Thursday 21 February 2013

ಹಟವೋ.. ಅದು ಚಟವೋ.. ಕೊನೆಗದು ಕಾಡಿಸುವುದು ದಿಟವೋ..!!

ಹನ್ನೊಂದೂವರೆ ರಾತ್ರಿ..!!

ಊರಿಗೆ ಬಂದ ನಾನು ತಿರುಗಿ ಬೆಂಗಳೂರಿಗೆ ಹೊರಡುವುದಾದರೆ ಯಾವತ್ತಿಗೂ ಅದೇ ಸುಮಾರಿಗೆ ಹೊರಡೋದು..!! ಪ್ರವೀಣ ನ ಮದುವೆ ಮುಗಿಸ್ಕೊಂಡು ಊರಿಗೆ ಬಂದಿದ್ದ ನಾನು, ಅವತ್ತು ಕೂಡಾ ಅದೇ ಸಮಯಕ್ಕೆ ಬೆಂಗಳೂರಿಗೆ ಹೊರಟಿದ್ದೆ. ಭದ್ರಾವತಿ ಪಟ್ಟಣದಿಂದ ಸುಮಾರು ಮೂರು ಕಿ.ಮೀ ದೂರದಲ್ಲಿನ ಚಿಕ್ಕ ಹಳ್ಳಿಯಾದ ನಮ್ಮೂರಿನ ಆಸು ಪಾಸಿನಲ್ಲಿ ಆ ಸಮಯಕ್ಕೆ ರಸ್ತೆಯಲ್ಲಿ ಸಣ್ಣ ಹುಳುವನ್ನ ನೋಡುವುದೂ ಕಷ್ಟ. ವಿಶ್ವರೂಪಂ ಚಿತ್ರದ ವಿವಾದಕ್ಕೆ ಭರ್ಜರಿಯಾಗಿಯೇ ತಲ್ಲಣಿಸಿದ ಭದ್ರಾವತಿ ಮೂರು ದಿನ ಅಕ್ಷರ ಸಹ ಸಾಧಾರಣ ಚಟುವಟಿಕೆ ಕೂಡಾ ಇಲ್ಲದೆ ಕಳಾಹೀನವಾಗಿತ್ತು. ಬಹಳ ಹಿಂದಿನಿಂದಲೂ ನಮ್ಮೂರಿಗಿದು [ಭದ್ರಾವತಿಗೆ] ಮಾಮೂಲಿ.  ನಮ್ಮೂರಿನ ದಾರಿ ಭದ್ರಾವತಿ ಕಡೆಗೆ ಸರಿಯಾಗಿ ಒಂದು ಕಿ.ಮೀ ದೂರಕ್ಕೆ ರಾಷ್ಟ್ರೀಯ ಹೆದ್ದಾರಿ ೨೦೬ ನ್ನು ಸೇರಿ ಕೊಳ್ಳುತ್ತದೆ. ಶಿವನಿ ಕ್ರಾಸ್ ಅನ್ನೋ ಆ ಜಂಕ್ಷನ್ ನಲ್ಲಿ ಕಳೆದ ಆರು ದಿನಗಳಿಂದ ಚೆಕ್ ಪೋಸ್ಟ್ ನಂಥ ವ್ಯವಸ್ಥೆ ಮಾಡಿಕೊಂಡು ಪೋಲಿಸ್ ತಂಡ, ರಾತ್ರಿಯಿಂದ ಹಗಲಿನ ತನಕ ಗಸ್ತು ತಿರುಗುತ್ತಿತ್ತು..!! ವಿಶ್ವರೂಪಂ ವಿವಾದದ ಪರಿಣಾಮ ಭದ್ರಾವತಿಯ ಹೊರವಲಯದ ಎಲ್ಲಾ ಕಡೆ ಈ ಗಸ್ತು ತಿರುಗುವಿಕೆ ಪೊಲೀಸರಿಗೆ ಒಂದು ವಾರದ ಪರಿಪಾಟವಾಗಿತ್ತು. ಅಂದಿನ ದಿನ ರಾತ್ರಿ ಕೂಡಾ ಆ ಜಂಕ್ಷನ್ ನಿಂದ ಹಾಯ್ದು ಭದ್ರಾವತಿಯ ಕಡೆ ಹೋಗುತ್ತಿದ್ದ ಪ್ರತಿಯೊಂದು ವಾಹನದ & ಸವಾರರ ಕುಲ, ಗೋತ್ರ, ಜಾತಕಗಳ ಪರಿಶೀಲನೆ ನಡೆಸಿ.. ಸವಾರರ ಬಾಯಿಂದ ಒಮ್ಮೊಮ್ಮೆ ಊದಿಸಿ ಕೊಳ್ಳುತ್ತಿದ್ದರು ಪೊಲೀಸರು..!!


ಜಂಕ್ಷನ್ ನಲ್ಲಿ ಪೊಲೀಸರು ಇರೋದನ್ನ ಸುಮಾರು ಇನ್ನೂರು ಮೀಟರ್ ಹಿಂದೇನೆ ನೋಡಿ ಬೈಕ್ ನಿಲ್ಲಿಸಿದ ನಾವು, ಬೈಕ್ ನಲ್ಲಿದ್ದ ಮೂವರ ಪೈಕಿ ಒಬ್ಬರು ಆ ಚೆಕ್ ಪೋಸ್ಟ್ ದಾಟುವ ತನಕ ನಡಕೊಂಡು ಹೋಗುವುದೆಂದು ತೀರ್ಮಾನಿಸಿ ಕಡೆಗೆ ಬ್ಯಾಗ್ ಹೊತ್ತು ನಾನೇ ನಡೆಯಲು ಶುರು ಮಾಡಿದೆ. ಮೋಹನ ಮತ್ತು ಸಂತು ಇಬ್ಬರು ಬೈಕ್ ಸ್ಟಾರ್ಟ್ ಮಾಡಿ ಹೊರಟರು. ಅವರನ್ನು ಚೆಕ್ ಪೋಸ್ಟ್ ನಲ್ಲಿ ನಿಲ್ಲಿಸಿದ ಪೊಲೀಸರು ಅವರ ಪೂರ್ವಾಪರ.. ಇತಿಹಾಸ.. ಭೂಗೋಳಗಳನ್ನು ವಿಚಾರಿಸುವುದರೊಳಗಾಗಿ ನಾನು ಅವರನ್ನ ಕೂಡಿಕೊಂಡೆ. ನಾನು ಅವರನ್ನ ನೋಡೇ ಇಲ್ಲವೇನೋ ಅನ್ನುವಂತೆ ಅವರನ್ನ ದಾಟಿ ನಡೆದು ಹೋಗಲು ಯತ್ನಿಸಿದಾಗ, ನನ್ನದೇ ವಯಸ್ಸಿನ ಕಾನ್ಸ್ಟೇಬಲ್ ನನ್ನನ್ನ ತಡೆದು ನಿಲ್ಲಿಸಿ.. ಬಾರಪ್ಪ ರಾಜ, ಇಷ್ಟ್ ಹೊತ್ನಲ್ಲಿ ಒಬ್ನೇ ಎಲ್ಲಿಗೆ ಹೊಂಟೀ.. ಬ್ಯಾಗ್ ಒಳಗೆ ಏನು ಅಂತೆಲ್ಲ ಕೇಳಿದ..!! ನಿಂತೆ.. ನನಗೇನು ಪೋಲೀಸರನ್ನ ಕಂಡು ಗಾಬರಿಯಾಗಲಿಲ್ಲ. ನನ್ನ ಜೊತೆ ಓದಿದ.. ಕೂಡಿ ಬೆಳೆದ.. ಹತ್ತಿಪ್ಪತ್ತಕ್ಕೂ ಹೆಚ್ಚು ಗೆಳೆಯರು ಇವತ್ತು ಪೋಲೀಸ್. ಹಲವಾರು ಸಂಭಂಧಿಕರು ಕೂಡ. ಅದರಲ್ಲಿ ನಮ್ಮೂರು ಭದ್ರಾವತಿಯಲ್ಲೇ ಕೆಲಸದಲ್ಲಿರುವ ಸಂದೀಪ, ಮಂಜು, ಪ್ರಕಾಶ, ವಸಂತ ಇವರನ್ನೆಲ್ಲ ನೋಡುವ ಸಲುವಾಗಿ ಊರಿಗೆ ಹೋಗಿದಾಗಲೆಲ್ಲ ಪೋಲೀಸ್ ಸ್ಟೇಷನ್ ಗೂ ಹೋಗಿ ಬರುತ್ತಿದ್ದ ನನಗೆ ಎಸ್ಸೈ ವರೆಗೂ ಪರಿಚಯವಿತ್ತು. ಅದೂ ಅಲ್ಲದೆ ಸುಮಾರು ಆರು ವರ್ಷಗಳ ಹಿಂದೆ ನಗರದ ಎಲ್ಲಾ ಸರ್ಕಾರಿ ಕಚೇರಿಗಳಿಗೂ ಪೇಪರ್ ಹಾಕುತ್ತಿದ್ದ ನನಗೆ ಎಲ್ಲಾ ಪೋಲೀಸ್ ಸ್ಟೇಶನ್ ಗಳ ಪರಿಚಯವೂ ಇತ್ತು. ಹಾಗಾಗಿ ಥರಗುಟ್ಟದೆ ಸ್ಥಿರವಾಗಿಯೇ ಆ ಕಾನ್ಸ್ಟೇಬಲ್ ಬಳಿ ನಡೆದೆ.

ಸಂತು ಮತ್ತು ಮೋಹನರನ್ನು ಇನ್ನೂ ಏನೇನೋ ಕೇಳುತ್ತಲೇ ಇದ್ದ ಇನ್ನೊಬ್ಬ ಕಾನ್ಸ್ಟೇಬಲ್ ನನ್ನೆಡೆಗೆ ತಿರುಗಿ ನೀವ್ ಮೂರು ಜನ ಒಟ್ಟಿಗೆ ಬಂದಿದ್ದು.. ನೀನು ಅಲ್ಲಿಳಿದು ಇಲ್ಲೇ ತನಕ ನಡಕೊಂಡು ಬಂದದ್ದು ಎಲ್ಲಾ ನಾನ್ ನೋಡಿಡ್ನಪ್ಪ.. ನಂ ಹತ್ರಾನೆ ನಾಟಕ ಮಾಡ್ತೀರೇನು ಅಂದ..!! ನಾಟಕ ಏನಲ್ಲ ಸಾರ್ ನಿಮಗೆ ಮತ್ತು ನಿಮ್ ಕೆಲ್ಸಕ್ಕೆ ಮರ್ಯಾದೆ ಕೊಡೊ ಸಲುವಾಗಿಯೇ ಮೂರು ಜನ ಒಟ್ಟಿಗೆ ಬರ್ತಿದ್ದ ನಾವು ಹೀಗೆ ಬಿಡಿ ಬಿಡಿಯಾಗಿ ಬಂದದ್ದು. ಒಂದು ಬೈಕ್ ಮೇಲೆ ಮೂರು ಜನ ಬರೋ ತಪ್ಪು ಮಾಡೋದೇ ತಪ್ಪು.. ಹಾಗೆ ಮಾಡಿ ಕಾನೂನು ಮುರಿಯೋದು ಕೂಡಾ ತಪ್ಪು.. ಆದ್ರೆ ಅಂಥಹ ತಪ್ಪುಗಳನ್ನ ರಾಜಾರೋಷವಾಗಿ ಮಾಡೋದಿದೆಯಲ್ಲ ಅದು ಮಹಾತಪ್ಪು. ಆ ಮಹಾ ತಪ್ಪು ನಿಮ್ಮೆದುರಿಗೆ ಆಗದೆ ಇರಲಿ ಅನ್ನೋದಕ್ಕಾಗಿನೇ ನಾನು ಇಳಕೊಂಡು ನಡ್ಕೊಂಡು ಬಂದದ್ದು ಸಾರ್.. ನಾನಂದೆ.  ಪರ್ವಾಗಿಲ್ಲಲೇ ತಪ್ಪು, ಸರಿ, ಕಾನೂನಿನ ಬಗ್ಗೆನೇ ಮಾತಾಡ್ತೀ ನೀನು ಭಾರೀ ಹುಶಾರಿದ್ದಿಯಾ.. ಎಲ್ಲಿಗೆ ಹೋಗ್ತಿದಿರ ಮೂರು ಜನ ಅಂದ ಆ ಪೋಲೀಸ್. ಸಾರ್ ನಾನು ಬೆಂಗಳೂರ್ ಹೋಗ್ತಾ ಇದೀನಿ ಅದ್ಕೆ ನನ್ನನ್ನ ಡ್ರಾಪ್ ಮಾಡೋಕೆ ಅಂತ ಇವರಿಬ್ರು ಜೊತೆಗೆ ಬಂದರಷ್ಟೇ. ಇವ್ನು ನನ್ ತಮ್ಮ ಸಂತೋಷ್.. ಇವ್ನು ನಮ್ ಅತ್ತೆ ಮಗ ಮೋಹನ ಅಂದೇ. ಬೆಂಗಳೂರಾ..?? ಟ್ರೈನ್ ಹೋಗಿ ಆಗ್ಲೇ ಒಂದು ಘಂಟೆ ಆಯ್ತು, ನೀ ಈಗ ಹೊಂಟೀ ಏನು ಬೆಂಗಳೂರಿಗೆ.. ಅಂತ ಕೇಳಿದ ಒಬ್ಬ. ಸಾರ್, ನಾ ಬಸ್ ನಲ್ಲಿ ಹೋಗ್ತೀನಿ ಸಾರ್. ರಿಸರ್ವೇಶನ್ ಇಲ್ಲದ ಟ್ರೈನ್ ನಲ್ಲಿ ಹೋಗೋದು ಅಂದ್ರೆ ರಾಮಾಯಣ. ಬೆಳಿಗ್ಗೆ ಎದ್ದು ಆಫೀಸಿಗೆ ಬೇರೆ ಹೋಗ್ಬೇಕು ಅದ್ಕೆ. ಸರಿ ಸರಿ, ನಿನ್ನ ಬಿಡೋಕೆ ಇಬ್ರು ಯಾಕೋ ಮಾರಾಯ..?? ಯಾರಾದ್ರು ಒಬ್ರು ಆಗಿದ್ರೆ ಸಾಕಿತ್ತಲ್ಲೇನು ಅಂದ ಆ ಪೋಲಿಸ್. ಸಾರ್ ಈಗ ನಾಲ್ಕೈದು ದಿನ ಹಿಂದೆ ಅಷ್ಟೇ ಭದ್ರಾವತೀಲಿ ಅಷ್ಟು ದೊಡ್ಡ ರಾಮಾಯಣ ಆಗಿದೆ. ಇಂಥಾ ಟೈಮ್ ನಲ್ಲಿ ಒಬ್ಬೋಬ್ರನ್ನೇ ಮನೆ ಇಂದ ಕಳ್ಸೋಕೆ  ಮನೆಯೋರಿಗೂ ಸಂಕಟ. ಅದ್ಕೆ ಇವರಿಬ್ರನ್ನು ಕಳಿಸಿ ಕೊಟ್ಟಿದಾರೆ ಮನೇಲಿ
ಅಂದೆ. 

ಹುಮ್ಮ್.. ಏನ್ ಕೆಲಸ ಮಾಡ್ತೀ ಬೆಂಗಳೂರ್ ನಲ್ಲಿ ಅಂದ ಮತ್ತೊಬ್ಬ ಪೋಲಿಸ್. ನಾನಿರೋದು ತಮಿಳುನಾಡಲ್ಲಿ ಸಾರ್. ಬೆಂಗಳೂರ್ ಇಂದ ಎಂಭತ್ತು ಕಿ.ಮೀ ಆಗತ್ತೆ. ಕ್ರಿಷ್ಣಗಿರಿ ಹತ್ತಿರ ಹತ್ತಿರ ಅಂದೆ. ತಮಿಳುನಾಡಲ್ಲಾ..?? ಅಲ್ಲೇನ್ ಮಾಡ್ತೀಯ ಅಂದ್ರು ಅವರಿಬ್ರು ಸೇರಿ. ನಂದು ಪವರ್ ಗ್ರಿಡ್ ಅನ್ನೋ ಒಂದು ಸೆಂಟ್ರಲ್ ಗೌರ್ನಮೆಂಟ್ ಕಂಪನಿ ಸಾರ್. ಇಡೀ ಭಾರತದಲ್ಲಿ ಎಲ್ಲಿ ಬೇಕಾದ್ರೂ ಪೋಸ್ಟಿಂಗ್ ಹಾಕ್ತಾರೆ.. ನನ್ನ ಕರ್ಮ ನನ್ನ ಎತ್ಕೊಂಡು ಹೋಗಿ ಅಲ್ಲಿ ಎಸೆದಿದಾರೆ.. ಬೇರೆಲ್ಲೂ  ಜಾಗನೆ ಸಿಕ್ಕಿರಲಿಲ್ಲ ಅವ್ರಿಗೆ ಅಂದೇ. ನನ್ನ ಕಂಪನಿಯ ಪೂರ್ವಾ ಪರವನ್ನೂ ವಿಚಾರಿಸಿದ್ರು. ನಾನು ನನ್ನ ಕಂಪನಿ ಐಡೀ ಕಾರ್ಡ್ ತೋರಿಸಿದ ಮೇಲೆ ಅವರು ನಿರುಮ್ಮಳರಾದರು ಅನ್ನಿಸತ್ತೆ. ಅಲ್ಲಿಯ ತನಕ ಹೋಗಲೇ.. ಬಾರಲೇ ಅನ್ನುತ್ತಿದ್ದ ಅವರು ಅಲ್ಲಿಂದ ನನ್ನ ಸಾರ್ ಅನ್ನೋಕೆ ಶುರು ಮಾಡಿದ್ರು..!! ನನಗೂ ಅಲ್ಲಿಯ ತನಕ ಆತ್ಮೀಯವೇ ಅನ್ನಿಸಿದ್ದ ಅವರ ಜೊತೆಗಿನ ಮಾತುಕತೆಯ ಆತ್ಮೀಯತೆ, ಸಾರ್ ಅನ್ನೋ ಪದ ಬಳಕೆ ಇಂದ ಸ್ವಲ್ಪ ದೂರ ಸರಿದಿತ್ತು. ನಾನು ಪೋಲಿಸ್ ಇಲಾಖೆಯಲ್ಲಿನ ನನ್ನ ಗೆಳೆಯರ ಮತ್ತು ಬಂಧುಗಳ ಕುರಿತಾಗಿ ಹೇಳುತ್ತಾ ಅವರಿಗೆ ಇನ್ನಷ್ಟು ಹತ್ತಿರವಾಗುವ ಪ್ರಯತ್ನ ಮಾಡಿದೆ. ಅವರೂ ನಂಗೆ ಅವ  ಗೊತ್ತು.. ಇವ ಗೊತ್ತು ಅಂತ ಒಂದು ನಾಲ್ಕೈದು ಜನರ ಹೆಸರನ್ನ ಗಮನಕ್ಕೆ ತಂದು ಕೊಟ್ಟ ಮೇಲೆ, ನಮ್ಮೀರ್ವರುಗಳ ನಡುವೆ ಭಿನ್ನಾಭಿಪ್ರಾಯಕ್ಕೆ ಅಥವ ತರ್ಕಕ್ಕೆ ಇನ್ನು ನೆಲೆ ಇಲ್ಲವೆನಿಸಿ ಹೊರಡಲು ಮುಂದಾದೆ. ಹುಷಾರಾಗಿ ಹೋಗಿಬನ್ನಿ, ಹ್ಯಾಪೀ ಜರ್ನಿ ಅಂತ ಅವರೇ ವಿಶ್ ಮಾಡಿ ಬೀಳ್ಕೊಟ್ಟರು..!! ಅವರ ಮುಂದೆಯೇ ನಾವು ಮೂರು ಜನ ಮತ್ತೆ ಬೈಕ್ ಹತ್ತಿ ಹೊರಟೆವು. ನನ್ನದೇ ವಯಸ್ಸಿನ ಆ ಹುಡುಗರ ಕಾರ್ಯ ವರ್ಚಸ್ಸಿನ ಬಗ್ಗೆ.. ಅಧಿಕಾರದ ಮದವಿಲ್ಲದ ಅವರ ನಡತೆಯ ಬಗ್ಗೆ.. ಸಾಮಾನ್ಯನೊಡನಿನ ಅವರ ಸಾಮಾನ್ಯ ವರ್ತನೆ ಬಗ್ಗೆ ಅವರಿಬ್ಬರ ಮೇಲೆ ವಿಶೇಷ ಅಭಿಮಾನವೊಂದು ಮೂಡಿ ತಿರುಗಿ ಅವೆಡೆಗೆ ನೋಡುತ್ತಾ ಸಣ್ಣದಾಗಿ ನಕ್ಕು ಹೇಳಿದೆ.. ಇನ್ನೆರಡು ತಿಂಗಳು ಬಿಟ್ಟು ಮತ್ತೆ ಬರ್ತೀನಿ ಸಾರ್.. ಆಗಲೂ ಇಲ್ಲೇ ಇರಿ.. ನಾವು ಮತ್ತೆ ಸಿಗೋಣ ಅಂತ ಚಟಾಕಿ ಹಚ್ಚಿಟ್ಟೆ. ಅವರಿಬ್ಬರೂ ನಕ್ಕದ್ದು ಕಾಣಿಸಿತು.. ಶಬ್ದ ಕೇಳಿಸಲಿಲ್ಲ.

*   *   *   *   *   *   *   *   *   *   *   *   *   *   *   *   *   *   *   *   *   *   *   *   *   *   *   *   *   *   *   *   *
 

 ಬಸ್ ಸ್ಟಾಂಡ್ ಗೆ ಬಂದು ನೋಡಿದರೆ ನಾನು ತಲೆ ಸುತ್ತಿ ಬೀಳುವುದೊಂದೇ ಬಾಕಿ.. ಅಷ್ಟು ಜನ..!! ಅಷ್ಟು ಕಿಕ್ಕಿರಿದು ತುಂಬಿತ್ತು ಕೆ ಎಸ್ ಆರ್ ಟೀ ಸೀ ಬಸ್ ಸ್ಟಾಂಡಿನ ಮುಂಭಾಗ. ಎಲ್ಲರೂ ಬೆಂಗಳೂರು ಹೋಗುವವರೇ ನನ್ನಂತೆಯೇ ಬಸ್ಸಿಗಾಗಿ ಕಾಯುತ್ತಿರುವವರೇ. ಬೆಂಗಳೂರು ಕಡೆಗೆ ಸರಾಸರಿ ಐದು ನಿಮಿಷಕ್ಕೊಂದು ಬಸ್ಸು ಬರುತ್ತಿದ್ದರು ಜನರ ಸಂಖ್ಯೆ ಮಾತ್ರ ಕೊರೆಯುತ್ತಲೇ ಇಲ್ಲ. ಭದ್ರಾವತಿಯ ಹಣೆ ಬರಹ ಯಾವತ್ತಿಗೂ ಹೀಗೆ. ನನಗದರ ಪರಿಚಯವಿದೆ, ಅಭ್ಯಾಸವೂ ಇದೆ. ನಾನು ಬಸ್ ಸ್ಟಾಂಡ್  ಹೊರ ಭಾಗದ ಪ್ರೈವೇಟ್ ಬಸ್ಸುಗಳತ್ತ ಮುಖ ಮಾಡಿದೆ. ಅಲ್ಲೂ ಅದೇ ಹಣೆಬರಹ. ರಶ್ಶೊ.. ರಶ್..!! ಸರಿ ಒಂದ್ಸಾರಿ ಕ್ಯಾಶುಯಲ್ ಆಗಿ ವಿಚಾರಿಸಿ ನೋಡುವ ಅಂತ ವಿಚಾರಿಸಿದೆ. ಕುಕ್ಕೇ ಶ್ರೀ ಬಸ್ಸು.. ಸೆಮಿ ಸ್ಲೀಪರ್.. ಟಿಕೆಟ್ ಬೆಲೆ ಇನ್ನೂರೈವತ್ತು. ಬಸ್ಸಿನ ಕೊನೆಯ ಸಾಲಿನ ಸೀಟು..!! ಒಂದೇ ಒಂದು ಖಾಲಿ ಇದೆ ನೀವು ಹತ್ತಿ ಕೂತರೆ ಬಸ್ ಹೊರಡ್ತಾ ಇರತ್ತೆ ಅಂದ ಕಂಡಕ್ಟರ್. ಕೊನೆ ಸಾಲು ಅಂದ ಕೂಡ್ಲೇ ಅದರ ಸಹವಾಸವೇ ಬೇಡ ಅನ್ನಿಸಿ ಅವರಿಗೆ ಸರಿ ಪರವಾಗಿಲ್ಲ ಬಿಡಿ, ಕೊನೆ ಸಾಲಾದ್ರೆ ಬೇಡ ಅಂತ ಹೇಳಿ ಹಿಮ್ಮುಖವಾಗಿ ಬರೋನಿದ್ದೆ.. ತಕ್ಷಣ ಅವ ಕೂಗಿ ನೋಡಿ ಸಾರ್ ಇರೋದೇ ಅದೊಂದು, ನೀವ್ ಬಂದ್ರೆ ಹೋಗ್ತಾ ಇರೋದೇ ಕೆಲಸ.. ಸಸ್ಪೆನ್ಶನ್ ಸೂಪಾರಾಗಿದೆ ಸಾರ್ ನಮ್ ಗಾಡಿ ಕುಲುಕಾಡೋದೇ ಇಲ್ಲ.. ಬೇಕಿದ್ರೆ ಇಪ್ಪತ್ತು ರುಪಾಯಿ ಕಮ್ಮಿ ಕೊಡಿ ಬನ್ನಿ ಹತ್ತಿ ಅಂದ..!! ಕುಲುಕಾಡದ ಹಾಗೆ ಏನು ಆಕಾಶದಲ್ಲಿ ಓಡಿಸ್ತೀರ ಗಾಡಿನಾ..?! ನಾನು ಆಗೋದೇ ಇಲ್ಲ ಅಂದೇ. ಅಷ್ಟರಲ್ಲಿ ಬಸ್ಸಿನಿಂದ ಯಾರೋ ಒಬ್ಬ ಇಳಿದು ಬಂದು, ಕಂಡಕ್ಟರ್ ಬಳಿ ಎಗರಾಡಿ, ಕೂಗಾಡಿ, ಕಾಡಿ ಬೇಡಿ ತನ್ನ ಟಿಕೆಟ್ಟಿನ ದುಡ್ಡು ವಾಪಾಸ್ ಪಡಕೊಂಡು, ಮುಲಾಜಿಲ್ಲದೆ ಹೊರಟೇ ಹೋದ. ಸಾರ್ ಏನ್ ಅದೃಷ್ಟ ಸಾರ್ ನಿಮ್ದು.. ಹೋಗಿ ಹೋಗಿ ಹತ್ತನೇ ನಂಬರ್ ಸೀಟ್ ಖಾಲಿಯಾಯ್ತು, ಹೋಗಿ ಕೂತ್ಕೊಳಿ ಅಂತ ಚೀಟಿ ಹರಿದು ಕೊಟ್ಟ. ನಾನು ದುಡ್ಡು ಕೊಟ್ಟು, ಬಸ್ ಹತ್ತಿ ಮೋಹನನಿಗೂ, ಸಂತೂಗೂ ಟಾಟಾ ಹೇಳಿ ಸೀಟ್ ಹತ್ತಿರ ಬಂದು ನೋಡಿದ್ರೆ ಪಕ್ಕದ ಸೀಟಲ್ಲಿ ಬುರ್ಖಾ ತೊಟ್ಟ ಒಬ್ಬ ಮಹಿಳೆ.. ನನ್ನ ಸೀಟಲ್ಲಿ ಮಲಗಿದ್ದ ಅವರ ಒಂದೂವರೆ ವರ್ಷ ಇರಬಹುದಾದ ಗಂಡು ಮಗು. ಅದೇನೇ ಪ್ರಯತ್ನ ಮಾಡಿದರೂ ಅಕ್ಕ ಅನ್ನೋ ಪದ ಬರಲೇ ಇಲ್ಲ ನೋಡಿ..!! ಬೆಹನ್ ಜೀ ಈ ಸೀಟ್ ನಂದು ಅಂದೇ. ಒಹ್ ಸಾರಿ.. ಬನ್ನಿ ಕೂತ್ಕೊಳಿ ಅಂತ ಮಗುವನ್ನ ಎತ್ತಿ ತಮ್ಮ ತೊಡೆ ಮೇಲೆ ಹಾಕಿ ಕೊಂಡ್ರು ಆ ಬೆಹನ್.  ನಾನು ಬ್ಯಾಗನ್ನ  ತೊಡೆ ಮೇಲಿಟ್ಟುಕೊಂಡು ಕುಳಿತೆ. ಸಣ್ಣಗೆ ಸೌಂಡ್ ಕೊಟ್ಟಿದ್ದ ಟೀವಿ ಯಲ್ಲಿ ಜಾಕಿ ಫಿಲಂ. ಆಗಲೇ ಮೂರ್ನಾಲ್ಕು ಬಾರಿ ಆ ಫಿಲಂ ನೋಡಿದ್ದ ನನಗೆ ಮತ್ತೊಮ್ಮೆ ಅದನ್ನ ನೋಡುವ ಮನಸ್ಸಿಲ್ಲದೆ ಬ್ಯಾಗ್ ಒಳಗಿಂದ ಮಧ್ಯಾನ ಕೊಂಡ ತರಂಗವನ್ನ ಹೊರ ತೆಗೆದು, ಹತ್ತಿಪ್ಪತ್ತು ಹಾಳೆಗಳ ಸರಿಸಿ ಕೆಥೆಯೊಂದರೊಳಗೆ ಕಣ್ಣಾಡಿಸಲು ಶುರು ಮಾಡಿದೆ. ಕೂತ ಐದು ನಿಮಿಷಕ್ಕೆ ಸ್ಟಾರ್ಟ್ ಆದ ಬಸ್ಸು ಬೈಪಾಸು ದಾಟಿದ್ದ ಬಸ್ಸು ಜನರ ಒತ್ತಾಯದ ಮೇರೆಗೆ ಟೀವಿ ಮತ್ತು ಲೈಟ್ ಗಳನ್ನೂ ಆರಿಸಿ ಕೊಂಡಿತು. ನಾನು ತರಂಗವನ್ನ ಮುಚ್ಚಿ ಬ್ಯಾಗ್ ಒಳಗಿಟ್ಟು.. ಪಾಕೆಟ್ ಒಳಗಿದ್ದ  ಮೊಬೈಲ್ ಹೊರ ತೆಗೆದು ಅಂತರ್ಜಾಲವನ್ನ ಹೊಕ್ಕೆ.
 

ಆಗಲೇ ಪೂರ್ತಿ ತುಂಬಿದ್ದ ಬಸ್ಸು ಬೇರೆಲ್ಲೂ ನಿಲ್ಲಿಸದೆ ತರೀಕೆರೆ ದಾಟಿ ಸಾಗುತ್ತಿತ್ತು. ನನಗೂ ಇಂಟರ್ನೆಟ್ಟು ಬೋರಾಗಿ ಮಲಗೋಣವೆಂದುಕೊಂಡು ಮೊಬೈಲ್ ನ್ನು ಪಾಕೆಟ್  ಒಳಗಿಟ್ಟು ಸೆಮೀ ಸ್ಲೀಪರ್ ಸೀಟ್ ಅನ್ನು ಸ್ವಲ್ಪ ಹಿಂದಕ್ಕೆ ವಾಲಿಸಿ ಒರಗಿ ಕಣ್ಮುಚ್ಚಿ ನಿದ್ದೆ ಮಾಡುವ ಪ್ರಯತ್ನ ಮಾಡಿದೆ. ಜೋಂಪು ಹತ್ತಿದ ಹತ್ತಿಪ್ಪತ್ತು ನಿಮಿಷಕ್ಕೆ ಜೋರು ಶಬ್ದಕ್ಕೆ ತಡಬಡಿಸಿ ಕಣ್ಣು ಬಿಟ್ಟೆ..!! ಏನೆಂದು ನೋಡಿದರೆ ಪಕ್ಕದ ಬೆಹನ್ ಜೀ ತೊಡೆಯ ಮೇಲಿದ್ದ ಮಗು ರಚ್ಚೆ ಹಿಡಿದು ಅಳುತ್ತಿತ್ತು. ಬಸ್ಸು ಕಡೂರು ದಾಟಿತ್ತು ಅನ್ನಿಸುತ್ತೆ. ಗವ್ವ್ ಎನ್ನುವ ಕತ್ತಲ ನಡುವೆ ಮಂದವಾಗಿ ಬೆಳಗುವ ಒಂಟೀ ದೀಪದಂತೆ ಬಸ್ಸು ತನ್ನ ಪಾಡಿಗೆ ತಾನು ಚಲಿಸುತ್ತಿತ್ತು. ಆ ಮಗುವಿನ ತಾಯಿ ಅದೇನು ಸಮಾಧಾನ ಮಾಡಿದರು ಮಗುವಿನ ಅಳು ನಿಲ್ಲುತ್ತಿಲ್ಲ. ತಮ್ಮ ಬ್ಯಾಗ್ ಒಳಗಿಂದ ಹಾಲಿನ ಬಾಟಲ ಹೊರ ತೆಗೆದು ಅದರ ಬಾಯಿಗಿಟ್ಟರೂ ಮಗು ಸುಮ್ಮನಾಗಲಿಲ್ಲ. ಮಗುವನ್ನ ಸುಮ್ಮನಾಗಿಸಲು ಏನೇ ಹರ ಸಾಹಸ ಪಟ್ಟರು ಸೋಲುತ್ತಿದ್ದ ಆ ತಾಯಿ ಜೀವದ ತಳಮಳ ಯಾರಿಗೆಷ್ಟು ಅರ್ಥವಾಗಿತ್ತೋ..?? ನಾನೂ ಅಸಹಾಯಕನಾಗಿ ನೋಡುತ್ತಿದ್ದೆ. ಒಂದೇ ಸಮನೆ ಮಗುವಿನ ಅಳು. ಮುಂಭಾಗದ.. ಹಿಂಭಾಗದ.. ಅಕ್ಕ ಪಕ್ಕದ ಸೀಟಿನವರೆಲ್ಲ ಒಮ್ಮೆ ಆ ತಾಯಿ ಮಗುವಿನೆಡೆಗೆ ತಿರುಗಿ ಅವರುಗಳ ದರುಶನ ಪಡೆದು, ಪ್ಚ್.. ಎನ್ನುವ ಎಂಬ ಅಸಮಧಾನದ ಉದ್ಘಾರದೊಂದಿಗೆ ತಮ್ ತಮ್ಮ ಸಹಜ ಸ್ಥಿತಿಗೆ ಮರಳಿ ನಿದ್ರಿಸುವ ಪ್ರಯತ್ನ ಮಾಡುತ್ತಿದ್ದರು. ಮಗುವಿನ ಅಳುವಿನ ಶಬ್ಧಕ್ಕೆ ಅವರೆಲ್ಲರ ಪ್ರಯತ್ನ ಸಾಧಾರಣವಾಗಿ ಸೋತು ಹೋಗಿತ್ತು. ಅಳುತ್ತಿರೋದು ಮಗುವಾಗಿದ್ದರಿಂದ.. ಯಾರಿಗೂ ಗಲಾಟೆ ಮಾಡುವ ಮನಸ್ಸಿಲ್ಲ. ಮಾಡಿದವ ಖಂಡಿತ ಎಲ್ಲರ ದೃಷ್ಟಿಯಲ್ಲಿ ನಂಬರ್ ಒನ್ ಕೇಡಿ ಅನ್ನಿಸ್ಕೊತಾ ಇದ್ದ..!! ಹಾಗಾಗಿ ಪ್ರಶ್ನೆ ಮಾಡುವ.. ಮಗುವಿನ ಕುರಿತಾಗಿ ದನಿ ಎತ್ತುವ ಭಂಡತನದ ಧೈರ್ಯ ಯಾರಿಗೂ ಇಲ್ಲದೆ.. ಎಲ್ಲರು ಸೋಲಿಗೆ ಶರಣಾಗಿ.. ನಿದ್ರಾ ದೇವಿಯ ಮಡಿಲಲ್ಲಿ ಹೊರಳಲು ಇನ್ನಿಲ್ಲದೆ ಕಷ್ಟ ಪಡುತ್ತಿದ್ದರು.
 

ನನಗೂ ಮಗುವನ್ನ ಕಂಡು ಕರುಳು ಚುರ್ರ್ ಎಂದಿತ್ತು. ಬೆಹೆನ್ ಜೀ ಗೆ ಏನಾದರು ಸಹಾಯ ಬೇಕೇ..?? ಕೇಳಿ ನೋಡೋಣವೇ ಅನ್ನಿಸಿದರೂ ಪ್ರಸ್ತಾಪಿಸದೆ ಆ ತಾಯಿ ಮಗುವಿನ ಆಟವನ್ನ [ನರಳಾಟವನ್ನ] ಮೂಕ ಪ್ರೇಕ್ಷಕನಂತೆ ಹತಾಶ ಮನಸ್ಸಿನಿಂದ ವೀಕ್ಷಿಸ ತೊಡಗಿದೆ. ತಾಯಿಯ ಸಂಯಮ ಮೀರಿತು.. ಅರೆ ಇಸ್ಕೀ.. ಮೇರಿಜಾನ್ ಲೇನೇ ಕೆ ಲಿಯೇ ಹೇ ಪೈದಾ ಹುವಾ ಹೈ.. ಚುಪ್.. ಅರೆ ಸೈತಾನ್  ಚುಪ್ ಕರ್ ನಹೀ ತೋ..!! ಆ ತಾಯಿ ಅತೀ ಸಣ್ಣ ದನಿಯಲ್ಲಿ ಇನ್ನೂ ಏನೇನೊ ಗೊಣಗಲಾರಂಭಿಸಿತ್ತು. ನಂಗೆ ಆ ತಾಯಿಯ ಅಸಹಾಯಕತೆ ಮತ್ತು ಆ ಕ್ಷಣದ ವರ್ತನೆಗಳ ವೆತ್ಯಾಸದ ನಡುವೆ ಅಗಾಧ ಯೋಚನೆಗಳು ಮತ್ತು ಪ್ರಶ್ನೆಗಳು ತಲೆ ತುಂಬಿ ಕೊಳ್ಳುತ್ತಿದ್ದವು. ಅರೆ ತಾನೇ ಜನ್ಮ ಕೊಟ್ಟ ಮಗುವನ್ನ.. ತಾನೇ ಸಾಕಿ ಸಲಹುತ್ತಿಹ ಮಗುವನ್ನ.. ತಾನೇ ಪ್ರೀತಿಸಿ ಪೋಷಿಸುತ್ತಿಹ ಮಗುವನ್ನ ಯಾವ ತಾಯಿ ತಾನೇ ಇಂತಹ ಶಾಪವಿಟ್ಟು ಹಳಿಯೋಕೆ ಸಾಧ್ಯ?? ನನ್ನ ಪ್ರಶ್ನೆಗೆ ನಾನೇ ಕಣ್ಣಾರೆ ಕಂಡ ಹಲವು ಉದಾಹರಣೆಗಳ ನೂರಾರು ತಾಯಿ ಮಕ್ಕಳ ದೃಶ್ಯಗಳು ಸಾಕ್ಷಿಯಾಗಿ ಕಲ್ಪನೆಯಲಿ ಜರುಗಿ ಸಾಗುತ್ತಲಿದ್ದವು. ಕತ್ತಲು ಬರೀ ಕತ್ತಲಾಗಿ ಉಳಿಯಲಿಲ್ಲ..!! ಹಲವಾರು ನೆನಪುಗಳ ಕಡೆ ಬೆಳಕು ಚೆಲ್ಲುತ್ತಾ ಹೋಯಿತು.
 

ಹೌದು, ಹೀಗೆ ಮಗುವನ್ನ ಹಳಿಯುತ್ತಿರೋದು ಬರೀ ಈ ತಾಯಿ ಮಾತ್ರವಲ್ಲ. ಇಂಥ ಪರಿಸ್ಥಿತಿಗೆ ಹೀಗೆ ಹಳಿದ.. ಹೀಗೆ ಪ್ರತಿಕ್ರಿಸುವ ಅದೆಷ್ಟು ಜನ ತಾಯಂದಿರನ್ನ ನಾನು ನೋಡಿಲ್ಲ. ಬೇರೆ ಯಾರೋ ಯಾಕೆ..?? ಅತ್ತೆ ಮಗಳು ಪಾರ್ವತಿ & ಅಕ್ಕ ಮಂಜಿಯನ್ನೇ ಖುದ್ದು ನೋಡಿಲ್ಲ. ಅವರು ಹೀಗೆ ಮಕ್ಕಳ ರಚ್ಚೆಗೆ ಶಾಪವಿಡುತ್ತಲೇ ಪೋರೆದವರಲ್ಲವೇ.?? ಅದೆಷ್ಟು ಸಾರಿ ಅವುಗಳನ್ನ ಪೀಡೆ, ಪಿಶಾಚಿ ಅಂದಿಲ್ಲ?? ಅವರಿಗಷ್ಟೇ ಗೊತ್ತು ಅವರ ಕಷ್ಟ.. ನನಗೇನು ಗೊತ್ತು..?? ಯಾವಾಗಲಾದರು ಮಗುವಿನ ಹತ್ತಿರ ಹತ್ತಿರ ಹೋಗಿ ಅದನು ಎತ್ತಿ ಮುದ್ದಾಡಿ ಅದು ಸೂಸು ಮಾಡಿದಾಗಲೋ ಅಥವಾ ಧಿಡೀರನೆ ಕಾರಣವಿಲ್ಲದೆ ರಚ್ಚೆ ಹಿಡಿದಾಗಲೋ ಅವರ ಅಮ್ಮಂದಿರ ಸುಪರ್ದಿಗೆ ಬಿಟ್ಟು ಬಿಡುತ್ತಿದ್ದ ಕಾರ್ಯವೊಂದೆ ಕಡೆದಾಗಿ ನಾವು ಮಾಡಬಹುದಾಗಿದ್ದ ಮಹದುಪಕಾರ..!! ಅದು ಬಿಟ್ಟರೆ ನಮಗೇನು ಗೊತ್ತು ಹೇಳಿ..??
 

ಅಕ್ಕನಿಗೆ ಎರಡು ಹೆಣ್ಣು ಮಕ್ಕಳು. ಅವರಿಬ್ಬರನ್ನೂ ಹಾಗೆ ಬೆಳೆಸಿದ್ದನ್ನು ನಾನು ಕಂಡಿದ್ದೇನೆ. ಹಾಗೆ ಅತ್ತಾಗಲೆಲ್ಲ ಮಗುವಿನ ಬಾಯಿಗೆ ಅಕ್ಕ ಎದೆ ಕೊಡುತ್ತಿದ್ದಳು. ಒಂದೆರಡು ಕ್ಷಣ ಸುಮ್ಮನೆ ಎದೆಗೆ ತುಟಿಯಾನಿಸಿ ಹಾಲು ಕುಡಿಯುತ್ತಲಿದ್ದ ಮಗು ಒಮ್ಮೆಲೇ ಮುಖ ಹೊರಗೆಳೆದು ಮತ್ತೆ ರಚ್ಚೆ ಹಿಡಿಯುತ್ತಿದ್ದ ಅದೆಷ್ಟು ಪ್ರಸಂಗಗಳನ್ನ ನಾನು ನೋಡಿಲ್ಲ. ಈ ಹೆಂಗಸರಿಗೆ ಅಥವಾ ಮಕ್ಕಳಿಗೆ ಅಂತ ಕಷ್ಟವೇನಿರತ್ತೆ..?? ನನಗದರ ಅನುಭವವೂ ಇಲ್ಲ.. ಸೂಕ್ತ ಉತ್ತರವೂ ಇಲ್ಲ. ನಾನು ಅದನ್ನ ಯಾರ ಬಳಿಯೂ ಪ್ರಶ್ನೆ ಕೇಳಿದ್ದೂ ಇಲ್ಲ. ಕೇಳಿದ್ದಿದರೆ ಉತ್ತರ ದಕ್ಕುತ್ತಿತ್ತಾ ಗೊತ್ತಿಲ್ಲ..!! ಮಗುವನ್ನ ಸಂತೈಸಲಾಗದೆ ಸೋತು ಬಿಡುತ್ತಿದ್ದ ಅಕ್ಕ ಕಡೆದಾಗಿ ಮಗುವನ್ನ ಅಮ್ಮನ ಕೈಗಿಡುತ್ತಿದ್ದಳು. ಅಮ್ಮ ಮಗುವನ್ನ ಎತ್ತಿಕೊಂಡು ಮನೆ ಪೂರ್ತಿ ಸುತ್ತಿಸುತ್ತ.. ಲೊಲಲೊಲಲೊಲ ಲಾಯೀ ಹೇಳುತ್ತಾ ಹತ್ತಿಪ್ಪತ್ತು ನಿಮಿಷದಲ್ಲಿ ಸುಮ್ಮನಾಗಿಸಿ ಮಗು ನಿದ್ರೆಗೆ ಜಾರುವಂತೆ ಮಾಡಿ ಬಿಡುತ್ತಿದಳು. ಅಮ್ಮನ ಆ ಮಾಂತ್ರಿಕ ಶಕ್ತಿಯ ರಹಸ್ಯವೂ ನನಗೀಗಲೂ ಬಯಲಾಗಿಲ್ಲ. ಅಮ್ಮನಾಗಲಿ.. ಅತ್ತೆಯಾಗಲಿ... ಅಕ್ಕ ಪಕ್ಕದ ಮನೆಯ ಯಾವ ಹೆಣ್ಣು ಮಕ್ಕಳ ತಾಯಂದಿರಿಗೂ ಆ ಮಾಂತ್ರಿಕ ಶಕ್ತಿಯ ಶಕ್ತಿಯಿತ್ತು. ಆ ಮಗುವಿಗೆ ಅಪ್ಪನೋ. ತಾತನೋ. ಅಥವಾ ನನ್ನಂತೆ ಸೋದರ ಮಾವನೆನೆಸಿಕೊಂಡ ಯಾವ ಗಂಡಿನ ಒರಟು ಕೈಗಳಲ್ಲೂ ಬಹುಷಃ ಆ ಮಾಂತ್ರಿಕ ಶಕ್ತಿಯ ಮಾಂತ್ರಿಕತೆ ದಕ್ಕಲಾರದೇನೋ..!! ನಮ್ಮಿಂದ ಯಾವೊಂದು ದಿನಕ್ಕೂ ಹಾಗೊಮ್ಮೆ ಅಳುತ್ತಿರುವ ಮಕ್ಕಳನ್ನು ಸುಮ್ಮನಾಗಿಸಲಾಗಿಲ್ಲ..!!
 

ನಾನು ಈ ತಾಯಿಯೂ ಲೊಲಲೊಲಲೊಲ ಲಾಯೀ  ಶುರು ಮಾಡಬಹುದೇನೋ ಅಂದು ಕೊಂಡೆ. ಬಗಲಿಗೆ ಮತ್ತೊಂದು ಪ್ರಶ್ನೆ ಹುಟ್ಟಿ ಕೊಂಡಿತು.. ಇವರಿಗೂ ಲೊಲಲೊಲಲೊಲಲೊಲ ಲಾಯೀ ಮಂತ್ರದ ಪರಿಚಯವಿರಬಹುದಾ ಎಂದು..!! ಅಲ್ಲಿಯ ತನಕ ಮಗುವನ್ನ ಹಳಿದು ಸಂತೈಸುತ್ತಿದ್ದ ಅದರಮ್ಮ ಈಗ ದೈನ್ಯತೆ ಇಂದ ಸಂತೈಸೋಕೆ ಶುರು ಮಾಡಿದರು. ಸೋನ... ಸೋನ ಮೇರೆ ರಾಜ.. ಸೋನ ಮೇರೆ ಪುತ್ತರ್.. ಅಂತ ಸಣ್ಣದಾಗಿ ರಾಗ ಹಾಡುತ್ತ .. ಇದ್ದ ಇಷ್ಟೇ ಇಷ್ಟು ಗ್ಯಾಪಿನ ಆ ಜಾಗದೊಳಗೆಯೇ ಮಗುವನ್ನ ತೂಗುತ್ತ ಸಂತೈಸುವ ಪ್ರಯತ್ನ ಮಾಡುತ್ತಿದರು..!! ಒಂದೇ ನಾಣ್ಯದ ಎರಡು ಮುಖ.. ಒಬ್ಬಳೇ ತಾಯಿಯ ಎರಡು ರೂಪ.!! ನಾನು ಮೂಕ ಪ್ರೇಕ್ಷಕನಂತೆ ನೋಡುವುದನ್ನು ನಿಲ್ಲಿಸಿರಲಿಲ್ಲ. ಆ ತಾಯಿ ತಲೆ ಎತ್ತಿ ನನ್ನನ್ನೊಮ್ಮೆ ನೋಡಿದರು.. ನಂಗೆ ಮುಜುಗರವೆನಿಸಿ ತಲೆ ಬಗ್ಗಿಸಿದೆ. ಸಾರಿ ಭಯ್ಯಾ ಅಂತು ಆ ತಾಯಿ. ಪರವಾಗಿಲ್ಲ ಬೆಹೆನ್ ಜೀ.. ನಮ್ಮಕ್ಕನಿಗೂ ಎರಡು ಹೆಣ್ಣು ಮಕ್ಕಳು ಅವುಗಳ ದೆಸೆ ಇಂದ ನನಗೆ ಇದೆಲ್ಲದರ ಪರಿಚಯ ನನಗಿದೆ, ನೀವೇನು ಬೇಜಾರ್ ಮಾಡ್ಕೋಬೇಡಿ ಅಂದೇ. ಆ ತಾಯಿ ಮುಂದೇನು ಮಾತನಾಡದೆ ಮತ್ತೆ ರಾಗಾಲಾಪನೆಯತ್ತ ಮನ ಮಾಡಿತು. ಅತ್ತು ಅತ್ತು ಸೋತ್ತಿದ ಮಗು ಕೂಡ ಹಠ ಮರೆತು ತನ್ನ ಹಟದ ತೀವ್ರತೆಯನ್ನ ಸ್ವಲ್ಪ ಕಮ್ಮಿ ಮಾಡಿತ್ತೆ ವಿನಃ ನಿಲ್ಲಿಸಿರಲಿಲ್ಲ. ನಾನು ಮತ್ತೊಮ್ಮೆ ಸೀಟಿಗೊರಗಿ, ಸೀಟನ್ನು ಸ್ವಲ್ಪ ಹಿಂದಕ್ಕೆ ವಾಲಿಸಿ ನಿದ್ರಿಸುವತ್ತ ಚಿಂತೆ ಮಾಡಿದೆ.. ನಿದ್ರೆ ಹತ್ತಲ್ಲಿಲ್ಲ. ಆ ಮಗುವಿನ ತಲೆ ಆ ತಾಯಿಯ ತೊಡೆ ಮೇಲಿದ್ದರೆ, ಕಾಲುಗಳು ನನ್ನ ತೊಡೆಯ ಮೇಲಿದ್ದವು.. ಏನೂ ಎದುರಾಡದ ನಾನು ಅಂತರ್ ಮಥನದೊಳಗೆ ಜಾರಿಕೊಂಡಾಗ ಮನಸ್ಸಿನ ನೆನಪಿನ ಸುಳಿಗೆ ವಿನೀತ್ ಮತ್ತು ಅವರಪ್ಪ ಬರಲಾರಂಭಿಸಿದರು.

*   *   *   *   *   *   *   *   *   *   *   *   *   *   *   *   *   *   *   *   *   *   *   *   *   *   *   *   *   *   *   *   *
 
ವಿನೀತ್.. 
ಈಚೆಗೆ ಏಳು ತಿಂಗಳ ಹಿಂದೆ ನಮ್ಮ ಕ್ಯಾಂಪಸ್ಸಿಗೆ ಕೆಮಿಸ್ಟ್ ಆಗಿ ಸೇರಿಕೊಂಡ ನನ್ನ ಸಹವರ್ತಿ. ನಮ್ಮ ಟೆಸ್ಟಿಂಗ್ ಲ್ಯಾಬ್ ಡಿಪಾರ್ಟ್ಮೆಂಟ್ ನಲ್ಲಿ ಒಂದು ಕಾಲಕ್ಕೆ ಏಳು ಜನರಿದ್ದು ನಡೆಯುತ್ತಿದ್ದ ಕೆಲಸಗಳು, ಈಗ ಮೂರು ಜನರ ಮೇಲೆ ಬಿದ್ದ ಮಣಭಾರ. ಈ ಮಣಭಾರ ವನ್ನ ಹೊರಬೇಕ್ಕಾದ್ದು ನಾವೇ ಮೂರು ಜನರೀಗ. ನಾನು, ವಿನೀತ್  ಮತ್ತು ಲಾವಣ್ಯ. ಉಳಿದವರೆಲ್ಲರೂ ಕಾರ್ಪೋರೆಟ್ ಜಗತ್ತಿನ ರಾಜಕೀಯಕ್ಕೆ ಸಿಲುಕಿ ಬೇಕಾದ ಕಡೆ, ಬೇಕಿಲ್ಲದ ಕಡೆ ವರ್ಗಾವಣೆಯಾಗಿ ಹೋದರು..!! ನನ್ನ ಹಾಗೆ ITI ಓದಿಯೇ, ಟೆಕ್ನಿಷಿಯನ್ ಆಗಿಯೇ ಕೆಲಸಕ್ಕೆ ಸೇರಿಕೊಂಡ ವಿನೀತ್ ಕಾನ್ಪುರದಲ್ಲಿ ಸಂಜೆ ಕಾಲೇಜಿನಲ್ಲಿ ಓದಿ ಬೀಎಸ್ಸಿ ಮುಗಿಸಿದವ. ಹೇಳುವುದ ಮರೆತಿದ್ದೆ ವಿನೀತ್ ನ ಮೂಲ ಉತ್ತರ ಪ್ರದೇಶದ ಕಾನ್ಪುರ. ಬೀಎಸ್ಸೀ ಓದಿದರ ಪರಿಣಾಮ.. ಟೆಕ್ನಿಷಿಯನ್ ಆಗಿದ್ದ ವಿನೀತ್ ಗೆ ಕಂಪನಿಯ ಅಗತ್ಯದ ಸಮಯಕ್ಕೆ ಸರಿಯಾಗಿ, ವಿಶೇಷ ನೇಮಕಾತಿಯ ಅಡಿಯಲ್ಲಿ ಕೆಮಿಸ್ಟ್ ಆಗಿ ಪರಿವರ್ತಿಸಿ, ಆ ಹುದ್ದೆಗೆ ಬೇಕಾದ ಟ್ರೈನಿಂಗ್ ಸಲುವಾಗಿ ಅವನನ್ನ ಆರು ತಿಂಗಳ ಮಟ್ಟಿಗೆ ಹೈದರಾಬಾದ್ ನ ಸೆಂಟ್ರಲ್ ಲ್ಯಾಬೋರೇಟರಿ ಗೆ ತಾತ್ಕಾಲಿಕ ವರ್ಗಾವಣೆ ಮಾಡಲಾಯ್ತು. ಅಲ್ಲಿ ಕೆಮಿಸ್ಟ್ ಹುದ್ದೆಗೆ ಬೇಕಾದ ಟ್ರೈನಿಂಗ್ ಮುಗಿದ ಬಳಿಕ ಇದ್ದ ಖಾಲಿ  ಜಾಗಗಳಿಗನುಸಾರವಾಗಿ, ಒಂದು ಕೆಮಿಸ್ಟ್ ಹುದ್ದೆ ಖಾಲಿಯಿದ್ದ ಹೊಸೂರಿಗೆ ಯಾವ ಮುಲಾಜಿಲ್ಲದೆ ಪೋಸ್ಟಿಂಗ್ ಮಾಡಲಾಯಿತು.

ಮೊದಲೇ ಹೊಸ ಜಾಗ.. ಇಲ್ಲಿನವರಿಗೆ [ತಮಿಳುನಾಡಿನವರಿಗೆ] ಹಿಂದಿ ಗೊತ್ತಿಲ್ಲ. ಇವನಿಗೆ ತಮಿಳು ಗೊತ್ತಿಲ್ಲ. ದೇಶದ ಇತರೆ ಯಾವ ಭಾಗವಾದರೂ ಅರೆ ಕೊರೆ ಹಿಂದಿಯೊಂದಿಗೆ ಹೇಗೋ ಬದುಕಿಬಿಡಬಹುದು ಅನ್ನಿ.. ಆದ್ರೆ ಈ ತಮಿಳು ನಾಡಿದೆಯಲ್ಲಾ..?? ಭಾಷಾಭಿಮಾನದಲ್ಲಿ ಬೇರೆಲ್ಲ ರಾಜ್ಯಗಳಿಗಿಂತ ಒಂದು ಮಣ ತೂಕ ಜಾಸ್ತಿಯೇ. ಮೂರುವರೆ ನಾಲ್ಕು ವರ್ಷಗಳ ಕಾಲ ಇಲ್ಲಿ ಇರೋದರಿಂದ ಇಲ್ಲಿನವರ ರೀತಿ ನೀತಿಗಳ ಬಗ್ಗೆ ಕೊಂಚ ಪರಿಚಯವಿದೆ. ತಮಿಳಿನ ಮುಕ್ಕಾಲು ಭಾಗ ಗೊತ್ತಿದ್ದರೂ ಇಲ್ಲಿನ ಹಣ್ಣು, ತರಕಾರಿ, ಬೇಳೆ, ಮಸಾಲ ಪದಾರ್ಥಗಳ ಹೆಸರುಗಳು ಹತ್ತಿರ ಹತ್ತಿರ ನಾಲ್ಕು ವರ್ಷದಿಂದ ಇಲ್ಲಿರೋ ನನಗೇ ಗೊತ್ತಿಲ್ಲ.. ಅಂಥದ್ದರಲ್ಲಿ ದಕ್ಷಿಣದ ಗಾಳಿಯೇ ಕುಡಿಯದಿದ್ದ ಇವ ಇಲ್ಲಿ ಬಂದು ಬದುಕಬೇಕ್ಕಾದ್ದು ಸವಾಲೇ ಸರಿ..!! ಇವನೊಬ್ಬನೇ ಅಲ್ಲದೆ ಇವನ ಹಾಗೆ, ಇವನ ಜೊತೆಗೆ, ಇವನಂಥವರೆ ಹತ್ತಿಪ್ಪತ್ತು ಜನರಿದ್ದರೆ ಸರಿ ಹೇಗೋ ನಡೆಸಬಹುದಿತ್ತು. ಆದ್ರೆ ಸಾಲಾ ಏಕ್ ನಂಬರ್ ಕ ನತದೃಷ್ಟ ಆಗಿದ್ದ...!! ಬೋನಿನಲ್ಲಿ ಸಿಕ್ಕ ಇಲಿಯಂತೆ ಒಬ್ಬನೇ ಬಂದು ಸಿಕ್ಕಿಕೊಂಡ. ವಿನೀತ್ ಗಾದರೂ ಅಷ್ಟು ಪ್ರಾಬ್ಲಮ್ ಇಲ್ಲ ಅನ್ನೋಣ.. ಅವ ಹೊತ್ತು ತಂದ ಅವನ ಸಂಸಾರದ್ದೆ ಪ್ರಶ್ನೆ..!! ಅವನಾದರೂ ಸರಿ ಬೆಳಿಗ್ಗೆ ಇಂದ ಸಂಜೆ ತನಕ ನಮ್ಮೊಟ್ಟಿಗೆ ಆಫೀಸ್ ನಲ್ಲಿರ್ತಾನೆ. ನಮ್ಮ ಕಂಪನಿಯ ನಿಯಮಾನುಸಾರ ಎಲ್ಲರು ಹಿಂದಿ ಕಲಿಯಬೇಕ್ಕಾದ್ದು ಮತ್ತು ಪತ್ರ ವ್ಯವಹಾರಗಳೆಲ್ಲವೂ ಹಿಂದಿಯಲ್ಲೇ ಆಗಬೇಕ್ಕಾದ್ದರಿಂದ ಕನ್ನಡಿಗರಾದ ನಾನು ಮತ್ತು ಪ್ರಶಾಂತ್, ಮಲೆಯಾಳಿಗಳಿಬ್ಬರು, ತೆಲುಗಿಗರಿಬ್ಬರೂಸೇರಿ  ಆಫೀಸಿನ ತಮಿಳು ಕಾರ್ಮಿಕರಿಗೂ ಹಿಂದಿ ಬರುತ್ತಿತ್ತು. ವಿನೀತ್ ನೋಟ್ಟಿಗೆ ಹಿಂದಿಯೋ, ಇಂಗ್ಲೀಷೋ ಹೇಗೋ ಒಂದು ಸಂವಹನ ನಡೆಯುತ್ತಿತ್ತು. ಆದ್ರೆ ಇಲ್ಲಿರುವ ಯಾರೊಬ್ಬರ ಸಂಸಾರದವರಿಗೂ ಹಿಂದಿ, ಇಂಗ್ಲೀಶ್ ಗೊತ್ತಿಲ್ಲ. ವಿನೀತ್ ಫ್ಯಾಮಿಲಿಯವರಿಗೂ ಕೂಡಾ ಹಿಂದಿ ಬಿಟ್ಟರೆ ಬೇರೆ ಗೊತ್ತಿಲ್ಲ. ಅವರೆಲ್ಲ ಬಂದಂದಿನಿಂದ ಇಲ್ಲಿಯ ತನಕ ಕಷ್ಟ ಪಡುತ್ತಲೇ ಇದ್ದಾರೆ..!!


ವಿನೀತ್ ಬರುವ ಮೊದಲು ಆಫೀಸಿನ ಎಲ್ಲಾ ಕೆಲಸಗಳು ಬಲ್ಲ ನಾನು, ಈಗ ಆವ ಮಾಡುತ್ತಿಹ ಕೆಮಿಸ್ಟ್ ಕೆಲಸವನ್ನ ಕೂಡ ಮಾಡುತ್ತಿದ್ದೆ. ಎಲ್ಲಾ ಕೆಲಸಗಳೂ ಸುಸೂತ್ರವಾಗೆ ನಡೆಯುತ್ತಿತ್ತು. ಕಂಪನಿಯ ಹೊಸ ನಿಯಮಾನುಸಾರ ಒಂದು ಲ್ಯಾಬ್ ಎಂದರೆ ಒಬ್ಬ ಕೆಮಿಸ್ಟ್ ಇರಲೇ ಬೇಕೆನ್ನುವ ನಿಯಮಕ್ಕೆ ವಿನೀತ್ ಗೆ ಇಲ್ಲಿ ಮಣೆ ಹಾಕಲಾಗಿತ್ತು. ಕಾರ್ಮಿಕರ ಸಂಖ್ಯೆ ಜಾಸ್ತಿ ಇದ್ದುದರಿಂದ ಇಲ್ಲಿ ಕಂಪನಿಯ ಕ್ವಾಟ್ರಸ್ ಗಳ ಪ್ರಶ್ನೆ ಕೂಡ ಉದ್ಭವವಾಯ್ತು. ವಿನೀತ್ ಸಂಸಾರ ಉಳ್ಳವ ಎನ್ನುವ ಒಂದೇ ಕಾರಣಕ್ಕೆ ನಾನು ಮತ್ತು ಪ್ರಶಾಂತ್ ಎರಡು ವರ್ಷದಿಂದ ಒಟ್ಟಿಗಿದ್ದ ಮನೆಯನ್ನ ಬಿಟ್ಟು, ಮತ್ತೊಬ್ಬ ಬ್ಯಾಚಲರ್ ಇಂಜಿನಿಯರ್ ಜೊತೆಗೆ ಒಂದೇ ಮನೆಯನ್ನ ಮೂವರು ಹಂಚಿಕೊಂಡು ಬದುಕೋ ಪ್ರಮೇಯ ಬಂತು..!! ಒಂದು ಮನೆಯನ್ನು ಮೂವರು ಹಂಚಿಕೊಂಡು ಬದುಕಿದ ಸುಖ.. ಅನುಭವಿಸಿದ ನೋವು ಮತ್ತೊಂದು ಬರಹದ ಸರಕು. ಅದನ್ನ ಇನ್ನೊಮ್ಮೆ ಹೇಳುವೆ. ಹೀಗೆ ವಿನೀತ್ ಗಾಗಿ ಮನೆಯನ್ನ ಬಿಟ್ಟುಕೊಟ್ಟ ನನಗೆ ವಿನೀತ್ ಮೇಲೆ ಅವಶ್ಯಕತೆ ಇಲ್ಲದೆಯೇ ಒಂದು ಸಣ್ಣದೇ ತಿರಸ್ಕಾರ ಭಾವ ಮೂಡಿ ಬಿಟ್ಟಿತ್ತು..!! ಅದು ಬರು ಬರುತ್ತಾ ಬಲವಾದದ್ದು ತಾನೊಬ್ಬನೇ ಎಲ್ಲವ ಬಲ್ಲವ, ತಾನು ಮಾಡಿದ್ದೆ ಸರಿ.. ಕೆಮಿಸ್ಟ್ ಆಗಿ ಅವ ಮಾಡಬಲ್ಲುದಾದುದು ಮಾತ್ರ ಸರಿಯಾಗಿರುತ್ತದೆ.. ನಾವು ಮಾಡಿದುದಕ್ಕೆಲ್ಲ ಬೆಲೆ ಇಲ್ಲ.. ಇಲ್ಲಿಯ ತನಕ ನಾವು ಮಾಡಿದ ಕೆಲಸಕ್ಕೆಲ್ಲ ಸೊನ್ನೆ ಸುತ್ತಿದ ಅವನ ಸೊ ಕಾಲ್ಡ್ ಧೋರಣೆಯ ಸಲುವಾಗಿ..!! ಬಂದ ಒಂದಷ್ಟು ದಿನ ಇದ್ದ ಇಂತಹ ವೈಮನಸ್ಸುಗಳು, ಅಷ್ಟೇ ಬೇಗ ಕರಗಿ ಹೋಗಿದ್ದು ಕೂಡಾ ತಿಳಿಯಲಿಲ್ಲ..!! ವಿನೀತನೆ ವಿನೀತನಾದನೊ.. ಅಥವಾ ಅವನ ಧೋರಣೆಗೆ ನಾನೇ ವಿನೀತನಾದೆನೇನೋ ಗೊತ್ತಿಲ್ಲ. ನಮ್ಮಿಬ್ಬರ ನಡುವೆ ಈಗ ಯಾವ ವೈಮನಸ್ಸುಗಳೂ ಇಲ್ಲ. ನಮ್ಮಿಬ್ಬರ ನಡುವೆ ಅದಲು ಬದಲಾಗುವ ನಗುವಲ್ಲಿ ಯಾವ ಕಲ್ಮಶವೂ ಇಲ್ಲ.


ನನಗಿಂತ ಸುಮಾರು ಎರಡು ವರ್ಷ ದೊಡ್ಡವನಾದ ವಿನೀತ್ ಆಗಲೇ ಮದುವೆಯಾಗಿದ್ದರಿಂದ, ಅವನು ಹೊಸೂರು ಸೇರಿಕೊಂಡ ಹೊಸತರಲ್ಲಿ ಕೇವಲ ತನ್ನ ಹೆಂಡತಿಯನ್ನ ಮಾತ್ರ ಕರೆಸಿ ಕೊಂಡಿದ್ದ. ಅವನಪ್ಪ ಅಮ್ಮ ಅವನನ್ನ ಕೂಡಿ ಕೊಂಡದ್ದು ಅವನಿಲ್ಲಿ ಬಂದು ಸೆಟಲ್ ಆದ ನಾಲ್ಕು ತಿಂಗಳ ಬಳಿಕ. ಪಕ್ಕಾ ಬ್ರಾಹ್ಮಣರಾದ ಅವರಿಗೆ ಅಕ್ಕ ಪಕ್ಕದ ಮನೆಯ ಮೀನು, ಮೊಟ್ಟೆಯ ವಾಸನೆಯೆಂದರೆ ವಾಂತಿ ಬಂದು ಬಿಡುತ್ತದೆ..!! ಈಗಲೂ ಸಹ ನಮ್ಮ ಕ್ಯಾಂಪಸ್ಸಿನ ಯಾವ ಸಂಭ್ರಮದ ಕಾರ್ಯಕ್ರಮಗಳಲ್ಲೂ ಅವರ ಊಟ ಅವರ ಮನೆಯಲ್ಲೇ. ಅದೆಷ್ಟು ಬಲವಂತ ಮಾಡಿದರೂ ಒಂದು ತುತ್ತು ಕೂಡಾ ಇಲ್ಲಿ ಅವರು ಮುಟ್ಟುವುದಿಲ್ಲ. ವಿನೀತನ ಅಪ್ಪ, ಅಮ್ಮ ತೊಂಭತ್ತರ ಹತ್ತಿರ ಅಥವಾ ದಾಟಿದ್ದರೂ ದಾಟಿರಬಹುದು. ವಿನೀತ್ ಅವರ ಆರೋಗ್ಯಕಾಗಿ ಬಹಳ ಕಷ್ಟ ಪಟ್ಟು ತಾನು ಈವರೆಗೂ ಕೂಡಿಟ್ಟ ಲಕ್ಷ ಲಕ್ಷ ಹಣವನ್ನೆಲ್ಲ ನೀರಿನಂತೆ ಖರ್ಚು ಮಾಡಿ ಅವರುಗಳ ಆರೈಕೆ ಮಾಡುತ್ತಿದ್ದ. 


ಹೀಗೆ ಒಂದು ದಿನ ನಾ ಕಥೆಯಾದಳು ಹುಡುಗಿ ಯನ್ನ ಒಂದಿಷ್ಟು ಓದಿ.. ತೋಚಿದ್ದನ್ನ ಒಂದಿಷ್ಟು ಗೀಚಿ.. ತಂಗಾಳಿಗಾಗಿ ಮನೆ ಬಾಗಿಲು ತೆರೆದು, ನಟ್ಟಿರುಳು ರಸ್ತೆಗೆ ಬಂದಾಗ ಸಮಯ ರಾತ್ರಿ ಅಲ್ಲಲ್ಲ ಮುಂಜಾವು ಹನ್ನೆರಡೂವರೆ..!! ದಿನಾ ಅದಕ್ಕಿಂತಲೂ ಲೇಟ್ ಆಗಿ ಮಲಗೋ ನನಗೆ ಅದು ಮಾಮೂಲಿ ವಿಷಯವೇ. ಹೊರಗೆ ಬಂದು ನೋಡಿದರೆ ವಿನೀತನ ಮಡದಿ ನಿಶಾ ಮತ್ತವನ ತಾಯಿ ಇಬ್ಬರೂ ರಸ್ತೆಯಲ್ಲಿ ಪೆರೇಡ್ ಮಾಡ್ತಾ ಇದಾರೆ..!! ಅವರ ಬಳಿ ಹೋಗಿ ಕೇಳಿದೆ.. ಕ್ಯಾ ಮಾಜೀ ಅಬೀ ತಕ್ ಸೋಯಾ ನಹೀ ಕ್ಯಾ.. ಇತನೀ ರಾತ್ ಮೇ ಇಧರ್ ಕ್ಯಾ ಕರ್ ರಹಾ ಹೈ..? 
ವಿನೀತನ ಮಡದಿ, ನಹೀ ಭಯ್ಯಾ ಹಮ್ ಲೋಗ್ ಜಸ್ಟ್ ವಾಕಿಂಗ್ ಕರನೇ ಕೆ ಲಿಯೇ ಆಯೆ ಥೇ..!!

ವಾಕಿಂಗ್..? ವೋ ಭಿ ಇತನೀ ರಾತ್ ಪೇ.. ವೋ ಭೀ ಸಿರ್ಫ್ ತುಮ್ ದೋನೋ..?? ಕ್ಯಾ ಹುವಾ..  ವಿನೀತ್ ಕಿದರ್ ಗಯಾ..??

ವೋ ಘರ್ ಪೆ ಹೈ.. ನಿಶಾ ಇನ್ನು ಹೇಳಿ ಮುಗಿಸಿರಲಿಲ್ಲ ಕಾಲೋನಿಯ ಪಾರ್ಕಿನ ಕಡೆಯಿಂದ ಯಾರೋ ಚೀರಿದ ಶಬ್ಧ. 
ಥಟ್ಟನೆ ವಿನೀತನ ತಾಯಿ, ನಿಶಾ ಮತ್ತು ನಾನು ಮೂವರು ಆ ಕಡೆ ತಿರುಗಿದೆವು. ಅಲ್ಲಿ ವಿನೀತ್ ಓಡುತ್ತಲಿದ್ದ ..!!
ಕ್ಯಾ ಹುವಾ ಬೆಹೆನ್ ಜೀ.. ಕುಚ್ ಗಡ್ ಬಡ್ ಹೈ ಕ್ಯಾ..?? ವಿನೀತ್ ಕ್ಯೂ ಭಾಗ್ ರಹಾ ಹೈ ಉಧರ್..??

ನಹೀ ಭಯ್ಯಾ ಕುಚ್ ಭಿ ನಹೀ ವೋಹ್ ಭೀ ವಾಕಿಂಗ್ ಕರ್ ರಹಾ ಹೈ..!!
ನನಗೆ ನಂಬಲಾಗಲಿಲ್ಲ. ಬೆಹೆನ್ ಜೀ ಆಪ್ ಘರ್ ಚಲಿಯೇ ಮೈ ವಿನೀತ್ ಕೊ ಲೇಕರ್ ಆತಾ ಹೂ.. 
ನಹೀ ಭಯ್ಯಾ ಆಪ್ ಜಾಯಿಯೇ ನಾ.. ಹಮ್ ಸಂಭಾಲ್ ಲೇಂಗೇ..!!
ಅವರಪ್ಪಣೆಗೆ ಕಾಯದೆ ನಾನು ವಿನೀತ್ ನತ್ತ ಓಡಿದೆ. 


ವಿನೀತ್ ಯಾಕೆ ಹೀಗಾಡ್ತಾ ಇದಾನೆ..?? ಅದು ಇಷ್ಟ್ ಹೊತ್ತಲ್ಲಿ..?? ಯಾಕೆ ಹಾಗೆ ಕಿರುಚುತ್ತಾ ಓಡ್ತಾ ಇದಾನೆ..?? ದೇವ್ರೇ ಒಳ್ಳೇದೆ ಆಗ್ಲಪ್ಪ..!! ನನ್ನಷ್ಟಕ್ಕೆ ನಾನೇ ಯೋಚನೆ ಮಾಡ್ತಾ ಓಡಿ ಬಂದು ನೋಡಿದರೆ ಅಲ್ಲಿ ವಿನೀತ್ ಮಾತ್ರ ಓಡ್ತಾ ಇರ್ಲಿಲ್ಲ. ಓಡ್ತಾ ಇದ್ದದ್ದು ತೊಂಭತ್ತರ ಅವರಪ್ಪ ಕೂಡಾ..!!

ನಾನು ವಿನೀತ್ ನತ್ತ ಓಡಿ ಹೋಗಿ ಕೇಳಿದೆ.. ಅರೆ ಯಾರ್ ಕ್ಯಾ ಹುವಾ..? ಕ್ಯೂ ತುಮ್ ದೋನೋ ಐಸೆ ಭಾಗ್ ರಹೇ ಹೋ..??
ಅರೆ ಯಾರ್ ಕುಚ್ ಭೀ ನಹಿ.. ಯೇ ಮೇರ ಬಡಾ ಬಾಪ್ ಹೈನಾ.. ಸಿರ್ಫ್ ಏಕ್ ನಂಬರ್ ಕಾ ನೌಟಂಕಿ ಕರ್ ರಹಾ ಹೈ.. ಅಂದ ವಿನೀತ್..!!
ನನಗೆ ಅಷ್ಟು ಸುಲಭಕ್ಕೆ ಅರ್ಥವಾಗಲಿಲ್ಲ.. ಅರೆ ಸೀದಾ ಬೋಲ್ನಾ ಯಾರ್ ಕ್ಯಾ ಹುವಾ..??

ಯೇ ಹೈನಾ ಬಡೇ ಲೋಗ್.. ಏ ಅಭೀ ತೋ ಅಭೀ, ಗಾವ್ ಜಾನೇ ಕೆ ಲಿಯೇ ಮನ್ ಕರ್ ರಹಾ ಹೈ.. 
ಮುಂದಿನದನ್ನ ಕನ್ನಡದಲ್ಲೇ ಹೇಳುವುದು ಉತ್ತಮ್ಮ... 
ವಿನೀತ್ ಮುಂದುವರೆಸ್ತಾ ಹೊದ.. 
ಅರೆ ನೋಡು ಮಾರಾಯ ಈ ನಮ್ ಅಪ್ಪನಿಗೆ ಈಗಲೇ ಊರಿಗೆ ಹೋಗಬೇಕಂತೆ. ಒಂದು ವಾರದಿಂದ ಮನೇಲಿ ಯಾರನ್ನೂ ನೆಮ್ಮದಿಯಿಂದ ಇರೋಕೆ ಬಿಡ್ತಿಲ್ಲ. ದಿನಾ ರಾತ್ರಿ ಇಷ್ಟ್ ಹೊತ್ತಾದ್ರೆ ರಂಪ ಮಾಡ್ತಾರೆ. ಇವತ್ತು ಸ್ವಲ್ಪ ಅತಿರೆಕವಾಗಿಯೇ ಆಡ್ತಾ ಇದಾರೆ. ನಾನು ಈಗಿಂದೀಗಲೇ ಊರಿಗೆ ಹೋಗ್ಬೇಕು.. ಇಲ್ದಿದ್ರೆ ಈಗಿಂದೀಗಲೇ ಸಾಯ್ಬೇಕು ಅಂತ ಹಠ ಮಾಡ್ತಾ ಇದಾರೆ..!!

ಯಾಕೆ ಏನಾಯ್ತು ವಿನೀತ್ ನಾ ಕೇಳಿದೆ..??
ಏನಪ್ಪಾ ಹೇಳೋದು.. ಇವರು ಹೀಗೆ ಹಠ ಮಾಡಿದ್ರು ಅಂತ, ಕಳೆದ ತಿಂಗಳು ತಾನೇ ಹದಿನೈದು ದಿನ ರಜೆ ಹಾಕಿ, ಮೂರ್ ಮೂರ್ ಸಾವಿರ, ನಾಕ್ ನಾಕ್ ಸಾವಿರ ಖರ್ಚ್ ಮಾಡಿ  ಇವರನ್ನ ಊರಿಗೆ ಕರ್ಕೊಂಡು ಹೋದ್ರೆ ಅಲ್ಲಿ ಒಂದು ವಾರ ಇದ್ದು ಮಾರನೆ ದಿನ ಸಾಕು ನಡಿ ಇಲ್ಲಿದ್ದದ್ದು ವಾಪಸ್ ಹೊಸೂರ್ ಗೆ ಹೋಗೋಣ ಅಂತ ಹಠ ಮಾಡಿದ್ರು..!! ನಾನೂ ಹೋಗ್ಲೀ ಅಂತ ಮತ್ತೆ ಅಲ್ಲಿಂದ ಕರ್ಕೊಂಡು ಬಂದು ಇಲ್ಲಿ ಇನ್ನು ಇಪ್ಪತ್ತು ದಿನ ಆಗಿಲ್ಲ.. ಈಗ ಮತ್ತೆ ಹಠ ಮಾಡ್ತಾ ಇದಾರೆ. ಏನ್ ಮಾಡೋದು ಇಂಥವರ ಹತ್ರ..?? ಅಲ್ಲ, ಹೋಗಿ ಬರೋಕೆ ಅದೇನು ಹತ್ತಿಪ್ಪತ್ತು ಕಿಲೋ ಮೀಟರ್ ಅಷ್ಟೇ ನಾ..? ಕಾನ್ಪುರ..!! ಎರಡು ರಾತ್ರಿ ಜರ್ನಿ ಮಾಡ್ಬೇಕು ಅಲ್ಲಿಗೆ ಹೋಗೋಕೆ. ಇವ್ರು ಹೇಳಿದ ಹಾಗೆಲ್ಲ ಕುಣಿಯೋದಕ್ಕೆ ಆಗತ್ತಾ..? ನಾವೇನು ಕೆಲಸನೆ ಮಾಡೋದೋ ಅಥವಾ ಇವರ ಜೊತೆ ಕೂತು ಹೀಗೆ ಆಟಾಡ್ತಾ ಕೂರೋದೋ ಅಂದ ಅಸಹಾಯಕತೆ ಇಂದ. 

ನಾನು ವಿನೀತ್ ನ ಅಪ್ಪನಿಗೆ.. ಬಾವುಜೀ ಯಾಕ್ ಹೀಗ್ ಮಾಡ್ತಿದೀರ.. ಹೋಗಿ ಮನೇಲಿ ಮಲ್ಕೊಳಿ ಅಂತ ಎಷ್ಟ್ ಸಮಾಧಾನ ಮಾಡಿದರೂ ನನ್ನ ಮಾತು ಕೇಳದೆ ಸರಿ ರಾತ್ರಿಗೆ ಅತ್ತಿಂದಿತ್ತ ಓಡಾಡುತ್ತಲೇ ಇದ್ದರು.
ನೋಡು ಸತೀಶ್ ವಯಸ್ಸಾದೊರು ಹಿಂಗೆಲ್ಲ ಮಾಡಿದ್ರೆ ಹೆಂಗೆ ಹೇಳು..?? ಮನೇಲಿ ನನ್ ಹೆಂಡತಿಗೆ ಈಗ ಆರು ತಿಂಗಳು. ದಿನಾ ಹೀಗೆ ಗಲಾಟೆ ಮಾಡ್ತಾ ಯಾರನ್ನೂ ಮಲಗೋಕೆ ಬಿಡಲ್ಲ. ಅವಳು ಈಗ ಚೆನ್ನಾಗಿ ರೆಸ್ಟ್ ಮಾಡ್ತಾ ತನ್ನ ಆರೋಗ್ಯ ಸರಿಯಾಗಿ ನೋಡ್ಕೋಬೇಕು. ಮನೇಲಿ ಇಂಥ ರಾಮಾಯಣ ನಡೀತಿದ್ರೆ ಯಾರಿಗ ತಾನೇ ಸಮಾಧಾನ ಇರತ್ತೆ. ನಮ್ ಕಂಪನಿ ನಮಗೆ ಕೆಲಸ ಕೊಟ್ಟಿದೆ, ಸಂಬಳ ಕೊಟ್ಟಿದೆ.. ಸಾಲದು ಅಂತ ಇಂಥಾ ಜಾಗಕ್ಕೆ ಕಳಿಸಿ ಕಷ್ಟಾನು ಕೊಡ್ತಿದೆ. ಒಂದೊಂದ್ಸಾರಿ ಯಾರೂ.. ಬೇಡ ಏನು ಬೇಡ ಅನ್ನಿಸಿ ಬಿಡತ್ತೆ ಮಾರಾಯ..!! ನಮ್ಮೊಬ್ಬರಿಗೆ ಮಾಡೋದಾಗಿದ್ರೆ ಇಷ್ಟು ಕಷ್ಟ ಬೀಳ್ಬೇಕಾ..?? ವಯಸ್ಸಾದೋರು ಅರ್ಥ ಮಾಡ್ಕೊಳ್ಳೋದು ಬೇಡ್ವಾ..?? ಹೆತ್ತ ಅಪ್ಪ ಅಮ್ಮ ಆದರೂ ಸರಿಯೇ, ಚೂರಿ ಚುಚ್ಚುವಂತೆ ನೋವು ಕೊಡುವಾಗ ಯಾರು ತಾನೇ ತಾಳಿಕೊಂಡಿರ್ತಾರೆ..?? ಇಂಥಾ ತಾಪತ್ರಯಗಳಿಗೇನೆ ಮದುವೆ ಮಾಡ್ಕೊಂಡ ನಂತರ ಎಲ್ರೂ ಬೇರೆ ಮನೆ ಮಾಡ್ತಾರೇನೋ..?? ಜೊತೇಲೆ ಇಟ್ಕೊಂಡು ಈಗ ನಾನು ಅನುಭವಿಸ್ತಿರೋದು ಸಾಕು ಅನ್ನಿಸಿ ಬಿಟ್ಟಿದೆ ಮಾರಾಯ..!!

ವಿನೀತ್ ನನ್ನ ಬಳಿ ಇನ್ನು ಏನೋ ಹೇಳುವುದರಲ್ಲಿದ್ದ.. ವಿನೀತನ ತಂದೆ ದಡದಡನೆ ಎದ್ದು ಓಡಲಾರಂಭಿಸಿದರು.. ೧೧ ಕೆವಿ ಟ್ರಾನ್ಸ್ ಫಾರ್ಮರ್ ಕಡೆಗೆ..!!

ಓಡಿ ಹೋಗಿ ಅವರನ್ನ ಹಿಡ್ಕೊಂಡ ನಾನು ಕೇಳಿದೆ.. ಬಾವುಜೀ ಯಾಕ್ ಹೀಗೆ ಮಾಡ್ತೀರ..?? ಇವತ್ತೊಂದು ರಾತ್ರಿ ತಡ್ಕೋಳಿ ಬೆಳಿಗ್ಗೆ ನಾನೇ ಖುದ್ದು ನಿಮ್ಜೊತೆ ಹೊರಟು ಬಂದು ನಿಮ್ಮನ್ನ ನಿಮ್ಮೂರಿಗೆ ಬಿಟ್ ಬರ್ತೇನೆ..!! ಈಗ ನಡೀರಿ ಮನೆಗೆ. ಅವರ ಕೈ ಹಿಡಿದು ಸ್ವಲ್ಪ ಬಲವಾಗಿಯೇ ಎಳೆದು ತಂದು ಅವರ ಮನೆಯ ತಲುಪಿದೆವು. ವಿನೀತನ ತಾಯಿ ಮತ್ತು ಹೆಂಡತಿ ಕೊರೆವ ಚಳಿಯಲ್ಲಿ ಬಕ ಪಕ್ಷಿಗಳ ಹಾಗೆ ಕಾಯುತ್ತ ಕೂತಿದ್ದರು. ಮಧ್ಯ ರಾತ್ರಿಯಾದರೂ ಮಲಗದ, ಈ ನೋವಿಗೆ ಮುಲುಗುವ ಅವರುಗಳನ್ನು ಕಂಡಾಗ ಮನ ಹಿಂಡಿದ ಹಾಗಾಯ್ತು. 
ನಾನು ಮನೆ ಒಳಗಡೆ ಬರೋಲ್ಲ.. ಇಲ್ಲಿಂದ ಹೀಗೆ ಈಗಲೇ ನಾನು ಊರಿಗೆ ಹೊರಡ್ತೀನಿ. ವಿನೀತನ ತಂದೆಯದು ಒಂದೇ ಹಠ..!! ಹೇಗೆ ಬಲವಂತ ಮಾಡಿ ಮನೆಯೊಳಗೆ ತಳ್ಳಿ ಅವರೆಲ್ಲ ಬಾಗಿಲು ಹಾಕಿ ಕೊಂಡರೂ ಮನೆಯೊಳಗೆ ಕಿರುಚೋದು.. ಬಾಗಿಲು ಬಡಿಯೋದು.. ಕಿಟಕಿ ತೊರೆದು ಕಿರುಚೋದು ಮಾಡಿ ಸತಾಯಿಸುತ್ತಿದ್ದರು. ವಿನೀತ್ ಕಣ್ಣಲ್ಲಿ ಮೊದಲ ಸಾರಿ ನೀರು ಜಿನುಗಿದ್ದನ್ನು ನೋಡಿದೆ. ಮನಸ್ಸಿಗೆ ಸ್ವಲ್ಪ ಕಷ್ಟವಾಯಿತು. 
ನೋಡು ಸತೀಶ್ ಇವ್ರು ಹೀಗೆಲ್ಲ ಮಾಡ್ತಾರೆ.. ಕಳೆದ ಒಂದು ವಾರದಿಂದ ಸ್ವಲ್ಪ ವಿಪರೀತವೇ ಆಗೋಯ್ತು. ನಾನೇನು ಸುಮ್ಮನೆ ಇಲ್ಲ.. ಮುಂದಿನ ಭಾನುವಾರಕ್ಕೆ ಟಿಕೆಟ್ ರಿಸರ್ವ್ ಮಾಡ್ಸಿದ್ದೇನೆ. ಬರೀ ಭಾನುವಾರಕ್ಕಲ್ಲ, ಈ ತಿಂಗಳಿನ ನಾಲ್ಕು ದಿನಗಳಿಗೆ ಹಾಗೆ ಬುಕ್ ಮಾಡಿದ್ದೇನೆ. ಕನ್ಫರ್ಮ್ ಆದ ಯಾವ ದಿನವಾದರೂ ಕರ್ಕೊಂಡು ಹೋಗಿ ಬಿಟ್ ಬರೋಣ ಅಂತ. ಅದನ್ನ ಹೇಳಿದ್ರೂ ಕೆಳ್ತಿಲ್ಲ. ಹೀಗೆ ಹಠ ಸಾಧಿಸಿದರೆ ಮಾತ್ರ ಆಗಿ ಬಿಡತ್ತಾ..?? ನಂಗೆ ಅಪ್ಪ ಅನ್ನೋ ಅಭಿಮಾನವೇ ಹೋಗಿ ಬಿಟ್ಟಿದೆ ಮಾರಾಯ..!! 
ವಿನೀತ್ ಈ ಮಾತು ಅಂದೊಡನೆ ರೇಜಿಗೆ ಬಿದ್ದ ಬಾವುಜಿ.. ಏನು ಅಪ್ಪ ಅನ್ನೋ ಅಭಿಮಾನವೇ ಹೋಗಿ ಬಿಟ್ಟಿದೆಯಾ.. ಸಾರ್ಥಕ ಆಯ್ತು ನಿಮ್ಮನ್ನ ಹುಟ್ಟಿ ಬೆಳೆಸಿ ಬದುಕು ಕಲಿಸಿ ಕೊಟ್ಟಿದ್ದಕ್ಕೆ. ನಮ್ಮದೊಂದು ಸಣ್ಣ ಅಭಿಲಾಷೆ ನಿನಗೆ ನನ್ನ ಮೇಲೆ ನಿರಭಿಮಾನ ಹುಟ್ಟಿಸಿ ಬಿಡ್ತು ಅಲ್ಲಾ.?? ಅದ್ಕೆ ನಾನಿಲ್ಲಿ ಇರೋಲ್ಲ ಅಂದಿದ್ದು ಅನ್ನುತ್ತ ಎದ್ದು ನಾವೆಷ್ಟೇ ತಡೆದರೂ ನಿಲ್ಲದೆ ಕಾಲೋನಿಯೊಳಗೆ ಮತ್ತೊಂದು ಸುತ್ತು ಹೊರಟೇ ಬಿಟ್ಟರು..!!


ತೊಂಭತ್ತರ ದಿನಗಳು.. ಮೈಯಲ್ಲಿ ಕಸುವಿಲ್ಲ. ಆದರು ಅವರ ಹಟಕ್ಕೂ ಅದನ್ನು ಅವರು ಸಾಧಿಸುತ್ತಿದ್ದ ಹುಂಬ ತನಕ್ಕೂ ವಯಸ್ಸಾಗಿರಲಿಲ್ಲ. ಕಾಲೋನಿಯೊಳಗೆ ಬೆಳಕಿದ್ದ ಕಡೆಗಿಂತ, ಬೆಳಕಿಲ್ಲದ ಕತ್ತಲು ಕವಿದ ಕಾಡಿನಂತ ಜಾಗದ ಕಡೆಗೇ ಓಡುತ್ತಿದ್ದರು. ನಮಗೆ ಭಯ..!! ಎಲ್ಲಿ ಯಾವ ಹುಳು ಹುಪ್ಪಡಿಯಿದೆಯೋ..?? ಏನು ಹೇಳಿದರು ಕೇಳದೆ ಸುತ್ತಿದ ಅವರು, ಕಡೆಗೊಮ್ಮೆ ದೇವಸ್ಥಾನದ ಬದಿಯ ಫುಟ್ ಪಾತ್ ನ ಕಾರಿಡಾರ್ ಮೇಲೆ ಕೂತರು. ಅವರ ಓಡಾಟ ಒಂದು ಕ್ಷಣಕ್ಕೆ ನಿಂತರೂ ಅವರ ಉಸಿರಾಟದ ವೇಗ ಮಾತ್ರ ತಗ್ಗಿರಲಿಲ್ಲ. ಏನೇನೋ ಗೊಣಗುತ್ತ ಅವರು.. ಮತ್ತಿನೇನೋ ನೋವು ತೋಡಿ ಕೊಳ್ಳುತ್ತಿರೋ ವಿನೀತ್. ಇಬ್ಬರನ್ನೂ ಮೂಕನನ್ನಾಗಿ ನೋಡ್ತಿರೋ ನಾನು..!! ಯಾರು ಸರಿ.. ಯಾರು ತಪ್ಪೆಂಬ ನಿರ್ಣಯಕ್ಕೆ ಬರಲಾರದೆ ನಾನು ಒಂದು ಸಂಕಟದ ಗೂಡಿನೊಳಗಣ ಗುಬ್ಬಿಯಾಗಿದ್ದೆ. 
ಬಾವುಜಿ ಗೆ ಏನನ್ನಿಸಿತೋ.. ತಮ್ಮ ಹೆಗಲ ಮೇಲಿದ್ದ ಟವಲ್ ತೆಗೆದು ಅಲ್ಲಿಯೇ ಪಕ್ಕದಲ್ಲಿದ್ದ ಸ್ಟೀಲ್ ಲೈಟ್ ಕಂಬಕೆ ಬಿಗಿದು ತಮ್ಮ ಕುತ್ತಿಗೆಗೆ ಸುತ್ತಿ ಕೊಳ್ಳುವ ಪ್ರಯತ್ನ ಮಾಡಿದರು. 
ನನಗೆ ಭಯವಾಗಿ ಹೋಗಿ ಅವರನ್ನು ಹಿಂದಿನಿಂದ ಬಳಸಿ ಅವರ ಎರಡೂ ಕೈಗಳನ್ನು ಬಳಸಿ ತಬ್ಬಿ ಹಿಡಿದೆ. ವಿನೀತ್ ಅವರ ಕೈಯೊಳಗಿನ ಟವಲ್ ಕಿತ್ತುಕೊಂಡ.  
ನೋಡು ಸತೀಶ್ ಇಷ್ಟು ಗಟ್ಟಿ ಮುಟ್ಟಾಗಿ ಆಡೋ.. ಹೀಗೆ ನಾಟಕ ಆಡ್ತಾ ಇರೋ ಇವರಿಗೆ ಯಾವ ಖಾಯಿಲೆ ಇದೆ ಅನ್ಸತ್ತೆ. ಇವರಿಗೊಸ್ಕರ ನಾನು ಆಸ್ಪತ್ರೆಗೆ ಲಕ್ಷ ಲಕ್ಷ ಖರ್ಚು ಮಾಡಿದ್ದೇನೆ. ಇವರನ್ನ ನೋಡಿದ್ರೆ ಯಾರಾದ್ರು ಸರಿ ಆಪರೇಶನ್ ಆಗಿರೋ ಪೇಷೆಂಟ್ ಅನ್ನುತಾರ ಅಂದ. ಹೀಗೆ ಸಾಯೋದಿದ್ರೆ ಇಲ್ಲ್ಯಾಕೆ ಸತ್ತು ನಿಮಗೆಲ್ಲ ಕಷ್ಟ ಕೊಡಬೇಕು..?? ಊರು.. ಊರು ಅಂತ ಸಾಯ್ತಾ ಇದಾರಲ್ಲಾ ಅಲ್ಲೇ ಹೋಗಿ ಸಾಯೋದಲ್ವಾ..?? 
ಬಾವುಜಿ ಗೆ ಏನನ್ನಿಸಿತೋ ನನ್ನಿಂದ ಕೊಸರಾಡಿ ಬಿಡಿಸಿಕೊಂಡು, ತಮ್ಮ ಕಾಲಿನಲ್ಲಿದ್ದ ಹಳೆಯ ಚಪ್ಪಲಿಯಲ್ಲಿ ಬಲಗಾಲಿನದನ್ನು ತೆಗೆದು ವಿನೀತನ ಮೇಲೆ ಎಸೆದು ಬಿಟ್ಟರು..!! ವಿನೀತ್ ಒಮ್ಮೆ ಕೋಪದಿಂದ ಅವರೆಡೆಗೆ ಕೈ ಎತ್ತಿದವನು ತಾನೇ ತಡೆದು ಸುಮ್ಮನಾದ.. ನಾನೂ ವಿನೀತ್ ಎಂದು ಜೋರಾಗಿ ಕೂಗಿದವನಷ್ಟೇ ಮುಂದೇನೂ ಮಾತನಾಡಲಾರದೆ ನಿಂತು ಬಿಟ್ಟೆ..!!

ಬಾವೂಜಿಯನ್ನ ಎಳಕೊಂಡು ಬಂದು ದೇವಸ್ತಾನದ ಪ್ರಾಂಗಣದ ಬೆಂಚಿನ ಮೇಲೆ ಕೂತೆ. 
ವಿನೀತ್ ರಸ್ತೆಯ ಮೇಲೇ ನಿಂತಿದ್ದ.  
ಕೊರೆಯುವ ಚಳಿ ಅಷ್ಟು ಸುಡಬಲ್ಲದು ಅನ್ನುವ ಅನುಭವವನ್ನ ಮೊದಲ ಬಾರಿ ಅನುಭವಿಸಿದ್ದೆ..!!  
ಮತ್ತೂ ಸ್ವಲ್ಪ ಹೊತ್ತು ಸುಮ್ಮನೆ ಕೂತ ಬಾವೂಜಿ ಮತ್ತೆ ಎದ್ದು ರಸ್ತೆಯ ಕಡೆ ನಡೆಯುತ್ತಾ ತಮ್ಮ ಮೈ ಮೇಲಿದ್ದ ಜುಬ್ಬವನ್ನ ತೆಗದು ಅದನ್ನು ಮತ್ತೆ ಲೈಟ್ ಕಂಬಕೆ ಸುತ್ತುವ ಪ್ರಯತ್ನ ಮಾಡಿದರು. ವಿನೀತ್ ಅದನ್ನೂ ಕಿತ್ತುಕೊಂಡು ಇಟ್ಕೊಂಡ..!! 
ಬಾವೂಜಿ ಬರೀ ಮೈಯಲಿ ಬರಿಯ ರಸ್ತೆಯ ಮೇಲೆ ಅಲ್ಲೇ ಮಲಗಿದರು..!!
ಬಾವೂಜಿ ಇಲ್ಲ್ಯಾಕೆ ಮಲಗ್ತೀರ ಬನ್ನಿ ಮನೆಗೆ ಹೋಗಿ ಮಲಗೋಣ.. ನಿಮ್ಮನೆಗೆ ಅಲ್ಲದಿದ್ದರೆ ನನ್ನ ಮನೆಗೆ ಬನ್ನಿ, ಬೆಳಿಗ್ಗೆ ನಾನೇ ಖುದ್ದು ನಿಮ್ಮನ್ನ ಕರ್ಕೊಂಡು ಹೋಗಿ ಬಿಡ್ತೀನಿ ನನ್ನ ನಂಬಿ.. ಟ್ರೈನ್ ಸಿಗದೇ ಹೋದರೂ, ಇಪ್ಪತ್ತು ಸಾವಿರ ಹೋದರೂ ಅಡ್ಡಿ ಇಲ್ಲ.. ನಿಮ್ಮನ್ನ ಫ್ಲೈಟ್ ನಲ್ಲಿ ಕರ್ಕೊಂಡು ಹೋಗ್ತೇನೆ..!! ಈಗ ಬನ್ನಿ ಮನೆಗೆ ಹೋಗೋಣ. ನಮ್ಮ ಅದ್ಯಾವ ಭರವಸೆಯ ಮಾತುಗಳಿಗೂ ಅವರ ಕಿವಿ ಮತ್ತು ಮನಸ್ಸು ತೆರೆದುಕೊಳ್ಳುವ ಪ್ರಯತ್ನ ಮಾಡಲಿಲ್ಲ..!! ಸರಿ ವಿನೀತ್, ನೀನು ಇವರನ್ನ ಒಂದ್ನಿಮಿಷ ಹೀಗೆ ನೋಡ್ಕೋ ಮನೆಗೆ ನಾನು ಮನೆಗೆ ಹೋಗಿ ಒಂದು ಬೆಡ್ ಶೀಟ್ ಆದ್ರು ತರ್ತೇನೆ ಅಂತ ಮನೆ ಕಡೆಗೆ ಮುಖ ಮಾಡುವುದರೋಳಗಾಗಿ.. ಬಾವೂಜಿ ಮತ್ತೆ ತಮ್ಮ ಅಭಿಯಾನವನ್ನ ಆರಂಭಿಸಿದರು..!!  
ನನಗೂ ಸಾಕಾಗಿ ಹೋಯ್ತು. ಇಂಥಾ ಒಂದು ಪೀಕಲಾಟ, ಪೇಚಾಟವನ್ನ ಯಾವತ್ತು ಅನುಭವಿಸಿರಲಿಲ್ಲ. 
ವಿನೀತ್ ನನ್ನನ್ನ ಪರಿ ಪರಿಯಾಗಿ ಬೇಡಿಕೊಂಡ.. ಇದು ನನಗೆ ಇದ್ದದ್ದೇ ಮಾರಾಯ, ಸುಮ್ನೆ ನೀನ್ಯಾಕೆ ಕಷ್ಟ ಬೀಳ್ತೀಯ ಹೋಗಿ ಮಲಕ್ಕೋ. 
ಹೇಗೆ ಸಾಧ್ಯ..?? ಮನಸ್ಸಾಕ್ಷಿ ಇರೋ ಯಾರು ಹಾಗೆ ಬಿಟ್ಟು ಹೋಗೋ ಪ್ರಯತ್ನ ಮಾಡುತ್ತಿರಲಿಲ್ಲ. 
ವಿನೀತ್ ನಮ್ಮ ಕಾಂಪೌಂಡಿನ ಅಂಗಳದೊಳಗೆ ಕಾಲಿಟ್ಟ ದಿನವೇ ನಾವೆಲ್ಲಾ ಭಾವಿಸಿ ಬಿಟ್ಟಿದ್ದೆವು.. ಬ್ಯಾಚುಲರ್ ನಮ್ಮಗಳ ಮುಂದೆ ಇವನದ್ಯಾವ ಕಷ್ಟ ಅಂತ. 
ಪರಿಸ್ಥಿತಿ ರಪ್ಪ್ ಅಂತ ಒಂದೇಟು ಕೊಟ್ಟು ಉತ್ತರ ಹೇಳಿತ್ತು. ಜಗತ್ತು ನೀವು ಅನ್ಕೊಂಡ ಹಾಗೆ ಯಾವತ್ತು ಇರೋದಿಲ್ಲ.. ತಿಳ್ಕೊಳ್ರೋ ಮುಟ್ಟಾಳರ ಅಂತ..!!


ಬಾಜಿಯ ಈ ಹೋರಾಟ, ಹಾರಾಟ, ಆಟಗಳನ್ನು ನಿಯಂತ್ರಿಸುವುದರೊಳಗಾಗಿ ಸಮಯ ಬೆಳಿಗ್ಗೆ ನಾಲ್ಕು ಗಂಟೆಯಾದದ್ದೂ ತಿಳಿದಿರಲಿಲ್ಲ..!! ಬೆಳಿಗ್ಗಿನ ರೌಂಡ್ ಗೆಂದು ಅಲ್ಲಿಗೆ ಬಂದ ಸೆಕ್ಯೂರಿಟಿಯ ಬಳಿ ನಡೆದದ್ದೆಲ್ಲವನ್ನೂ ಹೇಳಿದಾಗ, ಸೆಕ್ಯೂರಿಟಿ ಬಾವೂಜಿಯನ್ನು ತಮ್ಮ ಸೆಕ್ಯೂರಿಟಿ ಶೆಡ್ ಗೆ ಕರೆದೊಯ್ದರು. ನಾನು ನೋಡಿ ಕೊಳ್ತೇನೆ ಸಾರ್ ನೀವು ಮನೆಗೆ ಹೋರಡಿ ಎಂದು ಬೀಳ್ಕೊಟ್ಟ ಸೆಕ್ಯೂರಿಟಿಯ ಭರವಸೆಗೆ ಮಣಿದ ನಾವು ಮನೆಯ ಕಡೆ ಹೊರಟೆವು. ವಿನೀತನ ಅಮ್ಮ ಮತ್ತು ಹೆಂಡತಿ ಇನ್ನೂ ಬಾಗಿಲಲ್ಲೇ.. ಹೊಸ್ತಿಲ ದಾಟಿ ಒಳ ಸೇರಿರಲಿಲ್ಲ..!! ರಸ್ತೆಯ ಕೊನೆಯಂಚಿಗೆ ನನ್ನನ್ನು ತಡೆದು ನಿಲ್ಲಿಸಿದ ವಿನೀತ್ ನನ್ನನ್ನು ಮನೆಗೆ ಹೋಗುವಂತೆ ಬಿನ್ನಹಿಸಿದಾಗ ನಾನೂ ಬೇರೆ ದಾರಿಯಿಲ್ಲದೆ ಮನಸಿಲ್ಲದ ಮನಸ್ಸಿನಿಂದ ಬಂದು ಮನೆಯನ್ನು ಕೂಡಿ, ಬಾಗಿಲನ್ನು ಮುಚ್ಚಿ ಚಿಲಕ ಜಡಿದೆ
ಅರ್ಧಂಬರ್ಧ ಓದಿ ಮುಗಿಸಿದ ಪುಟಕ್ಕೆ ಸರಿಯಾಗಿ ಮಗುಚಿ ಮಲಗಿಸಿದ್ದ ಕಥೆಯಾದಳು ಹುಡುಗಿ.. ನಮ್ಮ ಕಥೆಯನ್ನು ನೋಡಿ ಗಹಗಹಿಸಿ ನಗುತ್ತಿದ್ದಳು..!! 
ಹಾಸಿಗೆಯ ಮೇಲೆ ಹೊರಳಿ ಕೊಂಡರೂ ತಕ್ಷಣಕ್ಕೆ ನಿದಿರೆ ಹತ್ತಲ್ಲಿಲ್ಲ.. ಮನದ ತುಂಬಾ ಅದೇ ಯೋಚನೆ.. ಆ ಯೋಚನೆಗಳ ಸುಳಿಗಳಲ್ಲಿ ತಲೆ ಸುತ್ತುವಂತೆ ತಿರುಗುವಾಗಲೇ ನಿದಿರೆ ಹತ್ತಿದ್ದೂ ತಿಳಿಯಲಿಲ್ಲ..!! ಬೆಳಿಗ್ಗೆ ಬಾವೂಜಿಯ ಹಾರಾಟ ಕಮ್ಮಿಯಾಗಿತ್ತು. ಬಾವೂಜಿ ಸೆಕ್ಯೂರಿಟಿಯ ಶೆಡ್ ನಲ್ಲೇ ಮಲಗಿ ಬೆಳಿಗ್ಗೆ ಮನೆ ಸೇರುವಾಗ ಸಮಯ ಎಂಟೂವರೆ. ಆ ಕ್ಷಣಕ್ಕೆ ಬಾವೂಜಿ ಒಂದು ಎಳೆ ಮಗುವಿನಂತೆ ಕಾಣಿಸಿದ್ದು ಸುಳ್ಳಲ್ಲ. ಅವರ ಹಟವೂ ಕೂಡಾ..!! ಮೂರು ದಿನಗಳ ಬಳಿಕ ವಿನೀತನ ಅಣ್ಣ ಊರಿಂದ ಬಂದು ಬಾವೂಜಿಯನ್ನ ಊರಿಗೆ ಕರೆದು ಕೊಂಡು ಹೋದ್ರು. 
ಬಾವೂಜಿಗೆ ಮತ್ತೀಕಡೆ ಬರುವ ಮನಸ್ಸು.. ಅದೆಷ್ಟು ದಿನಗಳಿಗಾಗತ್ತೋ ಗೊತ್ತಿಲ್ಲ..!!


ಯಾವಾಗಲಾದರೂ ಊರಿಗೆ ಹೋದಾಗಲೆಲ್ಲ ಪೋಲಿ ಬಿದ್ದ ತಮ್ಮ.. ಅಪ್ಪ ಅಮ್ಮನೊಳಗಿನ ಅಸಂಖ್ಯ ಅಸಮಧಾನ.. ನಿಟ್ಟುಸಿರಿನ ಹಿಂಡು ಹಿಂಡನ್ನೇ ಬರಿಸಿ ಕೊಡೋ ಅಕ್ಕನ ಬಾಳು.. ಇದೆಲ್ಲದರಿಂದ ಬೇಸತ್ತ ಮನೆಯ ವಾತವರಣದೊಳಗೆ ಅದೆಷ್ಟೋ ಕಾಲದಿಂದ ನಾನೂ, ನಾವೆಲ್ಲರೂ ಸುಖ ಜೀವಿಗಳೇನಲ್ಲ. ಮಾತುಗಳ ಯುದ್ಧವಿಲ್ಲದೆ ನಮ್ಮನೆಗಳಲ್ಲಿ ರಾತ್ರಿಗೆ ಮುಕ್ತಿ ಸಿಗುವುದಿಲ್ಲ..!! ಆದರೆ ನಾ ಕೂಡ ಅಪ್ಪನ ಕಡೆಯಿಂದ ವಿನೀತನ ಹಾಗೆ ಯಾವತ್ತೂ ಕಷ್ಟ ತಿಂದದ್ದಿಲ್ಲ. 
ಒಮ್ಮೆ ಇಂಥದ್ದೇ ವಿಚಾರಕ್ಕೆ ಮನೆಯೊಳಗೆ ಮಾತುಕತೆ ನಡೆಯುತ್ತಿದ್ದಾಗ ಅಪ್ಪನಿಗೆದುರಾಗಿ ನುಡಿದಿದ್ದ.. ಹಿತವಾಗಿ ನಡೆದು ಕೊಳ್ಳುವ ಕೆಲವು ರೀತಿ ನೀತಿಗಳನ್ನು ಸೂಚಿಸಿದ್ದ ನನ್ನನ್ನ ಕಂಡು ಅಪ್ಪ ಅಂದು ಒಂದು ಮಾತು ಹೇಳಿದ್ದರು..  
ತಮ್ಮಾ ನೀನು ನಾಲ್ಕು ಜನರ ಸರಿ ಸಮಕ್ಕೆ ನಿಂತಾಕ್ಷಣ.. ನಾಲ್ಕು ಜನರ ಹತ್ತಿರ ಮುಕ್ತವಾಗಿ ಮಾತಾಡೋದು ಕಲಿತಾಕ್ಷಣ.. ನಿನಗೆ ನನಗೆ ಬುದ್ಧಿ ಕಲಿಸೋ ಅನುಭವ ಬಂದಿದೆ ಅನ್ಕೋಬೇಡ..!! ನಿನಗಿಂತ ನಲವತ್ತು ಚಿಲ್ಲರೆ ವರುಷ ಮುಂಚೆ ಹುಟ್ಟಿ, ಬದುಕಿ, ಬಾಳಿದವ ನಾನು, ಅನುಭವವಾಗಲೀ, ಅನ್ವೇಷಣೆಗಳಲ್ಲಾಗಲಿ ನಾನೆಂದಿಗೂ ನಿನಗಿಂತ ಹಿರಿಯ ಮರೀಬೇಡ ಅಂದು ಬಿಟ್ಟರು. 
ಅಂದಿನಿಂದ ಅಪ್ಪನಿಗೆದುರಾಗಿ ನುಡಿವ ಅಥವಾ ಅಪ್ಪನಿಗೆ ಸಲಹೆ ಕೊಡುವಂಥ ಯಾವ ವಿಚಾರವಾಗಲಿ ಮನೆಯೊಳಗೆ ಸುಳಿಯುತ್ತಿಲ್ಲ..!! ಕೊಡಬಾರದು ಎಂದಲ್ಲ.. ಕೊಟ್ಟರೆ ಆಗುವ ಬದಲಾವಣೆಗಳ್ಯಾವುದೂ ಇಲ್ಲವೆಂದು..!! 
ಹಠಕ್ಕೊಂದು.. ಹಟದ ಶಮನಕ್ಕೊಂದು ಮುಕ್ತಿ ಮಾರ್ಗದ ಅನ್ವೇಷಣೆ ಅವತ್ತಿಂದ ನಡೆಯುತ್ತಿದ್ದರೂ.. ಅದರ ಕಾಲು ದಾರಿಯ ಕಿರುಪರಿಚಯ ಸಹ ಈವರೆಗೂ ಆಗಿಲ್ಲ..!!


ಕಂಡಕ್ಟರ್ ಯಾರ್ರೀ ನವರಂಗ್ ನವರಂಗ್ ಅಂತ ಕೂಗುತ್ತಿದ್ದ. ಅದ್ಯಾವಗಲೋ ನಿದ್ದೆಗೆ ಜಾರಿದ್ದ ನನ್ನನ್ನ ಬೆಹೆನ್ ಜೀ ತಟ್ಟಿ ಎಬ್ಬಿಸಿದರು. ಸ್ವಲ್ಪ ಸರ್ಕೋಳಿ ಭಯ್ಯಾ ಇಳಿತೀನಿ ಅಂದರು. ತೊಡೆಯ ಮೇಲಿದ್ದ ಬ್ಯಾಗ್ ಎತ್ತಿಕೊಂಡು, ಸೀಟ್ ಸರಿ ಮಾಡಿ ಸೀಟಿನಿಂದೆದ್ದು ಅವರಿಗೆ ದಾರಿ ಮಾಡಿಕೊಟ್ಟ ನಾನು ಬ್ಯಾಗಿನೊಳಗಿಂದ ವರಸೆಯಂತೆ ಯಾವಾಗಲೂ ಇರುವ ಹತ್ತು ರುಪಾಯಿಯ ಡೈರಿ ಮಿಲ್ಕ್ ಚಾಕಲೇಟ್ ಅನ್ನು ಅವರಿಗೆ ಕೊಟ್ಟೆ. 
ಎದ್ದ ನಂತರ ಮಗುವಿಗೆ ಕೊಟ್ಬಿಡಿ ಅಂದೆ. 
ತೆಳ್ಳಗೆ ಒಂದು ನಗುವನ್ನ ಪ್ರತಿಕ್ರಿಯಿಸಿ ಬೆಹೆನ್ ಜೀ ಇಳಿದು ಹೋದರು. ಅವರು ಇಳಿದ ನಂತರ ಹೋರಟ ಬಸ್ಸು ಮೆಜೆಸ್ಟಿಕ್ ತಲುಪಿತು. ಅಲ್ಲಿಳಿದು ಬಸ್ಟ್ಯಾಂಡ್ ಬದಿಯಲ್ಲಿನ ತಳ್ಳು ಗಾಡಿಯ ಟೀ ಅಂಗಡಿಯಲ್ಲಿ ಚುಮು ಚುಮು ಚಳಿಗೊಂದು ಬಿಸಿ ಬಿಸಿ ಟೀ ಹೀರಿ. ಟೀ  ಕಾಸು ಕೊಟ್ಟು.. ಅಲ್ಲೇ ನಿಂತಿದ್ದ ಹೊಸೂರ್ ಬಸ್ಸನೇರಿ ಕುಳಿತೆ. ಮತ್ತೆ ಮೊಬೈಲ್ ತೆಗದು ಟೈಮ್ ನೋಡಿದೆ. ಬೆಳಿಗ್ಗೆ ನಾಲ್ಕೂ ನಲವತ್ತು..!! 
ಎಫ್ ಎಂ ೯೮.೩ ಗೆ ಟ್ಯೂನ್ ಮಾಡಿ.. ಮೊಬೈಲ್ ನಲ್ಲಿ ಮತ್ತೆ ಇಂಟರ್ನೆಟ್ ಆನ್ ಮಾಡಿ ಕುಳಿತೆ. 
ಬಸ್ಸು ಸ್ಟಾರ್ಟ್ ಆಯಿತು..

19 comments:

  1. ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಅಲಂಕಾರ್ ಪ್ಲಾಜ ಪಕ್ಕ ಇರುವ ಆವರಣದಲ್ಲಿ ಮೂರು ಟಾಕೀಸುಗಳು ಇವೆ... ನರ್ತಕಿ, ಸಂತೋಷ್, ಸಪ್ನ... ಆವರಣ ಒಂದೇ..ಚಿತ್ರಗಲು ಅನೇಕ ಹೀಗೆ ನಿಮ್ಮ ಲೇಖನದಲ್ಲೂ ಹಲವು ಆಯಾಮಗಳು ಇವೆ, ಕಾನೂನು, ಸ್ನೇಹ, ಅವಕಾಶಗಳು, ಮಾತೃ ಪ್ರೇಮ, ಮಗುವಿನ ಅಳು, ಗೆಳೆಯನ ಸಂಸಾರದ ಒಂದು ಕರುಳು ಕಿವುಚುವ ನೋಟ ಎಲ್ಲವು ಸೆರಿದೆ... ಸುಂದರ ಲೇಖನಧೀರ್ಘವಾದರು ಓಡಿಸಿಕೊಂಡು ಹೊಗುತ್ತದೆ. ಒಳ್ಳೆಯ ಬರಹಗಾರ ನೀವು ಸತೀಶ್

    ReplyDelete
    Replies
    1. ಶ್ರೀ ಸಾರ್.. ನಿಮ್ಮ ಪ್ರತಿಕ್ರಿಯೆ ಯಾವತ್ತಿಗಿಂಥ ಸ್ವಲ್ಪ ಜಾಸ್ತಿಯೇ ಖುಷಿ ಕೊಟ್ಟದ್ದು ಸುಳ್ಳಲ್ಲ. ನಿಜ ನೀವ್ ಹೇಳಿದ ಹಾಗೆ ಒಂದೇ ಚೌಕಟ್ಟಿನೊಳಗೆ ಮನುಜನ ವಿವಿಧ ವರ್ತನೆಗಳ ಒಂದು ಸಣ್ಣ ಪರಿಚಯದ ಪ್ರಯತ್ನವೇ ಈ ಬರಹ. ತುಂಬಾ ಖುಷಿಯಾಯ್ತು ಸಾರ್. :)

      Delete
  2. ಲೇಯ್ ತಮ್ಮ ನಿನ್ನ್ ಕೈನಾಗಿರೋ ವೈನಾತಿ ಸಕ್ತಿಯ ರಹಸ್ಯವ ವಸಿ ನಂಗೂ ತಿಳಿಸಪ್ಪ ನಿಂಗೂ ಪುಣ್ಯ ಬತ್ತದೆ..... ನಾವೂ ವಸಿ ಉದ್ದಾರ ಅಯ್ತಿವಿ .... ನಿನ್ ಬರ್ವಣ್ಗೆ ತುಂಬಾ ಸಂದಾಗದೆ ವಸಿ ಉದ್ದ ಆಯ್ತು ಅಷ್ಟೆಯಾ ಆದ್ರೂ ಪರ್ವಾಕಿಲ್ಲ ಒಂದೇ ಕಿತಾ ಓದಿಸ್‌ಕoಡ್ ಒಯ್ತದೆ ಒಟ್ಟಾರೆ ತುಂಬಾ ಸಂದಾಗದೆ ಕಣೋ ತಮ್ಮಾ.........

    ReplyDelete
    Replies
    1. ಸತಿ.. ಧನ್ಯವಾದಗಳು ಗೆಳೆಯ.

      ಬರವಣಿಗೆಯ ವಿಚಾರ ಕಂಡಿದ್ದು.. ಕೇಳಿದ್ದು.. ಕಲ್ಪಿಸಿದ್ದು ಬಿಟ್ರೆ.. ಬರೆಯೋ ರೀತಿ ಕಲಿತದ್ದು ಮಾತ್ರ ನಿಮ್ಮಂಥ ಗೆಳೆಯರಿಂದಲೇ.

      ನಿನ್ ಪ್ರತಿಕ್ರಿಯೆ ಖುಷಿ ಕೊಡ್ತು ಗೆಳೆಯ. :)

      Delete
  3. hi Satish,
    lekhana ishtavaaytu. kannige kattuvanthe niroopisuvudu nimma baravanigeya shakti.
    munduvareyali ee payana.

    ReplyDelete
    Replies
    1. ರೂಪಕ್ಕ ನಿಮ್ ಪ್ರತಿಕ್ರಿಯೆ ಖುಷಿ ಕೊಡ್ತು.. ಥ್ಯಾಂಕ್ಸ್ ಫಾರ್ ಯುವರ್ ಟೈಮ್. :)

      Delete
  4. odta odta bhadravatiyinda hosur reach aade ... udda idru journey gottaglilla nodu... sandaakade !

    ReplyDelete
    Replies
    1. ಪ್ರವೀಣ ಈ ಲೇಖನದ ಆದಿ ಮೂಲ ನಿನ್ ಮದ್ವೆ ಗೆ ಬಂದಂದರಿಂದ ಶುರು ಆಗ್ತದೆ ನೋಡು. ಒಂಥರಾ ಸ್ವಾಮೀ ಕಾರ್ಯನು ಆಯ್ತು ಸ್ವಕಾರ್ಯನು ಆಯ್ತು.. ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರವೀಣ್. :)

      Delete
  5. ಹಮ್...ಸತೀಶರ ಕಥೆಯೆಂದರೆ ಅದು ಕಥೆಯಲ್ಲ ಜೀವನ!!!!!...
    ಎಲ್ಲಿಂದಲೋ ಶುರು ಮಾಡಿ ಎಲ್ಲಿಗೋ ತಂದು ನಿಲ್ಲಿಸಿದಿರಲ್ಲ...
    ಚೆನಾಗಿದೆ ನಿರೂಪಣೆ...
    ನನ್ನದೊಂದು ಸಲಹೆ...ಹೇಳುವುದು ಸರಿಯೋ ತಪ್ಪೋ ಗೊತ್ತಿಲ್ಲ ಹೀಗೆಲ್ಲಾ...
    ಕಥೆಯ ವಸ್ತು ಬೇಡಿದರೆ ಮಾತ್ರ ಇಷ್ಟು ದೀರ್ಘವಾಗಿ ಬರೆಯಿರಿ ಸತೀಶ್..
    ಇಲ್ಲಿ ಕಥೆಗೂ ಆ ಮೊದಲಿನ ಪೋಲೀಸರ ಜೊತೆಗಿನ ಸಂದರ್ಭಕ್ಕೂ ಅಷ್ಟಾಗಿ ಸಂಬಂಧ ಕಾಣಿಸ್ತಾ ಇಲ್ಲ..ಮುಂದಿನದರಲ್ಲೂ ಸಹ ಅಷ್ಟೇ..ಎರಡು ವಿಷಯಗಳಿಗೆ ಸಾಕಷ್ಟು ತೂಕವಿದೆ..
    ಅದನ್ನು ಎರಡು ಪ್ರತ್ಯೇಕ ಬರಹಗಳಾಗಿಸಿದ್ದರೇ ಒಳ್ಳೆಯದೇನೋ ಅಥವಾ ಒಂದನ್ನು ಹೇಳಲು ಇನ್ನೊಂದನ್ನು ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳಬಹುದೇನೋ...
    ಹಮ್..ಸುಮಾರು ಮೂರು ಬರಹಕ್ಕಾಗುವಷ್ಟು ವಿಚಾರವನ್ನು ಒಂದರಲ್ಲೇ ಹೇಳಿದಿರಿ ಅನ್ನಿಸ್ತಾ ಇದೆ...
    ನೋಡಿ...
    ನನಗನಿಸಿದ್ದನ್ನು ಹೇಳಿದೆ...
    ಹಾಂ ನಿಮ್ಮ ಶೈಲಿ ಓದಿಸಿಕೊಂಡು ಹೋಗುವಂತೆಯೇ ಇದೆ,ಆದರೆ ಅದನ್ನು ದಯವಿಟ್ಟು ಸರಿಯಾದ ಕಡೆ ಉಪಯೋಗಿಸಿ...
    ಇನ್ನಷ್ಟು ಸುಂದರ ಕಥೆಗಳನ್ನು ಕೊಡಿ... ಮುಂದೊಂದು ದಿನ ಪ್ರಶಸ್ತಿ ತೆಗೆದುಕೊಳ್ಳುವಾಗ ಚಪ್ಪಾಳೆ ತಟ್ಟಲು ನಾವಿರುತ್ತೇವೆ..
    ಅಭಿಪ್ರಾಯದಿಂದ ಬೇಸರವಾಗಿದ್ದರೆ ಕ್ಷಮಿಸಿ...ನಿಮ್ಮ ಬರಹಗಳೂ ಇನ್ನೂ ಪಕ್ವಗೊಳ್ಳಲಿ ಎಂಬ ಉದ್ದೇಶದಿಂದ ಹೇಳಿದ ಅನಿಸಿಕೆಗಳಿವು...
    ನಮಸ್ತೆ :)

    ReplyDelete
    Replies
    1. ''ಹಮ್...ಸತೀಶರ ಕಥೆಯೆಂದರೆ ಅದು ಕಥೆಯಲ್ಲ ಜೀವನ''..!!

      ನನ್ನದು ಮಾತ್ರವಲ್ಲ ಚಿನ್ಮಯ್ ಬಹುತೇಕ ಎಲ್ಲರದ್ದು ಅದೇ.. ಕೆಲವರು ತಮಗೆ ಸಿಕ್ಕಿದ ಅನುಭವಗಳಿಗೆ ಸ್ವಲ್ಪ ಬಣ್ಣ ಹಚ್ಚಿ ಇನ್ನೂ ಒಂಚೂರು ಚಿತಾಕರ್ಷಕವಾಗಿ ಪ್ರದರ್ಶನ ಮಾಡೋ ಕೆಲಸ ಮಾಡಬಹುದು ಅಷ್ಟೇ.

      ಈ ಬರಹದ ಮೂಲ ಆಶಯ ಮನುಷ್ಯನ ಹಠ ಮತ್ತು ಧಿಡೀರ್ ವರ್ತನೆಯ ಕುರಿತಾದದ್ದು ಚಿನ್ಮಯ್. ಅಲ್ಲಿ ಪೋಲೀಸರ ಪ್ರಸಂಗವನ್ನ ಪ್ರಸ್ತಾಪಿಸುವುದಕ್ಕೂ ಕಾರಣವಿತ್ತು. ಅವತ್ತು ಅವರೇನಾದರೂ ಅಧಿಕಾರ ದರ್ಪ ಅಥವಾ ರಾತ್ರಿ ಪಾಳಿ ಕೆಲಸದ ಮೇಲಿನ ಅಸಮಾಧಾನದಿಂದ ಬೇಸತ್ತು ಆ ಕೋಪವನ್ನ ನಮ್ಮ ಮೇಲೆ ತೀರಿಸಿ ಕೊಂಡದ್ದೇ ಆಗಿದ್ದಿದ್ರೆ, ನಮ್ ಕಥೆಯ ಸ್ವರೂಪವೇ ಬೇರೆ ಆಗಿರ್ತಿತ್ತು..!! ನಂಗೆ ಬಸ್ ತಪ್ಪಿರ್ತಿತ್ತು. ಹನ್ನೆರಡುವರೆ ಗೆ ಲಾಸ್ಟ್ ಬಸ್. ಅದರ ನಂತರ ಯಾವ ಬಸ್ಸುಗಳೂ ಬರ್ತಿರಲಿಲ್ಲ. ನನಗೆ ಮಾರನೆ ದಿನ ಆಫೀಸಿನಲ್ಲಿ ಬಹು ಮುಖ್ಯ ಕೆಲಸ. ಒಂದು ದಿನ ಅವಶ್ಯಕತೆ ಇಲ್ಲದೆಯೇ ವೃತಾ ವ್ಯರ್ಥ ರಜೆ. ಆ ಕ್ಷಣ ಅವಸರಕ್ಕೆ ಹೊರಟ ನಮ್ಮ್ಯಾರ ಬಳಿಯೂ ಅವತ್ತು ಲೈಸನ್ಸ್ ಇರಲಿಲ್ಲ. ಫ್ರೆಂಡ್ ಒಬ್ಬನ ಬೈಕ್ ತಗೊಂಡು ಬಂದದ್ದು ಅದಕ್ಕೆ ಸೂಕ್ತ ಪುರಾವೆಗಳಿರಲಿಲ್ಲ. ಅಪ ರಾತ್ರಿ.. ನಮ್ಮನ್ನ ಹೇಳದೆ ಕೇಳದೆ ಸ್ಟೇಶನ್ ಗೆ ಕರೆದೊಯ್ದು ಯಾವ ರಾಮಾಯಣ ಬೇಕಿದ್ರೂ ನಡೆಯ ಬಹುದಿತ್ತು. ಆದ್ರೆ ಅವತ್ತು ಹಾಗೇನೂ ಆಗಲಿಲ್ಲ. ನಮ್ಮ ಕಾಲ್ಪನಿಕ ಭಾವಕ್ಕಿಂತ ಆ ಪೋಲೀಸರ ವರ್ತನೆ ಬಹಳ ಸೌಮ್ಯವಾಗಿತ್ತು. ಹಾಗಾಗಿ ಈ ಬರಹದ ವಸ್ತುವಾದ ಹಠ ಮತ್ತು ವರ್ತನೆಗಳ ಕುರಿತಾಗಿ ಹೇಳುವಾಗ ಅವರ ಕುರಿತಾಗಿಯೂ ಹೇಳಿಕೊಳ್ಳುವ ಮನಸ್ಸಾಯಿತು. ಈ ಬರಹದ ಆಶಯದ ಜೊತೆ ಅದನ್ನ ಅಷ್ಟು ಹದವಾಗಿ ಬೆರೆಸಿ ಸರಿಯಾಗಿ ಹೇಳಲಾಗಿಲ್ಲವೋ ಏನೋ ಕ್ಷಮೆ ಇರಲಿ.

      ಇನ್ನು ನಂತರದ ಎರಡು ಘಟನೆ ನೇರ ಹಟಕ್ಕೆ ಮತ್ತದರ ಪೂರಕ ವರ್ತನೆಗೆ ಸಂಭಂಧಿಸಿದ್ದು. ಆ ತಾಯಿ ಮಗುವಿನ.. ವಿನೀತ್ ಮತ್ತು ಅವನಪ್ಪನ ಘಟನೆಗಳಲ್ಲಿ ಇದ್ದ ವೆತ್ಯಾಸ ಒಂದೇ.. ಒಂದು ಎಳೆ ಮಗು & ತಾಯಿ, ಮತ್ತೊಂದು ಇಳಿ ಮುದುಕ ಮತ್ತು ಮಗ. ಬಾಕಿ ಆ ಮಗು ಮತ್ತು ಇಳಿ ಮುದುಕನ ಹಟದ ಪರಿಣಾಮ ಒಂದೇ ಅವರ ಪ್ರಾಣ ಪ್ರಿಯರಿಗೆ ಸಂಕಟ ಮತ್ತು ನೋವು. ಅದು ತಾತ್ಕಾಲಿಕವಾದರೂ ಅದನ್ನ ಅನುಭವಿಸೋದು ಕಷ್ಟ. ವಯಸಾದ ಮೇಲೆ ಮುದುಕರೂ ಮಕ್ಕಳಾಗ್ತಾರಂತೆ. ಆ ಬಾವೂಜಿಯ ಹಠ ಕೂಡ ನನಗನ್ನಿಸಿದ್ದು ಹಾಗೆ. ಅದಕ್ಕೆ ಅವೆರಡನ್ನು ಸಮೀಕರಿಸಿ ಬರೆದದ್ದು.

      ಇನ್ನು ಈ ಇಡೀ ಘಟನೆಗಳ ಅಡಿಪಾಯ ಒಂದು ಪ್ರಯಾಣವೆಂಬ ಸೂತ್ರಕ್ಕೆ ಸಂಭಂಧಿಸಿದರಿಂದ ಆ ಚೌಕಟ್ಟಿನ ಒಳಗೆ ಇದೆಲ್ಲವನ್ನೂ ಕಟ್ಟಿ ಕೊಡುವ ಪ್ರಯತ್ನ ಮಾಡಿದೆ. ನಿಜ ಬರವಣಿಗೆ ಉದ್ದವಾಯಿತು. ನನ್ನ ದುರ್ಬಲತೆಗಲಲ್ಲಿ ಅದೂ ಒಂದು ಖಂಡಿತ ಅದನ್ನು ಮೀರುವ ಪ್ರಯತ್ನ ಮಾಡ್ತೇನೆ ಚಿನ್ಮಯ್.

      ನಿಮ್ಮ ಪ್ರತಿಕ್ರಿಯೆ ನಿಜಕ್ಕೂ ಬಹಳ ಸಂತೋಷ ಕೊಡ್ತು. ನಮ್ಮ ತಪ್ಪುಗಳು ಯಾವತ್ತಿಗೂ ನಮಗೆ ಸರಿಯಾಗಿ ಕಾಣ್ಸೋದಿಲ್ಲ ನೋಡಿ. ಇಲ್ಲಾಗಿದ್ದು ಕೂಡಾ ಅದೇ. ನೀವು ಈ ಬರಹದಲ್ಲಿ ಸಾಮಾನ್ಯವಾಗಿ ಗೋಚರಿಸಬಲ್ಲ ಕೆಲ ತಪ್ಪುಗಳ ಕಡೆ ನನಗೆ ಗಮನ ಕೊಡೋಕೆ ಹೇಳಿದ್ರಿ ಖಂಡಿತ ಅದು ನನ್ನನ್ನ ಮತ್ತು ನನ್ನ ಶೈಲಿಯನ್ನ ತಿದ್ದಿಕೊಳ್ಳಲು ಬೇಕಾದ ಪೂರಕ ಅಂಶಗಳು. ದಿಟ್ಟ ಮತ್ತು ನೇರ ಪ್ರತಿಕ್ರಿಯೆಗೆ ಧನ್ಯವಾದಗಳು ಚಿನ್ಮಯ್ ನಿಮ್ಮೇಲಿನ ಅಭಿಮಾನ ಮತ್ತು ಆತ್ಮೀಯತೆಗೆ ಇನ್ನೂ ಒಂದ್ಸ್ವಲ್ಪ ಫೆವಿಕಾಲ್ ಮೆತ್ತಿ ಕೊಂಡದ್ದು ಸುಳ್ಳಲ್ಲ. ಈ ನೇರವಂತಿಕೆ, ದಿಟ್ಟತೆ ನಿರಂತರವಿರಲಿ ಚಿನ್ಮಯ್. ನಮಗೆ ಗೊತ್ತಿದೆ ನಾವ್ಯಾರೂ ಪ್ರಬುದ್ಧರಲ್ಲ. ಆದ್ರೆ ಪ್ರಬುದ್ಧತೆಯ ಹಾದಿಯಲ್ಲಿ ಸಾಗುತ್ತಿರುವವರು. ಎಲ್ಲರಿಂದಲೂ ಕಲಿಯಲಿರೋದು ನಿಜ. ಕಲಿಕೆ ನಿರಂತರವಿರಲಿ ಹೀಗೆ ಕಲಿಸೋದು ಕೂಡ.

      ಚೆಂದದ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು ಚಿನ್ಮಯ್. :)

      Delete
    2. ವಂದನೆಗಳು ಸತೀಶ್ :)...
      ಆ ಘಟನೆಯ ಹಿಂದೆ ಅಷ್ಟೇಲ್ಲಾ ಅಂಶಗಲಿವೆ ಎಂಬುದು ಗೊತ್ತಿರಲಿಲ್ಲ...
      ತಿಳಿಸಿದ್ದಕ್ಕೆ ಧನ್ಯವಾಗಳು..
      ಬರೆಯುತ್ತಿರಿ...
      ನಮಸ್ತೆ :)

      Delete
  6. ಭಯಾನಕ ಅನುಭವಗಳ ಸರಮಾಲೆಯನ್ನು ಸೂತ್ರಬದ್ಧವಾಗಿ ಬರೆದಿದ್ದೀರಿ.

    ReplyDelete
    Replies
    1. ಸುನಾತ್ ಸಾರ್. ನಿಮ್ಮ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನಮಗೆ ಸಾವಿರ ಕುದುರೆಗಳ ಶಕ್ತಿ ತುಂಬೋದು ಸುಳ್ಳಲ್ಲ. ಆತ್ಮೀಯ ಧನ್ಯವಾದಗಳು ಸಾರ್. ಸಲಹೆಗಳಿದ್ದಲ್ಲಿ ಖಂಡಿತ ಬೇಕಿದೆ. :)

      Delete
  7. ಹಾಯ್ ಬ್ರೋ ......

    ನೀವು ಸುಂದರ ಬರಹಗಾರರು ಅನ್ನೋದಕ್ಕೆ ಎರಡು ಮಾತಿಲ್ಲ.......ನಾನು ಹೇಳ್ಬೇಕು ಅನ್ನೋದನ್ನು ಈವಾಗಲೇ ಸ್ನೇಹಿತ ಚಿನ್ಮಯ್ ಭಟ್ ಹೇಳಿದ್ದಾರೆ.... ಅವರು ಹೇಳಿದ್ದನ್ನು ನಾನೂ ಒಪ್ಪತ್ತೇನೆ... ಧೀರ್ಘವಾಗಿದ್ದರೂ ಬೋರು ಹೊಡೆಸದಂತೆ ಬರೆಯುವ ನಿಮ್ಮ ಸಾಮರ್ಥ್ಯವನ್ನು ನಾವು ಬಲ್ಲವರೆ. ಆದರೆ ಹೊಸಬರು ಯಾರಾದ್ರು ಇದನ್ನು ಓದಲು ಹೊರಟರೆ ಧೀರ್ಘವಾಗಿದೆ ಅನ್ನೋ ಉದ್ದೇಶದಿಂದ ಅರ್ಧಕ್ಕೆ ಬಿಟ್ಟು ಹೋಗುವ ಸಾಧ್ಯತೆಗಳು ಜಾಸ್ತಿ.... ಫ್ರಾಂಕ್ ಆಗಿ ಹೇಳ್ಬೇಕು ಅಂದ್ರೆ ನಾವೆಲ್ಲಾ ನಿಮ್ಮ ಬರಹದ ಬಗ್ಗೆ ಬಲ್ಲವರು..... ನಾವು ನೀವು ಎಷ್ಟೇ ಧೀರ್ಘವಾಗಿ ಬರೆದರೂ ಅದನ್ನು ಓದಿಯೇ ಮುಗಿಸುತ್ತೇವೆ... ಆದರೆ ಹೊಸದಾಗಿ ನಿಮ್ಮ ಬರಹವನ್ನು ಓದುವವರು ಅದೇ ರೀತಿ ಮಾಡುತ್ತಾರೆ ಎಂದು ಹೇಳುವ ಹಾಗಿಲ್ಲ..... ನಿಜ ಮೂರು ಬರಹಗಳಾಗಬಹುದಿದ್ದ ಬರಹವನ್ನು ಒಂದೇ ಬರಹದಲ್ಲಿ ಸುಂದರವಾಗಿ ಇಳಿಸಿ ಬಿಟ್ಟಿದ್ದೀರಿ ...... ನಿಮ್ಮ ಬರಹಗಳಿಗೆ ನೀವೇ ಸಾಟಿ...... ಕಥಾ ವಸ್ತುವಿಗೆ ಅಗತ್ಯವಿಲ್ಲದ ವಿಷಯಗಳನ್ನು ಚುಟುಕಾಗಿ ಬರೆದು ಕಥೆಯ ಮುಖ್ಯ ವಿಷಯದ ಬಗ್ಗೆ ಜಾಸ್ತಿ ಬೆಳಕು ಚೆಲ್ಲಿದರೆ ನಿಮ್ಮ ಬರಹ ಇನ್ನೂ ಜನಪ್ರೀಯವಾಗುವುದು......ಇದೊಂದು ನನ್ನ ಚಿಕ್ಕ ಅಭಿಪ್ರಾಯವಷ್ಟೆ.... ನನ್ನ ಪ್ರತಿಕ್ರೀಯೆ ನಿಮಗೆ ಬೇಸರ ತರುವುದಿಲ್ಲ ಎಂಬ ಭರವಸೆ ನನಗಿದೆ.....

    ಶುಭವಾಗಲಿ...

    ReplyDelete
    Replies
    1. ನಿಜ ಅಶೋಕಣ್ಣ ಎಷ್ಟೋ ಸಾರಿ ರುಚಿಸದ ಉದ್ದುದ್ದ ಬರಹಗಳನ್ನ ನಾ ಕೂಡಾ ತಿರಸ್ಕರಿಸಿದ್ದುಂಟು..!! ಯಾವ ಮತ್ತು ಯಾರ ಮುಲಾಜಿಲ್ಲದೆಯೇ..!! ಆದರೂ ಈ ನನ್ನ ದೌರ್ಬಲ್ಯವನ್ನ ಮೀರೋ ಒಂದು ಪ್ರಯತ್ನವನ್ನ ಪ್ರಾಮಾಣಿಕವಾಗಿ ಮಾಡ್ಕೋಬೇಕಿದೆ ನೋಡಿ. ನಿಮ್ಮ ಯಾವ ಪ್ರತಿಕ್ರಿಯೆಗಳು ಅಷ್ಟು ಸುಲಭಕ್ಕೆ ಎಂಥವರಿಗೂ ಬೇಸರ ಉಂಟು ಮಾಡುವುದಿಲ್ಲ ಅಶೋಕಣ್ಣ ಯಾಕಂದ್ರೆ ನೀವೇನು ಅಂತ ನನಗೆ ಮಾತ್ರವಲ್ಲ ನನ್ನ ಮತ್ತು ನಿಮ್ಮ ವೃತ್ತದ ಭಾಗಶಃ ಎಲ್ಲರಿಗೂ ತಿಳಿದ ವಿಚಾರವೇ. ಅಣ್ಣನಾಗಿ ನೀವು ತಿಳಿ ಹೇಳಿದ ಬಗೆ ನಿಮ್ಮ ಕರ್ತವ್ಯ ಕೂಡ (;)] ಅದಕ್ಕೆ ನಾವ್ಯಾವತ್ತಿಗೂ ಬೇಸರ ಮಾಡ್ಕೊಳ್ಳೋ ಪ್ರಮೇಯ ಬರೋದೆ ಇಲ್ಲ. ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆ ನಮಗೆ ತುಂಬೋ ಶಕ್ತಿ ಅಗಾಧ ಬ್ರೋ.. ತಿದ್ದಿಕೊಳ್ತೇನೆ.

      ಪ್ರತಿಕ್ರಿಯೆಗೆ ಧನ್ಯವಾದಗಳು ಅಶೋಕಣ್ಣ.. :) :)

      Delete
  8. avaravara bavanegala anaavaranagolisalu parara nemmadi santhoshagala mannupalythu bhari mookavedane, mounamukave sakaythu chennagide kano adre inippa nija en andre veneeth na prasangada reetiye nanna life nallu vaarakke 2 baariyadaru nam appaninda agtaane iratte

    ReplyDelete
  9. ಸತೀಶ್, ನಿಮ್ಮ ಲೇಖನದ ಕುರಿತಾಗಿ ಒಳ್ಳೊಳ್ಳೆಯ ಸಲಹೆಗಳಿವೆ. ಜೊತೆಗೆ ನನ್ನದೊಂದು ಪುಟ್ಟ ಸಲಹೆ. ನಾನಂದುಕೊಂಡಂತೆ ಇದು ಕತೆ ಅಲ್ಲ. ಒಂದು ಅನುಭವ ಕಥನ. ನಿಮ್ಮ ಅನುಭವಗಳನ್ನು ಕಥೆಯಾಗಿಸಿದ ರೀತಿ ಸುಂದರ. ಆದರೆ ನೀವು ಪ್ರಯತ್ನಿಸಿದರೆ ಇವು ಪ್ರತಿಯೊಂದು ವಿಷಯ( ಇದರಲ್ಲಿ ಬರುವ ಮೂರು ಭಾಗಗಳನ್ನು) ಒಂದೊಂದು ಶಕ್ತ ಕತೆಯಾಗಿಸುವ ಸಾಮರ್ಥ್ಯ ನಿಮಗಿದೆ. ನಿಮ್ಮ ಅನುಭವಕ್ಕೆ ಬಂದ ವಿಷಯಗಳನ್ನೇ ಹೀಗೆ ನೇರವಾಗಿಸಿದರೆ ಅದು ಪ್ರಬಂಧವಾಗುತ್ತದೆ. ಆದರೆ ಅದನ್ನೇ ಸ್ವಲ್ಪ ತಂತ್ರಗಾರಿಕೆ ಬಳಸಿಕೊಂಡು ನೇಯ್ದುಕೊಂಡರೆ ಅದು ಕಥೆಯಾಗುತ್ತದೆ! ಅಂತಹ ಕಥೆಗಾರಿಕೆ ನಿಮಗೆ ಸಾಧ್ಯ. ಮತ್ತೆ ಅಂತ ಸಾಧ್ಯತೆಯನ್ನು ಬಳಸಿಕೊಂಡು ಭವಿಷ್ಯದ
    ುತ್ತಮ ಕಥೆಗಾರರಾಗುವಲ್ಲಿ ನಿಮ್ಮ ದೃಷ್ಟಿಯಿರಲಿ... ಪ್ರಯತ್ನಿಸಿ..

    ಪ್ರೀತಿಯಿಂದ ಸಿರಿ.

    ReplyDelete