗೆ ಕರಾಮತ್ತು ತೋರ್ಸೇ ಬಿಟ್ರು ನೋಡಿ ಮುಂಗಾರು ಮಳೆಯೊಳಗೆ ನಮ್ ಭಟ್ರು..!! ಆ ಮಳೆಗೆ ನೆನೆಯದವರಿಲ್ಲ.. ಆ ಹಾಡುಗಳ ಗುನುಗದವರಿಲ್ಲ.!! ಇನ್ನು ಆ ಕತೆ ಬಗ್ಗೆ ಹೇಳೋ ಹಾಗೆ ಇಲ್ಲ..ಸರಾಸರಿ ಎಲ್ಲಾ ಹುಡುಗರ ಜೀವಮಾನದ ಕತೆಯೇ.. ಅದರ ಪ್ರೋಸೆಸ್ಸ್ ಬೇರೆ, ಪ್ರೋಗ್ರೆಸ್ ಬೇರೆ ಆದರೆ ರಿಸಲ್ಟ್ ಮಾತ್ರ ಒಂದೇ..!!

ಕತೆ, ಹಾಡು, ಡೈಲಾಗ್ಸ್ & ಗಣೇಶನ ಅಭಿನಯ.. ದೃಶ್ಯಗಳ ಸುಂದರ ಚಿತ್ರೀಕರಣ ಇದಿಷ್ಟನ್ನೂ ಬಿಟ್ಟೂ ಅದಿನ್ನೇನೋ ಇದೇ ಕಣ್ರೀ ಅದರೊಳಗೆ.. ಬಡ್ಡಿ ಮಗಂದು ಈಗ್ಲೂ ನಮ್ ಕಲ್ಪನೆಗೆ ನಿಲುಕ್ತಾ ಇಲ್ಲ..!! ಇಂತಿಪ್ಪ ಭಟ್ರು ಮುಂದೆ ಮುಟ್ಟಿದ್ದೆಲ್ಲಾ ಚಿನ್ನವೇ.. ದಿಗಂತ್ ನ ತಗೊಂಡು ಹೋಗಿ ದಿಗಂತದಲ್ಲಿ ಕೂರಿಸಿ ಬಿಟ್ರು.. ನಮ್ ಭಟ್ರು.!! ಅದನ್ನ ನೋಡಿದ್ರೆ ಗೊತ್ತಾಗಲ್ವಾ ನಮ್ ಭಟ್ಟರ ಕೈ ಚಳಕ ಎಂಥಾದ್ದು ಅಂತ. ಗಾಳಿ ಪಟ, ಮನಸಾರೆ, ಪಂಚರಂಗಿ.. ಇದೆಲ್ಲ ಅದರದ್ದೇ ಚೌಕಟ್ಟಿನಲ್ಲಿ.. ಅದರದ್ದೇ ಆಯಾಮ ಗಳಲ್ಲಿ ಜನರನ್ನ ರಂಜಿಸಿ ಹಿಟ್ ಅನಿಸಿದಂಥಾ ಸಿನಿಮಾಗಳು.. ತೀರಾ ಈಚೆಯ ಪರಮಾತ್ಮ ಕೂಡ.. ಪುನೀತ್ ಹೆಸರಿಗಂಟಿಹ ಯಶಸ್ಸಿನ ಶಿಖರದಂಚು ತಲುಪಬಲ್ಲ ಹಿಟ್ ಅಲ್ಲದ್ದಿದ್ದರೂ.. ಭಟ್ಟರನ್ನ ಇಷ್ಟ ಪಡುವ ಮಂದಿಗೆ ಭಟ್ಟರಿಂದ ಸಿಗ ಬೇಕಿದ್ದೆಲ್ಲವ ಕೊಟ್ಟ ಸಿನಿಮಾ ಅದು ಕೂಡಾ..!! ಇನ್ನು ಡ್ರಾಮ ಈ ವರ್ಷದ ಅತಿ ದೊಡ್ಡ ಹಿಟ್ ಅನ್ನಿಸಿಕೊಲ್ಲಬಲ್ಲ ಚಿತ್ರ ಡ್ರಾಮ.. ಹಾಡುಗಳಿಂದ ಹಿಡಿದು.. ಡೈಲಾಗ್ಸ್.. ಡ್ರಾಮಾಟಿಕ್ ತಿರುವುಗಳು. ಪಾತ್ರಧಾರಿಗಳ ಆಕ್ಟಿಂಗ್.. ಅಲ್ಲಲ್ಲಿ ಹೌದು ಅನ್ನಿಸೋ, ತೀರಾ ಸಿಂಪಲ್ ಸಿಂಪಲ್ ಅನ್ನಿಸೋ ದೊಡ್ಡ ದೊಡ್ಡ ಸತ್ಯಗಳು.. ಟೋಟಲಿ ಹಿಟ್ ಅಷ್ಟೇ. ಯಶ್ ಗೆ ಖಂಡಿತ ಜೀವ ಕೊಟ್ಟ ಹೆಸರು ಕೊಟ್ಟ ಸಿನಿಮಾ.

 
ಇಂತಿಪ್ಪ ಭಟ್ಟರ ಅಮೋಘ ಅಭಿಮಾನಿಯಾದ ನಾವ್ಗಳು.. ಅವರ ಮತ್ತೋರ್ವ ಅತ್ಯದ್ಭುತಪೂರ್ವಭಿಮಾನಿ ರಾಘವರನ್ನು ನೋಡಿದ ಮೇಲೆ ನಮ್ಮೊಳಗೆ ಭಟ್ಟರ ಮೇಲೆ ಸಣ್ಣ ಮತ್ಸರದ ಬೀಜ ಬಿದ್ದು ಮೊಳಕೆಯೊಡೆದು ಮರವಾಗಿ ಬೆಳೆದದ್ದು ಯಾಕೆ ಅಂತ ಗೊತ್ತಾಗಿರಲಿಕ್ಕಿಲ್ಲ ನಿಮಗೆ.. ಹೇಳ್ತೀನಿ ಕೇಳಿ..!!

ಅಲ್ಲಾ ನಾವ್ಗಳು ಕೂಡ ಅವರ ಕಟ್ಟಾ ಅಭಿಮಾನಿ ಗಳೇ.. ಹಾಡುಗಳ ಅರಾಧಕರೆ.. ಮಾತುಗಳಿಗೆ ಮಸೋತವರೆ..!! ಆದ್ರೆ ಈಚೀಚೆಗೆ ಭಟ್ಟರು ಬರೆದದ್ದು ಯಾವ್ದು.. ರಾಘವ ಬರೆದದ್ದು ಯಾವ್ದು ಅಂತ ನಮ್ಮನ್ನ ನಾವೇ ಕನ್ಫ್ಯೂಷಿಯಸ್ ಲೆವೆಲ್ ಗೆ ಕನ್ಫ್ಯೂಸ್ ಮಾಡೋ ಆ ಬರಹಗಳು & ಅಂಥಾ ಬರಹಗಳನ್ನ ಬರೀ ರಾಘವನಿಂದ ಮಾತ್ರ ಬರೆಸ ಬಹುದಾದಂಥ ಒಂದು ಅತಿರಿಕ್ತ ವರವನ್ನ ಬರೀ ರಾಘವನಿಗೆ ಮಾತ್ರ ಕೊಟ್ಟ ಭಟ್ರು,, ನಮಗೆಲ್ಲ ತೀರಾ ಮೋಸ ಮಾಡಿ ಬಿಟ್ರು[ಅನ್ನಿಸ್ತಿದೆ]..!! ನಾವೆಲ್ಲಾ ಅವರ ಅಭಿಮಾನಿಗಳು ಅಂದ್ಮೇಲೆ.. ಎಲ್ರು ಒಂದೇ ಥರ ತಾನೇ ಇರ್ಬೇಕು..?? ಇದೇನು ಒಂದ್ ಕಣ್ಣಿಗೆ ಸುಣ್ಣ.. ಒಂದ್ ಕಣ್ಣಿಗೆ ಬೆಣ್ಣೆ ಹಚ್ಚೋದೇ ನಮ್ ಭಟ್ರು.. ;) ;) ಯಾಕಂದ್ರೆ ಭಟ್ಟರೇ ಬರೆದರೇನೋ ಅನ್ನಿಸುವಷ್ಟು.. ಭಟ್ಟರನ್ನ ಆವಾಹಿಸಿಕೊಂಡೇ ಬರೆದರೇನೋ ಅನ್ನುವಷ್ಟು ಎಫೆಕ್ಟ್ ನ ಆ ಚುರುಮುರಿ ಬರಹಗಳನ್ನ ಕಂಡ ನಮ್ಮಂತ ಭಟ್ಟರ ಅಭಿಮಾನಿ ಓದುಗರ ಹೊಟ್ಟೆಯೊಳಗಿನ [ಹೊಟ್ಟೆ ಉರಿಯ] ಸಂಕಟ ಹೊಟ್ಟೆಯೊಳಗೆ ನಿಲ್ಲದೆ ಹೊರ ಬರ್ತಾ ಇರೋ ಪರಿ ಇದು..!! ನಿಮಗೆ ಹೊಗೆ ಹೊರಗೆಲ್ಲೂ ಕಾಣಿಸಿರ್ಲಿಕ್ಕಿಲ್ಲ.. ಆದ್ರೆ ಒಳಗಡೆ ಧಗೆ ಮಾತ್ರ ಆರ್ತಾ ಇಲ್ಲ..!!

ರಾಘವ ಈಗ ತೊಡೆ ತಟ್ಟಿ ಹೇಳ್ತೀನಿ ಕೇಳು .. ಹೌದು ನೀನಂದ್ರೆ ನನಗೆ ಒಂದಿಡೀ ರಾಜ್ಯವನ್ನ ಸುಟ್ಟು ಹಾಕೋ ಅಷ್ಟು ಹೊಟ್ಟೆ ಉರಿ.. ನಿನ್ ಬರಹ ಗಳನ್ನ ಕಂಡ್ರೆ.. :) :) ನೀನೇನಾದ್ರೂ ಹುಡುಗಿ ಆಗಿದ್ದಿದ್ರೆ ಬಹುಷಃ ಮಂಡಿಯೂರಿ ರೋಸ್ ಕೊಡ್ತಿದ್ದೆ.. ಹುಡುಗ ಆಗಿ ಹುಟ್ಟಿ ಬಿಟ್ನಲ್ಲ ಆ ತಪ್ಪಿಗೆ ನಿನ್ ಮುಂದೆ ನಿಂತು ಬರೀ ಪೋಸ್ ಕೊಡೋಕಷ್ಟೇ ಸಾಧ್ಯ.. ನಗಬೇಡ.. ಹೊಟ್ಟೆ ಉರಿ ಇನ್ನು ಜಾಸ್ತಿ ಆಗ್ತಾ ಇದೇ..!!

ರಾಘು ನೀನು ಬರೆಯೋದೆಲ್ಲ ನಿನ್ ರಗಳೆಗಳಾ..?? ಅಥವಾ ಭಟ್ಟರ ಬರವಣಿಗೆ ಎದುರು ನೀನ್ ನಿಂತು ಸಾರ್ತಾ ಇರೋ ರಣ ಕಹಳೆ ಗಳಾ ಅನ್ನೋದೇ ದೊಡ್ಡ ಅನುಮಾನ..?? ಅದು ನಿಜಾನೆ.. ತೀರಾ ಇತ್ತೀಚಿಗೆ ನಮ್ ಭಟ್ರು ಸ್ವಲ್ಪ ಸೋತಿದಾರೆ ಅನ್ನಿಸ್ತು [ಅನ್ಸೋದೆನು ನಿಜಾನೆ..!!]. ಆದ್ರೆ ಈಗ ಹೇಳ್ತೀನಿ ಇದರಲ್ಲಿ ಸಮ್ ತಿಂಗ್ ಸಮ್ ತಿಂಗ್ ಇದೇ.. ಯಾರದೋ ಕೈವಾಡ ಇದೇ.. ಅವ್ರು ಸೋಲ್ತಿಲ್ಲ.. ಸೋಲಿಸ್ಪಡ್ತಾ ಇದಾರೆ!! ಇದರ ಪರಿಣಾಮ ವಾಗಿ ನೀನೇನಾದ್ರೂ ಮುಂದೆ ಭಟ್ಟರ ಥರ ದೊಡ್ಡ ವ್ಯಕ್ತಿ ಆದ್ಯೋ ನಾವ್ ಸುಮ್ನಿರೋಲ್ಲ ನೋಡು.. ;) ;) ;)

ರಾಘು ನಿನ್ ಬ್ಲಾಗ್ ನೋಡಿದೆ.. ಹೊಟ್ಟೆ ಉರಿ ತಡೆಯೋಕಾಗದ ನೋವಲ್ಲಿ ಇಷ್ಟುದ್ದ ಬರೆದು ಬಿಟ್ಟೆ ಕ್ಷಮೆ ಇರಲಿ.. ;) ;) ಏನ್ ಬರಿತಿಯಪ್ಪ..!! ಅಬ್ಭಾ.. ಅಲ್ಲಿ ಇಲ್ಲಿ ಆಗೊಂದು ಈಗೊಂದು ನೀನ್ ಹಾಕೋ ಸಣ್ಣ ಸಣ್ಣ ಕಾಮೆಂಟ್ಸ್ ಗೇನೇ ನಿನ್ ಮೇಲೆ ಹೊಟ್ಟೆ ಉರಿ ಬೆಳೆಸ್ಕೊಂಡು ಮುಚ್ಚಿಟ್ಕೊಂಡು ಹಲ್ಕಿರಿತಾ ಮಾತಾಡ್ತಿದ್ದ ನನಗೆ.. ನಿನ್ ಬ್ಲಾಗ್ ತೋರ್ಸಿ.. ಎಲ್ಲೋ ಸಣ್ಣಗೆ ಹೋಗೆ ಆಡ್ತಿದ್ದ ಹೊಟ್ಟೆ ಉರಿಯ ಹೋಗೆ ಧಿಡೀರ್ ಅಂತ ಕಾಡ್ಗಿಚ್ಚಿನ ಲೆವೆಲ್ ಗೆ ವಿಸ್ತರಿಸಿದ ನಿನ್ ಬರಹ ಕಂಡು ಇನ್ನೇನು ಹೇಳೋಕಾಗ್ದೆ ತೆಪ್ಪಗೆ ಕೂರೋದೊಂದೇ ನಮ್ ಪಾಲಿಗೆ ಈಗ ಉಳ್ಕೊಂಡಿರೋ ಕೆಲಸ.. Awsome ರಾಘು.. ನಿನ್ ಬರಹಗಳು ಮೈಂಡ್ blowing .. ನಾನ್ ನಿಜವಾಗಲು ಸಂತೋಷ ಪಡ್ತೀನಿ.. To have a Friend like U. :) ಅಡ್ಡ ಬಿದ್ದೆ ಧಣೀ ನಿನ್ ಪಾಂಡಿತ್ಯಕ್ಕೆ.. ಏನೋ ಬಡುವ್ರು ಅಲ್ಲೋ ಇಲ್ಲೋ ತಿಳೀದೇ 2 ಮಾತು ದೊಡ್ಡದಾಗಿ ಆಡಿದ್ರೆ ಉಗುಳಿನ ಜೊತೆ ಹಾಗೆ ನುಂಗಿ ಕೊಂಡು ಅನ್ನೋದು ಅನ್ನೋದು ನಮ್ಮ ಮನವಿ..

ವೆಲ್.. ಹಸ್ಕೊಂಡವನ ಎದುರು ಪಂಚ ಪರಮಾನ್ನ ಇಟ್ಟಂಗೆ ಇಟ್ಟೆ ನೋಡು ನಿನ್ ಬ್ಲಾಗ್ ನ.. ಭಟ್ರು ಕನಸಲ್ಲಿ ಬಂದದ್ದು & ನಮ್ ಭಾವ ಸಿಂಚನ ಕುರಿತಾದ ಎರಡೂ ಬರಹಗಳೂ.. ಈಗ್ಲೂ ಅನ್ ಬಿಲೀವಬಲ್ ಅದನ್ನ ನೀನೇನಾ ಬರದಿದ್ದಾ ಅಂಥಾ..?? ನೆನಪಿರಲಿ ಇನ್ಮೇಲೆ ಇದೇ ಥರದ ಊಟ ಹಾಕೋದಿದ್ರೆ ಮಾತ್ರ ಊಟ ಹಾಕು.. ಇಲ್ದಿದ್ರೆ ನಿಮ್ಮನೆ ಊಟವೇ ಬೇಡ ಅಷ್ಟೇ.. :) :)

ಎಲ್ಲಾದ್ರು ಬಾಯ್ತಪ್ಪಿ.. ಆಯಾ ತಪ್ಪಿ.. ಮನಸಿನ ಹಿಡಿತ ತಪ್ಪಿದ ಮಾತುಗಳು ಕಂಡು ಬಂದಿದ್ದಲ್ಲಿ ಕ್ಷಮೆ ಇರಲಿ ರಾಘವ.. ಬರವಣಿಗೆಯ ರಭಸದಲ್ಲಿ ಅಲ್ಲಿ ಇಲ್ಲಿ ಎಡವಿರಬಹುದು ಕ್ಷಮೆ ಇರಲಿ.. ನಿನ್ನಿಂದ ಇನ್ನು ಹೆಚ್ಚೆಚ್ಚು ಬರಹಗಳ ನಿರೀಕ್ಷೆಯಲ್ಲಿಹ ನಿನ್ನ ನಿರಂತರಾನಂತಪೂರ್ವ ಅಭಿಮಾನಿ..
 
- ಸತೀಶ್ ನಾಯ್ಕ್
ಭದ್ರಾವತಿ.
 
ಮಾತುಗಳನ್ನ ಸರಾಗವಾಗಿ ಪದಕ್ಕಿಳಿಸಿ ಬಿಡೋ ಅಪರೂಪದ ಪ್ರತಿಭೆ ರಾಘವ ಚಂದ್ರನ ಬಗ್ಗೆ ಸುಮಾರು ಐದಾರು ತಿಂಗಳ ಹಿಂದೆ ರಾಘವನಿಗೆ ನಾ ಬರೆದ ಸಣ್ಣ ಪತ್ರವಿದು. ನೀವೊಮ್ಮೆ ಅವನ ಬರಹಗಳನ್ನ ಕಂಡದ್ದೇ ಆದರೆ ಖಂಡಿತ ನಿಮ್ ಕೈಲಿ ಅವನನ್ನ ಇಷ್ಟ ಪಡದೆ ಇರೋಕೆ ಸಾಧ್ಯವೇ ಇಲ್ಲ. ಅಷ್ಟು ಕ್ಯಾಚೀ & ಸಿಹಿ ಸಿಹಿಯ ಬರವಣಿಗೆ ಅವನದ್ದು. ಅಷ್ಟಿದ್ರೂ.. ನಾನೇನು ಅಲ್ಲ.. ನನಗೇನು ಗೊತ್ತಿಲ್ಲ.. ನಿಮ್ಮುಂದೆ ನಾವ್ಯಾವ ಗಿಡದ ತೊಪ್ಪಲು ಅನ್ನೋ ಮಹಾನ್ ಗುಣ ನಮ್ ರಾಘವನದ್ದು..!! ನಾ ಬ್ಲಾಗ್ ಸೃಷ್ಟಿಸಲು ಏಕ ಭಗೀರಥನಂತೆ ಕೂತು ತಪಸ್ಸು ಮಾಡಿ ನನ್ನ ಮನವೊಲಿಸಿ.. ಇಂದು ಬ್ಲಾಗ್ ಬರೆಯಲು ನನ್ನ ಅಣಿ ಮಾಡಿಹ ರಾಘವನ ಮೇಲಣ ಅಖಂಡ ಪ್ರೀತಿಗಾಗಿ ಈ ಬರಹವನ್ನ ಇದನ್ನ ನಿಮ್ಮೆಲ್ಲರ ಬಳಿ ಕೂತು ಹಂಚಿಕೊಳ್ಳುವ ಮನಸಾಯಿತು.
 
ರಾಘವನ ಸವಿ ಸವಿ ರಗಳೆಗಳನ್ನ ಓದಲು ಈ ತಾಣಕ್ಕೆ ಭೇಟಿ ಕೊಡಿ. http://raghavana-ragalegalu.blogspot.com/ ಖಂಡಿತ ನಿಮ್ಮ ಸಮಯ ವ್ಯರ್ಥವಾಗದು ಅನ್ನೋ ಭರವಸೆ ನಾನು ಕೊಡ್ತೀನಿ. ಸಣ್ಣ ಸಣ್ಣ ಕೀಟಲೆ ಮಾತುಗಳಿಂದಲೇ ದೊಡ್ಡ ದೊಡ್ದದ್ದನ್ನ ಅರ್ಥ ಮಾಡಿಸುತ್ತಾ ಸಾಗೋ ಅವನ ಕಲೆ ಅವನಿಗಷ್ಟೇ ಸಿದ್ಧಿ. ಯಾರ ಕಣ್ಣಿಗೂ ಬೀಳದ ಈ ಅನನ್ಯ ಪ್ರತಿಭೆ.. ಸಿಕ್ಕ ನಾಲ್ಕು ಜನರ ಪ್ರೀತಿಗ ಸದಾ ಹಾತೊರೆಯುವ ಅವನ ಹಿಡಿ ಜೀವಕ್ಕೆ.. ಅವನ ಹಂಬಲಕೆ.. ಅವನ ಸಾಗರದಾಳದ ಪ್ರೀತಿಗೆ ನಾನೇನು ಗೀಚಿದರೂ ಕಮ್ಮಿಯೇ..
 
ನಿಮ್ಮ ಅಮೂಲ್ಯ ಸಮಯ & ಸಹನೆಯ ಓದಿಗೆ ನನ್ನದೊಂದು ಸಲಾಂ. ಬ್ಲಾಗ್ ಕಡೆ ಪುನಃ ಪುನಃ ಬರ್ತಾ ಇರಿ. ಧನ್ಯವಾದಗಳು.